Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮಂಗಳೂರಿನಲ್ಲಿ ಮೋದಿ: 3800 ಕೋಟಿ ಮೊತ್ತದ 8 ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ

ಮಂಗಳೂರು: ಕರ್ನಾಟಕದಲ್ಲಿ ವ್ಯಾಪಾರ, ಉದ್ಯೋಗ ಸಾಮರ್ಥ್ಯ ಹೆಚ್ಚಿದೆ. ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಿಂದಾಗಿ ಕರ್ನಾಟಕದ ರೈತರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿದೆ .ಕರಾವಳಿ ಮೂಲ ಸೌಕರ್ಯಕ್ಕೆ ಸಾಗರಮಾಲಾ ಶಕ್ತಿ ನೀಡಿದೆ. ದೇಶದ ಬಂದರುಗಳ ಸಾಮರ್ಥ್ಯ ದ್ವಿಗುಣಗೊಂಡಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಮೇಕ್ ಇನ್ ಇಂಡಿಯಾ ಅತ್ಯಂತ ಅಗತ್ಯ ಎಂದು ಮೋದಿ ಹೇಳಿದರು. ನಗರದ ಗೋಲ್ಡ್ ಫಿಂಚ್ ಮೈದಾನದಲ್ಲಿ ಆಯೋಜನೆಗೊಂಡ ಸಮಾವೇಶದಲ್ಲಿ ನೆರೆದ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ನರೇಂದ್ರ ಮೋದಿಯವರು ನವಮಂಗಳೂರು ಬಂದರು ಪ್ರಾಧಿಕಾರ ಮತ್ತು ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂ ಆರ್ ಪಿ ಎಲ್) ನ ಟ್ಟು 3,783 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲು ಮಂಗಳೂರಿಗೆ ಆಗಮಿಸಿದ್ದರು.

ಎನ್ಎಂಪಿಎ ಯಲ್ಲಿ ಸಮಗ್ರ ಎಲ್ ಪಿ ಜಿ ಹಾಗೂ ಬೃಹತ್ ಪಿ ಒ ಎಲ್ ಸೌಲಭ್ಯ ಸ್ಥಾಪನೆ, ಎನ್ಎಂಪಿಎ ಯಲ್ಲಿಶೇಖರಣಾ ಟ್ಯಾಕ್ ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ, ಎನ್ಎಂಪಿಎ ಯಲ್ಲಿಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ, ಎನ್ಎಂಪಿಎ ಯಲ್ಲಿಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್ ಗಳು, ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ, ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಭೂಮಿಪೂಜೆ ಕಾಮಗಾರಿಗಳಿಗೆ ರಿಮೋಟ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.

ರು. 281 ಕೋಟಿ ವೆಚ್ಚದ ಕಂಟೇನರ್ ಗಳು ಹಾಗೂ ಇತರ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ,1829 ಕೋಟಿ ವೆಚ್ಚದ ಬಿ ಎಸ್ 6 ಉನ್ನತೀಕರಣ ಯೋಜನೆ ಮತ್ತು 677 ಕೋಟಿ ವೆಚ್ಚದ ಸಮುದ್ರ ನೀರಿನ ನಿರ್ಲವಣೀಕರಣ ಘಟಕ ಯೋಜನೆಗಳನ್ನು ಪ್ರಧಾನಿಯವರು ಲೋಕಾರ್ಪಣೆ ಗೊಳಿಸಿದರು.

ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಮೋದಿಯವರಿಗೆ ಪೇಟ ತೊಡಿಸಿ ಸ್ವಾಗತಿಸಿದರು. ಸಂಸದ ನಳಿನ್ ಕುಮಾರ್ ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದರು. ಸುನಿಲ್ ಕುಮಾರ್ ಪರಶುರಾಮನ ಮೂರ್ತಿ ನೀಡಿದರು.ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ ಇದ್ದರು.
ಈ ಸಂದರ್ಭದಲ್ಲಿ ಮೋದಿ ಆರು ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಅನುಮತಿ ಪತ್ರ ಹಸ್ತಾಂತರಿಸಿದರು.

ಮುಖ್ಯಮಂತ್ರಿ ಸಿ ಎಂ ಬಸವರಾಜ ಬೊಮ್ಮಾಯಿ ಪ್ರಧಾನಿಗಳನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

Related Articles

ಇತ್ತೀಚಿನ ಸುದ್ದಿಗಳು