ಬೆಂಗಳೂರು: ಶಾಸಕ ಮುನಿರತ್ನ ಹಾಗೂ ಪಾಲಿಕೆ ಗುತ್ತಿಗೆದಾರ ಚೆಲುವರಾಜು ಅವರ ನಡುವೆ ನಡೆದಿದ್ದೆನ್ನಲಾದ ಮಾತುಕತೆಯ ಆಡಿಯೋ ಒಂದು ವೈರಲ್ ಬೆನ್ನಲ್ಲೇ ಶಾಸಕನ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ ಎರಡು FIR ದಾಖಲಾಗಿದೆ.
ಈ ಕುರಿತು ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿರುವ ಗುತ್ತಿಗೆದಾರ ಚೆಲುವರಾಜು, ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಕಸ ನಿರ್ವಹಣೆ ವಿಷಯದಲ್ಲಿ ಲಂಚ ಕೊಡುವಂತೆ ಬೆದರಿಸಿದ್ದಲ್ಲದೆ, ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾರೆ, ಜೊತೆಗೆ ಜಾತಿ ನಿಂದನೆಯನ್ನೂ ಶಾಸಕ ಮುನಿರತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ಚೆಲುವರಾಜು ತಿಳಿಸಿದ್ದಾರೆ.
ವೈರಲ್ ಆದ ಆಡಿಯೋದಲ್ಲಿ ಶಾಸಕ ಮುನಿರತ್ನ ಅವರದ್ದು ಎನ್ನಲಾದ ದನಿಯು ಎದುರಿಗೆ ಇರುವವರನ್ನು ಅವಾಚ್ಯ ಶಬ್ದಗಳನ್ನು ಬಳಸಿ ಬಯ್ಯುವುದನ್ನು ಕೇಳಬಹುದು. ಕೆಲವು ಪದಗಳಂತೂ ತೀರಾ ಅಸಭ್ಯವಾಗಿವೆ. ಈ ಕುರಿತು ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಲಿತ ನಾಯಕರೂ ದನಿಯೆತ್ತಿದ್ದರು.
ಹಲವು ಟ್ವಿಟರ್ ಬಳಕೆದಾರರು ನೇರವಾಗಿ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಸುದ್ದಿಯ ಹಿನ್ನೆಲೆಗಾಗಿ ಈ ಸುದ್ದಿಯನ್ನು ಓದಿ: “ದಲಿತ ಸೂ# ಮಕ್ಕಳಂತೆ, ಒಕ್ಕಲಿಗರ ಹೆಂಡತಿ ಮಂಚಕ್ಕೆ ಬರಬೇಕಂತೆ” : ಶಾಸಕ ಮುನಿರತ್ನ ಧ್ವನಿ ಇರುವ ಆಡಿಯೋ ವೈರಲ್