Wednesday, June 19, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು-೩ : ಮಾಲ್ದೀವ್ಸ್‌ನಲ್ಲಿ “ಸರ್ಜಿಕಲ್ ಸ್ಟ್ರೈಕ್” ; ರಾಜೀವ ಮತ್ತು ನರೇಂದ್ರ!

ಅಂತರರಾಷ್ಟ್ರೀಯ ರಾಜತಾಂತ್ರಿಕ ವಿಷಯದಲ್ಲಿ ಒಂದು ನಯವಾದ, ನಾಜೂಕಾದ ಶಿಷ್ಟಾಚಾರವಿರುತ್ತದೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶಗಳ ರಾಜಕೀಯ ನಾಯಕರು ಮಾಡುವ ಭಾಷಣಗಳ ಒಂದೊಂದು ಪದಗಳನ್ನೂ ರಾಜತಾಂತ್ರಿಕ ಸಹಾಯಕರು, ಅಧಿಕೃತ ಭಾಷಣ ಬರಹಗಾರರು ಗಂಟೆಗಟ್ಟಲೆ ಅಳೆದು ತೂಗಿರುತ್ತಾರೆ. ಅವುಗಳಲ್ಲಿಯೂ ರಾಜತಾಂತ್ರಿಕ ವಲಯದ ಒಂದೊಂದು ನಡವಳಿಕೆ, ಯಾರನ್ನು ಯಾರು ಎದುರುಗೊಳ್ಳುತ್ತಾರೆ, ಯಾರು ಯಾರ ಕೈಕುಲುಕುತ್ತಾರೆ ಎಲ್ಲವೂ ಪೂರ್ವನಿರ್ಧರಿತ. ಈ ಮಾತು, ನಡವಳಿಕೆಗಳಲ್ಲಿ ಗುಪ್ತ ಸಂದೇಶಗಳು ಇರುತ್ತವೆ. ಇಂತಹ ಅಧಿಕೃತ ಸಂದರ್ಭಗಳಲ್ಲಿ ಅಧಿಕೃತ ಉಡುಪು ನಿಯಮಗಳೂ (Dress code) ಇರುತ್ತವೆ. ಯಾಕೆಂದರೆ, ಅವು ಯಾವುವೂ ವೈಯಕ್ತಿಕ ನೆಲೆಯಲ್ಲಿ, ಗೆಳೆತನದಲ್ಲಿ ನಡೆಯುವುದಿಲ್ಲ. ಅದೊಂದು ದೇಶದೇಶಗಳ ನಡುವಿನ, ಅಲ್ಲಿನ ಅಧಿಕೃತ ವ್ಯಕ್ತಿಗಳ ಹುದ್ದೆಗಳ ನಡುವಿನ ವ್ಯವಹಾರ. ಅದರಲ್ಲಿ ವೈಯಕ್ತಿಕವಾದುದೇನೂ ಇಲ್ಲ. ಉದಾಹರಣೆಗೆ ಯುಎಸ್ಎ ಅಧ್ಯಕ್ಷ ಜೋ ಬೈಡನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ಭೇಟಿ ಎಂದರೆ, ಅದು ಅಧ್ಯಕ್ಷ-ಪ್ರಧಾನಿಯ ಭೇಟಿಯೇ ಹೊರತು, ಜೋ-ನರೇಂದ್ರ ಭೇಟಿ ಬಿಡಿ, ಅದು ಬೈಡನ್-ಮೋದಿ ಭೇಟಿಯೂ ಅಲ್ಲ. ಎರಡು ಶತ್ರು ರಾಷ್ಟ್ರಗಳ ಸಂಧಾನ ನಡೆಯುವಾಗಲೂ, ಪರಸ್ಪರ ಕೈಕುಲುಕಬೇಕೇ, ಕೆಟ್ಟ ಮಾತುಗಳನ್ನು ಬಳಸದೆಯೇ ಹೇಗೆ ಕಟುವಾದ ಸಂದೇಶಗಳನ್ನು ರವಾನಿಸಬೇಕು ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ.

ಹೀಗಿರುತ್ತಾ, ಭಾರತದ ಪ್ರಧಾನಿ ಸ್ಥಾನದಲ್ಲಿ ಇರುವ ನರೇಂದ್ರ ಮೋದಿ ಇದನ್ನೆಲ್ಲಾ ಅರ್ಥ ಮಾಡಿಕೊಂಡಂತಿಲ್ಲ ಮತ್ತು ಆತನಿಗೆ ಹೇಳಿ ಅರ್ಥ ಮಾಡಿಸುವ ಧೈರ್ಯ ಸುತ್ತಲೂ ಇರುವವರಿಗೆ, ಮುಖ್ಯವಾಗಿ ರಾಜತಾಂತ್ರಿಕರಿಗೆ ಕೂಡಾ ಇರುವಂತಿಲ್ಲ. ಈ ಕಾರಣದಿಂದಲೇ ಅವರು ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಬೇರೆ ದೇಶದ ನಾಯಕರನ್ನು ಇರಿಸುಮುರುಸಿಗೆ ಗುರಿ ಮಾಡಿದ, ತಾನು ನಗೆಪಾಟಲಾದ ಮತ್ತು ದೇಶವನ್ನೇ ನಗೆಪಾಟಲಿಗೆ ಗುರಿ ಮಾಡಿದ ಕೆಲವು ನಿದರ್ಶನಗಳನ್ನು ನಾವು ನೋಡಿದ್ದೇವೆ ಮತ್ತು ಅವುಗಳ ವಿಡಿಯೋಗಳೂ ಅಂತರರಾಷ್ಟ್ರೀಯವಾಗಿ ಹರಿದಾಡಿವೆ. ಪಾಕಿಸ್ತಾನಕ್ಕೆ ಆಹ್ವಾನ ಇಲ್ಲದೇ ಹೋಗಿ ಬಿರಿಯಾನಿ ತಿಂದರೆಂಬ ವಿಷಯ ಬಿಡಿ, ಎದುರಿನ ನಾಯಕರನ್ನು ಕಂಡ ಕ್ಷಣವೇ ಬಾಲ್ಯದ ಗೆಳೆಯರೋ ಎಂಬಂತೆ ಎಗರಿ ಅಪ್ಪಿಕೊಳ್ಳುವುದು, ನಿಗದಿತ ಜಾಗದಲ್ಲಿ ನಿಲ್ಲದೇ ಓಡಾಡುವುದು (ಒಮ್ಮೆ ಈತ ಒಂದು ದೇಶಕ್ಕೆ ಹೋಗಿದ್ದಾಗ, ವೇದಿಕೆಯಲ್ಲಿ ಅಲ್ಲಿನ ಅಧ್ಯಕ್ಷರ ಜೊತೆ ನಿಂತಿದ್ದವರು ಆ ದೇಶದ ರಾಷ್ಟ್ರಗೀತೆಯನ್ನು ನುಡಿಸಿದ್ದೇ ತಡ, ಅದನ್ನು ತನ್ನ ಗೌರವಾರ್ಥ ಹಾಡಲಾಗುತ್ತಿದೆಯೋ ಎಂಬಂತೆ ಕೀಲುಕೊಟ್ಟ ಗೊಂಬೆಯಂತೆ ವೇದಿಕೆಯ ಮುಂಭಾಗದಲ್ಲಿ ತಿರುಗಲು ಆರಂಭಿಸಿದ್ದರು. ನಂತರ ಅಲ್ಲಿನ ಅಧ್ಯಕ್ಷರೇ ಎಳೆದುಕೊಂಡು ತನ್ನ ಪಕ್ಕ ನಿಲ್ಲಿಸಬೇಕಾಯಿತು. ಇದರ ವಿಡಿಯೋ ವೈರಲ್ ಆಗಿತ್ತು), ನಾಯಕರನ್ನು ಮೊದಲ ಹೆಸರು ಹೇಳಿ ನನ್ನ ಗೆಳೆಯ ಎಂದು ಕರೆಯುವುದು ಇತ್ಯಾದಿ ಮಾಡಿದ್ದಾರೆ. (ವಿದೇಶಗಳಲ್ಲಿ ಅಧಿಕೃತ ಕಾರ್ಯಕ್ರಮಗಳಲ್ಲಿ ಗೆಳೆಯರನ್ನೂ ಮಿಸ್ಟರ್, ಮೇಡಂ, ಮದಾಮ್, ಸಿನೋರ್, ಎಕ್ಸೆಲೆನ್ಸಿ, ಮೆಜೆಸ್ಟಿ ಇತ್ಯಾದಿ ಗೌರವ ಸೂಚಕಗಳಿಲ್ಲದೇ ಮೊದಲ ಹೆಸರಿನಲ್ಲಿ ಕರೆಯುವುದು ಉದ್ಧಟತನ, ಅಗೌರವ ಎನಿಸಿಕೊಳ್ಳುತ್ತದೆ.)

ಉದಾಹರಣೆಗೆ ಈತ ಯುಎಸ್ಎ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಮಿಸ್ಟರ್ ಪ್ರೆಸಿಡೆಂಟ್ ಅಥವಾ ಮಿಸ್ಟರ್ ಒಬಾಮ ಎಂದು ಕರೆಯದೇ “ಮೈ ಫ್ರೆಂಡ್ ಬರಾಕ್” ಎಂದು ಕರೆದು ಅಲ್ಲಿನವರ ಸಿಟ್ಟು, ಅಸಮಾಧಾನಕ್ಕೆ ಕಾರಣವಾಗಿದ್ದರು. ಇದನ್ನು ನೆನಪಿಟ್ಟುಕೊಂಡಿದ್ದ ಒಬಾಮ, ನಿವೃತ್ತಿಯ ನಂತರ ಸೇಡು ತೀರಿಸಿಕೊಂಡಿದ್ದರು. ಪತ್ರಕರ್ತರೊಬ್ಬರು “ಮೈ ಫ್ರೆಂಡ್ ಬರಾಕ್ ಎಂದು ಹಿಂದೆ ಕರೆದಿದ್ದಾರಲ್ಲ, ಅವರು ನಿಮ್ಮ ಫ್ರೆಂಡೇ?” ಎಂದು ಕೇಳಿದ್ದಕ್ಕೆ, ಒಬಾಮಾ, ಗಂಭೀರವಾಗಿ, “ಭಾರತದಲ್ಲಿ ನನ್ನ ಗೌರವಾನ್ವಿತ ಗೆಳೆಯ ಎಂದರೆ, ಡಾ. ಮನಮೋಹನ್ ಸಿಂಗ್…” ಎಂದು ಹೇಳಿ, ಅವರ ವಿದ್ವತ್ತು, ಸೌಜನ್ಯ, ಬುದ್ಧಿಮತ್ತೆ ಇತ್ಯಾದಿಗಳ ಬಗ್ಗೆ ಹೊಗಳಿ ಮಾತನಾಡಿದ್ದರು. ಮೋದಿಯ ಹೆಸರನ್ನೂ ತಪ್ಪಿ ಕೂಡಾ ಉಲ್ಲೇಖಿಸಲಿಲ್ಲ. ಈ ಅವಮಾನಕಾರಿ ವಿಡಿಯೋ ಕೂಡಾ ವೈರಲ್ ಆಗಿತ್ತು. ಮತ್ತು “ಡೋಲಾಂಡ್” ಟ್ರಂಪ್, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಉಯ್ಯಾಲೆಯಾಟ ಇತ್ಯಾದಿ ನಿಮಗೆ ಗೊತ್ತೇ ಇದೆ.

ಇದನ್ನು ಅವರು ತಾನು “ವಿಶ್ವಗುರು” ಎಂದು ನಿಜಕ್ಕೂ ನಂಬಿ ಮಾಡುತ್ತಾರೋ, ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ, ತಾನೇ ವಿಶ್ವದ ಕೇಂದ್ರ ಎಂದು ನಂಬಿದ್ದಾರೋ, ಒಟ್ಟಿನಲ್ಲಿ ಸ್ವಯಂ ಮೋಹ ಮತ್ತು ಸ್ವಯಂ ಪ್ರದರ್ಶನದ ಆಟ ಮುಂದುವರಿದಿದೆ. ವಿಶ್ವದ ಯಾವುದೇ ಒಬ್ಬ ಗಂಭೀರ ನಾಯಕರು, ಅವರು ಎಡಪಂಥೀಯರಾಗಲೀ, ಬಲಪಂಥೀಯರಾಗಲೀ ದೇಶ, ವಿದೇಶಗಳ ಅಧಿಕೃತ ಕಾರ್ಯಕ್ರಮಗಳಲ್ಲಿ ಔಪಚಾರಿಕ ಉಡುಗೆ ತೊಡುಗೆಗಳನ್ನು ಬಿಟ್ಟು ಛದ್ಮವೇಷಗಳನ್ನು ಧರಿಸುವುದಿಲ್ಲ. ಹೆಚ್ಚೆಂದರೆ, ಯಾವುದೇ ದೇಶ, ಅಥವಾ ವಿಶಿಷ್ಟ ಜನಸಮುದಾಯವನ್ನು ಭೇಟಿ ಮಾಡಿದಾಗ, ಸಾಂಕೇತಿಕವಾಗಿ ಒಂದು ಟೊಪ್ಪಿಯನ್ನೋ, ಒಂದು ಗರಿಯನ್ನೋ ಧರಿಸುವುದುಂಟು. ಕೆಲವು ಸರ್ವಾಧಿಕಾರಿಗಳು ಥಳಕುಬಳುಕಿನ ಮಿಲಿಟರಿ ಸಮವಸ್ತ್ರಗಳನ್ನೋ, ತಮಗೆ ತಾವು ಕೊಟ್ಟುಕೊಂಡ ಶೌರ್ಯದ ಪದಕಗಳನ್ನು ಎದೆತುಂಬಾ ಧರಿಸುವುದುಂಟು. ಇಲ್ಲದ ಜನರಿಗೆ ಕೈಬೀಸುವ, ಕ್ಯಾಮೆರಾಕ್ಕಾಗಿಯೇ ಎಲ್ಲವನ್ನೂ ಮಾಡುವ ಮೋದಿಯವರ ಛದ್ಮವೇಷಗಳ ಚಾಳಿಯೀಗ, ಭಾರತಕ್ಕೆ ಕಾರ್ಯವ್ಯೂಹಾತ್ಮಕವಾಗಿ ಬಹಳ ದೊಡ್ಡ ರಾಜತಾಂತ್ರಿಕ ನಷ್ಪವನ್ನು ಉಂಟುಮಾಡುವ ಸಾಧ್ಯತೆಯಿದೆ.

ಇತ್ತೀಚಿನ ಲಕ್ಷದ್ವೀಪ ಭೇಟಿಯ ವೇಳೆ ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹೆಸರಿನಲ್ಲಿ ಮೋದಿ ತಾನೇ ಮಾಡೆಲ್ ಆಗಿ ನಡೆಸಿದ ನಗೆಪಾಟಲು ಸ್ಕೂಬಾ ಡೈವ್, ಬೀಚಿನಲ್ಲಿ ಸಮುದ್ರ ವೀಕ್ಷಣೆ ಇತ್ಯಾದಿಗಳ ಫೋಟೋ ಶೂಟ್, ಭಟ್ಟಂಗಿಗಳ ಬಹುಪರಾಕುಗಳಿಗೂ, ವಿರೋಧಿಗಳ ಲೇವಡಿಯ ಟ್ರೋಲ್‌ಗಳಿಗೂ ಕಾರಣವಾಯಿತು. ಲಕ್ಷ ದ್ವೀಪಗಳನ್ನು ಮೊತ್ತಮೊದಲ ಬಾರಿಗೆ ಕಂಡುಹಿಡಿದ ಕ್ರಿಸ್ಟೋಫರ್ ಕೊಲಂಬಸೇ ಮೋದಿ ಎಂಬ ರೇಂಜಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹುಪರಾಕ್ ಹೇಳಿದ ಬಾಡಿಗೆ ಮತ್ತು ಇತರ ಗುಲಾಮಿ ಭಕ್ತರು, ಮಾರಿಷಸ್ ಮತ್ತು ಮಾಲ್ದೀವ್ಸ್‌ನ ಕಡಲು, ದ್ವೀಪ ಮತ್ತು ಕಡಲ ತೀರದ ಪ್ರವಾಸೋದ್ಯಮಕ್ಕೆ ಲಕ್ಷದ್ವೀಪಗಳೇ ಬದಲಿ ಎಂದು ನಕಲಿ ದೇಶಪ್ರೇಮ ಮೆರೆದರು. ಇದು ಮುಖ್ಯವಾಗಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮಾಲ್ದೀವ್ಸ್ ದ್ವೀಪ ಸಮುದಾಯಗಳ ಹಲವರನ್ನು ಕೆರಳಿಸಿತು. ಅಲ್ಲಿನ ಸಚಿವರಾಗಿದ್ದ ಮಲ್ಶಾ ಶರೀಫಾ, ಮರಿಯಮ್ ಶಿಯುನ ಮತ್ತು ಅಬ್ದುಲ್ಲಾ ಮಹಝೂಮ್ ಮಜೀದ್ ಎಂಬ ಮೂವರು ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು “ಕೋಡಂಗಿ”, “ಭಯೋತ್ಪಾದಕ” ಮತ್ತು “ಇಸ್ರೇಲಿನ ಕೈಗೊಂಬೆ” ಎಂದು ಕರೆದು ಲೇವಡಿ, ನಿಂದನೆ ಮಾಡಿದರು.

ಆ ಅಭಿಪ್ರಾಯಗಳು ಆಯಾ ಮಂತ್ರಿಗಳ ವೈಯಕ್ತಿಕ ಅಭಿಪ್ರಾಯಗಳೇ ಹೊರತು, ಮಾಲ್ದೀವ್ಸ್‌ನ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಮಾಲ್ದೀವ್ಸ್‌ ಈಗಾಗಲೇ ಸ್ಪಷ್ಟನೆ ನೀಡಿದೆಯಲ್ಲದೇ ಆ ಮೂವರು ಮಂತ್ರಿಗಳನ್ನು ಅಮಾನತು ಮಾಡಿದೆ. ಮೇಲೆ ವಿವರಿಸಿದ ರಾಜತಾಂತ್ರಿಕ ನಡವಳಿಕೆಯಲ್ಲಿ ವಿದೇಶಿ ನಾಯಕರು ಶತ್ರುಗಳೇ ಆಗಿರಲೀ, ನಾಲಾಯಕ್, ಫಟಿಂಗರೇ ಆಗಿರಲಿ, ಜವಾಬ್ದಾರಿಯುತ ನಾಯಕರು ಯಾರೂ ಮುಖಕ್ಕೆ ಹೊಡೆದಂತೆ ಸಾರ್ವಜನಿಕವಾಗಿ ಅದನ್ನು ಹೇಳುವುದಿಲ್ಲ. ಆ ದೃಷ್ಟಿಕೋನದಿಂದ ಭಾರತವನ್ನು ಬಹುವಾಗಿ ಅವಲಂಬಿಸಿರುವ, ಭಾರತಕ್ಕೆ ಹೋಲಿಸಿದಾಗ ಎಲ್ಲಾ ವಿಷಯಗಳಲ್ಲಿ ತೀರಾ ತೀರಾ ಪುಟ್ಟದಾಗಿರುವ ದೇಶ ಒಂದರ ಅನನುಭವಿ ಮಂತ್ರಿಗಳು ನೀಡಿದ ಹೇಳಿಕೆಗಳು ತಪ್ಪು, ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅಥವಾ ಇದು ಭಾರತವನ್ನು ಕೆರಳಿಸಲೆಂದೇ ಆಡಿದ ಮಾತುಗಳಾಗಿದ್ದರೆ, ಭಾರತ ಆ ಖೆಡ್ಡಾಕ್ಕೆ ಬೀಳಬೇಕಾಗಿರಲಿಲ್ಲ.

ಭಾರತವು ಅದಕ್ಕೆ ಗಂಭೀರವಾಗಿ ಪ್ರತಿಕ್ರಿಯಿಸುವುದರ ಜೊತೆಗೆ, ಆ ಪುಟ್ಟ ದೇಶದ ಭಯಗಳನ್ನು ನಿವಾರಿಸಿ, ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಿತ್ತು. ಆದರೆ, ಮೋದಿಯವರ ಸಹೋದ್ಯೋಗಿಗಳೂ, ಅವರ ಭಕ್ತರೂ, ಐಷಾರಾಮಿ ಜೀವನ ನಡೆಸುವ ಅವಕಾಶವಾದಿ ದೇಶಪ್ರೇಮಿ ಸೆಲೆಬ್ರಿಟಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಮಾಲ್ದೀವ್ಸ್‌ನ ಪ್ರವಾಸೋದ್ಯಮವನ್ನು ಬಹಿಷ್ಕರಿಸಲು ಕರೆನೀಡಿದರು, ಚಿಕ್ಕ ಇಲಿಮರಿಯೊಂದನ್ನು ಬೆಕ್ಕು ಬಿಡಿ, ಹುಲಿಯೇ ಆಟವಾಡಿಸಿದಂತೆ ತಮ್ಮ ಅಹಂಕಾರ ಮೆರೆದರು. ಇಂತಹಾ ಅವಕಾಶಕ್ಕಾಗಿಯೇ ಕಾಯುತ್ತಿರುವ ಬೇರೆ ಬಲಿಷ್ಟ ಹುಲಿಗಳು ಸುತ್ತಲೂ ಇವೆ ಎಂದು ಅವರಿಗೆ ಹೊಳೆಯಲಿಲ್ಲ. ಇದರಿಂದ ಭಾರತವು ರಕ್ಷಣಾ ವ್ಯೂಹಾತ್ಮಕವಾಗಿ ಬಹಳ ದೊಡ್ಡ ನಷ್ಟ ಅನುಭವಿಸಬಹುದು ಎಂದು ಅವರು ಯೋಚಿಸಲಿಲ್ಲ. ಅಷ್ಟಕ್ಕೂ ಮಾಲ್ದೀವ್ಸ್ ಮಂತ್ರಿಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿರಲಿಲ್ಲ. ಭಾರತದಲ್ಲಿಯೇ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು, ಬಿಜೆಪಿ ಮತ್ತು ಹಿಂದೂತ್ವದ ನಾಯಕರು, ಬಾಡಿಗೆ ಚೇಲಾಗಳು, ಹಿಂದೆ ನೆರೆಯ ದೇಶಗಳ ನಾಯಕರುಗಳನ್ನು ಬಿಡಿ, ಸ್ವತಃ ನಮ್ಮದೇ ಪ್ರತಿಪಕ್ಷಗಳ ನಾಯಕರನ್ನು ಎಷ್ಟೊಂದು ಅಶ್ಲೀಲವಾದ ಕ್ರೂರ ಭಾಷೆಯಲ್ಲಿ ನಿಂದಿಸಿದ್ದಾರೆ ಎಂಬುದನ್ನೊಮ್ಮೆ ನೆಪಿಸಿಕೊಳ್ಳಿ. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಾಮಾನ್ಯವಾಗಿಬಿಟ್ಟಿರುವ ವಾತಾವರಣದಲ್ಲಿ- ಮಾಲ್ದೀವ್ಸ್ ಮಂತ್ರಿಗಳ ಮಾತುಗಳು ಏನೇನೂ ಇಲ್ಲ, ಅದೂ, ಅವರ ಅಧ್ಯಕ್ಷರೇ ಭಾರತ ವಿರೋಧಿ ಚೀನಾಪರ ನಿಲುವಿನಲ್ಲಿ ಗೆದ್ದಿರುವಾಗ. ಮೋದಿಯಂತೆ, ಅವರಿಗೂ ಭಟ್ಟಂಗಿಗಳು ಇರಬಹುದು. ಅದಕ್ಕೇ ಹೇಳುವುದು ಮೂರ್ಖ ಮಿತ್ರರಿಗಿಂತ ಬುದ್ಧಿವಂತ ಶತ್ರುಗಳು ವಾಸಿ ಎಂದು. ಮೂರ್ಖರಿಂದ ಸುತ್ತುವರಿಯಲ್ಪಟ್ಟ ಶತಮೂರ್ಖನಿಗಿಂತ ಅಪಾಯಕಾರಿ ಒಂದು ದೇಶಕ್ಕೆ ಬೇರಾರೂ ಇಲ್ಲ.

ಈಗ ಇವೆಲ್ಲವುಗಳ ಪರಿಣಾಮಗಳೇನು? ಮಾಲ್ದೀವ್ಸ್ ಕೇವಲ ಐದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಜನಸಂಖ್ಯೆ ಹೊಂದಿರುವ ಪುಟ್ಟ ದೇಶವಾಗಿದ್ದರೂ, ಹಿಂದೂ ಮಹಾಸಾಗರದಲ್ಲಿ ಅದು ಇರುವ ಸ್ಥಾನವು ಅದಕ್ಕೆ ಅಸಾಧಾರಣ ಭೌಗೋಳಿಕ ರಾಜಕೀಯ ಮಹತ್ವವನ್ನು ಒದಗಿಸಿದೆ. ಅದು ಲಕ್ಷದ್ವೀಪಗಳ ದಕ್ಷಿಣಕ್ಕಿರುವ ಮಿನಿಕೋಯ್ ದ್ವೀಪ ಸಮುದಾಯಗಳ ದಕ್ಷಿಣದಲ್ಲೇ ಇದೆ. ಬ್ರಿಟಿಷರು ಶ್ರೀಲಂಕಾ (ಆಗಿನ ಸಿಲೋನ್)ದಿಂದ ಡಚ್ಚರನ್ನು ಹೊರದಬ್ಬಿದ ನಂತರ 1796ರಿಂದಲೇ ಮಾಲ್ದೀವ್ಸ್ ಅವರ ಆಡಳಿತದ ಅಡಿಗೆ ಬಂದಿತ್ತು. ಅವರ ಆಡಳಿತ ಕಾಲದಲ್ಲಿ ಮಾಲ್ದೀವ್ಸ್ ಭಾರತದೊಂದಿಗೆ ಗಾಢವಾದ ವ್ಯಾಪಾರ ಸಂಬಂಧಗಳನ್ನು ಹೊಂದಿತ್ತು. ಇದು 1965ರಲ್ಲಿ ಅದು ಸ್ವತಂತ್ರವಾಗುವ ನಂತರವೂ ಮುಂದುವರಿದಿತ್ತು. ಮಾಲ್ದೀವ್ಸ್‌ಗೆ ಶ್ರೀಲಂಕಾ ಮತ್ತು ಭಾರತಗಳೇ ಹತ್ತಿರದ ಎರಡು ದೊಡ್ಡ ಶಕ್ತಿಗಳು.

ಅದರ ಸ್ಥಾನವು ಕಾರ್ಯವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಕಾರಣದಿಂದ, ಭಾರತವು ಮಾಲ್ದೀವ್ಸ್ ಜೊತೆಗೆ ಹತ್ತಿರದ ಸಂಬಂಧಗಳನ್ನು ಉಳಿಸಿಕೊಳ್ಳುತ್ತಾ ಬಂದಿದೆ. ಭಾರತವು ಹಿಂದಿನಿಂದಲೂ ಮಾಲ್ದೀವ್ಸ್‌ನ ಸೇನೆಗೆ ತರಬೇತಿಯನ್ನು ನೀಡುತ್ತಿದೆ. ಭಾರತವು ಅಲ್ಲಿ ಒಂದು ಸೇನಾ ನೆಲೆಯನ್ನೂ ಹೊಂದಿದೆ. ಭಾರತವು ಕಡಲುಗಳ್ಳತನ, ಮಾದಕವಸ್ತು ವ್ಯಾಪಾರಗಳ ವಿರುದ್ಧ ಹೋರಾಟದಲ್ಲಿ ಮತ್ತು ರಕ್ಷಣೆಯ ಇತರ ವಿಷಯಗಳಲ್ಲಿ ಮಾಲ್ದೀವ್ಸ್‌ಗೆ ಬೆಂಬಲವಾಗಿ ನಿಲ್ಲುತ್ತಾ ಬಂದಿದೆ. ಹೀಗಿದ್ದರೂ, 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತವನ್ನು ಸುತ್ತುವರಿದಿರುವ ಇತರ ಚಿಕ್ಕ ದೇಶಗಳಂತೆ ಮಾಲ್ದೀವ್ಸ್ ಕೂಡಾ ಭಾರತವು ಬಲಿಷ್ಟ ಯುಎಸ್ಎ ಇತರ ದೇಶಗಳನ್ನು ನೋಡುವಂತೆ, ಭಾರತವು ನೆರೆಹೊರೆಯ ಬಗ್ಗೆ ಉಡಾಫೆಯ “ದೊಡಣ್ಣ”ನ ನೀತಿ ಅನುಸರಿಸುತ್ತಿರುವುದರ ಕುರಿತು ಅಸಮಾಧಾನ ಹೊಂದಿದೆ.

ಇತ್ತೀಚೆಗೆ ಮಾಲ್ದೀವ್ಸ್, ಭಾರತದಿಂದ ದೂರ ಸರಿದು, ಚೀನಾದ ಜೊತೆಗೆ ನಿಕಟ ಸಂಬಂಧಗಳನ್ನು ಬೆಳೆಸುತ್ತಿದೆ. “ಚೀನಾ ಮಾಲ್ದೀವ್ಸ್ ಫ್ರೆಂಡ್‌ಶಿಪ್ ಬ್ರಿಜ್” ಎಂದು ಕರೆಯಲಾಗುವ ಸಿನಾ-ಮಾಲೆ ಸೇತುವೆಯನ್ನು ಚೀನಾ 2015ರಲ್ಲಿ ಸ್ಥಾಪಿಸಿತು. ಆಗ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು, ಮಾಲ್ದೀವ್ಸ್ “ಚೀನಾದ ಬೆಲ್ಟ್ ಎಂಡ್ ರೋಡ್” ಎಂಬ ಚೀನಾ ಮಹತ್ವಾಕಾಂಕ್ಷಿ ಯೋಜನೆಯನ್ನು ಬೆಂಬಲಿಸಿದ್ದರು. ಅಲ್ಲೀಗ ಭಾರತ ಅಥವಾ ಚೀನಾಕ್ಕೆ ಬೆಂಬಲ ನೀಡುವುದೇ ಒಂದು ಚುನಾವಣಾ ವಿಷಯವಾಗಿ ಬಿಟ್ಟಿದೆ. ಆಗ ಅಬ್ದುಲ್ಲಾ ಯಮೀನ್ ಅವರ ಹತ್ಯೆ ಯತ್ನವೂ ನಡೆದಿತ್ತು. 2018ರಲ್ಲಿ ಒಂದು ದೊಡ್ಡ ಭ್ರಷ್ಟಾಚಾರ ಹಗರಣದಲ್ಲಿ ಸಿಕ್ಕಿಬಿದ್ದ ಅವರ ಪಕ್ಷವು ಚುನಾವಣೆಯಲ್ಲಿ ಭಾರತ ಪರ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರ ಎದುರು ಸೋತಿತ್ತು. ಯಮೀನ್ ಈಗ 11 ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದಾರೆ. 2021ರಲ್ಲಿ ಯಮೀನ್ ಭಾರತ ವಿರೋಧಿ ಪ್ರಚಾರ ಮಾಡಿದ್ದರು. ಆದರೆ, ಅವರಿಗೆ ಸ್ಪರ್ಧಿಸಲು ಸಾಧ್ಯವಾಗದೆ, ಯಮೀನ್ ಉತ್ತರಾಧಿಕಾರಿ ಮುಯಿಝು, ಮಾಲ್ದೀವ್ಸನ್ನು ಚೀನಾಕ್ಕೆ ಇನ್ನಷ್ಟು ಹತ್ತಿರಕ್ಕೆ ತಂದು, ಭಾರತದಿಂದ ಇನ್ನಷ್ಟು ದೂರ ಸರಿಸುವ ಪ್ರಚಾರದೊಂದಿಗೆ ಸ್ಪರ್ಧಿಸಿ ಚುನಾವಣೆ ಗೆದ್ದರು.

2013ರಲ್ಲಿ ಚೀನಾವು ಒಂದು ಮಹತ್ವಾಕಾಂಕ್ಷಿ ಮತ್ತು ವಿನೂತನವಾದ “ಬೆಲ್ಟ್ ಎಂಡ್ ರೋಡ್” ಎಂಬ ಯೋಜನೆಯನ್ನು ಆರಂಭಿಸಿತು. ಇದರಲ್ಲಿ ಬೇರೆಬೇರೆ ದೇಶಗಳಲ್ಲಿ ರೈಲ್ವೇ, ರಸ್ತೆ ಕಾರಿಡಾರ್‌ಗಳು, ಬಂದರುಗಳ ಮೇಲೆ ಹಣಹೂಡಿಕೆ ಮಾಡುವುದು, ಆ ಮೂಲಕ ಪ್ರಭಾವ ಬೀರಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸುವುದು ಸೇರಿದೆ. ಭಾರತದ ಶ್ರೀಲಂಕಾ, ಮ್ಯಾನ್ಮಾರ್, ಮಾಲ್ದೀವ್ಸ್, ನೇಪಾಳ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಜೊತೆ ತಿಳುವಳಿಕೆ ಪತ್ರಕ್ಕೆ (ಎಂಓಯು) ಚೀನಾ ಸಹಿ ಹಾಕಿದೆ. ಅಧ್ಯಕ್ಷ ಮುಯಿಝು, ಚೀನಾದ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಲಿದ್ದು, 20 ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಅದು ಭಾರತದಿಂದ ದೂರ ಸರಿದಲ್ಲಿ, ಹಿಂದೂ ಮಹಾಸಾಗರದಲ್ಲಿ ಭಾರತದ ಕಾರ್ಯವ್ಯೂಹಾತ್ಮಕ ಸ್ಥಾನದ ಮೇಲೆ ಭಾರೀ ಪರಿಣಾಮ ಉಂಟುಮಾಡಬಹುದು.

ಈ ಒಂದು ಹಿನ್ನೆಲೆಯಲ್ಲಿ ಭಾರತವು ಮುತ್ಸದ್ಧಿತನದಿಂದ ವರ್ತಿಸಿ, ನೆರೆಯ ರಾಷ್ಟ್ರಗಳನ್ನು ಸಂಯಮದಿಂದ ನಡೆಸಿಕೊಂಡು ಹೋಗಬೇಕಿತ್ತು. ಮೋದಿ ಅಧಿಕಾರಕ್ಕೆ ಬಂದ ಮೇಲೆ “ವಿಶ್ವಗುರು” ಆಗುವ ರೋಗ ಹಿಡಿದವರ ಆಟಾಟೋಪದಿಂದಾಗಿ, ನೆರೆಯ ರಾಷ್ಟ್ರಗಳೆಲ್ಲವೂ ಚೀನಾದ ಪರ ವಾಲಿ, ಭಾರತವನ್ನು ಕಂಡರೆ, ಗುರ್ರೆನ್ನುತ್ತಿವೆ. ಭಾರತದ ಭದ್ರತೆಗೆ ಇಷ್ಟು ಅಪಾಯವನ್ನು ತಂದೊಡ್ಡಿದವರು ಯಾರು?

ಈ ಹೊತ್ತಿನಲ್ಲಿ ಮೋದಿ ಬರುವುದಕ್ಕೆ ಮೊದಲು ಭಾರತವು ಇತರ ರಾಷ್ಟ್ರಗಳ ಜೊತೆ ಹೊಂದಿದ್ದ ರಾಜತಾಂತ್ರಿಕ ಸಂಬಂಧ ಮತ್ತು ಸಹಕಾರಗಳನ್ನು ಗಮನಿಸಬೇಕು. ವಿಶ್ವವು ಯುಎಸ್ಎ-ಯುಎಸ್‌ಎಸ್‌ಆರ್ ಕೂಟಗಳ ಶೀತಲ ಸಮರದಲ್ಲಿ ಮುಳುಗಿದ್ದ ಕಾಲದಲ್ಲಿಯೂ ಭಾರತವು ಅಲಿಪ್ತ ಚಳುವಳಿಯ ಮುಚೂಣಿ ನಾಯಕ ರಾಷ್ಟ್ರವಾಗಿತ್ತು. ವಿಶ್ವಸಂಸ್ಥೆಯಲ್ಲಿ ಭಾರತವು ಯಾವುದೇ ವಿಷಯ ಮಂಡಿಸಿದರೂ, ನೆರೆಹೊರೆಯ ದೇಶಗಳೂ ಸೇರಿದಂತೆ ನೂರಕ್ಕೂ ಹೆಚ್ಚು ದೇಶಗಳು ಯಾವ ಹೊತ್ತಿನಲ್ಲೂ ಭಾರತದ ಪರ ನಿಲ್ಲುತಿದ್ದವು. ಆಗ್ನೇಯ ಏಷ್ಯಾ ದೇಶಗಳ ಕೂಟವಾದ ASEANನಲ್ಲಿ ಕೂಡಾ ಹಾಗೆಯೇ. ಈಗ “ವಿಶ್ವಗುರು”ವಿನ ಕಾಲದಲ್ಲಿ!?

ಸರ್ಜಿಕಲ್ ಸ್ಟ್ರೈಕ್, ಲಾಲ್ ಆಂಖ್ ಇತ್ಯಾದಿ ಬಡಾಯಿಗಳ ಈ ಕಾಲದಲ್ಲಿ- ಹಿಂದೆ, ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಇದೇ ಮಾಲ್ಡೀವ್ಸ್‌ನಲ್ಲಿ ನಡೆಸಿದ್ದ ಭಾರತೀಯ ಸೇನಾಪಡೆಯ ಸರ್ಜಿಕಲ್ ಸ್ಟ್ರೈಕನ್ನು ನೆನಪಿಸಬೇಕು.

ಚುಟುಕಾಗಿ ಹೇಳುವುದಾದಲ್ಲಿ ೧೯೮೮ರ ನವೆಂಬರ್‌ನಲ್ಲಿ ಮಾಲ್ದೀವ್ಸ್‌ನ ಉದ್ಯಮಿ ಅಬ್ದುಲ್ಲಾ ಲುತುಫಿ ಎಂಬಾತ ಶ್ರೀಲಂಕಾದ ಪೀಪಲ್ಸ್ ಲಿಬರೇಷನ್ ಆರ್ಗನೈಸೇಷನ್ ಆಫ್ ತಮಿಳ್ ಈಳಂ (PLOTE)ನ ಸಶಸ್ತ್ರ ಬಾಡಿಗೆ ಸೈನಿಕರ ನೆರವಿನಿಂದ ದಂಗೆ ನಡೆಸಿದ್ದ. ಅಪಹರಿಸಲಾದ ಶ್ರೀಲಂಕಾ ಹಡಗುಗೊಂದರಲ್ಲಿ ಬಂದ ನೂರಕ್ಕೂ ಮೀರಿದ ಈ ಬಾಡಿಗೆ ಸೈನಿಕರು ಸ್ಪೀಡ್ ಬೋಟುಗಳಲ್ಲಿ ಇಳಿದು ಕೆಲವೇ ಗಂಟೆಗಳಲ್ಲಿ ಸರಕಾರಿ ಕಚೇರಿಗಳು, ವಿಮಾನ ನಿಲ್ದಾಣ, ಟಿವಿ ಕೇಂದ್ರ ಇತ್ಯಾದಿ ಎಲ್ಲವನ್ನೂ ವಶಕ್ಕೆ ಪಡೆದಿದ್ದರು. ಹಲವರನ್ನು ಒತ್ತೆಸೆರೆ ಇರಿಸಿದ್ದರು. ಆಗ ಭದ್ರತಾಪಡೆಗಳ ರಕ್ಷಣೆಯಲ್ಲಿ ಅಡಗಿದ್ದ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ಗಯೂಂ ಅವರು ಯುಎಸ್‌ಎ, ಬ್ರಿಟನ್, ಪಾಕಿಸ್ತಾನ, ಸಿಂಗಾಪುರ ಮುಂತಾದ ದೇಶಗಳನ್ನು ಸಂಪರ್ಕಿಸಿ ರಕ್ಷಣೆಗಾಗಿ ಮೊರೆಯಿಟ್ಟಿದ್ದರು. ಎಲ್ಲರೂ ಒಂದಲ್ಲ ಒಂದು ನೆಪ ಹೇಳಿ ಕೈಚೆಲ್ಲಿದ್ದರು. ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಮಾತ್ರವೇ ಸಾಂಪ್ರದಾಯಿಕ ಮಿತ್ರರಾಷ್ಟ್ರದ ರಕ್ಷಣೆಗೆ ಮುಂದಾಗಿ, ಭಾರತೀಯ ಸೇನಾಪಡೆಯ ಕಮಾಂಡೋ ಪಡೆಗಳನ್ನು ೧6 ಗಂಟೆಗಳ ಒಳಗಾಗಿ ಅಲ್ಲಿಗೆ ಕಳಿಸಿದ್ದರು.

“ಅಪರೇಷನ್ ಕ್ಯಾಕ್ಟಸ್ ” ಎಂಬ ಹೆಸರಿನಲ್ಲಿ ನಡೆದ ಈ ಅಪ್ಪಟ ಸರ್ಜಿಕಲ್ ಸ್ಟ್ರೈಕ್‌ನಲ್ಲಿ 50ನೇ ಇಂಡಿಪೆಂಡೆಂಟ್ ಪ್ಯಾರಾಚೂಟ್ ಬ್ರಿಗೇಡಿನ ಕಮಾಂಡೋಗಳು ಬ್ರಿಗೇಡಿಯರ್ ಫಾರೂಕ್ ಬುಲ್ಸಾರ ನೇತೃತ್ವದಲ್ಲಿ ವಾಯುಪಡೆಯ ಇಲ್ಯುಷಿನ್ ಐಎಲ್ 76 ವಿಮಾನದಲ್ಲಿ 2000 ಕಿ.ಮೀ ಪ್ರಯಾಣಿಸಿ, ಬಂಡುಕೋರರನ್ನು ಬಗ್ಗುಬಡಿದಿದ್ದರು. ಹಲವರನ್ನು ಕೊಂದು, ಅನೇಕರನ್ನು ಸೆರೆಹಿಡಿದು, ಒತ್ತೆಯಾಳುಗಳನ್ನು ಬಿಡಿಸಿದ್ದರು. ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದ ಮಾಲ್ದೀವ್ಸನ್ನು ಉಳಿಸಿದ್ದರು. ಅಪಹೃತ ಹಡಗಿನಲ್ಲಿ ಶ್ರೀಲಂಕಾಗೆ ಓಡಿಹೋಗುತ್ತಿದ್ದ ಉಳಿದ ಬಂಡುಕೋರರನ್ನು ಐಎನ್‌ಎಸ್ ಗೋದಾವರಿ ನೇತೃತ್ವದಲ್ಲಿ ನೌಕಾಪಡೆಯ ಹಡಗುಗಳು ಸುತ್ತುವರಿದು ಎಲ್ಲರನ್ನೂ ಬಂಧಿಸಲಾಗಿತ್ತು. ಭಾರತದ ಈ ಕ್ರಮವನ್ನು ಯುಎಸ್ಎ, ಬ್ರಿಟನ್‌ನಂತಹ ಬಲಿಷ್ಟ ರಾಷ್ಟ್ರಗಳು, ಇಂತಹ ಅಪಾಯ ಎದುರಿಸುತ್ತಿರುವ ಪುಟ್ಟ ದೇಶಗಳು, ನಮ್ಮ ನೆರೆಯ ಚಿಕ್ಕ ದೇಶಗಳು ಕೂಡಾ ಶ್ಲಾಘಿಸಿದ್ದವು. ಒಬ್ಬ ನಾಯಕನ ನಿರ್ಣಾಯಕ ನಿರ್ಧಾರ ಎನ್ನುವುದು ಇದನ್ನೇ. ಆ ನಂತರವೇ ಮಾಲ್ದೀವ್ಸ್ ಭಾರತಕ್ಕೆ ಇನ್ನಷ್ಟು ಹತ್ತಿರ ಬಂತು. ಮೋದಿ ಬಂಟರೀಗ ಅದನ್ನು ಹಾಳುಗೆಡಹುತ್ತಾ ಆದನ್ನು ಚೀನಾದ ಕಡೆಗೆ ತಳ್ಳುತ್ತಿದ್ದಾರೆ. ಆಗ ರಾಜೀವ್‌ ಗಾಂಧಿಯವರು ಈ ಕುರಿತು ತನ್ನ ಬೆನ್ನನ್ನು ತಾನೇ ಕೆರೆದುಕೊಳ್ಳಲಿಲ್ಲ, ಭಟ್ಟಂಗಿಗಳಿಂದ ಕೆರೆಸಿಕೊಳ್ಳಲೂ ಇಲ್ಲ. ಎಷ್ಟೆಂದರೂ ಒಬ್ಬ ಪ್ರಜಾಪ್ರಭುತ್ವವಾದಿ ನಾಯಕನಿಗೂ, ಸರ್ವಾಧಿಕಾರಿ ಪ್ರಚಾರಮೋಹಿ ನಾಯಕನಿಗೂ ಆನೆ ಆಡಿನ ವ್ಯತ್ಯಾಸ ಇರಲೇಬೇಕಲ್ಲವೆ!?

Related Articles

ಇತ್ತೀಚಿನ ಸುದ್ದಿಗಳು