Saturday, June 15, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ, ಆರ್‌ಎಸ್‌ಎಸ್‌ ಕೆಲಸಗಳು ದ್ವೇಷ ಹರಡುತ್ತಿವೆ: ರಾಹುಲ್‌

ಹೊಸದೆಹಲಿ: ಗಲಭೆಯಿಂಧಾಗಿ ಎಲ್ಲವನ್ನೂ ಕಳೆದುಕೊಂಡು ಕುಳಿತಿರುವ ಮಣಿಪುರದತ್ತ ಮೋದಿ ಒಮ್ಮೆಯೂ ತಿರುಗಿ ಕೂಡ ನೋಡಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಬಿಜೆಪಿ ರಾಜಕೀಯದಿಂದಾಗಿ ಮಣಿಪುರ ಬಹಳಷ್ಟು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ತಾನು ಮಣಿಪುರದ ಜನರ ನೋವನ್ನು ಅರ್ಥಮಾಡಿಕೊಂಡಿದ್ದು, ಅಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಪುನಃಸ್ಥಾಪಿಸುವುದಾಗಿ ಭರವಸೆ ನೀಡಿದರು. ಭಾನುವಾರ ಮಣಿಪುರದ ತೌಬಲ್‌ನಿಂದ ರಾಹುಲ್ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಆರಂಭಿಸಿದರು. ತೌಬಲ್‌ನ ಖೋಂಗ್‌ಜೋಮ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ರಾಹುಲ್ ತಮ್ಮ ಯಾತ್ರೆಯನ್ನು ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ರಾಹುಲ್ ಮಾತನಾಡಿ, “ಕಳೆದ ವರ್ಷ ಜೂನ್ 29ರ ನಂತರ ಮಣಿಪುರ ಮಣಿಪುರದಂತಿರಲಿಲ್ಲ. ಅದನ್ನು ಇಬ್ಭಾಗ ಮಾಡಲಾಯಿತು. ದ್ವೇಷ ಎಲ್ಲೆಡೆ ಹರಡಿತು. ಲಕ್ಷಾಂತರ ಜನರು ಬದುಕು ಕಳೆದುಕೊಂಡರು. ಜನರು ತಮ್ಮ ಕಣ್ಣುಗಳ ಮುಂದೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು.

ಆದರೆ ಇಲ್ಲಿಯವರೆಗೆ ಪ್ರಧಾನಿ ಮೋದಿ ನಿಮ್ಮ ಕಣ್ಣೀರು ಒರೆಸಲು, ಕೈ ಹಿಡಿದು ಅಪ್ಪಿಕೊಳ್ಳಲು ಬಂದಿಲ್ಲ. ಇದು ನಾಚಿಕೆಪಡಬೇಕಾದ ಸಂಗತಿ. ಬಹುಶಃ ನರೇಂದ್ರ ಮೋದಿ, ಬಿಜೆಪಿ ಮತ್ತು ಆರೆಸ್ಸೆಸ್ ದೃಷ್ಟಿಯಲ್ಲಿ ಮಣಿಪುರ ಭಾರತದ ಭಾಗವಲ್ಲ. ನಿಮ್ಮ ನೋವು ಅವರಿಗಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ್ವೇಷದ ರಾಜಕಾರಣ

ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಮಣಿಪುರ ಉದಾಹರಣೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆ ಪಕ್ಷದಿಂದಾಗಿ ಮಣಿಪುರ ಅಮೂಲ್ಯವಾದುದನ್ನು ಕಳೆದುಕೊಂಡಿದೆ ಮತ್ತು ಮೂಲಭೂತ ಸೌಕರ್ಯಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಟೀಕಿಸಿದರು. ”2004ರಿಂದ ರಾಜಕೀಯದಲ್ಲಿದ್ದೇನೆ. ದೇಶದಲ್ಲಿ ಸಂಪೂರ್ಣ ಮೂಲಸೌಕರ್ಯದ ಮಟ್ಟ ಕುಸಿದಿರುವ ಸ್ಥಳವನ್ನು ನಾವು ಮೊದಲ ಬಾರಿಗೆ ನೋಡುತ್ತಿದ್ದೇವೆ” ಎಂದು ಅವರು ಹೇಳಿದರು. ಮಣಿಪುರದ ಜನರ ನೋವುಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ.. ಅವರ ಗಾಯಗಳು ಮತ್ತು ಅವರ ದುಃಖವನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು ಎಂದರು.

ಇಲ್ಲಿನ ಜನರು ಶಾಂತಿ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಈ ರಾಜ್ಯದಲ್ಲಿ ಮೊದಲಿದ್ದ ಸೌಹಾರ್ದತೆ, ಶಾಂತಿ ಮತ್ತು ವಾತ್ಸಲ್ಯವನ್ನು ಮರಳಿ ನಾವು ತರುತ್ತೇವೆ,’’ ಎಂದು ಭರವಸೆ ನೀಡಿದರು. ”ದೇಶದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ತೀವ್ರ ಅನ್ಯಾಯವನ್ನು ಎದುರಿಸುತ್ತಿದ್ದೇವೆ. ಹಣಕಾಸಿನ ಏಕಸ್ವಾಮ್ಯವು ರೂಪುಗೊಳ್ಳುತ್ತಿದೆ. ದೇಶದ ಸಂಪತ್ತೆಲ್ಲ ಕೆಲವೇ ಜನರ ಕೈ ಸೇರುತ್ತಿದೆ. ದೇಶವು ಹಣದುಬ್ಬರ ಮತ್ತು ನಿರುದ್ಯೋಗದಿಂದ ಹೋರಾಡುತ್ತಿದೆ. ಈ ವಿಚಾರಗಳನ್ನು ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪ್ರಸ್ತಾಪಿಸುತ್ತೇವೆ” ಎಂದರು.

ಮಂಜಿನಿಂದಾಗಿ ವಿಳಂಬ

ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಭಾರತ್ ಜೋಡೋ ನ್ಯಾಯ್ ಯಾತ್ರೆ ಸ್ವಲ್ಪ ತಡವಾಗಿ ಆರಂಭವಾಯಿತು. ದೆಹಲಿಯಲ್ಲಿ ಮಂಜು ಕವಿದಿದ್ದರಿಂದ ರಾಹುಲ್ ತಡವಾಗಿ ಮಣಿಪುರ ತಲುಪಿದರು. ಇಂಫಾಲ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿಗೆ ಕಾಂಗ್ರೆಸ್ ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು. ಅಲ್ಲಿಂದ ನೇರವಾಗಿ ತೌಬಲ್ ಜಿಲ್ಲೆಯ ‘ಖೋಂಗ್‌ಜೋಮ್ ಯುದ್ಧ ಸ್ಮಾರಕ’ಕ್ಕೆ ತೆರಳಿದರು.

1891ರ ಆಂಗ್ಲೋ-ಮಣಿಪುರ ಯುದ್ಧದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ. ನಂತರ ಅವರು ‘ನ್ಯಾಯ್ ಮೈದಾನ’ ತಲುಪಿದರು. ಖರ್ಗೆ ಮತ್ತು ರಾಹುಲ್ ಗಾಂಧಿ ಒಟ್ಟಿಗೆ ಬಾವುಟ ಬೀಸಿ ಯಾತ್ರೆ ಆರಂಭಿಸಿದರು. ರಾಹುಲ್ ಗಾಂಧಿ ಪ್ರಯಾಣಿಸುವ ಬಸ್ಸನ್ನು ಖರ್ಗೆ ಅನಾವರಣಗೊಳಿಸಿದರು. ಬಳಿಕ ರಾಹುಲ್ ಬಸ್ ಮೂಲಕ ಯಾತ್ರೆಗೆ ತೆರಳಿದರು. ನೂರಾರು ಜನರು ಅವರನ್ನು ಸ್ವಾಗತಿಸಿ ನಮಸ್ಕರಿಸಿ ಮುಂದೆ ಸಾಗಿದರು. ಮೊದಲ ಹಂತದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಸಂಪೂರ್ಣ ಪಾದಯಾತ್ರೆಯಾಗಿದ್ದರೆ, ನ್ಯಾಯ ಯಾತ್ರೆಯನ್ನು ಬಹುತೇಕ ಬಸ್‌ ಮೂಲಕ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಅಲ್ಲೊಂದು ಇಲ್ಲೊಂದು ಪಾದಯಾತ್ರೆ ಕೂಡಾ ನಡೆಯಲಿದೆ ಎನ್ನಲಾಗಿದೆ.

67 ದಿನಗಳು.. 6,713 ಕಿಲೋಮೀಟರ್

ರಾಹುಲ್ ಸೆಪ್ಟೆಂಬರ್ 2022ರಲ್ಲಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿದ್ದರು. ಕಳೆದ ವರ್ಷ ಕಾಶ್ಮೀರದಲ್ಲಿ ಮುಕ್ತಾಯವಾಯಿತು. ಈಗ ಮಣಿಪುರದಿಂದ ಆರಂಭಗೊಂಡಿರುವ ಅವರ ನ್ಯಾಯ ಯಾತ್ರೆ ಮಾರ್ಚ್ 20ರಂದು ಮುಂಬೈನಲ್ಲಿ ಕೊನೆಗೊಳ್ಳಲಿದೆ. ರಾಹುಲ್ 67 ದಿನಗಳಲ್ಲಿ 6,713 ಕಿಲೋಮೀಟರ್ ಪ್ರಯಾಣಿಸಲಿದ್ದಾರೆ. ಸುಮಾರು 15 ರಾಜ್ಯಗಳ 110 ಜಿಲ್ಲೆಗಳಲ್ಲಿ 100 ಲೋಕಸಭಾ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳು ವ್ಯಾಪ್ತಿಗೆ ಬರಲಿವೆ.

ಮತ ಕೇಳುವ ವೇಷಧಾರಿ: ಖರ್ಗೆ

ಪ್ರಧಾನಿ ಮೋದಿ ಮಣಿಪುರದ ಜನರ ಮತ ಕೇಳಲು ಬರುತ್ತಾರೆಯೇ ಹೊರತು ರಾಜ್ಯದ ಜನರ ನೋವು ಹಂಚಿಕೊಳ್ಳಲು ಬರುವುದಿಲ್ಲ ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮೋದಿಗೆ ಸಮುದ್ರದಲ್ಲಿ ಈಜಲು ಸಮಯವಿದೆ ಆದರೆ ಮಣಿಪುರಕ್ಕೆ ಬರಲು ಸಮಯವಿಲ್ಲ ಎಂದು ಟೀಕಿಸಿದರು. ಬಿಜೆಪಿ ಧರ್ಮ ಮತ್ತು ರಾಜಕೀಯವನ್ನು ಸೇರಿಸಿ ಜನರನ್ನು ಪ್ರಚೋದಿಸುತ್ತಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ಸಮಾನತೆಯ ಪರವಾಗಿ ನಿಂತಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಲು ರಾಹುಲ್ ಭಾರತ್ ಜೋಡೋ‌ ನ್ಯಾಯ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು