Tuesday, September 10, 2024

ಸತ್ಯ | ನ್ಯಾಯ |ಧರ್ಮ

ಲಂಚದಲ್ಲಿ ಸರಿಯಾಗಿ ಪಾಲು ಕೊಡುತ್ತಿಲ್ಲವೆಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ತಹಸಿಲ್ದಾರ್‌ ಕಚೇರಿಯ ಜವಾನ!

ವಿಲಕ್ಷಣ ಬೆಳವಣಿಗೆಯೊಂದರಲ್ಲಿ ತಹಸಿಲ್ದಾರ್‌ ಕಚೇರಿಯ ಜವಾನನೊಬ್ಬ ತನಗೆ ಲಂಚದಲ್ಲಿ ಸರಿಯಾದ ಪಾಲು ಸಿಗುತ್ತಿಲ್ಲವೆಂದು ದೂರಿ ಜಿಲ್ಲಾಧಿಕಾರಿಗೆ ಕಾಗದ ದೂರು ಸಲ್ಲಿಸಿರುವ ಘಟನೆ ದೂರದ ಉತ್ತರ ಪ್ರದೇಶದ ಜೌನ್‌ಪುರ್‌ ಎನ್ನುವಲ್ಲಿ ನಡೆದಿದೆ.

ವಿವರಗಳನ್ನು ನೋಡುವುದಾದರೆ, ಜಿಲ್ಲೆಯ ಶಹಗಂಜ್ ತಹಸಿಲ್‌ನಲ್ಲಿ ಖಾಸಗಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಲಂಚದಲ್ಲಿ ಕಡಿಮೆ ಪಾಲು ಪಡೆದ ಬಗ್ಗೆ ಜಾನ್‌ಪುರ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.

ಕಳೆದ ಗುರುವಾರ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಆಡಳಿತದ ಕುರಿತು ಟೀಕೆಗಳು ಬರಲು ಆರಂಭಗೊಳ್ಳುತ್ತಿದ್ದ ಹಾಗೆ ಎಚ್ಚೆತ್ತ ಉಪ ಜಿಲ್ಲಾಧಿಕಾರಿ ಈ ಕುರಿತು ತನಿಖೆಗೆ ಆದೇಶಿಸಿದರು ಎಂದು ಜಾಗರಣ್‌ ಎನ್ನುವ ಇಂಗ್ಲಿಷ್‌ ಪತ್ರಿಕೆ ವರದಿ ಮಾಡಿದೆ.

ಕಳೆದ ವಾರ, ನಾಯಬ್ ತಾಲ್ಲೂಕಿನ ತಹಸೀಲ್ದಾರ್ ಲಾಪ್ರಿ ಶೈಲೇಂದ್ರ ಕುಮಾರ್ ಸರೋಜ್ ಅವರ ಖಾಸಗಿ ಪ್ಯೂನ್ ರಾಜಾರಾಮ್ ಯಾದವ್ ಅವರ ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಪತ್ರದಲ್ಲಿ ದೂರುದಾರ ತಾನು ನಾಯಬ್ ತಹಸೀಲ್ದಾರ್ ಕಚೇರಿಯಲ್ಲಿ ಖಾಸಗಿ ಉದ್ಯೋಗಿ ಎಂದು ಹೇಳಿಕೊಂಡಿದ್ದಾನೆ. ತಾನು ಬೆಳಗ್ಗೆಯಿಂದ ಸಂಜೆವರೆಗೆ ಕಚೇರಿಗೆ ಬರುವವರೆಲ್ಲರಿಂದ ಲಂಚ ಪಡೆಯುವುದಾಗಿಯೂ. ನಾಯಬ್ ತಹಸೀಲ್ದಾರ್ ಕಚೇರಿಯಲ್ಲಿ ಲಂಚದ ಹಣವನ್ನು ತಾನೇ ಸಂಗ್ರಹಿಸುವುದಾಗಿಯೂ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತನ್ನೊಂದಿಗೆ ಇನ್ನೂ ಇಬ್ಬರು ಖಾಸಗಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ದಿನವಿಡೀ ಸಂಗ್ರಹಿಸಿದ ಹಣವನ್ನು ನಾಯಬ್ ತಹಸೀಲ್ದಾರ್ ಅವರಿಗೆ ತಲುಪಿಸಲಾಗುತ್ತದೆ. ಆದರೆ ಎಲ್ಲರಿಗೂ 1000 ರೂಪಾಯಿ ಸಿಕ್ಕಿದರೆ ನನಗೆ ಮಾತ್ರ 500 ರೂಪಾಯಿ ಕೊಡಲಾಗುತ್ತಿದೆ ಎಂದು ಪತ್ರದಲ್ಲಿ ದೂರಲಾಗಿದೆ.

ಪತ್ರ ಜಿಲ್ಲಾಧಿಕಾರಿಗೆ ತಲುಪಿದ ನಂತರ ಅವರು ಉಪ ಜಿಲ್ಲಾಧಿಕಾರಿಗೆ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಆದರೆ ತನಿಖೆಯಲ್ಲಿ ಯಾವುದೇ ಖಾಸಗಿ ಉದ್ಯೋಗಿಗಳು ಇಲ್ಲಿ ಕೆಲಸದಲ್ಲಿರುವುದು ಕಂಡುಬಂದಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.

ಆದರೆ ವಕೀಲರೊಬ್ಬರ ಮಾಹಿತಿಯ ಪ್ರಕಾರ ಎಲ್ಲಾ ಡೆಸ್ಕುಗಳಲ್ಲೂ ಖಾಸಗಿ ನೌಕರರು ಕೆಲಸ ಮಾಡುತ್ತಾರೆ. ಆದರೆ ಕೆಲವೊಮ್ಮೆ ಲಂಚದ ಹಂಚಿಕೆಯ ವಿಷಯದಲ್ಲಿ ಜಗಳವಾಗಿ ಹೀಗಾಗುತ್ತದೆ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page