Monday, December 9, 2024

ಸತ್ಯ | ನ್ಯಾಯ |ಧರ್ಮ

ಈ ರೀತಿ ಹತ್ತು ಸಮಾವೇಶ ಮಾಡಿದ್ರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ: ಕಾಂಗ್ರೇಸ್‌ಗೆ ರೇವಣ್ಣ ತಿರುಗೇಟು

ಈ ರೀತಿ ಹತ್ತು ಸಮಾವೇಶ ಮಾಡಿದ್ರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಈಗ ಇರುವುದು ನಕಲಿ ಕಾಂಗ್ರೆಸ್ ಎಂದು ಕಾಂಗ್ರೇಸ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ. ರೇವಣ್ಣ

ಹಾಸನ: ಈತರ ಹತ್ತು ಸಮಾವೇಶ ಮಾಡಿ ಹೇಳಿಕೆ ನೀಡಿದರೂ ಏನು ಆಗಲ್ಲ. ನಾನು ತಲೆ ಕೆಡಿಸಿಕೊಳ್ಳಲ್ಲ. ಕೇಳಿದ ಸಾಕ್ಷಿಗುಡ್ಡೆ ಬಗ್ಗೆ ಪ್ರಸ್ತಾಪಿಸಿದಲ್ಲದೇ ಈಗ ಕಾಂಗ್ರೆಸ್ ಪಕ್ಷ ಇಲ್ಲಾ. ಇರೋದು ನಕಲಿ ಕಾಂಗ್ರೆಸ್ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ, “ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 28 ಸಾವಿರ ಕೋಟಿ ಸಾಲಾಮನ್ನಾ ಮಾಡಿದ್ರು. ಯಾವ ಆಂದೋಲನ ಇದು? ಈಗ ಜನರು ಸಂಕಷ್ಟದಲ್ಲಿ ಇದಾಗೆ ಒಮ್ಮೆ ರೈತರ ಸಾಲಾ ಮನ್ನಾ ಮಾಡಲಿ! ಐದು ಗ್ಯಾರಂಟಿ ಕೊಟ್ಟಿದಾರೆ ಇನ್ನೊಂದು ಗ್ಯಾರಂಟಿ ಕೊಡಿ. ಹಾಸನದಲ್ಲಿ ಆರು ಜಿಲ್ಲೆ ಜನ ಕರೆತಂದು ಸಮಾವೇಶ ಮಾಡಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಏನಿದೆ? ಸ್ವಾಭಿಮಾನಿ ಅಂತೆ, ಜನ ಕಲ್ಯಾಣ ಅಂತೆ. ದೇವೇಗೌಡರು ಪ್ರಧಾನಮಂತ್ರಿ ಇದ್ದಾಗ ಕೇಂದ್ರ ಸರ್ಕಾರದ ನಬಾರ್ಡ್‌ನಿಂದ ರೈತರಿಗೆ ಕಾರ್ಯಕ್ರಮ ರೂಪದಲ್ಲಿ ಸಾಲ ಕೊಡುವಂತೆ ಮಾಡಿದ್ರು. ನಬಾರ್ಡ್ ಮೂಲಕ ರೈತರಿಗೆ ಲೋನ್ ಕೊಡುವುದು, ರಸ್ತೆಗೆ ಹಣ ಕೊಡುವುದು ಮಾಡಿದ್ದು, ದೇವೇಗೌಡರು ಏನು ಪ್ರಸ್ತಾವನೆ ಮಾಡಲ್ಲ ಅಂತ ಇವತ್ತು ರಾಜ್ಯ ಸರ್ಕಾರದವರು ಹೇಳುತ್ತಿದ್ದಾರೆ. ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್‌ಗೆ 70% ಹಣ ಕೊಡುತ್ತಿದ್ದರು. ಕೇಂದ್ರದಿಂದ ಸಿಗುವ ಸೌಲಭ್ಯವನ್ನು ರಾಜ್ಯಕ್ಕೆ ದೊರಕುವಂತೆ ಮಾಡಿದ್ದೇ ದೇವೇಗೌಡರು. ಕುಮಾರಸ್ವಾಮಿ ಸಾಲಮನ್ನಾ ಮಾಡದಿದ್ದರೆ 21 ಬ್ಯಾಂಕ್‌ಗಳು ಮುಳುಗಿ ಹೋಗುತ್ತಿದ್ದವು. ದೇವೇಗೌಡರನ್ನ ಸಾಕ್ಷಿ ಗುಡ್ಡೆ ಕೇಳ್ತಾರೆ. ಅಪೆಕ್ಸ್ ಬ್ಯಾಂಕ್‌ಗೆ 9162 ಕೋಟಿ ಕೊಡಿ ಎಂದು ಕೇಂದ್ರ, ಆರ್‌ಬಿಐ, ನಬಾರ್ಡ್‌ಗೆ ದೇವೇಗೌಡರು ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ಇಟ್ಟುಕೊಳ್ಳಬೇಕು. ಆದರೇ ಬೆಳಿಗ್ಗೆ ಎದ್ದರೆ ಪ್ರಧಾನಮಂತ್ರಿಯನ್ನು ಬೈತಾರೆ. ವಿಶ್ವಾಸ ಇಟ್ಟುಕೊಂಡರೆ ಮಾತ್ರ ಏನಾದರೂ ಕೊಡ್ತಾರೆ ಎಂದು ಟಾಂಗ್ ನೀಡಿದರು. ಕುಮಾರಸ್ವಾಮಿ ಹಾಸನ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳ 531 ಕೋಟಿ ಸಾಲಮನ್ನ ಮಾಡಿದ್ದು, 9600 ಕೋಟಿ ರಾಷ್ಟ್ರೀಯ ಬ್ಯಾಂಕ್‌ಗಳ ಸಾಲಮನ್ನ ಆಗಿದೆ. ಕಾಂಗ್ರೆಸ್‌ನವರೇ ರೈತರ ಬಗ್ಗೆ ಮಾತನಾಡುತ್ತಿರಲ್ಲಾ ಮೊದಲು ರೈತರ ಸಾಲಮನ್ನ ಮಾಡಿ. ದೇವೇಗೌಡರ ರಾಜಕೀಯ ಮುಗಿದು ಹೋಯ್ತು ಅಂತ ಬಾಷಣ ಮಾಡ್ತಾರೆ. ಈ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಏನು ಕೊಡುಗೆ ಕೊಟ್ಟಿದೆ ಎಂಬುದನ್ನು ಹೇಳಲಿ. ಬ್ರಿಟಿಷರ ಕಾಲದಲ್ಲಿ ಆಗಿದ್ದ ರೈಲ್ವೆ ಮಾರ್ಗ ಕಿತ್ತುಕೊಂಡು ಹೋದರವರು ಕಾಂಗ್ರೆಸ್‌ನವರು,” ಎಂದು ಕಾಂಗ್ರೇಸಿನ ಮೇಲೆ ಹರಿಹಾಯ್ದರು.

“ದೇವೇಗೌಡರು ಪ್ರಧಾನಮಂತ್ರಿಯಾಗಿ ಹತ್ತುವರೆ ತಿಂಗಳಿನಲ್ಲಿ ರೈಲ್ವೆ ಮಾರ್ಗ ಮಾಡಿದ್ರು. ಡಿಸಿಎಂ ಈ ಜಿಲ್ಲೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ರೈಲ್ವೆ ಮಾರ್ಗ, ಕೋರ್ಟ್, ಬಸ್ಟಾಂಡ್ ಕಟ್ಟಿದ್ದು ಯಾರು? ಇವೆಲ್ಲಾ ಸಾಕ್ಷಿ ಗುಡ್ಡೆಗಳಲ್ಲವಾ! ಗಿರಾಕಿಗಳೇ ಆಸ್ಪತ್ರೆ, ಇಂಜಿನಿಯರ್, ಮೆಡಿಕಲ್ ಕಾಲೇಜು, ಪಶುವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜುಗಳನ್ನು ನೋಡಿ.”

“ಈ ಜಿಲ್ಲೆಯ ಜನ ದೇವೇಗೌಡರಿಗೆ, ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನಮ್ಮ ಮೇಲೆ ಇದೆ, ಅದನ್ನು ತೀರಿಸುತ್ತೇವೆ. ನನ್ನ ಕೈಲಾದ ಕೆಲಸವನ್ನು ಈ ಜಿಲ್ಲೆಗೆ ಮಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಿದ್ರೆ ನಾನೇನು ತಲೆ ಕೆಡಿಸಿಕೊಡಲ್ಲ. ಇವರಿಗೆ ತಾಕತ್ ಇದ್ದರೆ ಕಾಂಗ್ರೆಸ್ ಬಿಟ್ಟು ಬಂದು ನಮ್ಮ ರೀತಿ ಪಕ್ಷ ಕಟ್ಟಲಿ,” ಎಂದು ಸವಾಲು ಎಸೆದರು.

“ಹಿಂದಿನ ಕಾಂಗ್ರೆಸ್ ಈಗ ಇಲ್ಲ, ಈಗ ಇರುವುದು ನಕಲಿ ಕಾಂಗ್ರೆಸ್. ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ ಅಂತಾರೆ, ಇವರು ಬಿಎಲ್ ಶಂಕರ್ ಕರೆದೊಯ್ದು ಏನು ಮಾಡಿದ್ರು. ನಮ್ಮಿಂದ ವಲಸೆ ಹೋದವರು ಅಲ್ಲಿ ಇರುವವರು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಜೇನುಕಲ್ಲು ಸಿದ್ದೇಶ್ವರನೇ ಇದಕ್ಕೆ ಸಾಕ್ಷಿ ಎಂದರು. ಮೂರು ಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡಿಸದೆ ಎಲೆಕ್ಷನ್ ಮಾಡಿ ಗೆಲ್ಲಿಸಿಕೊಂಡು ಬಂದಿದ್ದೇನೆ. ಇವರೆಲ್ಲ ಜೆಡಿಎಸ್ ಮುಗಿದುಹೋಯ್ತು ಅಂತಾರೆ. ೨೦೨೮ ಕ್ಕೆ ಜೆಡಿಎಸ್ ಏನು ಎಂದು ಗೊತ್ತಾಗುತ್ತದೆ ಎಂದು ಪಕ್ಷ ಬಿಟ್ಟವರಿಗೆ ಬಿಸಿ ಮುಟ್ಟಿಸಿದರು. ಹಾಸನದಲ್ಲಿ ಯಾವಾಗ ಸಮಾವೇಶ ಮಾಡಬೇಕು ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ. ದೇವೇಗೌಡರು ಮೇಕೆದಾಟು ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಿದ್ದಾರೆ. ಹಾಸನದ ಔಟರ್ ರಿಂಗ್ ರೋಡ್ ಗೆ ೭೫೦ ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ,” ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ಬಿದರಿಕೆರೆ ಜಯರಾಂ, ಜಗದೀಶ್, ನಾಗರಾಜು ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page