Thursday, June 13, 2024

ಸತ್ಯ | ನ್ಯಾಯ |ಧರ್ಮ

ಕ್ರೈಸ್ತರು ಲಂಬಾಣಿ ತಾಂಡಾಕ್ಕೆ ಬಂದ್ರೆ ಒದ್ದು ಓಡಿಸ್ತಿವಿ: ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಹೊಸಪೇಟೆ: ಕ್ರೈಸ್ತರು ಲಂಬಾಣಿ ತಾಂಡಾ ಪ್ರವೇಶಿಸಿದರೆ ಮತ್ತು ಮತಾಂತರಕ್ಕೆ ಪ್ರಯತ್ನ ಮಾಡಿದರೆ ನಮ್ಮ ಶ್ರೀರಾಮ ಸೇನೆ ಪಡೆಯ ಹುಡುಗರು ಒದ್ದು ಓಡಿಸುತ್ತಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಿಮ್ಮ ರಾಜ್ಯದಲ್ಲಿ 3,600ರಷ್ಟು ಲಂಬಾಣಿ ತಾಂಡಾಗಳಿವೆ. ಶೇ 50ರಷ್ಟು ತಾಂಡಾಗಳಿಗೆ ಕ್ರೈಸ್ತರು ಪ್ರವೇಶಿಸಿ ಮತಾಂತರ ಯತ್ನದಲ್ಲಿ ತೊಡಗಿರುವುದು ನಮ್ಮ ಗಮನಕ್ಕೆ ಬಂದಿದೆ ಅಂಥವರು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಶ್ರೀರಾಮ ಸೇನೆ ಸಂಘಟನೆ ವಿಶೇಷ ಪಡೆ ಬುದ್ಧಿ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.


ಕ್ರೈಸ್ತರ ಯಾವುದೇ ರೀತಿಯ ಭಜನೆ, ಪ್ರಾರ್ಥನೆ ಚರ್ಚ್‌ ಒಳಗೆ ಇರಲಿ. ಹೊರಗಡೆ, ತಾಂಡಾಗಳಿಗೆ ಬಂದು ಮೋಸ ಮಾಡುವ ಕೆಲಸವನ್ನು ಏಸು ಸಹ ಒಪ್ಪುವುದಿಲ್ಲ. ತಾಂಡಾಗಳ ಬಡತನ, ಅನಕ್ಷರತೆಯನ್ನು ಬಳಸಿಕೊಂಡು, ಅವರಿಗೆ ಆಸೆ ತೋರಿಸಿ ಮಾಡುವ ಮತಾಂತರ ಯತ್ನವನ್ನು ತಕ್ಷಣ ನಿಲ್ಲಿಸಬೇಕು. ನಮ್ಮ ಧರ್ಮ, ನಮ್ಮ ದೇವರು ನಮಗೆಲ್ಲ ಶಾಂತಿ, ಸುಖ ಕೊಡುತ್ತಿದ್ದಾನೆ. ಏನೇನೋ ತಪ್ಪು ಮಾಹಿತಿ ನೀಡಿ ಈ ರೀತಿ ಮತಾಂತರ ಮಾಡುವುದನ್ನು ಸರ್ಕಾರ ಹತ್ತಿಕ್ಕಬೇಕು. ಮತಾಂತರ ನಿಷೇಧ ಕಾಯ್ದೆ ಈಗಲೂ ಜಾರಿಯಲ್ಲಿದ್ದು, ಅದನ್ನು ಪಾಲಿಸಬೇಕು’ ಎಂದು ಮುತಾಲಿಕ್ ಕರೆ ನೀಡಿದರು.


2024ರ ನಂತರ ಭಾರತ ಸಂಪೂರ್ಣ ಹಿಂದೂ ರಾಷ್ಟ್ರ


ಪ್ರಧಾನಿ ನರೇಂದ್ರ ಮೋದಿ ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. 2014ರ ಹಿಂದಿನ ಪ್ರಧಾನಿಗಳು ದರ್ಗಾ, ಚರ್ಚ್‌ಗಳಿಗೆ ಹೋಗಿದ್ದರು. ಆದರೆ ಹಣೆಗೆ ವಿಭೂತಿ ಬಳಿದುಕೊಂಡು ದೇವಸ್ಥಾನಕ್ಕೆ ಹೋದವರೆಂದರೆ ನರೇಂದ್ರ ಮೋದಿ ಮಾತ್ರ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400ಕ್ಕಿಂತ ಅಧಿಕ ಸ್ಥಾನ ಗಳಿಸುವುದು ಶತಃಸಿದ್ಧ. 2024ರ ನಂತರ ಭಾರತ ಹಿಂದೂ ರಾಷ್ಟ್ರ ಆಗುವುದು ಸಹ ನಿಶ್ಚಿತ’ ಎಂದು ಮುತಾಲಿಕ್ ಎಂದರು.


ಹಿಂದೂ ರಾಷ್ಟ್ರ ಎಂದಾಗ ಇಲ್ಲಿನ ಮುಸ್ಲಿಮರು ಇದ್ದಾರೆ, ಕ್ರೈಸ್ತರು ಇದ್ದಾರೆ, ಅವರ ಗತಿ ಏನು ಎಂದು ಕೇಳುವವರಿದ್ದಾರೆ. ಅವರು ಇಲ್ಲೇ ಇರುತ್ತಾರೆ, ಬಹುಸಂಖ್ಯಾತರ ಆಚರಣೆ, ಸಂಸ್ಕೃತಿಯನ್ನು ಅವರು ಗೌರವಿಸಿದರೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.


‘ರಾಮಮಂದಿರದಲ್ಲಿ ಹಿನ್ನೆಲೆಯಲ್ಲಿ ರಾಜಕೀಯ ಅಧಿಕಾರ ಏಕೆ ತೆಗೆದುಕೊಳ್ಳಬಾರದು? ಇಡೀ ದೇಶದಲ್ಲಿ ರಾಮನ ಪರವಾಗಿ ನಿಂತಿದ್ದೇ ಬಿಜೆಪಿ, ಆರೆಸ್ಸೆಸ್‌, ವಿಎಚ್‌ಪಿ, ಶ್ರೀರಾಮ ಸೇನೆಯಂತಹ ಸಂಘಟನೆಗಳು. ನಾವು ತ್ಯಾಗ ಮಾಡಿದ್ದೇವೆ. ಕಾಂಗ್ರೆಸ್ ಬಾಬರನ ಪರವಾಗಿ ನಿಂತಿತ್ತು. ರಾಮನ ಹೆಸರು ಎತ್ತಲು ಸಹ ಕಾಂಗ್ರೆಸಿಗರಿಗೆ ಯೋಗ್ಯತೆ ಇಲ್ಲ. ನಾವು ರಾಮರಾಜ್ಯ ಸ್ಥಾಪಿಸುವ ಸಲುವಾಗಿಯೇ ರಾಮನ ಹೆಸರು ಹೇಳುತ್ತೇವೆಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ. ನಾವೂ ರಾಮಮಂದಿರ ನಿರ್ಮಿಸುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳುವುದು ಬರೀ ಬುರುಡೆ. ಬಜೆಟ್‌ನಲ್ಲಿ ಇದಕ್ಕಾಗಿ ಒಂದು ರೂಪಾಯಿ ಸಹ ನೀಡಿಲ್ಲ. ಮುಸ್ಲಿಮರಿಗೆ, ಕ್ರೈಸ್ತರಿಗೆ ಹಣ ಇಡಲು ನಿಮಗೆ ಸಾಧ್ಯವಿದೆ. ರಾಮನ ದೇವಸ್ಥಾನಕ್ಕೆ ಏಕೆ ಹಣವಿಲ್ಲ ಎಂದು ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Related Articles

ಇತ್ತೀಚಿನ ಸುದ್ದಿಗಳು