Thursday, June 20, 2024

ಸತ್ಯ | ನ್ಯಾಯ |ಧರ್ಮ

ಸಿದ್ದರಾಮಯ್ಯ ಅಂದ್ರ ನನಗ ಖರೇನ ಅಂಜಿಕಿ ಬರ್ತೈತಿ: ಹೆಡಿಗಿ

ಪ್ರೆಸ್ ರಿಪೋರ್ಟರ್ ಪರಮೂ ಜೊತೆ ಕಾಲ್ಪನಿಕ ಸಂದರ್ಶನ

(ವಕೃತಿಧಾಮದಲ್ಲಿ ಕೂಗುಮಾರಿ ಕುಮಾರ್ ಹೆಡಿಗಿ ಅವರು ಮಸಾಜ್ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲಿಗೆ ಪರಮೂ ಬರುವನು)

ಪರಮೂ: ನಮಸ್ಕಾರ ಸಾರ್.,

ಕೂಗುಮಾರಿ ಹೆಡಿಗಿ: ಬರ್ರಿ ಪರಮೂ, ಏನ್ ಬಾಳ ದಿನಕ್ಕ ಬಂದ್ರೆಲ್ಲ.

ಪರಮೂ: ನಿಮ್ಮನ್ನ ಮಾತಾಡಸಾಕ ಅಂತ ಬಂದ್ನಿ ಸರಾ. ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್.

ಹೆಡಿಗಿ: ಹೆಹೆಹೆ ಸಂಕ್ರಾಂತಿ ಗಿಂಕ್ರಾಂತಿ ಏನಿಲ್ಲ ನಮಗ. ನಮ್ಮದೇನಿದ್ರೂ ಆಯೋಧ್ಯಾ, ರಾಮ, ರಜಾಕು ಇಷ್ಟೆ.

ಪರಮೂ: ಏನ್ ಸಾರ್ ಮೊನ್ನಿ ರಣ ಕಹಳಿ ಊದಿ ಬಿಟ್ಟು ಇಲ್ಲಿಗೆ ಬಂದು ಮಸಾಜ್ ಮಾಡಿಸಿಕೊಳ್ಳಾಕ ಹತ್ತಿರಿ. ನಾನೆಲ್ಲೋ ಯುದ್ಧ ಚಾಲೂ ಆಗಿಬಿಟ್ಟಿರತೈತಿ ಓಡೋಡಿ ಬಂದ್ನಿ.

ಹೆಡಿಗಿ: ಎಲ್ಲ ಹೇಳ್ತಿನಿ, ಆದ್ರ, ಆಪ್ ದಿ ರಿಕಾರ್ಡ್ ಮತ್ತ. ಎಲ್ಲ ಕೇಳಿಸಿಕೊಂಡು ನಿಮ್ಮ ಪೇಪರದಾಗ ಹಾಕಿಬಿಡಬಾರದು.

ಪರಮೂ: ಹೆಹ್ಹೆಹ್ಹೆ ಹಂಗೇನಿಲ್ರಿ, ನೀವು ಹೇಳ್ರಿ ಸಾರ್.

ಹೆಡಿಗಿ: ನಮ್ಮ ಬಗ್ಗೆ ಮೊದಲಿಂದ ಗೊತ್ತಲ್ಲ ಪರಮೂ ನಿಮಗೆ. ನಮ್ಮ ಪೂರ್ವಿಕರಾದಿಯಾಗಿ ನಮಗೆಲ್ಲ ರಣರಂಗಕ್ಕೆ ಹೋಗಿ ಯುದ್ಧ ಮಾಡಿ ಗೊತ್ತೇ ಇಲ್ಲ. ನಮ್ಮದೇನಿದ್ರು ಬಾಯಿ ಬಂಬಾಟ್ ಅಷ್ಟ. ಹಂಗ ನೋಡಿದ್ರ
ನನ್ನ ನಾಲಿಗಿ ಹತಾರಕ್ಕಿಂತ ಹರತ್ ಐತಿ, ಈ ಎಲುಬಿಲ್ಲದ ನಾಲಿಗಿನ ಆಕಾಡಿ ಇಕಾಡಿ ಹೊಳ್ಯಾಡಿಸಿಬಿಟ್ರ ಸಾಕು. ಬಗ್ ಅಂತ ಬೆಂಕಿ ಹತಗೊಂಡ ಉರಿತೈತಿ. ಹಹ್ಹಹ್ಹ

ಪರಮೂ: ಖರೆ ಮಾತು ಹೇಳಿದ್ರಿ ಸಾ. ಅಲ್ಲ ಸಾರ್, ನೀವು ಇಷ್ಟು ದಿನ ಸುಮ್ಮನಿದ್ದವರು ಈಗ ಹಿಂಗ ಒಮ್ಮಿಂದೊಮ್ಮಿಲೆ..?

ಹೆಡಿಗಿ: ನೋಡ್ರಿ ಪರಮೂ ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಅಂತ ಕೃಷ್ಣ ಪರಮಾತ್ಮ. ಅಂದ್ರ ಯಾವಾಗ್ಯಾವಾಗ ಈ ಸಂಕಷ್ಟ ಬರುತ್ತೋ ಆಗೆಲ್ಲ ನಾನು ಬರ್ತಿನಿ. ಅದರರ್ಥ ಸ್ವತಃ ಕೃಷ್ಣಾನೆ ಬರ್ತಾನೆ ನಮ್ಮಂಥವ್ರು ಬರ್ತಿವಿ ಅಂತ ಅಷ್ಟೇ,

ಪರಮೂ: ಏನ್ಸಾರ್ ಸಾರ್ ಮಾತ ಮಾತಿಗೂ ಪಾಪ, ರಾಮ, ಕೃಷ್ಣ ಅನ್ಕೊಂಡು..

ಹೆಡಿಗಿ: ಏ ಅವರಿಂದ್ಲ ನಾವು ಇಷ್ಟು ದೂರ ಬಂದಿರೋದ್ರಿ ಪರಮೂ.,
,ಪರಮೂ: ಅಲ್ಲ, ನಿಮಗೇನೋ ಆರಾಮ ಇರಲಿಲ್ಲ ಅಂತಿದ್ರಲ್ಲ ಸಾರ್. ಅಂದ್ರ ಆ ದೇವರುಗಳೇ ನಿಮಗ ಇಷ್ಟು ದಿನ ಇಂತ ದುರ್ಗತಿ..?

ಹೆಡಿಗಿ: ಏನಂದ್ರಿ?

ಪರಮೂ: ಏನಿಲ್ಲ ಬಿಡಿ ಸಾರ್. ಈಗ ಇಲಕ್ಸನ್ ಬಂತಂತ ನೀವು ಹೊರಗ ಕಾಣಿಸಿಕೊಂಡಿರಿ ಅಂತ ಹೊರಗ ಮಂದಿ ಮಾತಾಡಾಕ ಹತ್ಯಾರ ಸಾರ್. ಅದಕ್ಕ..

ಹೆಡಿಗಿ: ಮತ್ತ ಎಲ್ಲ ಗೊತ್ತಿದ್ದ ಕೇಳ್ತಿರಲ್ರಿ ಪರಮೂ. ರಾಜಕೀಯ ಅನ್ನೋದು ಒಂದು ಸಿಜನ್ ಇದ್ದಂಗ. ಸಿಜನ್ ಇದ್ದಾಗ ಬೀಜ ಬಿತ್ತಬೇಕು, ಬೆಳಿ ತೆಗಿಬೇಕಲ್ಲಾ ಮತ್ತ.

ಪರಮೂ: ಅಂದ್ರ ಹಿಂಗ ಹಿಡಿ ಹೊಡಿ ಬಡಿ ಕಡಿ ಅನ್ನೋದು ನಿಮ್ಮ ಬೀಜ ಮತ್ತು ಬೆಳಿ ಅಂತಿರೇನ್ರಿ ಸರ್.

ಹೆಡಿಗಿ: ಹೌದ ಮತ್ತ. ಅಲ್ರಿ ಪರಮೂ, ಯಕಶ್ಚಿತ್ ಸಾದಾ ಸೀದಾ ಮಂದಿ ನಾವು. ಆ ಕೆಡಿ ರವಿ, ಪಾತಾಳ ಬಿಸೂರಾಜನಂಥವರು, ನನ್ನಂಥವರು ಯಾವ ಆಂಗಲ್ ನಿಂದ ರಾಜಕಾರಣಿ ಆಗಾಕ ಆಕ್ಕಿತ್ತ ಹೇಳ್ರಿ. ಏನೋ ನಮ್ಮ ಹರೇದ ಕಾಲದಾಗ ಒಂದೀಟು ಬಾಯಿಗ ಬಂದಂಗ ಒದ್ಯಾರಡಕೋತ ಇದ್ದಿವಿ. ಕೈಗೆ ಸಿಕ್ಕವರನ್ನ ನುಗ್ಗ ಹಣಿತಿದ್ವಿ. ಆ ಕೆಸರಿನ ಪಕ್ಷದ ಪುಣ್ಯಾತ್ಮರು ನಮ್ಮಂಥ ಹುಂಬ ಹುಡುಗರನ್ನ ಕರ್ದು ಇಲಕ್ಷನ್ ನಿಲ್ಲಿಸಿ ಗೆಲ್ಲಿಸಿದ್ರು. ಹಿಂಗ ಒದರ್ಯಾಡಕೋತ ಹೋಗ್ರಿ ಅಂತ ಆಶಿರ್ವಾದ ಮಾಡಿದ್ರು. ಮೊದಲೆಲ್ಲ ವರ್ಷ ಪೂರ್ತಿ ಒದರಕೋತ ಇರ್ತಿದ್ವಿ. ಹಿಂದ ಎಷ್ಟೊಂದು ಒದರಿವಿ ಗೊತ್ತೇನ್ರಿ? ಒಟ್ಟ ಸುಮ್ಮನ ಕುಂದರ್ತಿರಲಿಲ್ಲ ಮನ್ಷ್ಯಾ ನಾನು. ಸಂವಿಧಾನ ಬದಲಿಸ್ತಿವಿ ಅನ್ನೋದು, ತಾಜಮಹಲ್ ತೇಜೋಮಹಲ್ ಮಾಡ್ತಿವಿ ಅನ್ನೋದು, ರಾಹುಲ್ ಗಾಂಧಿಗೆ ಕಲಬೆರಕಿ ಪ್ರೊಡಕ್ಟ್ ಅನ್ನೋದು, ಒಟ್ಟ ಹಿಂಗ ಬಾಯಿಗ್ ಬಂದಂಗ ಒದರಕೋತ ಇದ್ದುದರಿಂದಲೇ ನನಗ ಟಿಕೇಟ್ ಕೊಡಕೋತ ಬಂದೀನಿ. ಸುಮ್ಮನಿದ್ರ ನಮಗ ಯಾಕ ಟಿಕೇಟ್ ಕೊಡಬೇಕು ಹೇಳ್ರಿ, ನಾವೇನು ನಮ್ಮ ಲೀಡರ್ ಗಳಿಗೆ ಹತ್ತಿದವರೋ ಹೊಂದಿದವರೋ..
ಪರಮೂ: ಖರೆ ಮಾತು ಹೇಳಿದ್ರಿ ಸಾರ್. ಆದ್ರ ಇಷ್ಟ ದಿನ ಸುಮ್ಮನ ಇದ್ರಿ..?

ಹೆಡಿಗಿ: ಹಂಗ ಒಂದೀಟು ನನಗೂ ಸೋಮಾರಿತನ ಬಂದಿತ್ತಾ ಅದು ಇದು ಮಾಡಿ ಮಾಡಿ ನನ್ನ ಹೆಲ್ತು ಎಕ್ಕುಟ್ಟಿ ಹೋಗಿತ್ತು. ಆದ್ರ ಈಗ ಇಲಕ್ಷನ್ ಬಂತಲ್ಲಾ, ಸುಮ್ಮನಿದ್ರ ನನಗ ಟಿಕೇಟ್ ಕೋಡೋ ಮಕ್ಕಳಲ್ಲ ಇವ್ರು.

ಪರಮೂ: ಅಲ್ಲ ಸಾರ್, ಎಷ್ಟ ಜನ ಮಕ್ಕಳು. ಸಿದ್ದರಾಮಯ್ಯನವರಿಗೂ ಮಗ ಅಂತೀರಿ. ಇಕಾಡಿ ನಿಮ್ಮ ಲೀಡರ್ ಗಳಿಗೂ ಮಕ್ಕಳ ಅಂತೀರಿ?
ಹೆಡಿಗಿ: ಏ ನಮ್ಮ ವ್ಯಕ್ತಿತ್ವಾನೇ ಹಂತದಲ್ಲೇನ್ರ. ಬಾಳ ಹೊಲಸ ನನ್ನ ಮಗಾ ನಾನು. ಒಂಥರಾ ನಾಯಿ ಇದ್ದಂಗ. ನನ್ನ ಹಂತ್ಯಾಕ ಯಾರ ಬರಬಾರದು ಅಂತ ಹಿಂಗೆಲ್ಲ ಮಾತಾಡ್ತಿನಿ ಅಷ್ಟ.

ಪರಮೂ: ಆದರೂ ಸರ್ ನೀವು ಅವತ್ತು ಸಿದ್ದರಾಮಯ್ಯನವರ ಬಗ್ಗೆ ಮಾತಾಡಾಕ ಹೋಗಬಾರದಿತ್ತು. ಅದ್ರಿಂದ ಸಿದ್ದರಾಮಯ್ಯನೋರು ಮತ್ತಷ್ಟು ಫೆಮಸ್ ಆದ್ರು.

ಹೆಡಿಗಿ: (ಅಳುಮುಖ ಮಾಡಿ ದುಖಿಃಸುತ್ತಾ) ನೀವು ಹೇಳಿದ್ದು ಬರೊಬ್ಬರಿ ಐತ್ರಿ ಪರಮೂ. ಖರೆವಂದ್ರ ಆ ಮನುಷ್ಯನ್ನ ನೋಡಿದ್ರ ನನಗೂ ಒಂಥರಾ ಅಂಜಿಕಿನೂ ಐತಿ, ಹೊಟ್ಟಿಕಿಚ್ಚು ಐತಿ. ಅವರ ಸುತ್ತಲ ಏನ್ ಜನಾ, ಏನ್ ವರ್ಚಸ್ಸು, ಏನ್ ಭಾಷಣ. ಮನಸಿನೊಳಗಿನ ಮಾತ ಹೇಳಬೇಕಂದ್ರ ರಾಜಕಾರಣಿ ಅಂದ್ರ ಹಂಗ ಇರಬೇಕು ಅನಿಸ್ತೈತಿ. ಆದ್ರ ಏನ್ ಮಾಡೋದು, ನಮ್ಮ ಪಕ್ಷದ ಸಿದ್ಧಾಂತ ಮತ್ತ ನಿಯಮ ನಿಯತ್ತು ಬ್ಯಾರೇನ ಇರ್ತಾವು. ನಮಗ ಹಿಂಗ ಒದರ್ಯಾಡಕೋತ ಹೋಗುವಂಥ ಜವಾಬ್ಧಾರಿ ಕೊಟ್ಟಿರ್ತಾರ. ಅದನ್ನ ನಾವು ಪಾಲಿಸಕೋತ ಹೋಗಬೇಕಾಕೈತಿ ನೋಡ್ರಿ.

ಪರಮೂ: ಹಂಡ್ರಡ್ ಪರ್ಸೆಂಟ್ ಕರೆ ಹೇಳಿದ್ರಿ ಸರ್. ಲಾಸ್ಟ್ ಪ್ರಶ್ನಿ ಸರ್. ನೀವು ಈ ದೇಶದ ಸಂವಿಧಾನ ಗೌರವಿಸ್ತಿರೋ ಅಥವಾ ಧರ್ಮ ಗೌರವಿಸ್ತಿರೋ?

ಹೆಡಿಗಿ: ಏ ಸಂವಿಧಾನ ಪಂವಿಧಾನ ಇಂಥ ದೊಡ್ಡ ಪದ ಅರ್ಥ ಆಗೂದಿಲ್ಲ ನಮಗ, ಅವರೌರ ಎಲ್ಲ ವಿರೋಧ ಪಕ್ಷದವರು ಹೊಳ್ಳಿಮಳ್ಳೆ ಮಾತಾಡಿದ್ರು ಸಂವಿಧಾನ ಅಂತ ಮಾತಾಡ್ತಾರ. ನನಗ ಕೇಳಿ ಕೇಳಿ ತೆಲಿ ಕೆಟ್ಟ ಬಿಟೈತಿ, ಅದಕ್ಕ ನಾನು ಸಂವಿಧಾನ ಬದಲಾಯಿಸ್ತಿನಿ ಅಂತ ಹೇಳಿಕಿ ಕೊಟ್ಟಿದ್ದು, ನಮ್ಮದೇನಿದ್ರು ನಮ್ಮ ಜನರನ್ನ ಮುಂದಕ್ಕ ತರೋದಷ್ಟ ಹಿಡನ್ ಅಜೆಂಡಾ. ಉಳಿದಿದ್ದೆಲ್ಲ ತಗೊಂಡು ಏನ್ ಮಾಡೂದೈತಿ ಹೇಳ್ರಿ.

ಪರಮೂ: ಕರೆಕ್ಟ್ ಹೇಳಿದ್ರಿ ಸರ್. ಈಗ ಅರ್ಥಾತು. ನೀವೇನು ನಿಮ್ಮ ಲೇವಲ್ ಏನು. ನೀವು ಮಾತಾಡಿದ್ದೆಲ್ಲ ಈ ಮೊಬೈಲ್ ನ್ಯಾಗ ರಿಕಾರ್ಡ್ ಆಗೇತಿ ಸರ್. ಬರ್ತಿನಿ ಸಾರ್. (ಪರಮೂ ಹೊರಡುವನು. ಕೂಗುಮಾರಿ ಹೆಡಿಗಿ ಕಕ್ಕಾಬಿಕ್ಕಿಯಾಗಿ ನೋಡುತ್ತಾ ಕುಳಿತುಕೊಳ್ಳುವರು.)

-ಪರಮೂ ಕುಲಕರ್ಣಿ, ಬಾಗಲಕೋಟೆ

Related Articles

ಇತ್ತೀಚಿನ ಸುದ್ದಿಗಳು