Sunday, June 23, 2024

ಸತ್ಯ | ನ್ಯಾಯ |ಧರ್ಮ

ಜನಾರ್ದನ ರೆಡ್ಡಿ ಬಿಜೆಪಿಗೆ ಸೇರಿಸಿಕೊಳ್ಳಲು ಅಮಿತ್ ಅವರಲ್ಲಿ ಶ್ರೀರಾಮುಲು ಮನವಿ

ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ‌ಪಕ್ಷದ ನಾಯಕ, ಶಾಸಕ ಜನಾರ್ದನ ರೆಡ್ಡಿ ಅವರನ್ನು‌ ಬಿಜೆಪಿಗೆ ಸೇರಿಸಿಕೊಳ್ಳಬೇಕು ಎಂದು ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೆಹಲಿಗೆ ಹೋಗಿದ್ದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನಾರ್ದನ ರೆಡ್ಡಿ ಅವರ ಕುರಿತಾಗಿ ನನ್ನೊಂದಿಗೆ ಚರ್ಚಿಸಿದರು. ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದರು.


ರೆಡ್ಡಿ ಈ ಭಾಗದಲ್ಲಿ ಶಕ್ತಿಯುತ ನಾಯಕ. ಅವರು ಪಕ್ಷಕ್ಕೆ ಬಂದರೆ ಬಿಜೆಪಿಗೆ ಬರಲಿದೆ ಎಂದಿದ್ದೇನೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೂ ಇದೇ ಅಭಿಪ್ರಾಯ ನೀಡಿದ್ದೇನೆ ಎಂದು ಅವರು ವಿವರಿಸಿದರು.


ನಮ್ಮಿಬ್ಬರ ವೈಮನಸ್ಸು ಇರುವುದು ನಿಜ. ಬೇರೆ ಬೇರೆ ಕಾರಣಕ್ಕೆ ದೂರವಿದ್ದೇವೆ. ಆದರೆ ಅವರು ಪಕ್ಷಕ್ಕೆ ಬಂದರೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಪಕ್ಷದ ವಿಚಾರವಾಗಿ ಒಗ್ಗೂಟ್ಟಾಗಿರುತ್ತೇವೆ ಎಂದರು.


ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಅವರ ಪಕ್ಷದ ನಿರ್ಧಾರ. ಅದರ ಕುರಿತು ನಾನು ಏನು ಹೇಳುವುದಿಲ್ಲ ಎಂದರು.


ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಹಾಲಿ ಸಂಸದ ದೇವೇಂದ್ರಪ್ಪ ಅವರಿಗೇ ಕೊಟ್ಟರೆ ನನ್ನ ಅಭ್ಯಂತರವಿಲ್ಲ. ಅವರ ಪರವಾಗಿ ನಾವೆಲ್ಲ ದುಡಿಯುತ್ತೇವೆ. ಒಂದು ವೇಳೆ ನನಗೆ ನೀಡಿದರೂ ಸ್ಪರ್ಧಿಸುತ್ತೇನೆ ಎಂದರು.


ಇಂದು ಪಾಕ್‌ ಪರ ಘೋಷಣೆ, ನಾಳೆ ಬಾಂಬ್
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪ್ರಕರಣವನ್ನು ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದ್ದಾರೆ.


ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದ್ದು, ಭಯೋತ್ಪಾದಕರ ಪರವಾಗಿ ನಿಂತಿದೆ. ವಿಧಾನಸೌಧ ದೇಗುಲವಿದ್ದಂತೆ. ಇಂಥ ದೇಗುಲದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಕಿಡಿಗೇಡಿ ಕೃತ್ಯ. ವಿಧಾನಸೌಧದಲ್ಲಿ ಘೋಷಣೆ ಕೂಗಿದವರು ಮುಂದೊಂದು ದಿನ ಅದೇ ವಿಧಾನಸೌಧದಲ್ಲಿ ಬಾಂಬ್ ಇಡುತ್ತಾರೆ ಎಂದು ಆರೋಪಿಸಿದರು.


ಬಳ್ಳಾರಿಯವರಾದ ನಾಸೀರ್ ಹುಸೇನ್ ಎರಡನೇ ಬಾರಿ ರಾಜ್ಯಸಭಾ ಸದಸ್ಯರಾಗಿದ್ದು ಖುಷಿಯಿದೆ. ಆದರೆ, ಅವರು ಮನಸ್ಸು ಮಾಡಿದ್ದರೆ ಘೋಷಣೆ ಕೂಗಿದವರನ್ನು ಜೈಲಿಗೆ ಕಳುಹಿಸಬಹುದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ರೀತಿಯ ಘಟನೆಗಳು ಹೆಚ್ಚುತ್ತಿವೆ. ಕಾಂಗ್ರೆಸ್ ಒಂದು ಕಡೆ ಸಂವಿಧಾನ ಜಾಗೃತಿ ಜಾಥಾ ನಡೆಸುತ್ತದೆ. ಆದರೆ ಸಂವಿಧಾನಕ್ಕೆ ಅಗೌರವ ತರುವಂತೆ ನಡೆದುಕೊಳ್ಳುತ್ತಾರೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್. ಎಂದು ದೂರಿದರು.


‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಗೆ ಸಂಬಂಧಿಸಿದ ವಿಡಿಯೊವನ್ನು ಸರ್ಕಾರ ಎಫ್ಎಸ್ಎಲ್ ಪರಿಶೀಲನೆಗಾಗಿ ಕಳುಹಿಸಿದೆ.ಎಫ್ಎಸ್ಎಲ್ ವರದಿಯೂ ಸರ್ಕಾರದ ಪರವಾಗಿಯೇ ಬರುವ ಆತಂಕವಿದೆ. ಸರ್ಕಾರ ನಡೆಸುವ ತನಿಖೆ ಬಗ್ಗೆ ನಮಗೆ ವಿಶ್ವಾಸವಿಲ್ಲ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಲಿ.ದೇಶದ್ರೋಹಿಗಳಿಗೆ ರಕ್ಷಣೆ ನೀಡುವುದು ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರೆಂಟಿ ಎಂದು ವ್ಯಂಗ್ಯವಾಡಿದರು.

Related Articles

ಇತ್ತೀಚಿನ ಸುದ್ದಿಗಳು