ಹೊಸದಿಲ್ಲಿ, ಸೆಪ್ಟೆಂಬರ್ 10: ದಿಲ್ಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಊಹಾಪೋಹಗಳು ಕಾವು ಪಡೆದುಕೊಳ್ಳುತ್ತಿವೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಪ್ರಕರಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಜೈಲುವಾಸ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬಿಜೆಪಿ ಶಾಸಕರು ಮನವಿ ಸಲ್ಲಿಸಿದಾಗ ಈ ಊಹಾಪೋಹಗಳು ಹೆಚ್ಚಾದವು ಮತ್ತು ಅದನ್ನು ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ.
‘ಕಳೆದ ಕೆಲ ತಿಂಗಳಿಂದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜೈಲಿನಲ್ಲಿದ್ದು, ಅಭಿವೃದ್ಧಿ ಕುಂಠಿತವಾಗಿದೆ.
ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಜೈಲಿನಲ್ಲಿದ್ದು, ಸಿಎಂ ಜವಾಬ್ದಾರಿಯನ್ನು ಯಾರಿಗೂ ವಹಿಸಿಲ್ಲ ಹೀಗಾಗಿ ಇಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದುʼ ಆಗ್ರಹಿಸಲಾಗಿದೆ.
ಬಿಜೆಪಿ ಆರೋಪಕ್ಕೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಎಎಪಿ ಸರ್ಕಾರವನ್ನು ಬೀಳಿಸಲು ಕೇಂದ್ರದ ಸಂಚು
ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಕೇಂದ್ರದ ಬಿಜೆಪಿ ಮತ್ತು ಕೇಜ್ರಿವಾಲ್ ಸರ್ಕಾರವನ್ನು ಉರುಳಿಸುವ ಸಂಚು ನಡೆಯುತ್ತಿದೆ ಎಂದು ದೆಹಲಿ ಸಚಿವ ಮತ್ತು ಹಿರಿಯ ಎಎಪಿ ನಾಯಕ ಅತಿಶಿ ಮಂಗಳವಾರ ಆರೋಪಿಸಿದ್ದಾರೆ. ಮೋದಿ ಸರಕಾರದಿಂದ ಕೇಜ್ರಿವಾಲ್ ಸರಕಾರವನ್ನು ಕಿತ್ತೊಗೆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಒಟ್ಟು 70 ಸ್ಥಾನಗಳನ್ನು ಗೆಲ್ಲಲಿದೆ ಎಂದ ಅವರು, ದಿಲ್ಲಿಯ ಜನತೆ ಬಿಜೆಪಿಗೆ ಶೂನ್ಯ ಸ್ಥಾನವನ್ನು ನೀಡಲಿದ್ದಾರೆ ಎಂದರು.
ಮಹಾರಾಷ್ಟ್ರ, ಕರ್ನಾಟಕ ಮತ್ತು ಮಣಿಪುರ ರಾಜ್ಯಗಳಲ್ಲಿ ಮಾಡಿದಂತೆ ಆಪರೇಷನ್ ಕಮಲದ ಮೂಲಕ ವಿರೋಧ ರಾಜ್ಯಗಳನ್ನು ಅಧಿಕಾರದಿಂದ ದೂರವಿಡುವುದೇ ಬಿಜೆಪಿಯ ಕೆಲಸ ಎಂದು ಅತಿಶಿ ಟೀಕಿಸಿದರು. ಇದೇ ಮಂತ್ರವನ್ನು ದೆಹಲಿಯಲ್ಲಿ ಎಎಪಿ ಶಾಸಕರನ್ನು ಸೆಳೆಯಲು ಬಿಜೆಪಿ ಬಳಸಿ ವಿಫಲವಾಗಿದೆ ಎಂದು ಅವರು ಹೇಳಿದರು.