Friday, June 14, 2024

ಸತ್ಯ | ನ್ಯಾಯ |ಧರ್ಮ

ಮೋದಿ ಆಗಮನಕ್ಕೆ ಆಡಳಿತ ಯಂತ್ರದ ದುರುಪಯೋಗ ; ಯಾವ ಸಂದೇಶ ಕೊಡಲಿದೆ ಸರ್ಕಾರ?

ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ರಾಜ್ಯ ಸರ್ಕಾರ ತನ್ನೆಲ್ಲಾ ಆಡಳಿತ ಯಂತ್ರವನ್ನೇ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ದೊಡ್ಡ ಮಟ್ಟದ ಆರೋಪ ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಸಧ್ಯ ರಾಜ್ಯ ಸರ್ಕಾರದ ಇಡೀ ಆಡಳಿತ ವ್ಯವಸ್ಥೆಯೇ ಗುರುವಾರ ಸಂಜೆಯಿಂದಲೇ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ.

ಬೆಂಗಳೂರು ಸೇರಿದಂತೆ ಬಹುತೇಕ ಹಳೆ ಮೈಸೂರು ಭಾಗದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಇಡೀ ಪ್ರಾಂತ್ಯವೇ ಜಲಾವೃತವಾಗಿರುವಾಗ ಅಗತ್ಯ ಕೆಲವು ಅಧಿಕಾರಿಗಳು, ಪಕ್ಷದ ಮುಖಂಡರು ಮಂಗಳೂರು ಕಾರ್ಯಕ್ರಮದ ಜವಾಬ್ದಾರಿ ನೋಡಿಕೊಳ್ಳುವ ಬದಲು ಆಡಳಿತ ಪಕ್ಷದ ಪ್ರತೀ ಮುಖಂಡರಾದಿಯಾಗಿ ಒಬ್ಬೇ ಒಬ್ಬ ‘ಜವಾಬ್ದಾರಿಯುತ’ ನಾಯಕರು ಬೆಂಗಳೂರಿನಲ್ಲಿ ಇಲ್ಲದೇ ಇರುವುದು ಪಕ್ಷದ ಬೇಜವಾಬ್ದಾರಿ ನಿಲುವು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಇನ್ನು ಬೆಂಗಳೂರು ಕಥೆ ಹೀಗಿದ್ದರೆ ಮಂಗಳೂರು ಮಾತ್ರ ಯುದ್ಧದ ಪ್ರದೇಶದಂತೆ ಸಿದ್ಧತೆಗೊಂಡಿದೆ. ಗುರುವಾರ ಸಂಜೆಯಿಂದಲೇ ಮಂಗಳೂರಿನ ಬಹುತೇಕ ಭಾಗಗಳು 144 ಸೆಕ್ಷನ್ ನ ನಿಷೇಧಾಜ್ಞೆ ಜಾರಿಯಾದಂತೆ ಭಾಸವಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಗೋಲ್ಡ್ ಫಿಂಚ್ ಮೈದಾನಕ್ಕೆ ಬರುವ ಹತ್ತು ಹದಿನೈದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಹುತೇಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ದಟ್ಟಣೆಯ ರಸ್ತೆಯಾದ ವಿಮಾನ ನಿಲ್ದಾಣದಿಂದ ನಗರದ ಕೆಪಿಟಿ ವರಗೆ, ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಹುಮುಖ್ಯ ಭಾಗವಾದ ಕೆಪಿಟಿ ಯಿಂದ ಪಣಂಬೂರು ವರಗೆ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಸಂಪೂರ್ಣ ವಾಹನ ಸಂಚಾರ ಬಂದ್ ಮಾಡಲಾಗುತ್ತಿದೆ. ಆ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ದೂರದ ಊರುಗಳ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ.

ಇನ್ನು ರಾಜ್ಯ ಸರ್ಕಾರದ ಮೇಲಿರುವ ಇನ್ನೊಂದು ಆರೋಪ ಏನೆಂದರೆ ಮೋದಿ ಆಗಮನದ ಸಿದ್ಧತೆ ನೆಪದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಳಸಿ ದುರ್ಬಳಕೆಗೆ ಇಳಿದದ್ದು. ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಸಣ್ಣಪುಟ್ಟ ಪಂಚಾಯಿತಿ ಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೆ “ಕಡ್ಡಾಯ” ಹಾಜರಾಗಲು ಜಿಲ್ಲಾಡಳಿತದಿಂದ ಸುತ್ತೋಲೆ ಹೊರಡಿಸಲಾಗಿದೆ. ಸುತ್ತೋಲೆಯಲ್ಲಿ ಪಂಚಾಯಿತಿ ಮಟ್ಟದ ಅಧಿಕಾರಿಗಳು ಮತ್ತು ಕೆಇಬಿ ಲೈನ್ಮೆನ್ ಗಳಿಗೆ ಸಾರ್ವಜನಿಕರನ್ನು ಕರೆದುಕೊಂಡು ಬರುವ ಜವಾಬ್ದಾರಿ ಹೊರಿಸಲಾಗಿದೆ. ಆ ಮಟ್ಟಿಗೆ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳನ್ನು “ಬಿಜೆಪಿ ಪಕ್ಷದ ಕಾರ್ಯಕರ್ತರ” ಮಟ್ಟದ ಕೆಲಸಕ್ಕೆ ನಿಯೋಜಿಸಲಾಗಿದೆ ಎಂಬುದು ಸ್ಥಳೀಯ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸರ್ಕಾರವೇ ತನ್ನ ಸ್ವಂತ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡಿದ್ದೂ ಸಹ ಅಧಿಕಾರ ದುರ್ಬಳಕೆ ಮತ್ತು ಸರ್ಕಾರದ ದುಂದುವೆಚ್ಚಕ್ಕೆ ಕನ್ನಡಿಯಂತಿದೆ.

ಹಾಗೆಯೇ ಇದರ ಜೊತೆಗೆ ಜಿಲ್ಲೆಯ ಎಲ್ಲಾ ಅಂಗನವಾಡಿ ಸಹಾಯಕರು, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು, ಆಶಾ ಕಾರ್ಯಕರ್ತರುಗಳಿಗೆ ಕಾರ್ಯಕ್ರಮಕ್ಕೆ ಬರಲು ಕಡ್ಡಾಯ ಆದೇಶ ಹೊರಡಿಸಲಾಗಿದೆ.

ದುರಂತ ಎಂದರೆ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳಿಗೂ ಸಹ ಸಾರ್ವಜನಿಕರನ್ನು ಕರೆದುಕೊಂಡು ಬರುವ ‘ಕಾರ್ಯಕರ್ತರ’ ಕೆಲಸಕ್ಕೆ ನಿಯೋಜಿಸಿದ್ದು. ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ತವರೂರಾಗಿತ್ತು. ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಗಳ ಕೇಂದ್ರ ಸ್ಥಾನ ದಕ್ಷಿಣ ಕನ್ನಡವಾಗಿತ್ತು. ಇವೆಲ್ಲಾ ಬ್ಯಾಂಕ್ ಗಳೂ ಯಾವುದೇ ನಷ್ಟವಿಲ್ಲದೇ ಲಾಭದಲ್ಲೇ ಕಾರ್ಯ ನಿರ್ವಹಿಸುತ್ತಿದ್ದವು. ಗ್ರಾಮ ಮಟ್ಟದಿಂದ, ಪಟ್ಟಣ ವ್ಯಾಪ್ತಿಯ ಎಲ್ಲರಿಗೂ ಎಲ್ಲಾ ರೀತಿಯಲ್ಲೂ ಸಹಕರಿಸುತ್ತಾ, ತಮ್ಮ ಸಂಸ್ಥೆಯನ್ನೂ ಲಾಭದಾಯಕವಾಗಿ ನಡೆಸಿಕೊಂಡು ಹೋಗುತ್ತಿದ್ದವು. ಬ್ಯಾಂಕ್ ಸಿಬ್ಬಂದಿ ಎಂದರೆ ಬಹುತೇಕ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದವರೇ ತುಂಬಿರುತ್ತಿದ್ದರು. ಆ ಮಟ್ಟಿಗೆ ಉದ್ಯೋಗ ಸೃಷ್ಟಿಯಲ್ಲೂ ಸಹ ಬ್ಯಾಂಕಿಂಗ್ ವ್ಯವಸ್ಥೆ ಈ ಭಾಗದ ಜನರಿಗೆ ಸಹಕಾರಿಯಾಗಿತ್ತು. ಮೋದಿ ಆಡಳಿತದ ನಂತರ ಇಲ್ಲಿನ ಸ್ಥಳೀಯ ಬ್ಯಾಂಕ್ ಗಳನ್ನು ಉತ್ತರ ಭಾರತದ ನಷ್ಟದಲ್ಲಿರುವ ಬ್ಯಾಂಕ್ ಗಳ ಜೊತೆಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆದಿತ್ತು. ಇದರಿಂದ ಹಿಂದಿದ್ದ ಎಲ್ಲಾ ವ್ಯವಸ್ಥೆ ಬುಡಮೇಲಾಗಿದೆ. ಇಷ್ಟಾದರೂ ಬ್ಯಾಂಕ್ ಸಿಬ್ಬಂದಿಗಳನ್ನು ಮೋದಿ ಕಾರ್ಯಕ್ರಮಕ್ಕೆ ಕರೆತರುವ ಕಾರ್ಯಕರ್ತರ ಕೆಲಸಕ್ಕೆ ನಿಯೋಜಿಸಿದ್ದು ದುರಂತವೇ ಸರಿ.

ಆ ಮಟ್ಟಿಗೆ ಶತಾಯಗತಾಯ ಗೋಲ್ಡ್ ಫಿಂಚ್ ಮೈದಾನವನ್ನು ತುಂಬಿಸುವ ಕೆಲಸಕ್ಕೆ ಬಿಜೆಪಿ ಸರ್ಕಾರ ಹೊರಟಿದೆ. ಭದ್ರತೆ ದೃಷ್ಟಿಯಿಂದ ಮೇಲ್ನೋಟಕ್ಕೆ ನವ ಮಂಗಳೂರು ಬಂದರಿನಲ್ಲಿ ಕೆಲವು ಯೋಜನೆಗಳನ್ನು ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದು ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶಿಷ್ಟಾಚಾರ ಪ್ರಕಾರ ಬಿಗಿ ಭದ್ರತೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಆ ಶಿಷ್ಟಾಚಾರ ಎಂಬುದಕ್ಕೂ ಒಂದು ಮಿತಿ ಇದೆ. ರಾಜ್ಯ ಸರ್ಕಾರ ಆ ಮಿತಿಯನ್ನೆಲ್ಲಾ ಮೀರಿ ನಡೆದುಕೊಳ್ಳುತ್ತಿರುವ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ಸ್ಥಳೀಯರು, DYFI ರಾಜ್ಯಾಧ್ಯಕ್ಷರಾದ ಅಬ್ದುಲ್ ಮುನೀರ್ ಅವರನ್ನು ಸಂಪರ್ಕಿಸಿದಾಗ ‘ಮುಂದೊಂದು ದಿನ ಅದಾನಿ ತೆಕ್ಕೆಗೆ ಹಸ್ತಾಂತರಗೊಳ್ಳಲಿರುವ ಮಂಗಳೂರಿನ ಹಾರ್ಬರ್ ಮತ್ತು MRPL ನ ನೀರಿನ ಘಟಕ ಲೋಕಾರ್ಪಣೆಗೆ ಮೋದಿ ಆಗಮಿಸುತ್ತಿದ್ದು, ಅದೂ ಸಹ ಬಂಡವಾಳಶಾಹಿಗಳ ಹಿತಾಸಕ್ತಿ ಪರವಾಗಿರುವ ಯೋಜನೆಗಳೇ ಆಗಿವೆ. ಮೇಲ್ನೋಟಕ್ಕೆ ಇದು ಸರ್ಕಾರಿ ಕಾರ್ಯಕ್ರಮ ಆದರೂ ಮುಂದಿನ ದಿನಗಳಲ್ಲಿ ಮೋದಿ ಆಡಳಿವೇ ಇದ್ದರೆ ಇವು ಖಾಸಗಿ ಹಿಡಿತಕ್ಕೆ ಸಿಗುವುದು ಸ್ಪಷ್ಟ. ಆ ಮಟ್ಟಿಗೆ ಇದು ಖಾಸಗಿ ಕಾರ್ಯಕ್ರಮ ಎಂದೇ ಭಾವಿಸಬಹುದು. ಇಂತಹ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಕೆಇಬಿ ಲೈನ್ಮೆನ್ ಗಳಿಂದ ಹಿಡಿದು, ಪಂಚಾಯಿತಿ ಪಿಡಿಒ, ಬ್ಯಾಂಕ್ ಸಿಬ್ಬಂದಿ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮಹಿಳೆಯರನ್ನೂ ಬಿಡದೆ ‘ಕಡ್ಡಾಯ’ ಹಾಜರಾತಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಖಂಡನಾರ್ಹ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಜೊತೆಗೆ ಮೋದಿ ಆಗಮನಕ್ಕೆ ಮಂಗಳೂರನ್ನು ಸಾರ್ವಜನಿಕರಿಗೆ ಕಿರಿಕಿರಿ ಆಗುವಂತೆ ಸಂಪೂರ್ಣ ಸ್ತಬ್ಧಗೊಳಿಸಿ, ಬಿಜೆಪಿ ಮಯಗೊಳಿಸುವ ಸರ್ಕಾರ ಜನತೆಗೆ ಯಾವ ಸಂದೇಶ ಕೊಡಲು ಹೊರಟಿದೆ. ಇಲ್ಲಿಯವರೆಗೂ ಭಾರತದ ಹಿಂದಿನ ಯಾವ ಪ್ರಧಾನಿಗಳೂ ಮಂಗಳೂರಿಗೆ ಬರಲಿಲ್ಲವೇ? ಆಗೆಲ್ಲಾ ಇಷ್ಟು ಕಿರಿಕಿರಿ ಆಗುವ ಮಟ್ಟಕ್ಕೆ ವ್ಯವಸ್ಥೆ ಸೃಷ್ಟಿ ಮಾಡಲಾಗಿತ್ತೇ? ಈ ಡಬಲ್ ಇಂಜಿನ್ ಸರ್ಕಾರದಿಂದ ಜನತೆಗೆ ಆದಂತಹ ಉಪಯೋಗ ಆದರೂ ಏನು? ಹಿಂದಿನಿಂದಲೂ ಬೇಡಿಕೆ ಇದ್ದ ರಸ್ತೆ ವ್ಯವಸ್ಥೆ ಸುಧಾರಿಸಿದೆಯೇ? ಉದ್ಯೋಗ ಸೃಷ್ಟಿ ಆಗಿದೆಯೇ? ಹಿಂದಿನಿಂದಲೂ ಬೇಡಿಕೆ ಇರುವ ಸುಸಜ್ಜಿತವಾದ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮಂಜೂರಾಗಿದೆಯೇ? ಶಿಕ್ಷಣ, ಉದ್ಯೋಗ, ಆರೋಗ್ಯ ಕ್ಷೇತ್ರಗಳಿಗೆ ಮೋದಿಯವರ ಕೊಡುಗೆ ಏನು? ಸರ್ಕಾರಿ ಸಂಸ್ಥೆಯಾಗಿದ್ದ ವಿಮಾನ ನಿಲ್ದಾಣ ಕೂಡಾ ಅದಾನಿ ತೆಕ್ಕೆಗೆ ಹಾಕಿದ್ದಾಗಿದೆ. ಇವತ್ತು ಕರಾವಳಿ ಎನ್ನುವುದು ಡ್ರಗ್ ಮಾಫಿಯಾದ ತವರೂರಿನಂತೆ ಭಾಸವಾಗುತ್ತಿದೆ. ಇದರಲ್ಲಿ ಕ್ರಿಮಿನಲ್ ಗಳಾಗಿ ಸ್ಥಳೀಯ ಯುವಕರು ಭಾಗಿಯಾಗುತ್ತಿದ್ದಾರೆ. ಇಷ್ಟೆಲ್ಲಾ ಅವಾಂತರಗಳ ಹಿನ್ನೆಲೆಯಲ್ಲಿ ಯಾಕೆ ಮೋದಿಯವರನ್ನು ದಕ್ಷಿಣ ಕನ್ನಡದ ಜನ ಇಷ್ಟು ಅದ್ಧೂರಿಯಾಗಿ ಸ್ವಾಗತಿಸಬೇಕು ಎಂಬುದು ಪ್ರಶ್ನಾರ್ಹ ಅಂಶವಾಗಿದೆ’ ಎಂದು ಅಬ್ದುಲ್ ಮುನೀರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿ ಪಕ್ಷ ತನ್ನೆಲ್ಲಾ ಶಕ್ತಿಮೀರಿ ಗೋಲ್ಡ್ ಫಿಂಚ್ ಮೈದಾನದಲ್ಲಿ ಜನ ಸೇರಿಸಲು ಹೊರಟಿದೆ. ಸರ್ಕಾರಿ ಅಧಿಕಾರಿಗಳು, ಸ್ವಸಹಾಯ ಗುಂಪುಗಳು, ಸರ್ಕಾರಿ ಸಿಬ್ಬಂದಿಗಳನ್ನೆಲ್ಲಾ ಕಡ್ಡಾಯವಾಗಿ ಸೇರಿಸುವ ಮೂಲಕ ಮೋದಿ ಎದುರು ಜನಬೆಂಬಲ ಎಂದು ತೋರಿಸಲು ಹೊರಟಂತಿದೆ. ಬಿಜೆಪಿ ಭದ್ರಕೊಟೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡದಲ್ಲಿ ಒಂದು ಲಕ್ಷ ಜನರನ್ನು ಸೇರಿಸಲು ಬಿಜೆಪಿ ಈ ಮಟ್ಟಕ್ಕೆ ಇಳಿದಿದೆಯೇ ಎಂಬುದು ಒಂದು ದೃಷ್ಟಿಯಿಂದ ಹಾಸ್ಯಾಸ್ಪದ ಕೂಡಾ.

ಸಂಘಪರಿವಾರದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯ ನಂತರ ಬಿಜೆಪಿ ಪಕ್ಷಕ್ಕೇ ತಿರುಗಿ ನಿಂತ ಹಿಂದೂಪರ ಸಂಘಟನೆಗಳನ್ನು ತಣ್ಣಗಾಗಿಸಲು ಮೋದಿಯವರನ್ನು ಮಂಗಳೂರಿಗೆ ಕರೆತಂದಿದೆ ಎಂಬುದು ಬಿಜೆಪಿ ಮೇಲಿರುವ ಇನ್ನೊಂದು ಆರೋಪ. ಸಧ್ಯ ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿ ಬಿಜೆಪಿ ವಿರೋಧಿ ಅಲೆ ಎದ್ದಿರುವ ಹಿನ್ನೆಲೆಯಲ್ಲಿ ಮೋದಿ ಆಗಮನದ ನಂತರ ಪರಿಸ್ಥಿತಿ ತಿಳಿಗೊಳಿಸುವ ರಾಜ್ಯ ಸರ್ಕಾರದ ಉದ್ದೇಶ ಈಡೇರುವುದೇ. ಕಾದು ನೋಡೋಣ.

Related Articles

ಇತ್ತೀಚಿನ ಸುದ್ದಿಗಳು