Wednesday, August 14, 2024

ಸತ್ಯ | ನ್ಯಾಯ |ಧರ್ಮ

ಕಾಲೇಜುಗಳಲ್ಲಿನ ಹಿಜಾಬ್‌ ಮೇಲಿನ ನಿಷೇಧಕ್ಕೆ ತಡೆ ನೀಡಿದ ಸುಪ್ರೀಂ: ಬಟ್ಟೆ ಅವರಿಷ್ಟ ಎಂದ ಕೋರ್ಟ್

ಕಾಲೇಜು ಆವರಣದಲ್ಲಿ ಹಿಜಾಬ್, ಬುರ್ಖಾ ಮತ್ತು ನಿಖಾಬ್ ಧರಿಸದಂತೆ ಚೆಂಬೂರ್ ಕಾಲೇಜು ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಮುಂಬೈನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಕುರಿತು ಮಧ್ಯಂತರ ಆದೇಶ ನೀಡಿದೆ. ಕಾಲೇಜಿನ ಆದೇಶಗಳನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠ ಕಾಲೇಜು ವಿಧಿಸಿರುವ ಷರತ್ತುಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ. ಇಂತಹ ನಿಯಮಗಳನ್ನು ಹೇರುವುದು ಸರಿಯಲ್ಲವೆಂದು ಪೀಠ ಅಭಿಪ್ರಾಯಪಟ್ಟಿದೆ.

ವಿದ್ಯಾರ್ಥಿಗಳ ತಮ್ಮ ಧರ್ಮವನ್ನು ಬಹಿರಂಗಪಡಿಸಬಾರದು ಎನ್ನುವ ಕಾಲೇಜಿನ ಆದೇಶದ ಕುರಿತು ನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಶ್ನೆಗಳನ್ನು ಎತ್ತಿದರು. ವಿದ್ಯಾರ್ಥಿಗಳ ಹೆಸರುಗಳು ಧರ್ಮವನ್ನು ಬಹಿರಂಗಪಡಿಸುವುದಿಲ್ಲವೇ? ಅವರನ್ನು ಸಂಖ್ಯೆಗಳ ಮೂಲಕ ಗುರುತಿಸಿಕೊಳ್ಳಲು ಹೇಳುವಿರಾ ಎಂದು ಅವರು ಪ್ರಶ್ನಿಸಿದ್ದಾರೆ. ಕಾಲೇಜಿನ ಪರ ಹಿರಿಯ ವಕೀಲರಾದ ಮಾಧವಿ ದಿವಾನ್ ವಾದ ಆಲಿಸಿ, ಇದು ಖಾಸಗಿ ಸಂಸ್ಥೆಯಾಗಿದ್ದು, ಕಾಲೇಜು ಯಾವಾಗಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶ್ನಿಸಿದರು. 2008 ರಿಂದ ಕಾಲೇಜು ಅಸ್ತಿತ್ವದಲ್ಲಿದೆ ಎಂದು ಹೇಳಿದಾಗ.. ಇಷ್ಟು ವರ್ಷ ಏಕೆ ಸೂಚನೆ ನೀಡಲಿಲ್ಲ..? ಧರ್ಮವು ಇದ್ದಕ್ಕಿದ್ದಂತೆ ಗುರುತಿಸಲ್ಪಡತೊಡಗಿದೆಯೇ? ಧರ್ಮವನ್ನು ಬಹಿರಂಗಪಡಿಸುವಂತೆ ವಿದ್ಯಾರ್ಥಿಗಳು ಬರಬಾರದು ಎನ್ನುವ ನೀವು ನಾಳೆ ತಿಲಕ ಧರಿಸಿದವರನ್ನೂ ಸಹ ಬಿಡುವುದಿಲ್ಲವೇ? ಎಂದು ವಕೀಲರನ್ನು ಪ್ರಶ್ನಿಸಿದರು.

441 ಮುಸ್ಲಿಂ ವಿದ್ಯಾರ್ಥಿಗಳು ನಿಷೇಧದ ಕುರಿತು ಆಕ್ಷೇಪವಿಲ್ಲದೆ ಸಂತೋಷದಿಂದ ಕಾಲೇಜಿಗೆ ಹಾಜರಾಗುತ್ತಿದ್ದಾರೆ ಎಂದು ಅವರು ಹೇಳಿದರು. ಆದರೆ, ವಿದ್ಯಾರ್ಥಿಗಳು ತಮಗೆ ಇಷ್ಟವಾದ ಬಟ್ಟೆ ಧರಿಸಲು ಅವಕಾಶ ನೀಡಬೇಕು ಎಂದು ಕೋರ್ಟ್ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಮುಂಬೈ ಎಜುಕೇಶನ್ ಸೊಸೈಟಿಗೆ ಸೂಚಿಸಿದೆ. ಈ ಸಂಬಂಧ ಕಾಲೇಜಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣದ ವಿಚಾರಣೆಯನ್ನು ನವೆಂಬರ್‌ಗೆ ಮುಂದೂಡಲಾಗಿದೆ. ತಡೆಯಾಜ್ಞೆಯನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಪೀಠ ಸ್ಪಷ್ಟಪಡಿಸಿದೆ. ಆದೇಶದಲ್ಲಿ ಮಾರ್ಪಾಡುಗಳನ್ನು ಪಡೆಯಲು ಕಾಲೇಜು ಅಧಿಕಾರಿಗಳಿಗೆ ಅವಕಾಶ ನೀಡಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page