Wednesday, June 19, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು -೫ : ಆ ಬಾನು ಈ ಚುಕ್ಕಿ..

ಸರಿ ಸುಮಾರು ಎರಡು ದಶಕಗಳ ಹಿಂದೊಮ್ಮೆ ನಾನು ಮೈಸೂರಿನಲ್ಲಿ ಇದ್ದೆ. “ಜನವಾಹಿನಿ” ಪತ್ರಿಕೆ ಬಿಟ್ಟ ಮೇಲೆ ನನ್ನ ಸಹೋದ್ಯೋಗಿ ಗೆಳೆಯ ವಿಲ್ಫ್ರೆಡ್ ಡಿಸೋಜಾ ಅಲ್ಲಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ (ಎಎನ್‌ಎಸ್‌ಎಸ್‌ಐಆರ್‌ಡಿ) ಸಂಸ್ಥೆಯಲ್ಲಿ ಪಂಚಾಯತಿ ರಾಜ್ ವಿಷಯದಲ್ಲಿ ಸಲಹೆಗಾರರಾಗಿ ಸೇರಿದ್ದರು. ಕರ್ನಾಟಕವು ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾದ ದಿವಂಗತ ಅಬ್ದುಲ್ ನಜೀರ್ ಸಾಬ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಸ್ಥೆಯಲ್ಲಿ ಆ ಹೊತ್ತಿಗೆ ರಾಜ್ಯವು ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ದಿವಂಗತ ಅನಿತಾ ಕೌಲ್ ಅವರು ಮಹಾ ನಿರ್ದೇಶಕರಾಗಿದ್ದರು. ಅವರ ಅಧಿಕಾರ ವ್ಯಾಪ್ತಿಯಲ್ಲಿ ರಾಜ್ಯ ಆಡಳಿತ ತರಬೇತಿ ಸಂಸ್ಥೆಯೂ (ಎಟಿಐ) ಇತ್ತು. ಅದು ಸರಕಾರಿ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದ್ದರೆ, ಅನಿತಾ ಕೌಲ್ ಅವರು ಪಂಚಾಯತಿ ರಾಜ್ ವ್ಯವಸ್ಥೆಯ ಮೂರೂ ಹಂತಗಳ ಚುನಾಯಿತ ಸದಸ್ಯರಿಗೆ ತರಬೇತಿ ನೀಡುವ ಒಂದು ಮಹಾನ್ ಕಾರ್ಯಕ್ರಮವನ್ನೇ ಆರಂಭಿಸಿದ್ದರು. ಈ ಉಪಗ್ರಹ ಆಧರಿತ ತರಬೇತಿಯು ಬಹುಶಃ ದೇಶದಲ್ಲೇ ಮೊದಲು ಇರಬೇಕು. ಈ ಆನ್‌ಲೈನ್ ತರಬೇತಿಯ ಸಲುವಾಗಿ ಇಡೀ ರಾಜ್ಯದಲ್ಲಿ ಪ್ರತೀ ತಾಲೂಕು ಮಟ್ಟದಲ್ಲಿ ತರಬೇತಿದಾರರ ಒಂದು ತಂಡವನ್ನೇ ಕಟ್ಟಿದರು. ನಂತರ ಎಚ್.ಎಸ್. ಅಶೋಕಾನಂದ ಅವರು ಈ ಕಾರ್ಯವನ್ನು ದಕ್ಷವಾಗಿ ಮುಂದುವರಿಸಿದರು. ಆಗ ಅಲ್ಲಿ ಈ ತರಬೇತಿದಾರರಿಗೆ ಮಾತ್ರವಲ್ಲದೇ ನೇರವಾಗಿಯೂ ಪಂಚಾಯತಿ ರಾಜ್ ವ್ಯವಸ್ಥೆಯ ಆಯ್ದ ಚುನಾಯಿತ ಸದಸ್ಯರಿಗೆ ತರಬೇತಿಯೂ ನಡೆಯುತ್ತಿತ್ತು. ಈ ತಂಡವು ಬಹುಶಃ ರಾಜ್ಯವು ಕಂಡ ಅತ್ಯಂತ ಪ್ರಾಮಾಣಿಕ, ಉತ್ಸಾಹಿ, ನಿಷ್ಟಾವಂತ ಯುವ ತಂಡವಾಗಿತ್ತು. ವಿಲ್ಫ್ರೆಡ್ ಆಗ ಪಂಚಾಯಿತಿ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ವಿಷಯಕ್ಕೇ ಮೀಸಲಾದ “ಸಾಲು ಹೆಜ್ಜೆ” ಎಂಬ ಒಂದು ಮಾಸಿಕ ಪತ್ರಿಕೆಯನ್ನು ತರುತ್ತಿದ್ದರು. ನಾನದರಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿದ್ದೆ. ಜೊತೆಗೆಯೇ ಈ ಎಸ್‌ಐಆರ್‌ಡಿ ಸಂಸ್ಥೆಯ ತರಬೇತಿ ಕಾರ್ಯಕ್ರಮ ದಾಖಲೀಕರಣ, ತರಬೇತಿ ಸಾಮಗ್ರಿಗಳ ತಯಾರಿ, ಅನುವಾದ, ತರಬೇತಿಗಾಗಿ ತಯಾರಿಸಲಾಗುತ್ತಿದ್ದ ಕಿರುಚಿತ್ರಗಳಿಗೆ ಸ್ಕ್ರಿಪ್ಟ್ ಬರೆಯುವುದೇ ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದೆ. ಆಗ ಬಂಧುಗಳಂತೆ ಬಾಳುತ್ತಿದ್ದ ರಾಜ್ಯದ ಮೂಲೆ ಮೂಲೆಗಳ ಎಲ್ಲಾ ಸಾಮಾಜಿಕ ಹಿನ್ನೆಲೆಗಳಿಂದ ಬಂದ ಹುಡುಗ ಹುಡುಗಿಯರ ಜೊತೆಗೆ ಆತ್ಮೀಯ ಸಂಬಂಧವಿತ್ತು. ಈ ಸಂಸ್ಥೆ ನಮಗೆಲ್ಲರಿಗೂ ಒಂದು ವಿಶ್ವವಿದ್ಯಾಲಯವೇ ಆಗಿತ್ತು. ಯಾವುದೇ ವಿಶ್ವವಿದ್ಯಾಲಯದಲ್ಲಿ ಕಲಿಸದ ನೆಲದ ನೆಲೆಯನ್ನು ನಾನಲ್ಲಿ ಕಲಿತೆ. ಎಂ.ಸಿ. ಶೈಲಜಾ ಎಂಬ ನಿಷ್ಟಾವಂತ ಅಧಿಕಾರಿಯ ಸಹಿತ, ವಿಲ್ಫ್ರೆಡ್, ಜಿ. ಮೋಹನ್, ನಿಜ ಜೀವನದಲ್ಲಿಯೂ ಶಿಕ್ಷಕರಾದ ಎಫ್. ಸಿ. ಚೇಗುರೆಡ್ಡಿ, ಲತೀಫ್… ಒಬ್ಬರೇ ಇಬ್ಬರೇ… ನಾವೆಲ್ಲರೂ ಈ ಹುಡುಗ ಹುಡುಗಿಯರಿಗೆ ದೊಡ್ಡಣ್ಣ, ದೊಡ್ಡಕ್ಕರಂತೆ ಇದ್ದೆವು. ಇದೊಂದು ಕುಟಂಬವೇ ಆಗಿತ್ತು.

ಹೀಗಿರುತ್ತಾ, ಒಂದು ದಿನ ಒಬ್ಬಳು ಹುಡುಗಿ ತರಬೇತಿಗಾಗಿ ಬಂದಳು. ಅವಳೂ ತರಬೇತಿದಾರಳು. ಆಗ ತರಬೇತಿದಾರರ ತರಬೇತಿ (ಟಿಓಟಿ) ಎಂಬುದು ಬಹಳ ಮುಖ್ಯ ಅಂಗವಾಗಿತ್ತು. ಅವಳು ತೀರಾ ಬಡ ಮುಸ್ಲಿಂ ಕುಟುಂಬ ಒಂದರಿಂದ ಬಂದವಳಾಗಿದ್ದಳು. ಇಲ್ಲಿ ಮುಸ್ಲಿಂ ಎಂದು ಒತ್ತಿಯೇನೂ ಹೇಳುತ್ತಿಲ್ಲ. ಆದರೆ, ಮುಸ್ಲಿಂ, ದಲಿತ ಹೆಣ್ಣು, ಗಂಡು ಮಕ್ಕಳು ಕೂಡಾ ಈ ತಂಡದ ಭಾಗವಾಗಿದ್ದರು ಎಂದು ಸೂಚಿಸಲು ಅಷ್ಟೇ. ವಿಶೇಷವೆಂದರೆ, ಈಕೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಅವಳ ಹೆಸರೇ ಬಾನು. ಈ ಕಾಲಂನ ಶೀರ್ಷಿಕೆಗೆ ಕಾರಣವಾದ ಚುಕ್ಕಿಯೇ ಈ ಬಾನು.

ಎಸ್‌ಐಆರ್‌ಡಿಯ ಬಹುದೊಡ್ಡ ಕ್ಯಾಂಪಸಿನಲ್ಲಿ ಸರಾಗವಾಗಿ ಓದುತ್ತಿದ್ದ ಈಕೆ, ಹೇಗೆ ಕಲಿಯುತ್ತಾಳೆ, ಪಂಚಾಯತಿ ಸದಸ್ಯರಿಗೆ ಇವಳು ಹೇಗೆ ಕಲಿಸುತ್ತಾಳೆ ಎಂದು ನನಗೆ ಕುತೂಹಲವಿತ್ತು. ನೋಡಿದಾಗ, ಅಥವಾ ಈಗ ಯೋಚಿಸುವಾಗ ಆಶ್ಚರ್ಯವಾಗುತ್ತದೆ: ಆಕೆಗೆ ಪ್ರಖರ ನೆನಪಿನ ಶಕ್ತಿ ಇತ್ತು. ಬ್ರೈಲ್ ಲಿಪಿಯಲ್ಲಿ ನೋಟ್ಸ್ ಮಾಡಿಕೊಳ್ಳುತ್ತಿದ್ದಳು ಸಂಶಯ ಬಂದಾಗ ಪ್ರಶ್ನೆಗಳನ್ನು ಕೇಳುತ್ತಿದ್ದಳು. ನಂತರ ಈಕೆ ನೇರವಾಗಿ ಪಂಚಾಯತಿ ಸದಸ್ಯರಿಗೆ ತರಬೇತಿ ನೀಡುವ ವಿಡಿಯೋವನ್ನೂ ನೋಡಿದೆ. ಒಮ್ಮೆ ಸ್ವರ ಕೇಳಿ ಹೆಸರು ಗೊತ್ತಾದರೆ ಮತ್ತೆ ಆಕೆ ಅದನ್ನು ಮರೆಯಾಗಿದ್ದಾಳೆ. ನಾನು “ಸಾಲು ಹೆಜ್ಜೆ” ಪತ್ರಿಕೆಯಲ್ಲಿ ಇವಳ ಬಗ್ಗೆ ಆಗ ಬರೆದಿದ್ದೆ. ನಮ್ಮ ಬಾನು ಒಂದು ಚುಕ್ಕಿ ಎಂದೆನೋ ಶೀರ್ಷಿಕೆ ಕೊಟ್ಟಿದ್ದೆ.

ಇದನ್ನೂ ಓದಿ : ಬೊಗಸೆಗೆ ದಕ್ಕಿದ್ದಷ್ಟೆ ನಮ್ಮದು

ಮನುಷ್ಯನಾದವನಿಗೆ ಯಾವುದೇ ಇಂದ್ರಿಯ ದೋಷವಿದ್ದರೆ, ಅತಿಮಾನುಷ ಎಂದು ಕರೆಯಬಹುದಾದಷ್ಟು ವಿಶೇಷ ಶಕ್ತಿ ಬೆಳೆಯುತ್ತದೆ ಎಂದು ನಂತರ ನಾನು ಕಂಡುಕೊಂಡೆ. ಈಕೆ ಬಹಳ ಸಮಯದ ನಂತರ ಮತ್ತೆ ಮೈಸೂರಿಗೆ ತರಬೇತಿಗೆ ಬಂದಳು. ಉಳಿದ ಹುಡುಗಿಯರು, “ನೀವು ನಿಮ್ಮ ಪರಿಚಯ ಹೇಳಬೇಡಿ. ಅವಳ ಕೈ ಹಿಡಿಯಿರಿ. ಅವಳಿಗೆ ಗೊತ್ತಾಗುತ್ತದೆ” ಎಂದರು. ನಾನು ಆಕೆಯ ಕೈ ಹಿಡಿದು “ಬಾನು” ಎಂದೆ. ತಕ್ಷಣವೇ “ನಿಖಿಲ್ ಸಾರ್!” ಎಂದು ಉದ್ಗಾರ ತೆಗೆದಳು. ನಂತರ ಈಕೆ ಬೇರೆ ಬೇರೆ ತರಬೇತಿಗಳನ್ನು ಪಡೆದು, ತನ್ನಂತಹ ಬೇರೆಯವರಿಗೆ ತರಬೇತಿ ನೀಡುತ್ತಿದ್ದಾಳೆ. ಎಂದು ಕೇಳಿದ್ದೆ. ಮದುವೆಯಾಗಿ ಮಕ್ಕಳಿದ್ದಾರೆ ಎಂದೂ ಕೇಳಿದ್ದೆ. ನಂತರ ಭೇಟಿಯಾಗಿಲ್ಲ.

ಅದೇ ಹೊತ್ತಿಗೆ ಇನ್ನೊಬ್ಬ ತರಬೇತಿದಾರ ಇದ್ದರು ಅವರ ಹೆಸರು ಬಸವರಾಜ್ ಎಂದು. ನನ್ನ ವಯಸ್ಸಿನವರೇ ಆಗಿದ್ದ ಇವರಿಗೂ ಕಣ್ಣು ಕಾಣಿಸುತ್ತಿರಲಿಲ್ಲ. ಅವರೊಂದು ಕಪ್ಪು ಕನ್ನಡಕ ಹಾಕಿರುತ್ತಿದ್ದರು. ಅವರಿಗೆ ಕಣ್ಣು ಕಾಣಿಸುವುದಿಲ್ಲ ಎಂದು ಉಳಿದವರಂತೆ ನನಗೂ ಬಹಳ ಸಮಯದ ವರೆಗೆ ಗೊತ್ತಾಗಲೇ ಇಲ್ಲ. ನಿಮ್ಮ ಸ್ವರ ಕೇಳಿ ನಿಮ್ಮ ಮುಖವನ್ನೇ ನೋಡಿ ಕಣ್ಣಲ್ಲಿ ಕಣ್ಣಿಟ್ಟಂತೆ ಮಾತನಾಡುತ್ತಿದ್ದರು. ಮಡಚುವ ಕೈಗೋಲನ್ನು ಅಪರಿಚಿತ ಜಾಗವಲ್ಲದೇ ಬೇರೆ ಕಡೆ ಹೊರತೆಗೆಯುತ್ತಿರಲಿಲ್ಲ. ಎಸ್‌ಐಆರ್‌ಡಿ ಕ್ಯಾಂಪಸಿನಲ್ಲಿ ಸಹಜ ಎಂಬಂತೆ ತಿರುಗಾಡುತ್ತಿದ್ದರು. ಬಾನುವಿನ ನೆನಪಾದಾಗ ಇವರ ನೆನಪೂ ಆಯಿತು. ಅವರ ಸಂಪರ್ಕವೂ ಇಲ್ಲದಿರುವುದರಿಂದ ವಿಲ್ಫ್ರೆಡ್ ಅವರಲ್ಲಿಯೇ ಅವರ ವಿಷಯ ಕೇಳಿದೆ. ಅವರು ಬರೆದದ್ದು ಇಲ್ಲಿದೆ:

“ಸಂಗಾತಿ ಬಸವರಾಜ್ ಹುಣಸೂರು ತಾಲೂಕಿನ ಕಲ್ಕುಣಿಕೆ ಹೆಸರಿನ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಶಿಕ್ಷಣ ಪಡೆದವರು. ನನಗೆ ತಿಳಿದಿರುವಂತೆ ರಾಜ್ಯಶಾಸ್ತ್ರದಲ್ಲಿ ಸ್ನಾತಜೋತ್ತರ ಪಡೆದು ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಸಮತಾವಾದಿ ಸಿದ್ಧಾಂತವನ್ನು ಒಪ್ಪಿಕೊಂಡು ವಿದ್ಯಾರ್ಥಿ ಸಂಘಟನೆ, ಯುವ ಸಂಘಟನೆ, ಜನ ವಿಜ್ಞಾನ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ವೈದ್ಯಕೀಯ ಲೋಕದ ಅನಾಹುತಕ್ಕೆ ಬಲಿಯಾಗಿ ಯುವಕನಾಗಿದ್ದಾಗಲೇ ನಿಧಾನಕ್ಕೆ ದೃಷ್ಟಿಯನ್ನು ಕಳೆದುಕೊಂಡರು. ಆದರೆ ಯಾವತ್ತೂ ಆತ್ಮ ವಿಶ್ವಾಸ, ಜೀವನೋತ್ಸಾಹ, ಚೈತನ್ಯವನ್ನು ಕಳೆದುಕೊಳ್ಳಲಿಲ್ಲ. ಮೈಸೂರು ಜಿಲ್ಲೆಯಲ್ಲಿ ಸಿಪಿಎಂ ಪಕ್ಷದ ಸಂಘಟನೆ, ರೈತ ಕಾರ್ಮಿಕ ಚಳವಳಿ, ಸಾಮೂಹಿಕ ಚಳವಳಿಗೆ ನಾಯಕತ್ವ ಕೊಟ್ಟರು. ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿ ಹಲವು ವರ್ಷ ಕೆಲಸ ಮಾಡಿದರು. ರಾಜ್ಯ ಸಮಿತಿ ಸದಸ್ಯರಾಗಿದ್ದರು. ಈಗಲೂ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ. ಶಿಕ್ಷಕಿಯಾಗಿರುವ ಅವರ ಪತ್ನಿ, ಒಂದು ಗಂಡು ಮತ್ತು ಹೆಣ್ಣು ಮಗುವಿನ ತಂದೆ. ಅವರ ಮತ್ತು ಜೊತೆಯ ಸಂಗಾತಿಗಳ ಬೆಂಬಲ, ಸಹಕಾರದಿಂದ ದೃಷ್ಟಿ ಇರುವ ಸಾಮಾನ್ಯ ಮನುಷ್ಯರಂತೆ ಸದಾ ಚಟುವಟಿಕೆಯಿಂದ ಇರುವ ಸಂಗಾತಿ ಬಸವರಾಜ್.”

ಬಾನು ಮತ್ತು ಬಸವರಾಜ್ ಅವರ ಪರಿಚಯ ನನಗೆ ಆಗುವ ಹೊತ್ತಿನಲ್ಲಿ ನನ್ನ ತಂದೆ ಅಶೋಕ್ ಕೋಲ್ಪೆ ಅವರಿಗೂ ಕಣ್ಣು ಕಾಣುತ್ತಿರಲಿಲ್ಲ. ಅತ್ಯಂತ ಸಕ್ರಿಯರಾಗಿ ಪಂಚಾಯತಿ ಸದಸ್ಯರೂ ಆಗಿದ್ದ ಅವರು ಅತ್ಯಂತ ಜನಪ್ರಿಯರಾಗಿದ್ದರು. ಬಸವರಾಜ್ ಅವರಂತೆ “ವೈದ್ಯಕೀಯ ರಂಗದ ಅಸಡ್ಡೆ”ಯಿಂದ ಅವರೂ ದೃಷ್ಟಿ ಕಳೆದುಕೊಂಡರು. ಒಂದು ಚಿಕ್ಕ ಅಪರೇಷನಿಗಾಗಿ ಆಸ್ಪತ್ರೆ ಸೇರಿದ್ದ ಅವರಿಗೆ ಅರಿವಳಿಕೆ ನೀಡಲಾಗಿತ್ತು. ಅಪರೇಷನ್ ಮುಗಿದು ಸ್ಮೃತಿ ಬಂದಾಗ ದೃಷ್ಟಿ ಹೋಗಿತ್ತು. ಅವರಿಗೆ ಗ್ಲಕೋಮಾ (Glaucoma) ಎಂಬ ರೋಗವಿತ್ತು. ಕಣ್ಣಿನ ನರಗಳು ನಿಧಾನವಾಗಿ ಸಾಯುವ ಗುಣಪಡಿಸಲಾಗದ, ಆದರೆ, ಹೆಚ್ಚಾಗದಂತೆ ತಡೆಯಬಹುದಾದ ರೋಗವಿದು. ವೈದ್ಯರು ಈ ಅಪರೇಷನ್ ಮಾಡುವಾಗ ಅವರ ಡಯಾಬಿಟಿಸ್ ಪರೀಕ್ಷೆ ಮಾಡಿರಲಿಲ್ಲ. ಔಷಧಿಯೇ ಪ್ರತಿಕೂಲ ಪರಿಣಾಮ ಮಾಡಿದುದರಿಂದ ಹಲವು ವರ್ಷಗಳ ಕಾಲ ದೃಷ್ಟಿಯಿಲ್ಲದೇ ಕಳೆಯಬೇಕಾಯಿತು. ಇದು ಆವರು ಸ್ವಲ್ಪ ಬೇಗನೇ ತೀರಿಕೊಳ್ಳಲೂ ಕಾರಣವಾಯಿತು.

ನನಗೆ ಓದುವ ಹುಚ್ಚು ಹಿಡಿಸಿದ್ದ ಅವರಿಗೆ ಓದಲು ಸಾಧ್ಯವಿರಲಿಲ್ಲ. ಸಮಾಜ ಸೇವೆ ಎಂದು ಊರಿಡೀ ತಿರುಗಾಡುತ್ತಿದ್ದ ಅವರಿಗೆ ಮನೆಯೊಳಗೇ ಕೂತಿರುವುದು ಕಷ್ಟವಾಗುತ್ತಿತ್ತು. ನಾನು ಅವರಿಗೆ ಕುವೆಂಪು, ತೇಜಸ್ವಿ ಮುಂತಾದವರ ಕತೆ, ಕಾದಂಬರಿಗಳನ್ನೂ, ಇಂಗ್ಲೀಷ್ ಕಾದಂಬರಿಗಳನ್ನು ಓದಿ ಹೇಳಬೇಕಾಗಿತ್ತು. ಅವರೂ ಒಂದು ರೀತಿಯ ಅತೀಂದ್ರಿಯ ಶಕ್ತಿಯನ್ನು ಬೆಳೆಸಿಕೋಡರು. ಮನೆಯೊಳಗೇ ಆರಾಮವಾಗಿ ತಿರುಗಾಡುತ್ತಿದ್ದರು. ಅವರಿಗೆ ಹಳೆಯ ಕಾಲದ ಟಿವಿ ಏಂಟೆನಾದ ವ್ಯಾಪಾರವಿತ್ತು. ಅವರು ಅಂದಾಜಿನ ಮೇಲೆಯೇ ಅದಕ್ಕೆ ಬೇಕಾದ ಅಲ್ಯೂಮಿನಿಯಂ ಪೈಪು ಕತ್ತರಿಸುವುದು, ಡ್ರಿಲ್ ಮಾಡುವುದು ಇತ್ಯಾದಿ ಕೆಲಸ ಮಾಡುತ್ತಿದ್ದರು. ತೆಂಗಿನ ಕಾಯಿ ಸುಲಿಯುವುದು ಇನ್ನೊಂದು ಕೆಲಸ. ಅವರ ವಾಸನೆಯ ಶಕ್ತಿ ಎಷ್ಟು ಹೆಚ್ಚಿತು ಎಂದರೆ, ಅದರಲ್ಲೇ ಮನುಷ್ಯರ ಗುರುತು ಹಿಡಿಯುತ್ತಿದ್ದರು. ಒಂದು ದಿನ ಮನೆಯ ಚಾವಡಿಯಲ್ಲಿ ಕುಳಿತಿದ್ದವರು ಹೇಳಿದರು, “ನೋಡು, ಲಕ್ಷ್ಮೀನಾರಾಯಣರು ಬಂದರು” ನನಗೆ ಆಶ್ಚರ್ಯವಾಯಿತು. “ನಿಮಗೆ ಹೇಗೆ ಗೊತ್ತಾಯ್ತು?” ಎಂದೆ. “ನಿನಗೆ ಅವರ ಸಿಗರೇಟು ಸ್ಮೆಲ್ ಬರುವುದಿಲ್ಲವ?” ಎಂದರು. ಮನೆಯ ಹಿಂದೆ ಹೋಗಿ ನೋಡಿದರೆ, ನಮ್ಮೂರಿನ ಲಕ್ಷ್ಮೀನಾರಾಯಣರು ದೂರದಲ್ಲಿ ಸಿಗರೇಟು ಸೇದಿಕೊಂಡು ಬರುತ್ತಿದ್ದಾರೆ! ನಾನು ಕಣ್ಣು ಕಾಣದವರ ದೃಷ್ಟಿಯಿಂದ ಪ್ರಪಂಚ ನೋಡಲು ಯತ್ನಿಸುತ್ತಾ ಬಹಳ ಕಾಲ ಕಳೆದಿದ್ದೇನೆ. ಬೇಕೆಂದೇ ಕಣ್ಣುಮುಚ್ಚಿ ತಿರುಗಾಡಿದ್ದೇನೆ. ಹೊರಗಿನ ದೃಷ್ಟಿ ಮುಚ್ಚಿಹೋದರೂ ಒಳಗಿನ ದೃಷ್ಟಿ ಮುಚ್ಚಿಹೋಗಬಾರದು.

ಕಣ್ಣು ಕಾಣದ ಹಲವು ಮಹಾನ್ ವ್ಯಕ್ತಿಗಳು ಇದ್ದಾರೆ. ಸೂರದಾಸರಿಂದ ಹಿಡಿದು ಸಂಗೀತ ನಿರ್ದೇಶಕ ರವೀಂದ್ರ ಜೈನರ ತನಕ… ಅವರನ್ನು ವಿಕಲ ಚೇತನರು ಎಂದು ಕರೆದವರ ಚೇತನ ವಿಕಲವಾಗಿರಬೇಕು. ಯಾಕೆಂದರೆ, ಚೇತನವು ವಿಕಲವಾಗುವುದಿಲ್ಲ. ಇಂದು ಪ್ರಪಂಚದಲ್ಲಿ ಕಣ್ಣಿದ್ದೂ ಕುರಡರಾಗಿರುವವರೇ ತುಂಬಿದಂತಿದೆ. ಹಾಗಾಗಿಯೇ ದಿನದಿಂದ ದಿನಕ್ಕೆ ಪ್ರಪಂಚವು ಬದುಕಲು ಅಯೋಗ್ಯವಾಗುತ್ತಿದೆ. ಸುಮ್ಮನೇ ಈ ಕುರಿತು ಯೋಚಿಸುತ್ತಿದ್ದಾಗ ಬಾನು, ಬಸವರಾಜ್, ತಂದೆ ಎಲ್ಲಾ ನೆನಪಾದರು. ಇದನ್ನು ಯಾಕೆ ಬರೆಯುತ್ತಿದ್ದೇನೆ ಎಂದರೆ, ಕಣ್ಣು ಕಾಣಿಸದಿದ್ದ ಇನ್ನೊಬ್ಬ ಅದ್ಬುತ ಹಾಡುಗಾರ ಸ್ಟೀವ್ ವಂಡರ್ ಹಾಡಿದಂತೆ “ಐ ಜಸ್ಟ್ ವಾಂಟ್ ಟು ಸೇ… ಐ ಲವ್ ಯೂ!”

Related Articles

ಇತ್ತೀಚಿನ ಸುದ್ದಿಗಳು