Wednesday, November 13, 2024

ಸತ್ಯ | ನ್ಯಾಯ |ಧರ್ಮ

ಕಡಬ: ಮನೆ ಕಡೆವುದು ಸಂವಿಧಾನ ಬಾಹಿರ ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನ ದಿನವೇ ಬುಲ್ಡೋಜರ್‌ ಬಳಸಿ ವೃದ್ಧರ ಮನೆ ಕಡೆವಿದ ಅಧಿಕಾರಿಗಳು!

ಮಂಗಳೂರು: ಸುಪ್ರೀಂ ಕೋರ್ಟ್‌ ಬುಲ್ಡೋಜರ್‌ ಬಳಸಿ ಮನೆ ಕೆಡವುದು ಸಂವಿಧಾನ ಬಾಹಿರ, ಅಧಿಕಾರಿಗಳಿಗೆ ದಂಡ ವಿಧಿಸಬೇಕು ಎಂದು ತೀರ್ಪು ನೀಡಿದ ದಿನವೇ ವೃದ್ಧ ದಂಪತಿಗಳ ಮನೆಯನ್ನು ಅಧಿಕಾರಿಗಳು ಬುಲ್ಡೋಜರ್‌ ಬಳಸಿ ಕೆಡವಿದ ಘಟನೆ ದಕ್ಷಿಣ ಕನ್ನಡದ ಕಡಬದಲ್ಲಿ ನಡೆದಿದೆ.

ಅಧಿಕಾರಿಗಳು ದಿಢೀರ್ ಎಂದು ಮನೆಯನ್ನು ಧ್ವಂಸ ಮಾಡಿ ವೃದ್ಧ ದಂಪತಿಗಳು ಅತಂತ್ರಗೊಂಡಿದ್ದು, ತಮಗೆ ಮನೆ ನಿರ್ಮಿಸಿಕೊಡಿ ಅಥವಾ ಸಾಯಲು ಅನುಮತಿ ಕೊಡಿ ಎಂದು ಯಾಚಿಸಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಕೌಕ್ರಾಡಿದ ರಾಧಮ್ಮ ಮತ್ತು ಮುತ್ತುಸ್ವಾಮಿಯವರ ಮನೆಯನ್ನು ಇಂದು ಏಕಾಏಕಿ ಧ್ವಂಸಗೊಳಿಸಲಾಗಿದೆ. ಇದರಿಂದ ಕಂಗಾಲಾಗಿರುವ ದಂಪತಿ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ಚಿತ್ರದುರ್ಗ ಹಟ್ಟಿಯ ಮೂಲದ ಈ ದಂಪತಿಗಳು ಕೂಲಿ ಕೆಲಸಕ್ಕಾಗಿ ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮಕ್ಕೆ ಬಂದು ವಾಸಗಿದ್ದರು. ಕೌಕ್ರಾಡಿ ಗ್ರಾಮದ ಕಾವಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದ ಸರ್ವೇ ನಂಬರ್ 123/1ರಲ್ಲಿ ಕಳೆದ 6 ವರ್ಷಗಳಿಂದ ವಾಸಿಸುತ್ತಿದ್ದಾರೆ.

ದಂಪತಿಗೆ ಯಾವುದೆ ಪಿತ್ರಾರ್ಜಿತ ಆಸ್ತಿ ಇಲ್ಲ. ಹೀಗಾಗಿ ಸರ್ಕಾರಿ ಜಾಗ 123/1ರಲ್ಲಿ ಕಾಪಿನಬಾಗಿಲು ಎಂಬಲ್ಲಿ ಸಣ್ಣ ಮನೆಕಟ್ಟಿಕೊಂಡಿದ್ದರು. ದಂಪತಿ ನಿತ್ಯ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು.ವೃದ್ಧ ದಂಪತಿ ಸರ್ಕಾರಿ ಜಾಗದಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಬೆಳ್ತಂಗಡಿ ತಾಲೂಕಿನ ಅಶೋಕ್ ಅಚಾರ್ಯ ಎಂಬವರು ಇವರನ್ನು ಒಕ್ಕಲೆಬ್ಬಿಸುವ ಸಲುವಾಗಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಸರ್ಕಾರಿ ಜಾಗ ಖಾಲಿ ಮಾಡಲು ಹೈಕೋರ್ಟ್ ಸೂಚನೆ ನೀಡಿದ ಕಾರಣ ಕಳೆದ ಫೆಬ್ರವರಿಯಲ್ಲೇ ಮನೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆ ಕೆಡವದೆ ಪ್ರಕರಣ ತಣ್ಣಗಾಗಿತ್ತು.

ನವೆಂಬರ್‌ 13 ರಂದು ದಿಢೀ‌ರನೆ ಅಧಿಕಾರಿಗಳು ಮನೆಯ ವಸ್ತುಗಳನ್ನು ಹೊರಗೆಸೆದು ಮನೆಯನ್ನು ಕೆಡವಿ ಹಾಕಿದ್ದಾರೆ. ವೃದ್ಧ ದಂಪತಿ ಕಣ್ಣೀರು ಹಾಕಿದರೂ ಅಧಿಕಾರಿಗಳ ಮನ ಕರಗದೆ ಮನೆ ತೆರವುಗೊಳಿಸಿದ್ದಾರೆ. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಆರ್‌ಐ ಪೃಥ್ವಿರಾಜ್, ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ಮನೆ ತೆರವು ಮಾಡಲಾಗಿದೆ.

ಈಗ ಮನೆ ಕಳೆದುಕೊಂಡಿರುವ ವೃದ್ಧ ದಂಪತಿ ತಮಗೆ ಈ ಸರ್ಕಾರಿ ಜಾಗದಲ್ಲಿ ತಾವು ಕಟ್ಟಿರುವ ಸಣ್ಣ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ ಅಥವಾ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ನಾವುದೇ ರೀತಿಯಲ್ಲಿ ಒಳ್ಳೆಯ ಮರಣ ಪಡೆಯಲು ಅವಕಾಶವನ್ನು ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page