Thursday, March 27, 2025

ಸತ್ಯ | ನ್ಯಾಯ |ಧರ್ಮ

“ಭಾರತದಲ್ಲಿ ಮುಸಲ್ಮಾನರಿಗೆ ಭದ್ರತೆ ಇಲ್ಲ” : ಅಮೇರಿಕಾದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವರದಿ

‘ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಪರಿಸ್ಥಿತಿ ಹದಗೆಡುತ್ತಿದೆ’ ಹೀಗೆಂದು ಹೇಳಿರುವುದು ಬೇರಾರೂ ಅಲ್ಲ. ಭಾರತ ಪ್ರಧಾನಿ ನರೇಂದ್ರ ಮೋದಿಯ ಆಪ್ತಮಿತ್ರ ಡೋನಾಲ್ಡ್ ಟ್ರಂಪ್ ಆಡಳಿತ ಇರುವ ಅಮೇರಿಕಾ..

ಹೌದು. ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಭಾರತದೊಳಗಿನ ಮುಸಲ್ಮಾನರ ಮೇಲಿನ ದ್ವೇಷ ರಾಜಕಾರಣವನ್ನು ಎತ್ತಿ ಹಿಡಿದು ಅಮೇರಿಕಾ ಇದರ ಬಗ್ಗೆ ಗಮನ ಹರಿಸಲು ಕೋರಿದೆ. ಅಷ್ಟೇ ಅಲ್ಲದೆ ಅಲ್ಲದೆ, ‘ಭಾರತದ ಗುಪ್ತಚರ ಸಂಸ್ಥೆಯಾದ ರಾ, ಸಿಖ್‌ ಪ್ರತ್ಯೇಕತವಾದಿಗಳ ಹತ್ಯೆ ನಡೆಸಲು ಸಂಚು ರೂಪಿಸುತ್ತಿದೆ ಎಂದೂ ಆರೋಪಿಸಿದೆ.

ಆದ ಕಾರಣ ಅಮೆರಿಕ ಆದಷ್ಟು ಬೇಗನೆ ಇದನ್ನು ಗಣನೆಗೆ ತೆಗೆದುಕೊಂಡು ಅದನ್ನು ನಿರ್ಬಂಧಿಸಬೇಕು’ ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಅಮೆರಿಕದ ಸರ್ಕಾರವನ್ನು ಒತ್ತಾಯಿಸಿದೆ. 

ಟ್ರಂಪ್‌ ಆಡಳಿತಕ್ಕೆ ವಾರ್ಷಿಕ ವರದಿ ಸಲ್ಲಿಸಿರುವ ಆಯೋಗ, ‘2024ರಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹಾಗೂ ತಾರತಮ್ಯ ಅಧಿಕವಾಗಿದ್ದು, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ’ ಎಂದು ಕಿಡಿಕಾರಿದೆ.

ಅಮೆರಿಕದಲ್ಲಿರುವ ಖಲಿಸ್ತಾನಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನು ಹತ್ಯೆಗೆ ಭಾರತದ ಗುಪ್ತಚರ ಮಾಜಿ ಅಧಿಕಾರಿ ವಿಕಾಶ್‌ ಯಾದವ್‌ ನಡೆಸಿದ್ದರು ಎಂದು ಅಮೆರಿಕ ಇತ್ತೀಚೆಗೆ ಆರೋಪಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಇದಕ್ಕೂ ಮುನ್ನ 2023ರ ಜೂ.18ರಂದು ಕೆನಡಾದಲ್ಲಿ ಹತ್ಯೆಯಾದ ಖಲಿಸ್ತಾನಿ ನಾಯಕ ಹರ್ದೀಪ್‌ ಸಿಂಗ್‌ ಕೊಲೆಯ ಹಿಂದೆ ಭಾರತದ ಗುಪ್ತಚರ ಸಂಸ್ಥೆಯ ಕೈವಾಡವಿದೆ ಎಂದು ಕೆನಡಾ ಆರೋಪಿಸಿತ್ತು.

ಸಹಜವಾಗಿಯೇ ಭಾರತದಲ್ಲಿ ಅಂತಹ ಯಾವುದೇ ಬೆಳವಣಿಗೆ ಇಲ್ಲ ಎಂದು ಭಾರತ ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ಸಂಕೇತವಾಗಿರುವ ಭಾರತದ ಸ್ಥಾನವನ್ನು ದುರ್ಬಲಗೊಳಿಸುವ ಯತ್ನಗಳು ಯಶಸ್ವಿಯಾಗುವುದಿಲ್ಲ. ಆಯೋಗಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನಿಜವಾದ ಕಾಳಜಿಯೇ ಇಲ್ಲ ಎಂದು ಪ್ರತ್ಯುತ್ತರ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page