Thursday, June 20, 2024

ಸತ್ಯ | ನ್ಯಾಯ |ಧರ್ಮ

ರಾಹುಲ್‌ ಗಾಂಧಿಯವರ ಯಾತ್ರೆ ಸಾಮಾಜಿಕ ನ್ಯಾಯದ ಜೊತೆಗೆ ಶೂದ್ರ, ದಲಿತರ ಆಧ್ಯಾತ್ಮಿಕ ನ್ಯಾಯದ ಬಗ್ಗೆಯೂ ಮಾತನಾಡಬೇಕು

ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜನವರಿ 14 ರಂದು ಮಣಿಪುರದಿಂದ ಮಹಾರಾಷ್ಟ್ರಕ್ಕೆ ‘ಭಾರತ್ ಜೋಡೋ ನ್ಯಾಯ್ ಯಾತ್ರಾ’ ಎನ್ನುವ ಹೆಸರಿನ ಎರಡನೇ ಯಾತ್ರೆಯೊಂದನ್ನು ಆರಂಭಿಸುತ್ತಿದ್ದಾರೆ. ಈ ಮೊದಲಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಯಾತ್ರೆಯನ್ನು ಸರಳವಾಗಿ ಭಾರತ್‌ ಜೋಡೋ ಯಾತ್ರೆ ಎನ್ನುವ ಸರಳವಾದ ಹೆಸರಿನಿಂದ ಕರೆಯಲಾಗಿತ್ತು. ಅದರ ಅರ್ಥ ಮತ್ತು ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಭಾರತದಲ್ಲಿ ಹಲವು ಧರ್ಮಗಳಿವೆ. ಆದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಧಿಕಾರಕ್ಕೆ ಬಂದ ನಂತರ, ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಭಾರತೀಯ ನಾಗರಿಕ ಸಮಾಜ ಮತ್ತು ಸರ್ಕಾರಿ ರಚನೆಗಳಿಂದ ಬೇರ್ಪಡಿಸಲಾಯಿತು. ದೇಶದ ಉದ್ದಗಲಕ್ಕೂ ಕೋಮುದ್ವೇಷವನ್ನು ಜನರ ಎದೆಗಳಲ್ಲಿ ಬಿತ್ತಲಾಗಿದೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸೆಕ್ಯುಲರಿಸಂ ಎನ್ನುವುದು ಹಿಂದುತ್ವವಲ್ಲ ಎನ್ನುವುದನ್ನು ದೇಶಕ್ಕೆ ಮತ್ತು ಜಗತ್ತಿಗೆ ಯಾವುದೇ ನಾಚಿಕೆಯಿಲ್ಲದೆ ಸಾರಿತು. ಸೆಕ್ಯುಲರಿಸಂ ಹಿಂದೂವಲ್ಲದಿರುವುದರಿಂದ ಅದು ಭಾರತೀಯವೂ ಅಲ್ಲ ಎನ್ನುವುದನ್ನು ಜಗತ್ತಿಗೆ ಅರ್ಥ ಮಾಡಿಸಿತು. ಅದು ದ್ವಿಜರೊಂದಿಗೆ ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಒಗ್ಗೂಡಿಸಿ ಚುನಾವಣೆಗಳನ್ನು ನಿಭಾಯಿಸಿತು. ಅದು ಒಬಿಸಿಗಳನ್ನು ಒಲಿಸಿಕೊಳ್ಳಲು ಹೂಡಿದ ತಂತ್ರವೆಂದರೆ ʼಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಅಧಿಕಾರದಿಂದ ದೂರವಿಟ್ಟು ನಾವೇ ನಮ್ಮನ್ನು ಆಳೋಣʼ ಎನ್ನುವುದು.

ಕಾಂಗ್ರೆಸ್‌ ಆಳ್ವಿಕೆಯಲ್ಲಿ ದ್ವಿಜರು ಮತ್ತು ಮುಸ್ಲಿಮರು ಸೇರಿ ಶೂದ್ರರು/ಒಬಿಸಿಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆನ್ನುವ ಭಾವನೆ ಮೊದಲೇ ಶೂದ್ರರಲ್ಲಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಮೇಲಿನ ಮಾತುಗಳು ಶೂದ್ರ ಜಾತಿಗಳಿಗೆ ಹೆಚ್ಚು ಹೆಚ್ಚು ಅಪ್ಯಾಯಮಾನವೆನ್ನಿಸಿತು. ವಾಸ್ತವದಲ್ಲೂ ನೆಹರೂ ಅವರಿಂದ ಹಿಡಿದು ಮನಮೋಹನ್‌ ಸಿಂಗ್‌ ತನಕ ಕಾಂಗ್ರೆಸ್‌ ಪಕ್ಷದ ಅಧಿಕಾರದ ಮಾದರಿ ಹಾಗೆಯೇ ಇತ್ತು. ಅದು ಕಾಂಗ್ರೆಸ್‌ ಪಕ್ಷದ ಜೊತೆ ನಿಂತಿದ್ದ ಎಲೈಟ್‌ ಸುನ್ನಿ ಮುಸ್ಲಿಮರನ್ನು ಸಂಪೂರ್ಣವಾಗಿ ಅಧಿಕಾರದಿಂದ ದೂರವಿಟ್ಟು, ಕೆಲವು ಶಿಯಾ ಮುಸ್ಲಿಮರಿಗಷ್ಟೇ ಅಲ್ಲಲ್ಲಿ ಅವಕಾಶ ನೀಡಿತ್ತು.

ಇದೆಲ್ಲದರ ಆಚೆಗೂ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯ ಉದ್ದೇಶ ಅಲ್ಪಸಂಖ್ಯಾತರನ್ನು ಮತ್ತೆ ಒಂದುಗೂಡಿಸುವುದಾಗಿತ್ತು. ಬಹುಮಟ್ಟಿಗೆ, ಆ ಯಾತ್ರೆಯು ಅದರ ಉದ್ದೇಶವನ್ನು ಪೂರೈಸಿದೆ ಕೂಡಾ.

ಪ್ರಸ್ತುತ ಬಿಜೆಪಿ-ಆರ್‌ಎಸ್‌ಎಸ್‌, ಕೆಲವು ಶೂದ್ರ/ಒಬಿಸಿಗಳು ಮತ್ತು ದಲಿತರಿಗೆ ಔಪಚಾರಿಕ ಅಧಿಕಾರ ರಚನೆಗಳಲ್ಲಿ ಕೂರಲು ಅವಕಾಶ ಮಾಡಿಕೊಡುವ ಮೂಲಕ ದ್ವಿಜ ಬಂಡವಾಳಶಾಹಿ-ವ್ಯಾಪಾರ ಶಕ್ತಿಗಳ ಕೈಗೆ ಹೆಚ್ಚು ಹೆಚ್ಚು ಏಕಸ್ವಾಮ್ಯದ ಬಂಡವಾಳ ನೀಡುತ್ತಾ ನಿಜವಾದ ಅಧಿಕಾರವನ್ನು ತಾನು ನಿಯಂತ್ರಿಸುತ್ತಿದೆ. ಈ ಶಕ್ತಿಗಳು ನಿಧಾನವಾಗಿ ಎಲ್ಲಾ ಪ್ರಮುಖ ಹಣಕಾಸು ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವಂತೆ ಸರ್ಕಾರವನ್ನು ಪ್ರೇರೇಪಿಸುತ್ತಿವೆ. ಮತ್ತು ಈ ಮೂಲಕ ಅವರು ಮೂಲಕ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಂಪೂರ್ಣವಾಗಿ ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ.

1990ರ ದಶಕದ ಮಂಡಲ್‌ ಚಳವಳಿಯು ಆರ್‌ಎಸ್‌ಎಸ್-ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಆಡಳಿತ ಕಲ್ಪನೆಗಳ ಹೊರಗೆ ಸಮರ್ಥನೀಯ ರಾಷ್ಟ್ರೀಯ ಸಂಪನ್ಮೂಲಗಳ ಸಾಮಾಜಿಕ ವಿತರಣೆಯ ಪರಿಕಲ್ಪನೆಯನ್ನು ಸಾಧ್ಯವಾಗಿಸಿತು. ಇದು ಶೂದ್ರರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳು ಮತ್ತು ಆಡಳಿತ ರಚನೆಗಳಲ್ಲಿ ಉದ್ಯೋಗಗಳೊಂದಿಗೆ ಸಾಮಾಜಿಕ ನ್ಯಾಯದ ಸಾಂಸ್ಥಿಕ ಕಲ್ಪನೆಯನ್ನು ಸಾಧಿಸುವಲ್ಲಿ ಸಫಲವಾಯಿತು. ಆ ಸಾಮಾಜಿಕ ನ್ಯಾಯ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಬುಡಮೇಲು ಮಾಡುವುದೇ ಪ್ರಸ್ತುತ ಆರ್‌ಎಸ್‌ಎಸ್‌-ಬಿಜೆಪಿಯ ಯೋಜನೆ. ಕಾಂಗ್ರೆಸ್‌ ಕೂಡಾ ದೀರ್ಘ ಕಾಲದವರೆಗೆ ಜಾತಿಯನ್ನು ಕೂಡಾ ಅಭಿವೃದ್ಧಿಯ ಒಂದು ವರ್ಗವಾಗಿ ಕಂಡಿರಲಿಲ್ಲ ಹೀಗಾಗಿಯೇ ಅದು ಬಹಳ ಕಾಲದವರೆಗೂ ಸಾಮಾಜಿಕ ನ್ಯಾಯದ ಕಲ್ಪನೆಯ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಆರ್‌ಎಸ್‌ಎಸ್-ಬಿಜೆಪಿ ಕಾಂಗ್ರೆಸ್‌ ಮತ್ತು ಮುಸ್ಲಿಂ ಸಖ್ಯವನ್ನು ತೋರಿಸಿ ಶೂದ್ರ/ಒಬಿಸಿ ಸಮುದಾಯಗಳನ್ನು ತನ್ನ ಬಲೆಗೆ ಬೀಳಿಸಿಕೊಂಡಿದೆ. ಮತ್ತು ಆ ಮೂಲಕ ತಾನು ಅಧಿಕಾರದ ಗದ್ದುಗೆ ಪಡೆಯುವಲ್ಲಿ ಯಶಸ್ವಿಯೂ ಆಗಿದೆ.

ಬಜೆಟ್‌ ಹಣವನ್ನು ಏಕಸ್ವಾಮ್ಯದ ಸಂಸ್ಥೆಗಳಿಗೆ ವರ್ಗಾಯಿಸುವುದು

ಇದೆಲ್ಲದರ ನಡುವೆ ಆರ್‌ಎಸ್ಎಸ್-ಬಿಜೆಪಿ ಬೃಹತ್‌ ಹೆದ್ದಾರಿಗಳು, ರೈಲ್ವೇ, ವಿಮಾನ ನಿಲ್ದಾಣಗಳು ಮತ್ತು ಬಂದರುಗಳನ್ನು ನಿರ್ಮಿಸಿ, ನಂತರ ಅವುಗಳನ್ನು ದೊಡ್ಡ ಮೊತ್ತದ ಬೆಜೆಟ್‌ ಆರ್ಥಿಕತೆಯನ್ನು ಅದಾನಿ, ಅಂಬಾನಿಯಂತಹ ದ್ವಿಜ ಬಂಡವಾಳಶಾಹಿಗಳಿಗೆ ಗುತ್ತಿಗೆ ನೀಡುವ ಮೂಲಕ ದೇಶದ ಸಂಪತ್ತನ್ನು ಒಂದೆಡೆ ಕ್ರೋಢಿಕರಿಸಲಾಗುತ್ತಿದೆ. ಇನ್ನೊಂದೆಡೆ ರೈತರು ಮತ್ತು ಜನಸಾಮಾನ್ಯರಿಗೆ ದೊರಕಬೇಕಿದ್ದ ಸೌಲಭ್ಯಗಳನ್ನು ರೇವ್ಡಿ (ಬಿಟ್ಟಿ) ಎಂದು ಹೀಯಾಳಿಸುತ್ತಾ ನಿರಾಕರಿಸಲಾಗುತ್ತಿದೆ. ಈ ರೀತಿಯ ಬಂಡವಾಳ ವರ್ಗಾವಣೆಯ ಮೂಲಕ ಈಗ ಅಮೇರಿಕಾ ಮಾದರಿಯ ಬಂಡವಾಳಶಾಹಿಯನ್ನು ಅನುಸರಿಸಲಾಗುತ್ತಿದೆ. ಮತ್ತು ಅದಕ್ಕಿಂತ ಮುಖ್ಯವಾಗಿ, ಖಾಸಗೀಕರಣ ಮತ್ತು ಜಾಗತೀಕರಣದ ಮಾರ್ಗದ ಮೂಲಕ ಈಗ ಮೀಸಲಾತಿಯ ಕಾರಣಕ್ಕೆ ಶೂದ್ರ/ಒಬಿಸಿಗಳು, ದಲಿತರು ಮತ್ತು ಆದಿವಾಸಿಗಳ ಕೈಗೆ ಹೋಗುತ್ತಿರುವ ಎಲ್ಲಾ ಉದ್ಯೋಗಗಳನ್ನು ಅವರ ಕೈ ತಲುಪದಂತೆ ತಡೆಯುವ ಕೆಲಸ ನಡೆಯುತ್ತಿದೆ.

ಈ ಮಹತ್ವದ ಬದಲಾವಣೆಗೆ ಆರ್‌ಎಸ್‌ಎಸ್-ಬಿಜೆಪಿ ಈಗಾಗಲೇ ಸಂವಿಧಾನದ ಪೀಠಿಕೆಯಿಂದ ಜಾತ್ಯತೀತತೆ ಮತ್ತು ಸಮಾಜವಾದ ಎಂಬ ಪದಗಳನ್ನು ತಿದ್ದುಪಡಿ ಮಾಡದೆ ಕೈಬಿಟ್ಟಿವೆ. ಜಾತ್ಯತೀತತೆಯ ಪರಿಕಲ್ಪನೆಯು ಧಾರ್ಮಿಕ ರಂಗದಲ್ಲಿ ಸಾಮಾಜಿಕ ನ್ಯಾಯವನ್ನು ಒದಗಿಸುತ್ತಿದ್ದರೆ, ಸಮಾಜವಾದದ ಪರಿಕಲ್ಪನೆಯು ಭಾರತಕ್ಕೆ ಸಾಮೂಹಿಕ ಕಲ್ಯಾಣ ಯೋಜನೆಗಳನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತಿತ್ತು, ಅದರ ಒಂದು ಭಾಗವೆಂದರೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿನ ಮೀಸಲಾತಿ. ಸಾಮಾಜಿಕ ನ್ಯಾಯದ ಕಲ್ಪನೆಯು ಭಾರತದಲ್ಲಿ ಸಮಾಜವಾದದ ಕಲ್ಪನೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಆದರೆ ಕಾಂಗ್ರೆಸ್ ಬುದ್ಧಿಜೀವಿಗಳು ಯಾವಾಗಲೂ ಸಮಾಜವಾದದ ಕಲ್ಪನೆಯನ್ನು ಕಮ್ಯುನಿಸ್ಟ್ ಅರ್ಥದಲ್ಲಿ ಮಾತ್ರ ವ್ಯಾಖ್ಯಾನಿಸುತ್ತಿದ್ದರು. ಅಂತಹ ತಿಳುವಳಿಕೆಯು ಕಲ್ಯಾಣ ಮತ್ತು ಆಡಳಿತದ ಜಾತಿರಹಿತ ಅಭಿವೃದ್ಧಿ ಪ್ರಕ್ರಿಯೆಗೆ ಸಹಾಯ ಮಾಡಿತು.

ಸಾಮಾಜಿಕ ನ್ಯಾಯದ ಕಲ್ಪನೆಯು ಆರ್‌ಎಸ್‌ಎಸ್‌-ಬಿಜೆಪಿ ತಾನು ಪೋಷಿಸಬಯಸುವ ವರ್ಣ ವ್ಯವಸ್ಥೆಯನ್ನು ಬುಡದಿಂದಲೇ ಕಿತ್ತುಹಾಕಬಲ್ಲ ಶಕ್ತಿಯನ್ನು ಹೊಂದಿದೆ. ಹಿಂದೂ ರಾಷ್ಟ್ರ ಅಥವಾ ರಾಮರಾಜ್ಯದ ಪರಿಕಲ್ಪನೆಯು ಮುಖ್ಯವಾಗಿ ಈ ವರ್ಣ ವ್ಯವಸ್ಥೆ ಅಥವಾ ಸನಾತನ ಧರ್ಮದ ಸಂರಕ್ಷಣೆಯ ಪ್ರಣಾಳಿಕೆಯನ್ನು ಹೊಂದಿದೆ. ಇದೇ ಕಾರಣಕ್ಕಾಗಿ ಅದು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ.  

ಪ್ರಸ್ತುತ ಕಾಂಗ್ರೆಸ್‌ ತನ್ನ ಜಾತ್ಯಾತೀತತೆ ಮತ್ತು ಸಮಾಜವಾದದ ಬಗೆಗಿನ ತನ್ನ ಹಳೆಯ ತಿಳಿಯುವಳಿಕೆಯನ್ನು ಮರುವ್ಯಾಖ್ಯಾನ ಮಾಡಿ ತಿದ್ದಿಕೊಳ್ಳಬೇಕಿದೆ. ಮತ್ತು ಆ ಮೂಲಕ ಆರ್‌ಎಸ್‌ಎಸ್-ಬಿಜೆಪಿಯನ್ನು ಎದುರಿಸಬೇಕಿದೆ. ಹೀಗೆ ಮಾಡಿದರಷ್ಟೇ ಶೂದ್ರ/ಒಬಿಸಿ ಸಮುದಾಯಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್‌ ಕಡೆ ವಾಲುತ್ತಾರೆ. ಕಾಂಗ್ರೆಸ್‌ ಈಗ ಪರಿಣಾಮಕಾರಿ ಕ್ಲಯಾಣ ಯೋಜನೆಗಳೊಂದಿಗೆ ಮುಂದೆ ಬರಬೇಕಿದೆ. ಅದರೊಂದಿಗೆ ಅದು ಪರಿಶಿಷ್ಟ ಜಾತಿಗಳು (ಎಸ್ಸಿ), ಪರಿಶಿಷ್ಟ ಪಂಗಡಗಳು (ಎಸ್ಟಿ) ಮತ್ತು ಒಬಿಸಿಗಳಿಗೆ ಮೀಸಲಾತಿಯ ಸಾಂವಿಧಾನಿಕ ಹಕ್ಕುಗಳ ಭರವಸೆಯನ್ನು ನೀಡಬೇಕು.

ರಾಹುಲ್‌ ಗಾಂಧಿ ಈಗಾಗಲೇ ಇದನ್ನು ಅರಿತುಕೊಂಡು ರಾಷ್ಟ್ರಾದ್ಯಂತ ಜಾತಿ ಗಣತಿ ನಡೆಸಬೇಕಿರುವುದರ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇದು ಸಾಮಾಜಿಕ ನ್ಯಾಯವನ್ನು ರಕ್ಷಿಸಿ, ಕೊನೆಯ ಹಂತದ ಜನರಿಗೂ ಆಡಳಿತದ ಪ್ರಯೋಜನಗಳನ್ನು ನೀಡಬಲ್ಲದು. ಈ ಯಾತ್ರೆಯಲ್ಲಿ ಕಾಂಗ್ರೆಸ್‌ ಈಶಾನ್ಯದ ಬುಡಕಟ್ಟು ಸಮಾಜಗಳ ಮೂಲೆ ಮೂಲೆಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ತಲುಪಿಸಬೇಕು. ಬಯಲು ಪ್ರದೇಶದಿಂದ ಹಿಡಿದು ಮಹಾರಾಷ್ಟ್ರದ ತನಕ ಅದು ಅಸಮಾನತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜಾತಿ ಸಮಾಜದೆದುರು ಮಾತನಾಡಬೇಕು. ಕಾಂಗ್ರೆಸ್ಸಿನ ಸ್ಥಾನ ಬಿಜೆಪಿಯ ಸೋಷಿಯಲ್‌ ಇಂಜಿನಿಯರಿಂಗ್‌ ಸ್ಥಾನಕ್ಕಿಂತ ಭಿನ್ನವಿರಬೇಕು. ಸೋಷಿಯಲ್‌ ಇಂಜಿನಿಯರಿಂಗ್‌ ಎಂದಿಗೂ ಸಾಮಾಜಿಕ ನ್ಯಾಯವಾಗಲು ಸಾಧ್ಯವಿಲ್ಲ. ಇದು ಶೂದ್ರರು ಮತ್ತು ದಲಿತರ ಪ್ರಜ್ಞೆಯನ್ನು ನಿಷ್ಕ್ರಿಯಗೊಳಿಸುವ ಮತ್ತು ಜಾತಿ ವ್ಯವಸ್ಥೆ ಕೆಟ್ಟದ್ದಲ್ಲ ಎಂದು ಅವರಿಗೆ ಮನವರಿಕೆ ಮಾಡುವ ಸಾಧನ ಮಾತ್ರ.

ಕಾಂಗ್ರೆಸ್ ಮೀಸಲಾತಿ ವ್ಯವಸ್ಥೆಯ ಪರವಾಗಿ ನಿಲ್ಲುತ್ತದೆ ಮತ್ತು ಪ್ರಮುಖ ಸರ್ಕಾರಿ ಆಸ್ತಿಗಳ ರಾಷ್ಟ್ರೀಕರಣದ ವಿರುದ್ಧ ನಿಲ್ಲುತ್ತದೆ ಮತ್ತು ಅದು ಆಧ್ಯಾತ್ಮಿಕ ನ್ಯಾಯದ ಪರವಾಗಿ ನಿಲ್ಲುತ್ತದೆ ಎಂದು ಯಾತ್ರೆಯ ಭಾಗವಾಗಿ ಕಾಂಗ್ರೆಸ್ ಗ್ರಾಮೀಣ ಜನರಿಗೆ ಪದೇ ಪದೇ ಹೇಳಬೇಕು. ಜಾತ್ಯತೀತತೆಯ ಹೆಸರಿನಲ್ಲಿ ಆಧ್ಯಾತ್ಮಿಕ ಅನ್ಯಾಯದ ಬಗೆಗಿನ ಮೌನವು ಶೂದ್ರರು ಮತ್ತು ದಲಿತರಿಗೆ ಇಷ್ಟವಾಗುವುದಿಲ್ಲ. ಜನವರಿ 22ರಂದು ಉದ್ಘಾಟನೆಯಾಗಲಿರುವ ರಾಮ ಮಂದಿರದಲ್ಲಿ ಪುರೋಹಿತತ್ವದ ಹಕ್ಕನ್ನು ಅವರು ಬಯಸುತ್ತಾರೆ. ಇಲ್ಲಿಯವರೆಗೆ, ಅಂತಹ ಆಧ್ಯಾತ್ಮಿಕ ನ್ಯಾಯದ ಪ್ರಶ್ನೆಗಳ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ನಿಲುವು ಇಲ್ಲ.

ಬಿಜೆಪಿ ಸರ್ಕಾರವು ದೇವಾಲಯ ನಿರ್ಮಾಣ ಮತ್ತು ಉದ್ಘಾಟನೆಯನ್ನು ಸರ್ಕಾರಿ ಕೆಲಸವಾಗಿ ಮಾಡಿದೆ, ಆದರೆ ಪ್ರತಿಯೊಬ್ಬ ಸವರ್ಣೀಯ ಹಿಂದೂ ಸಮಾನರು ಮತ್ತು ಜಾತಿಯನ್ನು ಭೇದವಿಲ್ಲದೆ ಯಾವುದೇ ವ್ಯಕ್ತಿ ಅಲ್ಲಿ ಅರ್ಚಕರಾಗಬಹುದು ಎಂದು ಅದು ಹೇಳಿಲ್ಲ. ದೇವರ ಮುಂದೆ ಬ್ರಾಹ್ಮಣ, ಚಮ್ಮಾರ ಎಂದೆಲ್ಲ ಇರುವುದಿಲ್ಲ. ಅಲ್ಲಿ ಮನುಷ್ಯ ಮನುಷ್ಯ ಮಾತ್ರ ಎಂದು ಅದು ಹೇಳುವುದಿಲ್ಲ.

ಜಾತಿ ವಿರೋಧಿ ಸಿದ್ಧಾಂತವು ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಧುನಿಕ ಕಾಲದಲ್ಲಿಯಾದರೂ ಐತಿಹಾಸಿಕವಾಗಿ ತುಳಿತಕ್ಕೊಳಗಾದ ಶೂದ್ರರು ಮತ್ತು ದಲಿತರಿಗೆ ಆಧ್ಯಾತ್ಮಿಕ ನ್ಯಾಯವನ್ನು ಒದಗಿಸಬೇಕೆನ್ನುವ ಆಶಯವನ್ನು ಒಳಗೊಂಡಿದೆ.

ಒಂದು ವೇಳೆ ಆರ್‌ಎಸ್‌ಎಸ್-ಬಿಜೆಪಿ ಸಿದ್ಧಾಂತದ ಕಾಶ್ಮೀರದ ಪ್ರಶ್ನೆ ಮುಸ್ಲಿಂ ಜಗತ್ತಿನ ಪಾಲಿಗೆ ಕಳವಳಕಾರಿಯಾದರೆ, ಮಣಿಪುರ ಹತ್ಯಾಕಾಂಡ ಪಾಶ್ಚಿಮಾತ್ಯ ಕ್ರಿಶ್ಚಿಯನ್ನರ ಪಾಲಿಗೆ ಕಳವಳಕಾರಿಯಾಗಿ ಪರಿಣಮಿಸುತ್ತದೆ. ಈ ಯಾತ್ರೆ ಜರ್ಝರಿತಗೊಂಡಿರುವ ಮಣಿಪುರದ ನಾಗರಿಕ ಸಮಾಜದ ನಡುವಿನಿಂದ ಆರಂಭಗೊಳ್ಳುತ್ತಿದೆ. ಅಂತಹ ಆಳವಾದ ಗಾಯಗಳನ್ನು ವಾಸಿಗೊಳಿಸಲು ಕಾಂಗ್ರೆಸ್‌ ಈಗ ತಾನು ಅಲ್ಲಿನ ಜನರಿಗೆ ಭರವಸೆಯೊಂದನ್ನು ನೀಡಬೇಕಿದೆ. ಆ ಜನರ ಮನಸ್ಸಿನ ಮೇಲಾಗಿರುವ ಗಾಯಗಳನ್ನು ವಾಸಿಗೊಳಿಸಲು ತಾನು ಸಮಾಜಿಕ ನ್ಯಾಯದ ಭಾಗವೇ ಆಗಿರುವಂತಹ ಧಾರ್ಮಿಕ ನ್ಯಾಯವನ್ನೂ ಭಾರತದಲ್ಲಿ ಕಾಪಾಡುವುದಾಗಿ ಭರವಸೆ ನೀಡಬೇಕಿದೆ. ಧಾರ್ಮಿಕ ಹಕ್ಕುಗಳನ್ನು ಉಳಿಸಿಕೊಡುವುದಾಗಿ ಹೇಳಿಕೆ ನೀಡಬೇಕಿದೆ. ಆಧ್ಯಾತ್ಮಿಕ ನ್ಯಾಯದ ಕಲ್ಪನೆಯೆನ್ನುವುದು ಸಾರ್ವತ್ರಕವಾದುದು. ಅದು ಕೇವಲ ರಾಷ್ಟ್ರಕ್ಕೆ ಸಂಬಂಧಿಸಿದ್ದಲ್ಲ. ಇದನ್ನು ಆರ್‌ಎಸ್‌ಎಸ್-ಬಿಜೆಪಿ, ಕಾಂಗ್ರೆಸ್‌ ಎಲ್ಲರೂ ಗೌರವಿಸಬೇಕು.

ಬಿಜೆಪಿ-ಆರ್‌ಎಸ್ಎಸ್ ಹಿಂದೂ ಎಂದು ವ್ಯಾಖ್ಯಾನಿಸುವ ಜಾತಿ ನಾಗರಿಕ ಸಮಾಜದಲ್ಲಿ ಆಧ್ಯಾತ್ಮಿಕ ನ್ಯಾಯದ ಬಗ್ಗೆ ಕಾಳಜಿಯಿರುವುದಿಲ್ಲ. ಇಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಂ ಸಮಾಜಗಳ ಆಧ್ಯಾತ್ಮಿಕ ನ್ಯಾಯವನ್ನು ಕಾಪಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಏಕೆಂದರೆ ಅವರು ಆ ಧರ್ಮಗಳನ್ನು ವಿದೇಶಿ ಮತ್ತು ರಾಷ್ಟ್ರ ವಿರೋಧಿ ಎಂದು ಪರಿಗಣಿಸುತ್ತಾರೆ. ಭಾರತದಲ್ಲಿ ಆಧ್ಯಾತ್ಮಿಕ ನ್ಯಾಯದ ಮಹತ್ವವನ್ನು ದ್ವಿಜ ಬೌದ್ಧಿಕ ಅಥವಾ ರಾಜಕೀಯ ಪಕ್ಷದ ನಾಯಕರು ಅರ್ಥಮಾಡಿಕೊಳ್ಳಲಿಲ್ಲ. ಜಾತಿ ವ್ಯವಸ್ಥೆಯು ಅವರಿಗೆ ಅದರ ಬಗ್ಗೆ ಯೋಚಿಸಲು ಅವಕಾಶ ನೀಡಲಿಲ್ಲ. ಆದರೆ ಕಾಂಗ್ರೆಸ್ ಈ ಸಮಸ್ಯೆಯನ್ನು ಸಮಗ್ರ ರೀತಿಯಲ್ಲಿ ಪರಿಹರಿಸಬೇಕಾದ ಸಮಯ ಈಗ ಬಂದಿದೆ.

ಸಾಮಾಜಿಕ ನ್ಯಾಯ ಮತ್ತು ಎಲ್ಲಾ ಜಾತಿ ಮತ್ತು ಧರ್ಮಗಳಿಗೆ ಆಧ್ಯಾತ್ಮಿಕ ನ್ಯಾಯ ನೀಡದ ಪ್ರಸ್ತುತ ಪರಿಸ್ಥಿತಿಯಿಂದ ಭಾರತವನ್ನು ಕಾಪಾಡಲು ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅವರ ಸ್ಫೂರ್ತಿಯನ್ನು ಕಾಂಗ್ರೆಸ್ ಮತ್ತೆ ಬಳಸಿಕೊಳ್ಳಬೇಕಾಗಿದೆ.

– ಕಾಂಚಾ ಐಲಯ್ಯ ಶೆಫರ್ಡ್

Related Articles

ಇತ್ತೀಚಿನ ಸುದ್ದಿಗಳು