Monday, April 28, 2025

ಸತ್ಯ | ನ್ಯಾಯ |ಧರ್ಮ

‘ಅಮಾಯಕ ನಾಗರಿಕರ ಮೃತ ದೇಹಗಳ ಮೇಲೆ ರಾಜ್ಯದ ಸ್ಥಾನಮಾನ ನೀಡಿ ಎಂದು ಒತ್ತಾಯಿಸುವುದಿಲ್ಲ’: ಒಮರ್ ಅಬ್ದುಲ್ಲಾ

ಜಮ್ಮು-ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ಸಮಯದಲ್ಲಿ ರಾಜ್ಯದ ಸ್ಥಾನಮಾನದ ಬಗ್ಗೆ ಮಾತನಾಡುವುದಿಲ್ಲ ಎಂದರು. 

ವಿಧಾನಸಭೆಯಲ್ಲಿ ಮಾತನಾಡಿದ ಅವರು “ರಾಜ್ಯ ಸ್ಥಾನಮಾನ ಸ್ಥಾಪನೆ ನಮ್ಮ ಪ್ರಮುಖ ಉದ್ದೇಶವಾದರೂ ಸದ್ಯಕ್ಕೆ ಆ ಬಗ್ಗೆ ಪ್ರಸ್ತಾಪಿಸುವುದಿಲ್ಲ, ಮತ್ತೊಂದು ಬಾರಿಗೆ ಈ ಬೇಡಿಕೆಯನ್ನು ವ್ಯಕ್ತಪಡಿಸುತ್ತೇನೆ. ಶವಗಳ ಮೇಲೆ ರಾಜ್ಯದ ಸ್ಥಾನಮಾನ ನೀಡಿ ಎಂದು ಕೇಳುವುದಿಲ್ಲ. ಹಾಗೆಯೇ ಕೇಂದ್ರದಿಂದ ರಾಜ್ಯದ ಸ್ಥಾನಮಾನವನ್ನು ಒತ್ತಾಯಿಸಲು ನಾನು ಇಂದಿನ ಪರಿಸ್ಥಿತಿಯನ್ನು ಬಳಸಿಕೊಳ್ಳುವುದಿಲ್ಲ” ಎಂದು ಹೇಳಿದರು. 

ಈ ಮೂಲಕ 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ರಾಜಕೀಯಗೊಳಿಸುವುದನ್ನು ಅವರು ತಳ್ಳಿಹಾಕಿದರು.

“ಜನರು ಸರ್ಕಾರವನ್ನು ಬೆಂಬಲಿಸಿದಾಗ ಉಗ್ರವಾದ ಮತ್ತು ಭಯೋತ್ಪಾದನೆ ಕೊನೆಗೊಳ್ಳುತ್ತದೆ. ನಾವು ಬಂದೂಕುಗಳನ್ನು ಬಳಸಿ ಉಗ್ರವಾದವನ್ನು ನಿಯಂತ್ರಿಸಬಹುದು, ಆದರೆ ಜನರು ನಮ್ಮನ್ನು ಬೆಂಬಲಿಸಿದಾಗ ಮಾತ್ರ ಅದು ಕೊನೆಗೊಳ್ಳುತ್ತದೆ. ಈಗ ಜನರು ಆ ಹಂತವನ್ನು ತಲುಪುತ್ತಿದ್ದಾರೆಂದು ತೋರುತ್ತದೆ” ಎಂದು ಒಮರ್ ಅಬ್ದುಲ್ಲಾ ಹೇಳಿದರು.

“ನಾನು ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ಹೊಂದಿಲ್ಲದಿದ್ದರೂ, ಕಾಶ್ಮೀರಕ್ಕೆ ಭೇಟಿ ನೀಡಲು ಪ್ರವಾಸಿಗರನ್ನು ಆಹ್ವಾನಿಸಿದೆ. ಅವರ ಆತಿಥೇಯನಾಗಿ, ಅವರನ್ನು ನೋಡಿಕೊಳ್ಳುವುದು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ಆದರೆ ಈಗ ಪ್ರವಾಸಿಗರಿಗೆ ವಿಷಾದಿಸಲು ನನಗೆ ಪದಗಳಿಲ್ಲ” ಎಂದು ಹೇಳಿದರು.

ಸಂತ್ರಸ್ತರ ನೋವಿಗೆ ದುಃಖ ವ್ಯಕ್ತಪಡಿಸಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ, “ಕೆಲವೇ ದಿನಗಳ ಹಿಂದೆ ವಿವಾಹವಾದ ನೌಕಾಪಡೆಯ ಅಧಿಕಾರಿಯ ಪತ್ನಿಗೆ ನಾನು ಏನು ಹೇಳಬೇಕು? ಅವರಿಗೆ ಸಾಂತ್ವನ ಹೇಳಲು ನನ್ನಲ್ಲಿ ಪದಗಳಿಲ್ಲ. ಮೃತಪಟ್ಟ ಅನೇಕ ಕುಟುಂಬ ಸದಸ್ಯರು ಮಾಡಿದ ಅಪರಾಧವೇನು ಎಂದು ನನ್ನನ್ನು ಆನೇಕರು ಕೇಳಿದರು? ಆದರೆ ನನ್ನಲ್ಲಿ ಉತ್ತರವಿರಲಿಲ್ಲ” ಎಂದು ಹೇಳಿದರು.

ಕಾಶ್ಮೀರಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಒಮರ್ ಅಬ್ದುಲ್ಲಾ ಅವರು ದೇಶಾದ್ಯಂತವಿರುವ ಎಲ್ಲ ರಾಜ್ಯ ಸರ್ಕಾರಗಳಿಗೆ ಧನ್ಯವಾದ ಅರ್ಪಿಸಿದರು.

ತಕ್ಷಣದ ಕ್ರಮಗಳನ್ನು ಕೈಗೊಂಡು ಅಹಿತಕರ ಘಟನೆಗಳನ್ನು ತಡೆಗಟ್ಟಿದ ಎಲ್ಲ ರಾಜ್ಯ ಸರ್ಕಾರಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page