Thursday, October 3, 2024

ಸತ್ಯ | ನ್ಯಾಯ |ಧರ್ಮ

ಸಿದ್ಧರಾಮಯ್ಯನವರ ರಾಜೀನಾಮೆ ಕೇಳುವ ಕುಮಾರಸ್ವಾಮಿ ತಾನು ರಾಜೀನಾಮೆ ಕೊಡುತ್ತಾರೆಯೇ? ಎಫ್‌ಐಆರ್‌ ಅವರ ಮೇಲೂ ಆಗಿಲ್ಲವೆ?: ಜಿ ಟಿ ದೇವೇಗೌಡ

ಮೈಸೂರು: ಸಿದ್ಧರಾಮಯ್ಯನವರ ಬಳಿ ರಾಜೀನಾಮೆ ಕೇಳುವವರು ಮೊದಲು ತಮ್ಮ ಪಕ್ಷದಲ್ಲಿ ಎಫ್‌ಐಆರ್‌ ದಾಖಲಾಗಿರುವ ನಾಯಕರಿಂದ ರಾಜೀನಾಮೆ ಕೊಡಿಸಲಿ ಎಂದು ಜೆಡಿಎಸ್‌ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.

ಸಿದ್ಧರಾಮಯ್ಯನವರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಹಾಗೂ ರಾಜ್ಯಪಾಲರ ಕಚೇರಿ ತನಿಖೆ ನಡೆಸುವಂತೆ ಹೇಳಿದೆಯೇ ಹೊರತು ಅವರಿಗೆ ರಾಜೀನಾಮೆ ನೀಡಲು ಹೇಳಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹೇಳಿದರು.

ಇಂದು ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು “ಎಂತಹ ಸಂದರ್ಭದಲ್ಲಿಯೂ ತಾಯಿ ಚಾಮುಂಡೇಶ್ವರಿ ಅವರ ಪಾಲಿಗೆ ಇದ್ದಾರೆ. ಉಪ ಚುನಾವಣೆ ವೇಳೆ ಸಿದ್ದರಾಮಯ್ಯರನ್ನು ಸೋಲಿಸಲು ನಾವು ತೀರ್ಮಾನ ಮಾಡಿದ್ದೆವು. ಆದರೆ, ಸಿಎಂ ಆ ಚುನಾವಣೆಯಲ್ಲಿ ಗೆದ್ದರು ಇದಕ್ಕೆ ಕಾರಣ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿದ್ದರಾಮಯ್ಯಗೆ ಇದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಕಾರಣ. ಸಚಿವ ಮಹದೇವಪ್ಪ ಎಲ್ಲಾ ಸಚಿವ ಸ್ಥಾನವನ್ನೂ ಪಡೆದಿದ್ದಾರೆ. ಒಬ್ಬ ದಲಿತ ನಾಯಕನನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದಿರುವುದು ಸಿದ್ದರಾಮಯ್ಯ” ಎಂದು ಮುಖ್ಯಮಂತ್ರಿಯನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದರು.

“ಹಿಂದೆ ಮೈಸೂರು ರಾಜ್ಯವಿತ್ತು, ಆಮೇಲೆ ಅದು ಕರ್ನಾಟಕ ಎಂದಾಯಿತು. ಮಹಾರಾಜರು ಕಟ್ಟಿದ್ದ ಮೈಸೂರು ನಮ್ಮದು. ದಸರಾ ಉದ್ಘಾಟಕರ ಆಯ್ಕೆಯನ್ನು ಮುಖ್ಯಮಂತ್ರಿಯವರಿಗೆ ಬಿಟ್ಟು ಕೊಟ್ಟಿದ್ದೆವು. ಹಂಪನಾ ಅವರ ಆಯ್ಕೆ ಉತ್ತಮವಾಗಿದೆ. ಯಾವುದೇ ವಿವಾದ ಇಲ್ಲದ ಸಾಹಿತಿಗಳು. ಹಂಪನಾ ಅವರಿಗೆ ಚಾಮುಂಡೇಶ್ವರಿ ತಾಯಿ ಆಯಸ್ಸು, ಆರೋಗ್ಯ ಕರುಣಿಸಲಿ” ಎಂದು ಈ ಸಂದರ್ಭದಲ್ಲಿ ಅವರು ಹಾರೈಸಿದರು.

ರಾಜ್ಯ ರಾಜಕಾರಣದ ಕುರಿತು ಮಾತನಾಡಿದ ಅವರು “ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ರಾಜೀನಾಮೆ ಕೇಳಿದ್ರೆ ಕೊಡ್ತಾರಾ? ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು?ʼ ತಮ್ಮದೇ ಪಕ್ಷದ ನಾಯಕ, ಸಚಿವ ಕುಮಾರಸ್ವಾಮಿಯವರ ವಿರುದ್ಧವೂ ಮಾತಿನ ಚಾಟಿ ಬೀಸಿದರು.

ಬಿಜೆಪಿ-ಜೆಡಿಎಸ್ ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಯಾರ ಮೆಲೆ ಎಫ್ ಐಆರ್ ದಾಖಲಾಗಿದೆಯೋ ಅವರೆಲ್ಲ ವಿಧಾನಸೌಧದ ಬಳಿ ನಿಂತುಕೊಳ್ಳಿ. ಕೇಂದ್ರ ಸರ್ಕಾರದಿಂದ ಏನು ಯೋಜನೆ ತರಬೇಕು ಅದನ್ನು ಯೋಚಿಸಿ, ಸಿದ್ದರಾಮಯ್ಯ ಕಾಲದಲ್ಲಿ ಅಭಿವೃದ್ಧಿ ಆದಷ್ಟು ಯಾವತ್ತೂ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.

ಮಾಧ್ಯಮಗಳನ್ನೂ ತರಾಟೆಗೆ ತೆಗೆದುಕೊಂಡ ಅವರು ಇಂದಿನ ಮಾಧ್ಯಮಗಳ ವರ್ತನೆಯಿಂದ ಹೊಸ ನಾಯಕರು ಹುಟ್ಟುತ್ತಿಲ್ಲ, ಯುವ ಪೀಳಿಗೆಯಲ್ಲಿ ನೈತಿಕತೆ, ಸಾಮಾಜಿಕ ಕಾಳಜಿ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.

ಸಿದ್ಧರಾಮಯ್ಯ ಚಾಮುಂಡೇಶ್ವರಿಯ ವರಪುತ್ರ

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ತಾಯಿಯ ವರಪುತ್ರ. ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಾಲಿಟ್ಟ ವೇಳೆಯಿಂದ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆಂದರೆ ತಾಯಿ ಚಾಮುಂಡೇಶ್ವರಿ ಆಶೀರ್ವಾದವೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page