Tuesday, July 16, 2024

ಸತ್ಯ | ನ್ಯಾಯ |ಧರ್ಮ

ಉಪಚುನಾವಣೆ: 11 ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟದ ಹವಾ, ಜಲಂದರ್‌‌ ಪಶ್ಚಿಮ ಗೆದ್ದು ಬೀಗಿದ ಆಪ್

ದೇಶಾದ್ಯಂತ 7 ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದೆ. ಸಾರ್ವತ್ರಿಕ ಚುನಾವಣೆಯ ನಂತರ ಆಡಳಿತಾರೂಢ ಎನ್‌ಡಿಎ ಮತ್ತು ಇಂಡಿಯಾ ಬ್ಲಾಕ್ ಎದುರಿಸುತ್ತಿರುವ ಮೊದಲ ಪರೀಕ್ಷೆ ಇದಾಗಿರುವುದರಿಂದ ಭಾರಿ ಕುತೂಹಲ ಮೂಡಿಸಿತ್ತು.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಇದುವರೆಗೆ ಬಿಡುಗಡೆಯಾದ ಫಲಿತಾಂಶದ ಮಾದರಿಯ ಪ್ರಕಾರ ಇಂಡಿಯಾ ಬ್ಲಾಕ್ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದ್ದಾರೆ. ಇನ್ನೆರಡು ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಜುಲೈ 10ರಂದು ಪಶ್ಚಿಮ ಬಂಗಾಳದ ನಾಲ್ಕು, ಹಿಮಾಚಲ ಪ್ರದೇಶದ ಮೂರು, ಉತ್ತರಾಖಂಡದ 2, ಪಂಜಾಬ್, ಬಿಹಾರ, ತಮಿಳುನಾಡು ಮತ್ತು ಮಧ್ಯಪ್ರದೇಶದ ತಲಾ ಒಂದು ಸ್ಥಾನಗಳಿಗೆ ಉಪಚುನಾವಣೆ ಮತದಾನ ನಡೆದಿತ್ತು. ಪಂಜಾಬ್‌ನ ಜಲಂಧರ್ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮೊಹಿಂದರ್ ಭಗತ್ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಬಿಜೆಪಿ ಅಭ್ಯರ್ಥಿ ಶೀತಲ್ ವಿರುದ್ಧ 37 ಸಾವಿರ ಮತಗಳ ಬಹುಮತದಿಂದ ಗೆದ್ದರು. ಹಾಗೆಯೇ ಪಶ್ಚಿಮ ಬಂಗಾಳದ ಮಾಣಿಕ್ತಾಲಾ, ಬಾಗ್ದಾ, ರಾಣಾಘಾಟ್ ದಕ್ಷಿಣ್, ರಾಯಗಂಜ್ ಕ್ಷೇತ್ರಗಳಿಗೂ ಚುನಾವಣೆ ನಡೆದಿತ್ತು.

ಇಲ್ಲಿನ ನಾಲ್ಕೂ ಸ್ಥಾನಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಹಿಮಾಚಲ ಪ್ರದೇಶದ ಡೆಹ್ರಾದಲ್ಲಿ ರಾಜ್ಯ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ ಅವರ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಕಮಲೇಶ್ ಠಾಕೂರ್ ಮುನ್ನಡೆ ಸಾಧಿಸಿದ್ದಾರೆ. ನಲಗಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆಯಲ್ಲಿದ್ದರೆ, ಹಮೀರ್‌ಪುರದಲ್ಲಿ ಬಿಜೆಪಿ ನಾಯಕ ಮುನ್ನಡೆ ಸಾಧಿಸಿದ್ದಾರೆ.

ಉತ್ತರಾಖಂಡದ ಬದರಿನಾಥ್ ಮತ್ತು ಮಂಗಲೋರ್ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಮಧ್ಯಪ್ರದೇಶದ ಅಮರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧೀರನ್ ಶಾ ಮುನ್ನಡೆ ಸಾಧಿಸಿದ್ದಾರೆ. ಬಿಹಾರದ ರುಪೌಲಿ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ತಮಿಳುನಾಡಿನ ವಿಕ್ರವಾಂಡಿಯಲ್ಲಿ ಡಿಎಂಕೆ ನಾಯಕ ಅಣ್ಣಿಯೂರ್ ಶಿವ ಮುಂಚೂಣಿಯಲ್ಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು