Friday, July 5, 2024

ಸತ್ಯ | ನ್ಯಾಯ |ಧರ್ಮ

ಹತ್ರಾಸ್ ಕಾಲ್ತುಳಿತ ಪ್ರಕರಣ: ಆರು ಮಂದಿ ಬಂಧನ

ಲಕ್ನೋ: ಹತ್ರಾಸ್ ಕಾಲ್ತುಳಿತ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ. ಇವರೆಲ್ಲರೂ ಭೋಲೆ ಬಾಬಾನ ಸೇವಕರಾಗಿ ಕೆಲಸ ಮಾಡುತ್ತಿದ್ದರು. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಪತ್ತೆಗೆ ರೂ.1 ಲಕ್ಷ ಬಹುಮಾನ ಘೋಷಿಸಲಾಗಿದೆ.

ಭೋಲೆ ಬಾಬಾನ ಅಪರಾಧ ಇತಿಹಾಸದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ರಾಸ್ ಸಮೀಪದ ಪುಲ್ರಾರು ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ್ದರು. ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಲಿಗಢ ಐಜಿ ಶಲಭ್ ಮಾಥುರ್ ಈ ಕಾಲ್ತುಳಿತ ಪ್ರಕರಣದ ತನಿಖೆಯ ವಿವರಗಳನ್ನು ಬಹಿರಂಗಪಡಿಸಿದರು. ಭೋಲೆ ಬಾಬಾನ ಕ್ರಿಮಿನಲ್ ದಾಖಲೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಮಂಗಳವಾರ ನಡೆದ ಕಾರ್ಯಕ್ರಮಕ್ಕೆ ಭೋಲೆ ಬಾಬಾ ಹೆಸರಿನಲ್ಲಿ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ.

‘ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಇವರೆಲ್ಲರೂ ವ್ಯವಸ್ಥಾಪನಾ ಸಮಿತಿಯ ಸದಸ್ಯರೂ ಆಗಿದ್ದು, ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಐಜಿ ತಿಳಿಸಿದರು. ಕಾಲ್ತುಳಿತದ ನಂತರ ಅವರೆಲ್ಲರೂ ಸ್ಥಳದಿಂದ ಓಡಿಹೋದರು ಎಂದು ಹೇಳಿದರು. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಬಗ್ಗೆ ಮಾಹಿತಿ ನೀಡಿದವರಿಗೆ ರೂ.1 ಲಕ್ಷ ಬಹುಮಾನ ಘೋಷಿಸಲಾಗಿದೆ ಎಂದರು. ಸದ್ಯದಲ್ಲೇ ಅವನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಲಿದೆ ಎಂಬ ಮಾಹಿತಿಯೂ ಬಹಿರಂಗವಾಗಿದೆ. ಪ್ರಕಾಶ್ ಮಧುಕರ್ ಮತ್ತು ಇತರ ನಿರ್ವಾಹಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 105, 110, ಸೆಕ್ಷನ್ 126 (2), ಸೆಕ್ಷನ್ 223 ಮತ್ತು ಸೆಕ್ಷನ್ 238 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು