Friday, June 14, 2024

ಸತ್ಯ | ನ್ಯಾಯ |ಧರ್ಮ

ದೆಹಲಿ ಚಲೋ: ಪೊಲೀಸ್‌ ಘರ್ಷಣೆಯಲ್ಲಿ ಯುವ ರೈತ ಸಾವು

ಚಂಡೀಗಢ: ಪಂಜಾಬ್ ಹಾಗೂ ಹರಿಯಾಣ ಗಡಿಭಾಗದ ಖನೌರಿಯಲ್ಲಿ ರೈತರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಶುಭಕರಣ್ ಸಿಂಗ್ ಎಂಬ 21 ವರ್ಷದ ಯುವ ರೈತ ಮೃತಪಟ್ಟಿದ್ದಾರೆ.


ಪಂಜಾಬ್‌ನ ಭಟಿಂಡಾ ಜಿಲ್ಲೆಯ ಬಾಲೋಕೆ ಗ್ರಾಮದ ಯುವಕ ಶುಭಕರಣ್ ರೈತರ ಚಳವಳಿಯಲ್ಲಿ ಪಾಲ್ಗೊಳ್ಳಲು ಪಂಜಾಬ್ ಹಾಗೂ ಹರಿಯಾಣ ಗಡಿಭಾಗದ ಖನೌರಿಗೆ ಹೊರಟು ಬಂದಿದ್ದರು. ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮರಣೋತ್ತರ ಪರೀಕ್ಷೆಗೆ ತಡೆಯೊಡ್ಡಿರುವ ರೈತರು, ಮೃತರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನಗದು ನೀಡುವ ಬದಲು, ಕೇಂದ್ರ ಸರ್ಕಾರದಲ್ಲಿ ಅವರ ಕುಟುಂಬ ಸದಸ್ಯರೊಬ್ಬರಿಗೆ ನೌಕರಿ ಕೊಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.


ದೆಹಲಿ ಪ್ರವೇಶಿಸದಂತೆ ಗಡಿಯಲ್ಲಿ ಪೊಲೀಸರು ತಡೆಬೇಲಿ ಹಾಕಿ ತಡೆಯೊಡ್ಡಿದ್ದಾರೆ. ತಡೆಬೇಲಿಯಿಂದ ರೈತರನ್ನು ದೂರವಿಡಲು ನಿರಂತರವಾಗಿ ಅಶ್ರುವಾಯು ಪ್ರಯೋಗವನ್ನು ಪೊಲೀಸರು ಮಾಡುತ್ತಿದ್ದಾರೆ. ಬುಧವಾರ ನಡೆದ ಘರ್ಷಣೆಯಲ್ಲಿ ರಬ್ಬರ್‌ ಗುಂಡುಗಳನ್ನೂ ಬಳಸಲಾಗಿತ್ತು ಎಂದು ರೈತರು ಆರೋಪಿಸಿದ್ದಾರೆ. ಮತ್ತೊಂದೆಡೆ ಘರ್ಷಣೆಯಲ್ಲಿ ರೈತರು ಕಲ್ಲು ಮತ್ತು ದೊಣ್ಣೆಗಳನ್ನು ಎಸೆದ ಪರಿಣಾಮ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಪೊಲೀಸರು ದೂರಿದ್ದಾರೆ.


ಶುಭಕರಣ್ ಕುಟುಂಬಕ್ಕಿರುವುದು 2 ಎಕರೆ ಜಾಗ ಮಾತ್ರ. ಅವರ ತಾಯಿ ಸಹ ಮೃತಪಟ್ಟಿದ್ದಾರೆ. ತಂದೆ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಇಬ್ಬರು ಸೋದರಿಯರು ಇದ್ದು, ಒಬ್ಬರಿಗೆ ಮದುವೆಯಾಗಿದೆ. ಮತ್ತೊಬ್ಬರು ವಿದ್ಯಾರ್ಥಿನಿ. ಸೋದರಿಯ ಮದುವೆಗಾಗಿ ಮಾಡಿದ ಸಾಲ ಈ ಯುವ ರೈತನ ಮೇಲಿತ್ತು’ ಎಂದು ಬಾಲೋಕೆ ಗ್ರಾಮಸ್ಥರು ತಿಳಿಸಿದ್ದಾರೆ.


ರೈತ ಮುಖಂಡ ಜಗಜೀತ್ ಸಿಂಗ್ ದಲ್ಲೇವಾಲ ಅವರು ಪ್ರತಿಕ್ರಿಯಿಸಿ, ‘ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ರೈತರು ಮತ್ತು ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಹರಿಯಾಣ ಪೊಲೀಸರು ರೈತರ ಮೇಲೆ ಬಲಪ್ರಯೋಗ ಮಾಡುವ ಮೂಲಕ ದೌರ್ಜನ್ಯ ಮಾಡುತ್ತಿದ್ದಾರೆ.


‘ಸರ್ಕಾರದ ಭರವಸೆಯು ರೈತರಿಗೆ ಕೇವಲ ಸಮಾಧಾನ ನೀಡಬಲ್ಲದೇ ಹೊರತು, ಆದಾಯವನ್ನಲ್ಲ. ಹೀಗಾಗಿ ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ರೈತರು ಆರೋಪಿಸಿ, ಸರ್ಕಾರದ ಪ್ರಸ್ತಾವನೆಯನ್ನು ನಿರಾಕರಿಸಿದ್ದಾರೆ. ಈ ನಡುವೆ ಶುಭಕರಣ್ ಅವರ ಸಾವಿನಿಂದಾಗಿ ರೈತರು ಮುಷ್ಕರವನ್ನು 2 ದಿನ ಸ್ಥಗಿತಗೊಳಿಸಿದ್ದು, ಮುಂದಿನ ನಡೆ ಕುರಿತು ಯೋಜನೆ ರೂಪಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.


ಶುಭಕರಣ್ ಅವರ ಸಾವು ಈಗ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಯುವ ರೈತನ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಆಗ್ರಹಿಸಿದ್ದಾರೆ. ಇದು ಪಂಜಾಬ್ ಮತ್ತು ಹರಿಯಾಣ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಹರಿಯಾಣದ ಶಿರೋಮಣಿ ಅಕಾಲಿದಳದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಮತ್ತು ಕಾಂಗ್ರೆಸ್ ಮುಖಂಡ ಅಮರೀಂದರ್ ರಾಜಾ ಸಿಂಗ್ ಅವರು ಮುಖ್ಯಮಂತ್ರಿ ಭಗವಂತ ಮಾನ್ ವಿರುದ್ಧ ಕಿಡಿಯಾಡಿದ್ದಾರೆ.


‘ಪಂಜಾಬ್ ಸರ್ಕಾರವು ಶುಭಕರಣ್ ಅವರನ್ನು ಹುತಾತ್ಮ ಎಂದು ಘೋಷಿಸಬೇಕು. ಅದಕ್ಕೆ ತಕ್ಕಂತೆ ಅವರ ಕುಟುಂಬಕ್ಕೆ ನೆರವು ನೀಡಬೇಕು. ಮರಣೋತ್ತರ ಪರೀಕ್ಷೆ ನಡೆಸಲು ಐದು ಸದಸ್ಯರ ಮಂಡಳಿಯನ್ನು ಸರ್ಕಾರ ರಚಿಸಬೇಕು’ ಎಂದು ದಲ್ಲೇವಾಲ ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು