Tuesday, April 1, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ!; ಮೈತ್ರಿಯೇ ಬಿಜೆಪಿಗೆ ಮುಳುವಾಗುವ ಸಾಧ್ಯತೆ

ಇನ್ನೇನು ಮುಂಬರುವ ತಮಿಳುನಾಡು ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಎಲ್ಲಾ ರೀತಿಯಲ್ಲಿ ಸಜ್ಜುಗೊಳ್ಳುವ ಹಂತದಲ್ಲೇ ಮಹತ್ವದ ಬೆಳವಣಿಗೆಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರಾಜೀನಾಮೆ ನೀಡುವ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಎಐಎಡಿಎಂಕೆ ನಾಯಕರೊಂದಿಗಿನ ಸಭೆ.

ಹೌದು. ಕಳೆದ ಹತ್ತು ದಿನಗಳ ಈಚೆಗಿನ ತಮಿಳುನಾಡು ರಾಜಕೀಯ ಬೆಳವಣಿಗೆ ನೋಡುತ್ತಾ ಹೋದರೆ ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣವಾಗಿ ಅಣ್ಣಾಮಲೈ ಒಂದು ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಸಹ ಅವರಿಗೆ ಯಾವುದೇ ಮಾಹಿತಿ ನೀಡದೆ ಕೇಂದ್ರ ಸಚಿವ ಅಮಿತ್ ಷಾ ಎಐಎಡಿಎಂಕೆ ನಾಯಕರೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ರಾಜಕೀಯವಾಗಿ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಆಡಳಿತ ಪಕ್ಷ ಡಿಎಂಕೆ ಮಾತ್ರವಲ್ಲದೆ ವಿರೋಧ ಪಕ್ಷ ಎಐಎಡಿಎಂಕೆ ಪಕ್ಷವನ್ನೂ ಸಹ ಸಮಾನವಾಗಿ ವಿರೋಧಿಸಿಕೊಂಡು ಬಂದಿದ್ದರು. ಈ ನಡುವೆ ಎಐಎಡಿಎಂಕೆ ನಾಯಕರು ಅಮಿತ್ ಷಾ ಭೇಟಿ ಸಂದರ್ಭದಲ್ಲಿ ಅಣ್ಣಾಮಲೈ ವಿರುದ್ಧ ದೂರಿರುವುದೂ ಅಲ್ಲದೇ ನೇರವಾಗಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲು ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿಯೂ ಹರಿದಾಡಿದೆ. ಇದು ಅಣ್ಣಾಮಲೈ ಅವರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.

2023ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ ಕಾರಣ ಎಂಬುದು ಎಐಎಡಿಎಂಕೆ ಪಕ್ಷದ ಅಸಮಾಧಾನಕ್ಕೆ ಪ್ರಮುಖ ಕಾರಣ. ಅಲ್ಲದೇ ಜಾತಿ ಸಮೀಕರಣಗಳ ಕಾರಣದಿಂದಲೂ ಅಣ್ಣಾಮಲೈ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುವ ಸಾಧ್ಯತೆಗಳಿವೆ.

ಅಷ್ಟೇ ಅಲ್ಲದೆ ರಾಜಕೀಯ ಲೆಕ್ಕಾಚಾರದ ಭಾಗವಾಗಿ ನೋಡಿದರೂ ಅಣ್ಣಾಮಲೈ ರಾಜೀನಾಮೆಗೆ ಎಐಎಡಿಎಂಕೆ ಬೇರೆ ರೀತಿಯಲ್ಲೂ ಪಟ್ಟು ಹಿಡಿದಿದೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದರೆ, ಎರಡೂ ಪಕ್ಷಗಳ ಮುಖಂಡರು ಒಂದೇ ಸಮುದಾಯದವರಾಗಿರಬಾರದು ಎಂಬುದು ಉಭಯ ಪಕ್ಷಗಳ ಲೆಕ್ಕಾಚಾರವಾಗಿದೆ.

ಅಣ್ಣಾಮಲೈ ಮತ್ತು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಇಬ್ಬರೂ ಪ್ರಬಲ ಹಿಂದುಳಿದ ಗೌಂಡರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಲ್ಲದೇ ಇಬ್ಬರೂ ಒಂದೇ ಪಶ್ಚಿಮ ಕೊಂಗು ಪ್ರದೇಶದವರಾಗಿರುವುದು, ಜಾತಿ ಮತ್ತು ಪ್ರದೇಶ ಸಮೀಕರಣದ ಲೆಕ್ಕಾಚಾರಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ.

ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಪಕ್ಷದ ತಂತ್ರವನ್ನು ಅನುಸರಿಸುವಂತೆ ಅಮಿತ್ ಶಾ ಅವರು ಅಣ್ಣಾಮಲೈ ಅವರಿಗೆ ಸೂಚನೆ ನೀಡಿದ್ದು, ಇದರ ಅನುಸಾರವಾಗಿ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ನೇರವಾಗಿ ಅಣ್ಣಾಮಲೈ ಅವರನ್ನು ಕಳೆದುಕೊಳ್ಳಲು ಬಿಜೆಪಿಗೂ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇರುವುದರಿಂದ ಅವರಿಗೆ ರಾಷ್ಟ್ರ ಮಟ್ಟದ ಸ್ಥಾನಮಾನದ ಜವಾಬ್ದಾರಿ ಎಂಬ ‘ಮೂಗಿಗೆ ತುಪ್ಪ ಸವರುವ’ ಕೆಲಸಕ್ಕೆ ಬಿಜೆಪಿ ಮುಂದಾಗಲಿದೆ. ಏನೇ ಆದರೂ ಎಐಎಡಿಎಂಕೆ ಮಾತು ಕೇಳಿ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ತಲೆದಂಡಕ್ಕೆ ಮುಂದಾದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಸಂಘಟನೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ನಡುವೆ ಕೊಯಮತ್ತೂರಿನಲ್ಲಿ ಮಾತನಾಡಿರುವ ಅಣ್ಣಾಮಲೈ, ಅಮಿತ್ ಶಾ ಅವರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. “ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೈಕಮಾಂಡ್‌ಗೆ ವರದಿಯನ್ನು ಸಲ್ಲಿಸಿದ್ದೇನೆ. ರಾಜ್ಯದ ಪರಿಸ್ಥಿತಿ ಮತ್ತು ಮುಂದಿನ ಕಾರ್ಯತಂತ್ರದ ಬಗ್ಗೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ..” ಎಂದು ಅಣ್ಣಾಮಲೈ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page