Friday, June 14, 2024

ಸತ್ಯ | ನ್ಯಾಯ |ಧರ್ಮ

ಸಚಿವ ಸುನಿಲ್ ಕುಮಾರ್ ಕಾರ್ಕಳ ಹೇಳಿಕೆ ಕುರಿತು ಸಿದ್ದು ವಾಗ್ದಾಳಿ

ಬೆಂಗಳೂರು: ರೈತರ ಪಂಪ್‌ ಸೆಟ್‌ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂಬ ಸಚಿವ ಸುನಿಲ್ ಕುಮಾರ್ ಕಾರ್ಕಳ ಹೇಳಿಕೆ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂದು ಆರೋಪಿಸಿರುವ ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರು, ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಲು ಹೊರಟಿರುವ ಹೊಸ ವಿದ್ಯುತ್ ಕಾಯ್ದೆಯನ್ನು ಒಮ್ಮೆ ಓದಿಕೊಳ್ಳುವುದು ಒಳಿತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾ ಕರ್ಫ್ಯೂ ಇದ್ದ ಕಾಲದಲ್ಲಿಯೇ ಕರಡನ್ನು ಸಿದ್ಧಪಡಿಸಿ, ನೆಪಮಾತ್ರಕ್ಕೆ ಚರ್ಚೆಗೆ ಬಿಟ್ಟಿರುವ ಹೊಸ ವಿದ್ಯುತ್ ಬಿಲ್‌ನಲ್ಲಿಯೇ ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸುವ ನಿರ್ಧಾರ ಇದೆ. ನಮ್ಮ ಸರ್ಕಾರ ಇಂತಹ ಪ್ರಸ್ತಾಪವನ್ನು ಮಾಡಿದ್ದರೆ ಸುನಿಲ್ ಕುಮಾರ್ ಕಾರ್ಕಳ ಅದನ್ನು ಬಹಿರಂಗಪಡಿಸಬೇಕು ಎಂದು ಕಿಡಿಕಾರಿದ್ದಾರೆ.

ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವುದನ್ನು ಸುನಿಲ್ ಕುಮಾರ್ ಕಾರ್ಕಳ ಮತ್ತು ಅವರ ಸರ್ಕಾರ ವಿರೋಧಿಸುವುದಾಗಿದ್ದರೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಹೊಸ ವಿದ್ಯುತ್ ಮಸೂದೆಯನ್ನು ತಿರಸ್ಕರಿಸಿ, ಸರ್ವಾನುಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸೋಣ ಎಂದಿದ್ದಾರೆ.

ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಸಾಲದ ಸುಳ್ಳು ಆರೋಪ ಹೊರಿಸಿದ್ದಾರೆ. 2014-15ರಲ್ಲಿನ ವಿದ್ಯುತ್ ಉತ್ಪಾದನೆ-14,825 ಮೆಗ ವ್ಯಾಟ್‌ ಮಾತ್ರ. 2018 ರ ಸಾಲಿನ ವಿದ್ಯುತ್ ಉತ್ಪಾದನೆ- 28,741 ಮೆಗಾ ವ್ಯಾಟ್. ಹೀಗಾಗಿ ಹೆಚ್ಚು ಉತ್ಪಾದನೆ ಎಂದರೆ ಹೆಚ್ಚು ಲಾಭವಲ್ಲವೇ? ನಷ್ಟ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಬೇಸಿಗೆಯಲ್ಲಿ ಸುಮಾರು 11 ರಿಂದ 13,000 ಮೆ.ವ್ಯಾ. ಮಳೆಗಾಲದಲ್ಲಿ 8 ರಿಂದ 9,000 ಮೆ. ವ್ಯಾ. ಸುನಿಲ್ ಕುಮಾರ್ ಕಾರ್ಕಳ ಅವರೇ, ಉಳಿಕೆಯಾಗುವ 18 ರಿಂದ 20 ಸಾವಿರ ಮೆ. ವ್ಯಾ ವಿದ್ಯುತ್ ಮಾರಾಟಕ್ಕೆ ಏನು ಕ್ರಮ ಕೈಗೊಂಡಿದ್ದೀರಿ? ಉತ್ತರಿಸಿ ಎಂದಿದ್ದಾರೆ.

ಅವಾಸ್ತವಿಕ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದದಿಂದಾಗಿ ರಾಜ್ಯಕ್ಕೆ 2000 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿರುವ ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರೇ, ನಿಮ್ಮ ಪಕ್ಷ ಅಧಿಕಾರದಲ್ಲಿರುವ ಗುಜರಾತ್ ರಾಜ್ಯವು ವಿದ್ಯುತ್ ಖರೀದಿಗೆ ಯಾವ ದರ ನಿಗದಿಪಡಿಸಿದೆ ಎನ್ನುವುದನ್ನೂ ತಿಳಿಸಿ ಬಿಡಿ. ಗುಜರಾತ್ ರಾಜ್ಯವೂ ಸೇರಿದಂತೆ ದೇಶದಲ್ಲಿ ಯಾವ, ಯಾವ ರಾಜ್ಯಗಳು 2010 ರಿಂದ 2022 ರವರೆಗೆ ಎಷ್ಟು ರೂಪಾಯಿಗಳಿಗೆ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂಬುದರ ಕುರಿತು ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಸುನಿಲ್ ಕುಮಾರ್ ಕಾರ್ಕಳ ಅವರನ್ನು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಸುನಿಲ್ ಕುಮಾರ್ ಕಾರ್ಕಳ ಅವರೇ, ಜನರಿಗೆ ಹೆಚ್ಚು ಹೊರೆ ಬೀಳದಂತೆ ವಿದ್ಯುತ್ ಇಲಾಖೆಯನ್ನು ಲಾಭದಾಯಕವಾಗಿ ಮಾಡುವ ಯೋಚನೆ ನಿಮಗಿದ್ದರೆ ನಾನು ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ವಿವರವಾಗಿ ನೀಡಿದ್ದ ಸಲಹೆಗಳನ್ನು ಅಧ್ಯಯನ ಮಾಡಿ, ಸಾಧ್ಯವಾದರೆ ಅದನ್ನು ಜಾರಿಗೆ ತರುವ ಧೈರ್ಯ ಮಾಡಿ. ಪೊಳ್ಳು ವಾದದ ಮೂಲಕ ವೈಫಲ್ಯವನ್ನು ಬಚ್ಚಿಟ್ಟುಕೊಳ್ಳಲು ಹೋಗದೆ, ಸಂಪನ್ಮೂಲ ಸೋರಿಕೆಗೆ ತಡೆ, ಹೆಚ್ಚುವರಿ ವಿದ್ಯುತ್ ಮಾರಾಟ, ಅಗತ್ಯವಿಲ್ಲದಿದ್ದರೂ ಅದಾನಿ ಪವರ್ಸ್ ಸೇರಿದಂತೆ ಖಾಸಗಿಯವರಿಂದ ವಿದ್ಯುತ್ ಖರೀದಿಸುವ ಒಪ್ಪಂದದ ರದ್ದತಿಯೂ ಸೇರಿದಂತೆ ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಟ್‌ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು