Thursday, July 11, 2024

ಸತ್ಯ | ನ್ಯಾಯ |ಧರ್ಮ

ಸ್ಟ್ಯಾನ್‌ ಸ್ವಾಮಿ ಸಾವಿನ ಪೂರ್ಣ ಬಗ್ಗೆ ತನಿಖೆ ಕೈಗೊಳ್ಳಿ: ಭಾರತಕ್ಕೆ ಒತ್ತಾಯಿಸಿದ ಅಮೇರಿಕ

ವಾಷಿಂಗ್ಟನ್‌: ಮಾನವ ಹಕ್ಕುಗಳ ಕಾರ್ಯಕರ್ತ ಫಾದರ್ ಸ್ಟ್ಯಾನ್‌ ಸ್ವಾಮಿ ಅವರ ಬಂಧನ ಮತ್ತು ಅವರು ಜೈಲಿನಲ್ಲಿಯೇ ಮೃತಪಟ್ಟ ಬಗ್ಗೆ ಸ್ವತಂತ್ರವಾಗಿ ಪೂರ್ಣ ತನಿಖೆಯನ್ನು ನಡೆಸಬೇಕು ಎಂದು ಅಮೇರಿಕ ಭಾರತವನ್ನು ಒತ್ತಾಯಿಸಿದೆ.

ಈ ಕುರಿತು ಅಮೆರಿಕದ ಸಂಸತ್‌ನಲ್ಲಿ ಸಂಸದರಾದ ಜಿಮ್ ಮೆಕ್‌ಗವರ್ನ್, ಆಂಡ್ರೆ ಕಾರ್ಸನ್, ಜುವಾನ್ ವರ್ಗಾಸ್ ಸಂಸತ್ತಿನಲ್ಲಿ ಈ ನಿರ್ಣಯವನ್ನು ಮಂಡಿಸಿದ್ದಾರೆ. ಮಾನವ ಹಕ್ಕುಗಳ ರಕ್ಷಕರು ಮತ್ತು ರಾಜಕೀಯ ವಿರೋಧಿಗಳನ್ನು ಮಣಿಸಲು ಭಯೋತ್ಪಾದನೆ ವಿರೋಧಿ ಕಾನೂನುಗಳನ್ನು ಭಾರತದಲ್ಲಿ ತಪ್ಪಾಗಿ ಉಪಯೋಗಿಸವು ಮೂಲಕ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಸಾಯಿಸಲಾಗುತ್ತಿದೆ ಎಂದು ಈ ನಿರ್ಣಯ ಕಳವಳ ವ್ಯಕ್ತಪಡಿಸಿದೆ.

ನಿರ್ಣಯ ಮಂಡಿಸುವ ವೇಳೆ ಮಾತನಾಡಿದ ಸಂಸದ ವರ್ಗಾಸ್‌, ‘ಫಾದರ್ ಸ್ಟ್ಯಾನ್‌(ಸ್ಟ್ಯಾನ್ ಸ್ವಾಮಿ) ಧ್ವನಿಯಿಲ್ಲದವರಿಗೆ ಧ್ವನಿಯಾಗಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಸ್ಥಳೀಯ ಆದಿವಾಸಿ ಜನ ಹಕ್ಕುಗಳಿಗಾಗಿ ದಣಿವರಿಯದೇ ಹೋರಾಡಿದ್ದರು. ಯುವ ಸಮುದಾಯದ ನಾಯಕರಿಗೆ ತರಬೇತಿಯನ್ನೂ ನೀಡಿದ್ದರು. ಭಾರತದಲ್ಲಿನ ಅನೇಕ ಸಮುದಾಯಗಳಿಗೆ ನ್ಯಾಯಕ್ಕಾಗಿ ಕೆಲಸ ಮಾಡಿದ್ದರು’ ಎಂದರು.

‘ಜೈಲಿನಲ್ಲಿದ್ದಾಗ ಸ್ಟ್ಯಾನ್ ಸ್ವಾಮಿ ಅವರು ಅನೇಕ ನಿಂದನೆಗಳನ್ನು ಎದುರಿಸಿದ್ದರು. ಅವರಿಗೆ ಸೂಕ್ತ ವೈದ್ಯೋಪಚಾರವನ್ನು ನಿರಾಕರಿಸಲಾಗಿತ್ತು ಎಂಬ ವಿಷಯ ಕೇಳಿ ಗಾಬರಿಯಾಯಿತು. ತಳ ಸಮುದಾಯಗಳ ಒಳಿತಿಗಾಗಿ ಸ್ಟ್ಯಾನ್ ಅವರ ಬದ್ದತೆಯನ್ನು ಮರೆಯಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ನಿರ್ಣಯವನ್ನು ಮಂಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ 19ನೇ ವಿಧಿಯಲ್ಲಿ ತಿಳಿಸಿರುವಂತೆ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಇದು ಭಾರತವೂ ಒಳಗೊಂಡಂತೆ ಪ್ರಪಂಚದ ಎಲ್ಲ ಸರ್ಕಾರಗಳಿಗೂ ಅನ್ವಯವಾಗುತ್ತದೆ’ ಎಂದು ನಿರ್ಣಯವು ಸ್ಪಷ್ಟಪಡಿಸಿದೆ.

2017 ಡಿಸೆಂಬರ್ 31 ರಂದು ಪುಣೆಯಲ್ಲಿ, ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥವಾಗಿ ಎಲ್ಗಾರ್ ಪರಿಷತ್ ಎಂಬ ಕಾರ್ಯಕ್ರಮದಡಿ 260ಕ್ಕೂ ಹೆಚ್ಚು ಸಂಘಟನೆಗಳು ಬೃಹತ್ ಸಮಾವೇಶ ಸಂಘಟಿಸಿದ್ದವು. ಆ ನಂತರ ನಡೆದ ಹಿಂಸಾಚಾರದಲ್ಲಿ ಅನೇಕ ಜನ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸ್ವಾಮಿ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನಿನಡಿ 2020ರಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿ, ನವಿ ಮುಂಬೈನ ತಲೋಜ ಜೈಲಿನಲ್ಲಿ ಕಂಬಿ ಎಣಿಸುವಂತೆ ಮಾಡಿತ್ತು.

1937 ಏಪ್ರಿಲ್ 26 ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜನಿಸಿದ್ದ ಪಾಧರ್ ಸ್ಟ್ಯಾನ್‌ ಸ್ವಾಮಿ ಅವರು ಕ್ಯಾಥೋಲಿಕ್ ಪಂಗಡದ ಧರ್ಮಗುರುವಾಗಿ, ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು