Saturday, June 15, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ಬೋರ್ಡ್‌ ಕಡ್ಡಾಯ: 2 ವಾರಗಳ ಕಾಲ ಗಡುವು ವಿಸ್ತರಿಸಿದ ಸರ್ಕಾರ

ಕರ್ನಾಟಕ ಸರ್ಕಾರವು ವಾಣಿಜ್ಯ ಸಂಸ್ಥೆಗಳು ಮತ್ತು ಕಚೇರಿಗಳಿಗೆ ಶೇಕಡಾ 60ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಬಳಸುವ ಆದೇಶವನ್ನು ಅನುಸರಿಸಲು ಎರಡು ವಾರಗಳ ವಿಸ್ತರಣೆಯನ್ನು ಗುರುವಾರ ಪ್ರಕಟಿಸಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಕುರಿತು ತಮ್ಮ X ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದಕಡೆ ಶೇ.60ರಷ್ಟು‌ ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ‌ ಕಾಲ ವಿಸ್ತರಿಸಲಾಗಿದೆ.

ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಾಗಾಗಿ ನಮ್ಮ ಹೃದಯದ ಭಾಷೆಯನ್ನು ಎತ್ತಿ‌ಹಿಡಿಯುವುದು ಅತಿ ಮುಖ್ಯ. 2 ವಾರಗಳ‌ ನಂತರ ಎಲ್ಲರೂ ಕಾನೂನು ಪಾಲನೆ ಮಾಡುತ್ತಾರೆ‌ ಎಂದು ನಿರೀಕ್ಷಿಸಿದ್ದೇನೆ.” ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ನಗರದ ಪೂರ್ವ ಭಾಗದ ತಂಬುಚೆಟ್ಟಿಪಾಳ್ಯ ರಸ್ತೆಯಲ್ಲಿರುವ ಅಂಗಡಿಗಳಇಂಗ್ಲಿಷ್ ನಾಮಫಲಕಗಳನ್ನು ಕೆಲವು ಬಿಬಿಎಂಪಿ ಪೌರಕಾರ್ಮಿಕರು ತೆಗೆದುಹಾಕುವ ವೀಡಿಯೊಗಳು ವೈರಲ್ ಆದ ನಂತರ ಶನಿವಾರ ಕನ್ನಡ ಬೋರ್ಡ್‌ ಆಳವಡಿಸುವ ಕೆಲಸ ವೇಗಗೊಂಡಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರವು ರಾಜ್ಯದಲ್ಲಿ ಹುಟ್ಟಿ, ಬೆಳೆದು ಇಲ್ಲಿ ವಾಸಿಸುತ್ತಿರುವವರಿಗೆ ಬದ್ಧವಾಗಿದೆ ಎಂದು ಹೇಳಿದ್ದರು. ಅಂದು ಸಂಸ್ಥೆಗಳಿಗೆ ಶೇ.60ರಷ್ಟು ಕನ್ನಡ ಇರುವ ನಾಮಫಲಕ ಹಾಕುವಂತೆ ತಿಳಿಸಲಾಗುವುದು ಎಂದಿದ್ದರು.

“ಫೆಬ್ರವರಿ 28, 2024ರ ಮೊದಲು ಕಂಪನಿಗಳು, ಸಂಸ್ಥೆಗಳು ಮತ್ತು ಇತರ ಅಂಗಡಿಗಳು ತಮ್ಮ ನಾಮಫಲಕಗಳನ್ನು ಬದಲಾಯಿಸಲು ನಾನು ವಿನಂತಿಸುತ್ತೇನೆ. ಜನರು ಭಯಪಡುವ ಅಗತ್ಯವಿಲ್ಲ” ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.

Related Articles

ಇತ್ತೀಚಿನ ಸುದ್ದಿಗಳು