Wednesday, September 25, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು-37 : ರಿಯಲ್ ಪೈಲಟ್ ರಾಜೀವ್!ಮತ್ತೊಬ್ಬ ಮಂಕಿ ಪೈಲಟ್!

“ನರೇಂದ್ರ ಮೋದಿಯವರು ಒಂದೆರಡು ವರ್ಷಗಳ ಹಿಂದೆ ತುಚ್ಛವಾಗಿ ತಮಾಷೆ ಮಾಡಿದ್ದ ರಾಜೀವ್ ಗಾಂಧಿ ಒಬ್ಬ ಕಮರ್ಷಿಯಲ್ ಪೈಲಟ್ ಆಗಿದ್ದರು. ಮೋದಿಯವರು ಅವರೇ ಹೇಳಿದಂತೆ ಚಹಾ ಮಾರುತ್ತಿದ್ದರು, ಭಿಕ್ಷೆ ಬೇಡುತ್ತಿದ್ದರು, ಮೊಸಳೆ ಹಿಡಿಯುತ್ತಿದ್ದರು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ನಾನು ಒಂದೆರಡು ವಿಮಾನ ಅಪಘಾತದ ಘಟನೆಗಳನ್ನು ಹೇಳುತ್ತೇನೆ. ಬಹಳ ವರ್ಷಗಳ ಹಿಂದೆ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿ ಇದ್ದಾಗ ಮಂಗಳೂರು ಬಳಿ ಇರುವ ಬಜ್ಪೆ ವಿಮಾನ ನಿಲ್ದಾಣದ ರನ್ ವೇ ಬಹಳ ಚಿಕ್ಕದಾಗಿತ್ತು. ಅದೊಂದು ಬೆಟ್ಟದ ಮೇಲೆ ಇರುವ ವಿಮಾನ ನಿಲ್ದಾಣ. ವೀರಪ್ಪ ಮೊಯ್ಲಿಯವರು ಇದ್ದ ಚಿಕ್ಕ ಇಂಡಿಯನ್ ಏರ್‌ಲೈನ್ಸ್ ವಿಮಾನ (ಬಹುಶ: ಡಗ್ಲಸ್ ಡಿಸಿ ಇರಬೇಕು) ರನ್ ವೇ ದಾಟಿ ಪ್ರಪಾತಕ್ಕೆ ಬೀಳುವುದರಲ್ಲಿ ಇತ್ತು. ಆದರೆ, ಅಂಚಿನಲ್ಲಿ ಇದ್ದ ಬಂಡೆಗೆ ಡಿಕ್ಕಿ ಹೊಡೆದು ವಿಮಾನ ಪ್ರಪಾತಕ್ಕೆ ಬೀಳಲಿಲ್ಲ. ಮೊಯ್ಲಿ ಮತ್ತು ಉಳಿದ ಪ್ರಯಾಣಿಕರು ಉಳಿದುಕೊಂಡರು. ಅವರೆಲ್ಲರೂ ಯಾರಿಗೆ ಧನ್ಯವಾದ ಹೇಳಬೇಕು? ಬಂಡೆಗೆ? ಘಟನೆ ನಡೆಯುವುದಕ್ಕೆ, ಅಥವಾ ದುರ್ಘಟನೆ ನಡೆಯದಿರಲು ಕಾರಣರಾದ ಪೈಲಟ್‌ಗಳಿಗೆ? ಯಾರಿಗೆ? ನಾನು ಕೆಲಸ ಮಾಡುತ್ತಿದ್ದ “ಮುಂಗಾರು” ಬಿಟ್ಟು ಎಲ್ಲಾ ಪತ್ರಿಕೆಗಳೂ ಮೊಯ್ಲಿಯವರ ಪ್ರಾಣ ಉಳಿಸಿದ ಬಂಡೆಗೆ ಧನ್ಯವಾದ ಹೇಳಿದವು ! ಪೈಲಟ್ ತಪ್ಪು, ಸರಿ, ಧೈರ್ಯ, ಕ್ಷಮತೆ, ದೌರ್ಬಲ್ಯ ಇತ್ಯಾದಿಯಾಗಿ ವಿಮಾನಯಾನ ಎಂಬ ಯಾವುದೇ ಜ್ಞಾನ, ವಿಜ್ಞಾನದ ಬಗ್ಗೆ ಯಾರೂ ಮಾತನಾಡಲಿಲ್ಲ. ಜೀವ ಉಳಿಸಿದ ಬಂಡೆ! ಬಂಡೆಯೇನು ಮೋದಿ ಅಥವಾ ರಜನೀಕಾಂತರಂತೆ ಓಡಿ ಬಂದು ವಿಮಾನವನ್ನು ತಡೆದು ನಿಲ್ಲಿಸಿತೆ? ಇಲ್ಲ! ಆದರೂ, ಭಾರತೀಯ ಮನಸ್ಥಿತಿ ಹೇಗೆಂದರೆ, ಯಾರೂ ಕಾರಣಗಳನ್ನು ಕೇಳುವುದಿಲ್ಲ, ಆ ಒಂದು ಬಂಡೆಯನ್ನು ಪೂಜಿಸಿ ಆರಾಧಿಸುತ್ತಾರೆ!

ಇದೇ ಒಂದು ರನ್ ವೇಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ ವಿಮಾನ (ಫೈಟ್ 841) ಮೇ 22, 2010ರಂದು ಅಪಘಾತಕ್ಕೆ ಈಡಾಯಿತು. ಇದಕ್ಕೆ ಕಾರಣ ವಿಮಾನದ ಪೈಲಟ್ ನಿದ್ದೆ ಮಾಡಿದ್ದದ್ದು ಮತ್ತು ಸಹಾಯಕ ಪೈಲಟ್‌ನ ಎಚ್ಚರಿಕೆಯನ್ನು ಕಡೆಗಣಿಸಿದ್ದು. ಜೊತೆಗೆ ಸಹಾಯಕ ಪೈಲಟ್ ಕೂಡಾ ಒತ್ತಾಯ ಮಾಡದೇ ತೆಪ್ಪಗೆ ಇದ್ದದ್ದು.

ಕಲ್ಲಿಕೋಟೆಯಲ್ಲಿಯೂ ಇದೇ ರೀತಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ 737 (ಫ್ಲೈಟ್ 1334) ವಿಮಾನವು ದುಬೈಯಿಂದ ಬಂದದ್ದು ರನ್ ವೇ ದಾಟಿ ಮುಂದುವರಿಯಿತು. ಎಲ್ಲರೂ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡರು. ಇದಕ್ಕೆ ಕಾರಣ ಮಳೆ ಬರುತ್ತಿದ್ದು ವಿಮಾನದ ವೈಪರ್ ಹಾಳಾಗಿದ್ದದ್ದು, ಮತ್ತು ಪೈಲಟ್ ಅತಿಯಾದ ಆತ್ಮವಿಶ್ವಾಸ ಹೊಂದಿದ್ದದ್ದು.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ತಮ್ಮ ಇಂದಿರಾ ಗಾಂಧಿಯವರ ಕಿರಿಯ ಮಗ ಸಂಜಯ ಗಾಂಧಿ ಸೆಸ್ನಾ ಎಂಬ ಕಿರು ವಿಮಾನದಲ್ಲಿ ಏಕಾಂಗಿಯಾಗಿ ಮೃತಪಟ್ಟರು.

ಆರ್ವಿಲ್ ರೈಟ್ ಮತ್ತು ವಿಲ್ಬರ್ ರೈಟ್ ಎಂಬ ಸಹೋದರರು ಮೊದಲ ವಿಮಾನ ಹಾರಿಸಿದರೆಂದು ಇತಿಹಾಸದಲ್ಲಿ ದಾಖಲಾಗಿದೆ. ಅದರ ನಂತರ ಬಹಳಷ್ಟು ಸಾಹಸಿಗಳು ಪ್ರಾಣ ಕಳೆದುಕೊಂಡು, ವಿಜ್ಞಾನಿಗಳು ಸಂಶೋಧನೆ ಮಾಡಿ ಯುದ್ಧ ವಿಮಾನಗಳಿಂದ ಹಿಡಿದು, ಪ್ರಯಾಣಿಕರು ಮತ್ತು ಸಾರಿಗೆ ವಿಮಾನಗಳ ತನಕ ಅತ್ಯಾಧುನಿಕ ವಿಮಾನಗಳು ಬಂದಿವೆ. ಇಂತಹಾ ವಿಮಾನಗಳೀಗ ಆಟೋಮ್ಯಾಟಿಕ್ ಆಗಿ, ಹಲವಾರು ಕಂಪ್ಯೂಟರ್‌ಗಳು ಮತ್ತು ಸೆನ್ಸರ್‌ಗಳನ್ನು ಹೊಂದಿ ಮನುಷ್ಯ ಪೈಲಟ್‌ಗಳ ಹೊರೆ ಕಡಿಮೆ ಮಾಡಿದ್ದರೂ, ಅವೇ ತಂತ್ರಜ್ಞಾನಗಳನ್ನು ತಿಳಿದುಕೊಳ್ಳದೇ ಮನುಷ್ಯ ಪೈಲಟ್ ವಿಮಾನ ನಡೆಸುವ ತಪ್ಪುಗಳಿಂದಾಗಿ, ಚಿಕ್ಕ ಪುಟ್ಟ- ಒಂದು ಚಿಕ್ಕ ಬೋಲ್ಟ್, ಒಬ್ಬ ವ್ಯಕ್ತಿಯ ಪುಟ್ಟ ಅಜಾಗರೂಕತೆಯೂ ಅಪಘಾತಗಳಿಗೆ ಕಾರಣವಾಗಿ ಸಾವಿರಾರು ಜೀವಗಳಿಗೆ ಎರವಾಗಿವೆ. ಇವುಗಳನ್ನು ಮುಂದೆ ಹೇಳುತ್ತೇನೆ.

ಇದೇ ರೀತಿ ದೇಶಗಳೂ! ಅವು ವಾಸ್ತವದಲ್ಲಿ ವಿಮಾನಗಳೇ. ಒಂದೋ ಹಾರುತ್ತಿರಬೇಕು. ಇಲ್ಲವೇ ಸುರಕ್ಷಿತವಾಗಿ ಇಳಿದು ನೆಲದಲ್ಲಿ ಇರಬೇಕು. ಹಾರಿಸಲು ಸಮರ್ಥ ಪೈಲಟ್ ಅಥವಾ ನಾಯಕ/ನಾಯಕಿ ಬೇಕು, ಇಂಧನ ಬೇಕು, ಎಲ್ಲರ ಬೆಂಬಲ ಬೇಕು… ಇತ್ಯಾದಿ ಇತ್ಯಾದಿ.

ಈಗಿನ ಒಂದು ಆಧುನಿಕ ವಿಮಾನದ ಕಾಕ್‌ಪಿಟ್‌ನಲ್ಲಿರುವ ನೂರಾರು ಇಲೆಕ್ಟ್ರಾನಿಕ್ ಸಲಕರಣೆಗಳ ಸರಳತೆ ಮತ್ತು ಸಂಕೀರ್ಣತೆಗಳನ್ನು ನೋಡಿದರೆ, ಯಾರಿಗಾದರೂ ತಲೆತಿರುಗಿ ಹೋಗುತ್ತದೆ. ಇವುಗಳನ್ನು ಮುಂದೆ ನೋಡೋಣ. ದೇಶ ಎಂಬುದು ವಿಮಾನಗಳಿಗಿಂತ ಸಾವಿರ ಪಟ್ಟು ಸಂಕೀರ್ಣ ಮತ್ತು ಕೋಟಿಗಟ್ಟಲೆ ಜನರ ಒಂದು ವಾಹನ. ವಿಮಾನದ ಪೈಲಟ್‌ಗಳಿಗೆ ತೀವ್ರವಾದ ತರಬೇತಿಗಳೂ, ಕಟ್ಟುನಿಟ್ಟಿನ ಶಿಸ್ತು ನಿಯಮಗಳೂ ಇರುತ್ತವೆ. ಹಾಗಾದರೆ, ದೇಶ ಮುನ್ನಡೆಸುವ ಜೋಕರ್‌ಗಳಿಗೆ ಯಾವ ರೀತಿಯ ತರಬೇತಿ ಇರಬೇಕು? ಪೈಲಟ್ ತಪ್ಪಿನಿಂದ ವಿಮಾನಗಳು ಬಿದ್ದಿವೆ; ಶತಮೂರ್ಖ, ಸ್ವಾರ್ಥಿ ನಾಯಕರಿಂದಾಗಿ ದೇಶಗಳೂ ಬಿದ್ದಿವೆ!

ಒಂದು ನೂರಾರು ಜನರ ಜೀವದ ಜವಾಬ್ದಾರಿ ಹೊತ್ತ ಒಬ್ಬ ಪೈಲಟ್ ಹೇಗಿರಬೇಕು? ಯಾವ ಮನಸ್ಥಿತಿ ಹೊಂದಿರಬೇಕು? 130 ಕೋಟಿ (14 ವರ್ಷಗಳಲ್ಲಿ ಜನಗಣತಿ ಮಾಡುವ ಯೋಗ್ಯತೆ ಇಲ್ಲದ ಸರಕಾರ ಇರುವುದರಿಂದ ಈ ಸಂಖ್ಯೆ ಕುರಿತು ನಿಖರವಾಗಿ ಹೇಳಲಾಗದು!) ಇರುವ ದೇಶವನ್ನು ನಡೆಸುವ ಪೈಲಟ್‌ಗೆ ಯಾವ ಅರ್ಹತೆ ಇರಬೇಕು? ಇದು ಮುಖ್ಯ ಪ್ರಶ್ನೆ.

ಅದೆಂದರೆ, ಸರಿಯಾದ ಕಾಲಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಪೈಲಟ್ ಅಥವಾ ಸಹಾಯಕರು ವಿಫಲರಾದರೆ, ಅಥವಾ ಬೇರೆಯವರು ವೃತ್ತಿದೋಷ ಮಾಡಿದ್ದರೆ ಎಂಬುದು.

ಈಗ ಒಂದೆರಡರಿಂದ ಮುನ್ನೂರು ಪ್ರಯಾಣಿಕರ ಜವಾಬ್ದಾರಿ ಹೊತ್ತಿರುವ ಪೈಲಟಿಗೇ ಅಷ್ಟು ನಿಯಂತ್ರಣ ಇರಬೇಕೆಂದರೆ, 130 ಕೋಟಿ ಕುರಿಗಳು ಬಾಳುತ್ತಿರುವ ವಿಮಾನದ ಪ್ರಧಾನಿ ಎಂಬ ಪೈಲಟಿಗೆ ಯಾವ ಯೋಗ್ಯತೆ ಬೇಕು‌‌? ಪೈಲಟಿಗೆ ನಮ್ಮ ತಲೆ ಮೀರಬಹುದಾದ ಜ್ಞಾನ ಬೇಕು. ತಿಳುವಳಿಕೆ, ನಿರ್ಧಾರದ ನಿಖರತೆ ಬೇಕು.
ಸಂಕೀರ್ಣ ವಿಮಾನಯಾನದ ಬಗ್ಗೆ ಬಲ್ಲ ಒಂದು ಮೆದುಳು ಮತ್ತು ಹಿಂದೆ ತನ್ನನ್ನು ನಂಬಿ ಕುಳಿತ ನೂರಾರು ಜನರ ಜೀವ ನನಗಿಂತ, ಸ್ವಂತ ಜೀವಕ್ಕಿಂತ ದೊಡ್ಡದು ಎಂಬ ಹೃದಯವೂ ಬೇಕು!

ನರೇಂದ್ರ ಮೋದಿಯವರು ಒಂದೆರಡು ವರ್ಷಗಳ ಹಿಂದೆ ತುಚ್ಛವಾಗಿ ತಮಾಷೆ ಮಾಡಿದ್ದ ರಾಜೀವ್ ಗಾಂಧಿ ಒಬ್ಬ ಕಮರ್ಷಿಯಲ್ ಪೈಲಟ್ ಆಗಿದ್ದರು. ಮೋದಿಯವರು ಅವರೇ ಹೇಳಿದಂತೆ ಚಹಾ ಮಾರುತ್ತಿದ್ದರು, ಭಿಕ್ಷೆ ಬೇಡುತ್ತಿದ್ದರು, ಮೊಸಳೆ ಹಿಡಿಯುತ್ತಿದ್ದರು, ಎಂಟೈರ್ ಪೊಲಿಟಿಕಲ್ ಸಾಯನ್ಸ್ ಸ್ನಾತಕೋತ್ತರ ಪದವಿ ಪಡೆದಿದ್ದರು. ಅಂತವರಿಂದು ವಿಶ್ವಗುರು ಆಗಿದ್ದಾರೆ!

ನೂರಿನ್ನೂರು ಚಿಲ್ಲರೆ ಪ್ರಯಾಣಿಕರ ಜೀವದ ಜವಾಬ್ದಾರಿ ಹೊತ್ತ ಒಬ್ಬ ಪೈಲಟ್ ಎದುರು 130 ಕೋಟಿ ಜನರ ಜವಾಬ್ದಾರಿ ಹೊತ್ತವ ಏನು ಮಾಡಬೇಕು? ಮುಂದೆ ಒಂದಿಪ್ಪತ್ತು ನಿಜ ಘಟನೆಗಳನ್ನು ನಿಮ್ಮ ಎದುರು ವಿವರವಾಗಿ ಬಣ್ಣಿಸುತ್ತೇನೆ. ಆಗ ವಿಮಾನ ಅಥವಾ ದೇಶ ನಡೆಸುವಲ್ಲಿ ಪೈಲಟ್ ಮತ್ತು ಮಂಕಿ ಪೈಲಟ್ ನಡುವಿನ ವ್ಯತ್ಯಾಸವನ್ನು ನೋಡಬಹುದು. ಒಂದು ನಿರ್ಣಾಯಕ ನಿರ್ಧಾರ ಮತ್ತು ತ್ವರಿತ ಕ್ರಮಕ್ಕೆ ಉದಾಹರಣೆಯಾಗಿ ಒಂದು ಹೋಲಿಕೆ ಮಾಡೋಣ.

ಕಾಂಗ್ರೆಸ್ ನೇತೃತ್ವದ ಸರಕಾರದ ಅವಧಿಯಲ್ಲಿ ಆರು ಸರ್ಜಿಕಲ್ ಸ್ಟ್ರೈಕ್ ನಡೆದಿದ್ದರೂ, ಗೌಪ್ಯತೆ ಕಾಯ್ದುಕೊಂಡು ಅದರ ಕ್ರೆಡಿಟ್ ಯಾರಿಗೆ ಸೇರಬೇಕೋ ಅವರಿಗೆ, ಅಂದರೆ ಭಾರತದ ಸೇನೆಗೆ ಬಿಟ್ಟುಕೊಟ್ಟು ಅದು ಸುಮ್ಮನಿತ್ತು. ಆದರೆ, ನಮ್ಮ ಸೇನೆ ನಡೆಸಿದ ಎರಡು ಸರ್ಜಿಕಲ್ ಸ್ಟ್ರೈಕನ್ನು ಮೋದಿ ತಾನೇ ಅಲ್ಲಿಗೆ ಗನ್ ಹಿಡಿದುಕೊಂಡು ಹೋಗಿ ಮಾಡಿದ್ದೇನೆ ಎಂಬಂತೆ ಬಿಂಬಿಸಿ ಮತ ಕೇಳಿದ್ದು ಮಾತ್ರವಲ್ಲ, ಕಾಂಗ್ರೆಸ್ ತನ್ನನ್ನು ಕೊಲ್ಲಲು ಬಯಸುತ್ತಿದೆ ಎಂದು ಪುಕ್ಕಲರಂತೆ ಅಲವತ್ತುಕೊಂಡಿದ್ದರು.

ಸಾಮಾನ್ಯವಾಗಿ ಎಲ್ಲಾ ದೇಶಗಳ ಸೇನೆಗಳು ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸುತ್ತಲೇ ಇರುತ್ತವೆ. ಸರಕಾರ ಸೇನೆಗೆ ನಿರ್ದಿಷ್ಟ ಆದೇಶ ನೀಡುತ್ತದೆ ಮತ್ತು ಸೇನೆಯೇ ಆದನ್ನು ಯೋಜಿಸಿ ತನಗೆ ಹೇಳಿದಷ್ಟೇ ಕೆಲಸ (Task/mission) ಕಾರ್ಯಗತಗೊಳಿಸುತ್ತದೆ. ಯಾವುದೇ ಸರಕಾರ ಅದರ ಬಗ್ಗೆ ಬೊಂಬಡಾ ಬಜಾಯಿಸುವುದಿಲ್ಲ. ಕನಿಷ್ಟವಾದರೂ ಆರೋಗ್ಯಕರ ಪ್ರಜಾತಾಂತ್ರಿಕ ವ್ಯವಸ್ಥೆ ಇರುವ ಯಾವುದೇ ದೇಶದಲ್ಲಿ ಸೇನೆಯು ದೇಶಕ್ಕೆ ನಿಷ್ಟವಾಗಿರುತ್ತದೆ. ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ಸರಕಾರಕ್ಕೆ, ಆ ಮೂಲಕ ದೇಶಕ್ಕೆ ನಿಷ್ಟೆ ಹೊಂದಿರುತ್ತದೆಯೇ ಹೊರತು ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಅಲ್ಲ. (ನಮ್ಮಲ್ಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥನಂತಹ ಶತ ಮೂರ್ಖರು ಭಾರತೀಯ ಸೇನೆಯನ್ನು ಮೋದಿಯ ಸೇನೆ ಎಂದು ಕರೆದು ಅವಮಾನಿಸುತ್ತಾರೆ!)

ಅದಲ್ಲದೆ, ಬೇಕಾದಷ್ಟೇ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಡಲಾಗುತ್ತದೆ. ಅದು ಸೇನಾ ದಾಖಲೆಗಳಲ್ಲಿ ಇರುತ್ತದೆ. ಮೃತರಿಗೆ ಪರಿಹಾರವನ್ನೂ, ಶೌರ್ಯ ತೋರಿಸಿದವರಿಗೆ ಪ್ರಶಸ್ತಿಯನ್ನೂ ಸದ್ದಿಲ್ಲದೇ ಕೊಡಲಾಗುತ್ತದೆ. ಕೆಲವೊಮ್ಮೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರ ಹೆಸರುಗಳನ್ನು ಕೂಡಾ ಗುಪ್ತವಾಗಿ ಇಡಲಾಗುತ್ತದೆ.

ಇದಕ್ಕೆ ಕಾರಣಗಳೂ ಇವೆ. ಇದರಿಂದ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಏರುಪೇರಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅದು ವಿಭಿನ್ನ ಸಂದೇಶಗಳನ್ನು ಬೇರೆಬೇರೆ ದೇಶಗಳಿಗೆ ರವಾನಿಸುತ್ತದೆ. ಎರಡನೆಯದಾಗಿ ಕಾರ್ಯಾಚರಣೆಯ ವಿಧಾನಗಳು ಶತ್ರುವಿಗೆ ತಿಳಿಯಬಾರದು.

ಮೂರನೆಯದಾಗಿ, ಇಂತಹಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದವರ ಮತ್ತವರ ಕುಟುಂಬದವರ ಜೀವಕ್ಕೆ ವಿದೇಶಿ ಸರಕಾರ, ಸಂಘಟನೆಗಳಿಂದ ಅಥವಾ ಅವುಗಳ ದೇಶಿ ಏಜೆಂಟರಿಂದ ಜೀವಾಪಾಯ ಇರುತ್ತದೆ.

ಒಂದು ಉದಾಹರಣೆಯಾಗಿ ಅಮೃತಸರದ ಗುರುದ್ವಾರ ಚಿನ್ನದ ದೇವಾಲಯದಲ್ಲಿ ಖಾಲಿಸ್ಥಾನ್ ಉಗ್ರರ ಮೇಲೆ ಸೇನೆ ನಡೆಸಿದ ‘ಅಪರೇಷನ್ ಬ್ಲೂ ಸ್ಟಾರ್’ ವೇಳೆಗೆ ಭಾರತೀಯ ಭೂಸೇನೆಯ ದಂಡ ನಾಯಕರಾಗಿದ್ದ ಜನರಲ್ ಎ.ಎಸ್. ವೈದ್ಯ ಅವರನ್ನು ನಿವೃತ್ತಿ ಆದ ಬಳಿಕ ಪುಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಒಬ್ಬ ಜನರಲ್‌ಗೆ ಹೀಗಾದರೆ, ಸಾಮಾನ್ಯ ಸೈನಿಕರನ್ನು ರಕ್ಷಿಸುವುದು ಹೇಗೆ? ಆದರೆ ಈಗ ಸೈನಿಕರು ಕೇವಲ ದೇಶಕ್ಕಾಗಿ ಸಾಯಲು ಮತ್ತು ಆಳುವ ಪಕ್ಷಕ್ಕೆ ಮತ ತರಲು ಮಾತ್ರ ಇರುವವರಂತೆ ವರ್ತಿಸಲಾಗುತ್ತಿದೆ.

ಆದರೆ ಘೋಷಿತ ಯುದ್ಧದಲ್ಲಿ ಈ ಪರಿಸ್ಥಿತಿ ಇರುವುದಿಲ್ಲ. ಪ್ರಚಾರಕ್ಕೆ ಹೆಚ್ಚಿನ ಮಹತ್ವ ಇರುತ್ತದೆ. ಯಶಸ್ಸನ್ನು ಉತ್ಪ್ರೇಕ್ಷಿಸಿ, ವೈಫಲ್ಯಗಳನ್ನು ಮುಚ್ಚಿಡಲಾಗುತ್ತದೆ. ಸಾಮಾನ್ಯವಾಗಿ ಯುದ್ಧಗಳು ದೇಶದ ಜನರ ಭಾವನೆಗಳನ್ನು ಕೆರಳಿಸುವುದರಿಂದ ಆಳುವ ಪಕ್ಷಕ್ಕೆ ಲಾಭ ತಂದುಕೊಡುತ್ತವೆ. ಇದು ಯಾವತ್ತೂ ನಿಜವಾಗುವುದಿಲ್ಲ! ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಗೆದ್ದರೂ, ಅವರನ್ನು ಮಹಾ ತಂತ್ರಗಾರಿಕೆಯವರೆಂದು ಗುರುತಿಸಲಾಗುತ್ತದೆಯೇ ಹೊರತು ಮಹಾ ಪ್ರಧಾನಿಯಾಗಿ ಅಲ್ಲ! ಮುಂದಿನ ಚುನಾವಣೆಯಲ್ಲಿ ಅವರು ಸೋತು ಲೇಬರ್ ಪಕ್ಷ ಅಧಿಕಾರಕ್ಕೆ ಬಂತು ಮತ್ತು ಭಾರತಕ್ಕೆ ಸ್ವಾತಂತ್ರ್ಯ ಬಂತು ಎಂದು ನಾವು ನೆನಪಿಸಿಕೊಳ್ಳಬೇಕು. ಇದನ್ನು ಮೋದಿ ನೆನಪಿಡಬೇಕು.

1971ರ ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಭಾರತೀಯ ಸೇನೆ ಅಭೂತಪೂರ್ವ ಜಯ ಸಾಧಿಸಿ ಪಾಕಿಸ್ತಾನ ನಿಶ್ಶರ್ಥವಾಗಿ ಶರಣಾಗತಿಯಗಿ, ಬಾಂಗ್ಲಾ ದೇಶವೆಂಬ ಹೊಸ ದೇಶವೇ ಉದಯವಾಗಿತ್ತು. ಪಾಕಿಸ್ತಾನದ ಇಬ್ಬದಿ ಅಪಾಯ ಕೊನೆಗೊಂಡಿತ್ತು. ಈ ನಿರ್ಧಾರ ಸುಲಭವಾಗಿರಲಿಲ್ಲ. ಯುಎಸ್‍ಎಯಂತಹ ಶಕ್ತ ರಾಷ್ಟ್ರವನ್ನು ಎದುರು ಹಾಕಿಕೊಳ್ಳಬೇಕಾಗಿತ್ತು. ಆದರೂ ಎದೆಗುಂದದೇ ಈ ನಿರ್ಧಾರ ತೆಗೆದುಕೊಂಡ ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಯಶಸ್ಸನ್ನು ಸೈನ್ಯಕ್ಕೆ ಅರ್ಪಿಸಿದರೇ ಹೊರತು ತಾನು ಮಾಡಿದ್ದೆಂದು ಎಲ್ಲೂ ಕೊಚ್ಚಿಕೊಳ್ಳಲಿಲ್ಲ. ಇದು ಅವರಿಗೂ ಮೋದಿಗೂ ಇರುವ ವ್ಯತ್ಯಾಸ!

ಆದರೆ, ವಿದೇಶಿ ನೆಲದಲ್ಲಿ ನೆಲದಲ್ಲಿ ನಡೆದ ಭಾರತದ ಮೊದಲ ಕ್ಷಿಪ್ರ ಕಾರ್ಯಚರಣೆಯನ್ನು ಮೋದಿ ಎಂದೂ ನೆನಪಿಸಿಕೊಂಡಿಲ್ಲ ಎಂಬ ಕಾರಣದಿಂದ ನಾವು ನೆನಪಿಸಿಕೊಳ್ಳಬೇಕು. ಅದು 1988. ಆಗ, ಪ್ರಧಾನಿಯಾಗಿದ್ದವರು ರಾಜೀವ್ ಗಾಂಧಿ. ಅದೇ ಹೊತ್ತಿಗೆ ಶೀಲಂಕಾದಲ್ಲಿ ಎಲ್ಟಿಟಿಈ, ಪಿಎಲ್‍ಓಟಿಇ, ಟಿಯುಎಲ್‍ಎಫ್ ಮುಂತಾದ ತಮಿಳು ಉಗ್ರಗಾಮಿ ಸಂಘಟನೆಗಳು “ಈಳಂ” (ದೇಶ) ಸ್ಥಾಪನೆಗಾಗಿ ಸರಕಾರದೊಂದಿಗೆ ಕಾದಾಟ ನಡೆಸುತ್ತಿದ್ದುದು ಮಾತ್ರವಲ್ಲ, ಪ್ರಾಬಲ್ಯಕ್ಕಾಗಿ ತಮ್ಮೊಳಗೆಯೂ ಕಾದಾಟ ನಡೆಸುತ್ತಿದ್ದವು. ಆಗ ಪೀಪಲ್ಸ್ ಲಿಬರೇಷನ್ ಆರ್ಗನೈಸೇಷನ್ ಆಫ್ ತಮಿಳ್ ಈಳಂ (ಪ್ಲೋಟ್) ಎಂಬ ಸಂಘಟನೆ ಮಾಲ್ದೀವ್ಸ್ ಎಂಬ ಪುಟ್ಟ ದೇಶದಲ್ಲಿ ನೆಲೆ ಸ್ಥಾಪಿಸಿ ಪ್ರಬಲ ಎಲ್ಟಿಟಿಇಗೆ ಸಡ್ಡುಹೊಡೆಯಲು ಹುನ್ನಾರ ನಡೆಸಿತ್ತು.

ಆಗ ಮಾಲ್ಡೀವ್ಸ್ ಅಧ್ಯಕ್ಷರಾಗಿದ್ದವರು ಭಾರತೀಯ ಮೂಲದ ಮಹಮ್ಮದ್ ಅಬ್ದುಲ್ ಗಯ್ಯೂಮ್. (ಈಗ ವಿಶ್ವಗುರು ಮೋದಿ ಕ್ಷುಲ್ಲಕ ಪ್ರಚಾರದ ತೆವಲಿನಿಂದ ಅದನ್ನು ಚೀನಾದ ತೆಕ್ಕೆಗೆ ಹಾಕಿಬಿಟ್ಟರು)

ಹಿಂದಿನಿಂದಲೂ ಭಾರತದ ಮಿತ್ರರಾಷ್ಟವಾಗಿದ್ದು ಯಾವತ್ತೂ ವಿಶ್ವಸಂಸ್ಥೆಯಲ್ಲಿ ಭಾರತದ ಪರ ಮತ ಚಲಾಯಿಸುತ್ತಿತ್ತು. ಆಗ ಮಹಮ್ಮದ್ ಉತೂಫಿ ಎಂಬ ವ್ಯಕ್ತಿಯ ನಾಯಕತ್ವದಲ್ಲಿ ಪ್ಲೋಟ್ ಸಂಘಟನೆಯ 80-110ರಷ್ಟಿದ್ದ ಶಸ್ತ್ರಸಜ್ಜಿತ ಬಾಡಿಗೆ ಬಂಟರ ನೆರವಿನಿಂದ ಕ್ಷಿಪ್ರ ಕ್ರಾಂತಿಯೊಂದು ನಡೆಯಿತು. ಸರಕಾರದ 27 ಮಂದಿಯನ್ನು ಒತ್ತೆಸೆರೆ ಇರಿಸಿತು. ಮುಂದೆ ಆದುದನ್ನು ಈ ಬಂಡುಕೋರರು ಬಿಡಿ; ಇಡೀ ಪ್ರಪಂಚದಲ್ಲಿ ಯಾರೂ ಊಹಿಸಿರಲಿಲ್ಲ! ಯಾಕೆಂದರೆ ಭಾರತವು ಘೋಷಿತ ಯುದ್ಧಗಳನ್ನು ಬಿಟ್ಟರೆ, ಯಾವತ್ತೂ ದೇಶದ ನೆಲದ ಹೊರಗೆ ಕಾರ್ಯಾಚರಣೆ ನಡೆಸಿರಲಿಲ್ಲ.

ಆಪರೇಷನ್ ಕ್ಯಾಕ್ಟಸ್

ಮಾಲ್ಡೀವ್ಸ್ ನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಬಗ್ಗೆ ಭಾರತದ ಗುಪ್ತಚರ ಸಂಸ್ಥೆಗಳಿಗೆ ಅರಿವಿತ್ತು. ಅಧ್ಯಕ್ಷ ಗಯ್ಯೂಮ್ ಅವರು ರಕ್ಷಣೆ ಕೋರಿ ಸಂದೇಶ ಕಳಿಸಿದಾಗ ಪ್ರಧಾನಿ ರಾಜೀವ್ ಗಾಂಧಿ ಹಿಂದೆ ಮುಂದೆ ನೋಡಲಿಲ್ಲ! ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡವರೇ, ಸೇನಾ ಕಾರ್ಯಾಚರಣೆಗೆ ಆದೇಶ ನೀಡಿಯೇ ಬಿಟ್ಟರು. ಅದುವೇ ‘ಅಪರೇಷನ್ ಕ್ಯಾಕ್ಟಸ್’!

1988ರ ನವಂಬರ್ 3ರಂದು ನಡೆದ ಈ ಕಾರ್ಯಾಚರಣೆಯ ಹೊಣೆಯನ್ನು 17 ಪ್ಯಾರಾಚ್ಯೂಟ್ ರೆಜಿಮೆಂಟಿನ ’50 ಇಂಡಿಪೆಂಡೆಂಟ್ ಪ್ಯಾರಾಚ್ಯೂಟ್ ಬ್ರಿಗೇಡ್’ಗೆ ವಹಿಸಲಾಗಿತ್ತು. ನೇತೃತ್ವ ವಹಿಸಿದವರು ಬ್ರಿಗೇಡಿಯರ್ ಫಾರೂಕ್ ಬುಲ್ಸಾರಾ. ಸಹಾಯಕರಾಗಿ ಇದ್ದವರು ಕರ್ನಲ್ ಸುಭಾಷ್ ಜೋಷಿ. 1600 ಪ್ಯಾರಾಟ್ರೂಪರ್‌ಗಳು ಇಲ್ಲ್ಯೂಶಿನ್ II-76 ಸೋವಿಯತ್ ನಿರ್ಮಿತ ಸಾರಿಗೆ ವಿಮಾನಗಳಲ್ಲಿ ಆಗ್ರಾ ವಾಯುನೆಲೆಯಿಂದ ಹೊರಟು ಸಂದೇಶ ಕೈಸೇರಿದ ಒಂಭತ್ತು ಗಂಟೆಗಳಲ್ಲಿ 2000 ಕಿ.ಮೀ. ದೂರದ ಮಾಲ್ಡೀವ್ಸ್ ರಾಜಧಾನಿ ಮಾಲೆಯ ವಿಮಾನ ನಿಲ್ದಾಣದಲ್ಲಿ ಇಳಿದು ಆಗಿತ್ತು.

ಮುಂದಿನ ಕೆಲವೇ ಗಂಟೆಗಳಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಗಯ್ಯೂಮ್ ಸರಕಾರವನ್ನು ಮರುಸ್ಥಾಪನೆ ಮಾಡಲಾಗಿತ್ತು. ಇಡೀ ಕಾರ್ಯಾಚರಣೆಯಲ್ಲಿ ಸತ್ತವರು 19 ಮಂದಿ ಮಾತ್ರ. ಅವರಲ್ಲಿ ನಾಲ್ವರು ಒತ್ತೆಯಾಳುಗಳನ್ನು ಬಂಡುಕೋರರು ಕೊಂದಿದ್ದರು. ಉಳಿದವರೆಲ್ಲಾ ಮಾಲ್ಡೀವ್ಸ್ ಸೈನಿಕರು. 36 ಮಂದಿ ಗಾಯಗೊಂಡಿದ್ದರು. ಭಾರತೀಯ ಸೇನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಅಷ್ಟು ಅಚ್ಚುಕಟ್ಟಾದ ಸೈನಿಕ ಕಾರ್ಯಾಚರಣೆ ಇದಾಗಿತ್ತು.

ಕೈಗೆಸಿಕ್ಕ ಬಂಡುಕೋರರನ್ನು ಮಾಲ್ಡೀವ್ಸ್ ಸರಕಾದ ವಶಕ್ಕೆ ಒಪ್ಪಿಸಲಾಗಿದ್ದರೆ, ಕೆಲವು ಬಾಡಿಗೆ ಸೈನಿಕರು ಹಡಗೊಂದನ್ನು ಅಪಹರಿಸಿ ಪರಾರಿಯಾಗಿದ್ದರು. ಅವರನ್ನು ಭಾರತೀಯ ನೌಕಾಪಡೆಯ ಐಎನ್‍ಎಸ್ ಗೋದಾವರಿ ಮತ್ತು ಐಎನ್‍ಎಸ್ ಬೆತ್ವಾ ಸಮರ ನೌಕೆಗಳು ಅಡ್ಡಹಾಕಿ ಬಂಧಿಸಿ, ನಂತರ ಅವರನ್ನು ಮಾಲ್ಡೀವ್ಸ್ ಸರಕಾರಕ್ಕೇ ಒಪ್ಪಿಸಲಾಗಿತ್ತು.

ಭಾರತೀಯ ಸೇನೆಯ ಕ್ಷಮತೆಗೆ ಪ್ರಪಂಚದಾದ್ಯಂತ ಶ್ಲಾಘನೆ ವ್ಯಕ್ತವಾಗಿತ್ತು. ಯಾಕೆಂದರೆ ಇದು ಬಾಡಿಗೆ ಸೈನಿಕರು (Mercenaries) ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವನ್ನು ಉರುಳಿಸಲು ನಡೆಸಿದ ಸಶಸ್ತ್ರ ಪ್ರಯತ್ನವಾಗಿತ್ತು ಮತ್ತು ಇಂತಹಾ ಅಪಾಯ ಪ್ರಪಂಚದ ಎಲ್ಲಾ ಚಿಕ್ಕಪುಟ್ಟ ದೇಶಗಳಿಗೆ ಇತ್ತು. ಇಷ್ಟಾದರೂ ರಾಜೀವ್ ಗಾಂಧಿಯವರು ಸೇನೆಯನ್ನು ಶ್ಲಾಘಿಸಿದರೇ ಹೊರತು ಮೋದಿಯಂತೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳಲಿಲ್ಲ, ಕೆರೆದುಕೊಳ್ಳಲಿಲ್ಲ.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಇಂತಹಾ ಒಂದು ಮೊದಲ ಮತ್ತು ಮಹತ್ವದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಒಬ್ಬರು ಮುಸ್ಲಿಂ ಅಧಿಕಾರಿ ಎಂಬುದು ಭಾರತೀಯ ಸೇನೆ ಎಷ್ಟು ಜಾತ್ಯತೀತ ಎಂದು ತೋರಿಸುತ್ತಿದೆ. ಇಂತಹಾ ಸೇನೆಯನ್ನು ಮೋದಿ ಧರ್ಮ, ಮತ್ತು ರಾಜಕಾರಣದ ನೆಲೆಯಲ್ಲಿ ಪ್ರಚೋದಿಸುತ್ತಿರುವುದು, ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮುಂದೆ ದೇಶಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ಮುಂದೆ ಇದೇ ಲಂಕಾ ಉಗ್ರರು ಪ್ರತೀಕಾರಾರ್ಥವಾಗಿ ನಡೆಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ರಾಜೀವ್ ಗಾಂಧಿಯವರನ್ನು ನಿಂದಿಸಿ ಮೋದಿಯವರು ತನ್ನ ಸ್ಥಾನದ ಘನತೆಯನ್ನು ಪಾತಾಳಕ್ಕೆ ತಳ್ಳಿದರು. ಅಲ್ಲದೆ, ತಾನು ಎಂತಹಾ ಚಿಂತನೆಯ ವ್ಯಕ್ತಿ ಎಂದು ತೋರಿಸಿಕೊಟ್ಟರು.

ರಾಮಾಯಣ ಕಾಲದಲ್ಲಿ ಪುಷ್ಪಕ ವಿಮಾನ ಇತ್ತು; ನಾವೆ ಮೊದಲು ವಿಮಾನ ಕಂಡುಹಿಡಿದದ್ದು ಎಂದು ಸ್ವಂತ ಬೆನ್ನು ತುರಿಸಿ ಕೊಳ್ಳುವವರ ಮುಂದೆ- ಒಂದು ದೃಢ ನಿರ್ಧಾರವನ್ನು ಕ್ಷಣದಲ್ಲಿ ತೆಗೆದುಕೊಳ್ಳಬೇಕಾದ ವಿಮಾನದ ಪೈಲಟ್ ಮತ್ತು ದೇಶದ ನಾಯಕನ ಗುಣಗಳನ್ನು ಮುಂದೆ ವಿವರವಾಗಿ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page