Saturday, June 15, 2024

ಸತ್ಯ | ನ್ಯಾಯ |ಧರ್ಮ

ಹೆಚ್ಚುತ್ತಿದೆ ದೇಶದಲ್ಲಿ ಆರ್ಥಿಕ ಅಸಮಾನತೆ

ಭಾರತ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಆದರೆ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ ಎಂದು ಆಕ್ಸ್ಫ್ಯಾಮ್ ವರದಿ ತಿಳಿಸಿದೆ. ಕಳೆದ ಮೂರು ದಶಕಗಳಿಂದ ಈ ಅಸಮಾನತೆ ತೀವ್ರವಾಗಿ ಹೆಚ್ಚಿದೆ. ದೇಶದ ಬಹುಪಾಲು ಸಂಪತ್ತು ಪಾರಂಪರಿಕವಾಗಿ ಹಾಗೂ ಕ್ರೋನಿ ಬಂಡವಾಳಶಾಹಿಯ ಕಾರಣಕ್ಕೆ ಸಿರಿವಂತರ ಖಜಾನೆಯಲ್ಲಿ ಶೇಖರಗೊಂಡಿದೆ.

ಸಿರಿವಂತರ ಸಂಪತ್ತು ಹೆಚ್ಚಿದಂತೆ ಬಡವರು ಕನಿಷ್ಟ ವೇತನ, ಉತ್ತಮ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆರೋಗ್ಯ ಸೌಲಭ್ಯಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಸಮಾನತೆ ಮಕ್ಕಳು ಹಾಗೂ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿದೆ.

ದೇಶದ 77% ಸಂಪತ್ತು 10% ಜನರ ಕೈಯಲ್ಲಿದೆ. 2017 ರಿಂದ ದೇಶದಲ್ಲಿ ಉತ್ಪತ್ತಿಯಾಗಿರುವ 73% ಸಂಪತ್ತು 1% ಜನರ ಪಾಲಾಗಿದೆ. ಇದರಿಂದಾಗಿ ದೇಶದ ಅರ್ಧ ಜನಸಂಖ್ಯೆ ಕೇವಲ 1% ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ.

ದೇಶದಲ್ಲಿ ಈಗ 119 ಬಿಲಿಯನೇರ್ ಗಳು ಇದ್ದಾರೆ. ಈ ಸಂಖ್ಯೆ 2009 ರಲ್ಲಿ 9 ಇದ್ದು 2017 ರಲ್ಲಿ 101 ಗೆ ಏರಿಕೆಯಾಗಿದೆ. 2018 ಹಾಗೂ 2022 ರ ಮಧ್ಯೆ ಭಾರತ ಪ್ರತೀದಿನ 70 ಹೊಸ ಬಿಲಿಯನೇರ್ ಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.

ಒಂದು ದಶಕದಲ್ಲಿ ಬಿಲಿಯನೇರ್ ಗಳ ಸಂಪತ್ತು ಸುಮಾರು 10 ರಷ್ಟು ಏರಿಕೆಯಾಗಿದೆ. ಇದು ಭಾರತದ 2018-19 ರ ಕೇಂದ್ರ ಸರ್ಕಾರದ ಬಜೆಟ್ ಗಿಂತ ಹೆಚ್ಚು, ಅಂದರೆ 22422 ಬಿಲಿಯನ್ ಗಿಂತ ಅಧಿಕ .

ಸಾಮಾನ್ಯ ಭಾರತೀಯ ಗುಣಮಟ್ಟದ ಆರೋಗ್ಯ ಸೌಲಭ್ಯ ಪಡೆಯಲು ಹೆಣಗಾಡುತ್ತಿದ್ದಾನೆ. ವಾರ್ಷಿಕವಾಗಿ ಆರೋಗ್ಯ ಸೇವೆಗಳಿಗೆ ಹಣವನ್ನು ವ್ಯಯಿಸುವ 63 ಮಿಲಿಯನ್ ಭಾರತೀಯರು ಬಡತನಕ್ಕೆ ದೂಡಲ್ಪಟ್ಟಿದ್ದಾರೆ, ಅಂದರೆ ಪ್ರತೀ ಸೆಕೆಂಡ್ ಗೆ ಇಬ್ಬರು!

ಒಂದು ವರ್ಷದಲ್ಲಿ ಭಾರತದ ಗಾರ್ಮೆಂಟ್ ಕಂಪನಿಗಳಲ್ಲಿ ಉನ್ನತ ಮಟ್ಟದ ಉದ್ಯೋಗಿಯೊಬ್ಬ ಪಡೆಯುವ ವೇತನದಷ್ಟು ಮೊತ್ತವನ್ನು ಕನಿಷ್ಟ ವೇತನ ಪಡೆಯುವ ಗ್ರಾಮೀಣ ಭಾಗದ ದಿನಗೂಲಿ ನೌಕರನೊಬ್ಬ ಪಡೆಯಲು ಇನ್ನೂ 941 ವರ್ಷಗಳು ಬೇಕು!

ಭಾರತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ವ್ಯಯಿಸುವ ಮೊತ್ತ ಪ್ರಪಂಚದಲ್ಲಿ ಅತ್ಯಂತ ಕಡಿಮೆಯಾಗಿದೆ. ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಅಭಿವೃದ್ದಿಪಡಿಸುವ ಬದಲು ಶಕ್ತಿಶಾಲಿ ಆರೋಗ್ಯ ಉದ್ದಿಮೆಗಳನ್ನು ಬೆಳೆಸುತ್ತಿದೆ. ಇದರಿಂದ ಗುಣಮಟ್ಟದ ಆರೋಗ್ಯ ಸೇವೆ ಜನಸಾಮಾನ್ಯನ ಕೈಗೆ ಎಟುಕುತ್ತಿಲ್ಲ. ಹೆಲ್ತ್ ಟೂರಿಸಂನಲ್ಲಿ ಭಾರತ ಮೇಲ್ಮಟ್ಟದಲ್ಲಿ ಇದ್ದರೂ ಭಾರತದ ಬಡ ರಾಜ್ಯದಲ್ಲಿ ಶಿಶುಗಳ ಸಾವಿನ ಪ್ರಮಾಣ ಸಬ್ ಸಹರನ್ ಆಫ್ರಿಕಾಗಿಂತ ಹೆಚ್ಚಿದೆ.

ಜಾಗತಿಕವಾಗಿ ಭಾರತದಲ್ಲಿ ತಾಯಂದಿರ ಸಾವಿನ ಪ್ರಮಾಣ 17%, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಮಾಣ 21%.

ವರದಿ: ಚರಣ್‌ ಐವರನಾಡು

Related Articles

ಇತ್ತೀಚಿನ ಸುದ್ದಿಗಳು