Thursday, October 24, 2024

ಸತ್ಯ | ನ್ಯಾಯ |ಧರ್ಮ

ಚನ್ನಪಟ್ಟಣದಲ್ಲಿ ಜೆಡಿಎಸ್ ಹೈಡ್ರಾಮಾ; ಸುತ್ತಿ ಬಳಸಿ ನಿಖಿಲ್ ಕಣಕ್ಕಿಳಿಸಲು ಮೆಗಾ ಪ್ಲಾನ್

ಚನ್ನಪಟ್ಟಣ ಉಪಚುನಾವಣೆ ದಿನದಿಂದ ದಿನಕ್ಕೆ ಹೆಚ್ಚು ರಂಗು ಪಡೆದುಕೊಳ್ಳುತ್ತಿದ್ದು, ನಿನ್ನೆ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಇಂದು ಜೆಡಿಎಸ್ ನಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಮಗ ನಿಖಿಲ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಇಂದು ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಅವರನ್ನೇ ಕಣಕ್ಕಿಳಿಸಬೇಕು ಎಂದು ಪ್ರತಿಭಟನೆಗೆ ಇಳಿದಿದ್ದಾರೆ.

ಇಷ್ಟು ದಿನ ಎನ್‌ಡಿಎ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಜೆಡಿಎಸ್‌ನ ಅಭ್ಯರ್ಥಿಯೇ ಕಣಕ್ಕೆ ಇಳಿಯುತ್ತಿರುವುದರಿಂದ ದಳತಿಗಳು ಅಳೆದುತೂಗಿ ಅಭ್ಯರ್ಥಿ ಆಯ್ಕೆ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ನಿಖಿಲ್ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಲಾಗುತ್ತಿದೆ.

ಎರಡು ಬಾರಿ ಸೋಲಿನ ಅನುಕಂಪವಿದ್ದು, ಈಗ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಇರುವುದರಿಂದ ನಿಖಿಲ್ ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸಲು ಪಣ ತೊಡುತ್ತಿದ್ದೂ, ದಳಪತಿಗಳು ನಿಖಿಲ್ ಗೇ ಮಣೆ ಹಾಕಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಮೇಲಿನ ಅಭಿಮಾನ ಕೂಡ ನಿಖಿಲ್ ಕುಮಾರಸ್ವಾಮಿಗೆ ಲಾಭ ತಂದುಕೊಡುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಸಂಜೆಯ ವೇಳೆಗೆ ನಿಖಿಲ್ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ. ಈವರೆಗೂ ನಿಖಿಲ್‌ ಕುಮಾರಸ್ವಾಮಿ ಅವರು ಸೋಲಿನ ಭಯದಿಂದ ಸ್ಪರ್ಧೆಯಿಂದ ಹಿಂದೇಟು ಹಾಕುತ್ತಿದ್ದರು. ಆದರೆ ಇದೀಗ ಹೆಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದ ಸಾಧಕ ಬಾಧಕ, ಮೈತ್ರಿಯ ಪ್ಲಸ್ ಪಾಯಿಂಟ್ಸ್‌ ಬಗ್ಗೆ ವಿವರಣೆ ತಗೆದುಕೊಂಡು ಮತ್ತೊಮ್ಮೆ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಆಸಕ್ತಿ ತೋರಿದ್ದಾರೆ.

ಜೆಡಿಎಸ್‌ ನಿಂದ ನಿಖಿಲ್ ಜೊತೆಗೆ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಜಯಮುತ್ತು ಹೆಸರು ಸಹ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ಯೋಗೇಶ್ವರ್ ಹೊರತಾಗಿ ಯಾರೇ ಸ್ಪರ್ಧಿಸಿದ್ದರೂ ಜಯಮುತ್ತು ಜೆಡಿಎಸ್ ಅಭ್ಯರ್ಥಿಯಾಗುತ್ತಿದ್ದರು. ಆದರೆ ಯೋಗೇಶ್ವರ್ ಗೆ ಪ್ರಬಲ ಪ್ರತಿಸ್ಪರ್ಧೆಗೆ ನಿಖಿಲ್ ಸರಿಯಾದ ಆಯ್ಕೆ ಎಂಬ ಒತ್ತಾಯದ ಹಿಂದೆ ಈಗ ನಿಖಿಲ್ ಹೆಸರು ಮುಂದೆ ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page