Saturday, May 10, 2025

ಸತ್ಯ | ನ್ಯಾಯ |ಧರ್ಮ

ಜಾಲತಾಣಗಳನ್ನೂ ಮೀರುವಂತೆ ಮಾಧ್ಯಮಗಳಲ್ಲಿ ಯುದ್ಧದ ಬಗ್ಗೆ ಸಾಲು ಸಾಲು ಸುಳ್ಳು ಸುದ್ದಿ; ಕಡಿವಾಣ ಹಾಕುವವರ್ಯಾರು?

ದೇಶದಲ್ಲಿ ಏನೇ ಉದ್ವಿಗ್ನ ವಾತಾವರಣ ಸೃಷ್ಟಿಯಾದರೂ ಮೊದಲ ತಲೆನೋವಾಗಿ ಪರಿಣಮಿಸುವುದು ಸುಳ್ಳು ಸುದ್ದಿಗಳ ಹಾವಳಿ. ಈಗಲೂ ಸಹ ಭಾರತ ಪಾಕಿಸ್ತಾನದ ನಡುವೆ ನಡೆಯುತ್ತಿರುವ ದಾಳಿಯ ಬಗ್ಗೆ ಸುಳ್ಳುಗಳ ಮಹಾಪೂರ ಈಗ ಎರಡೂ ದೇಶಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಷ್ಟೋ ವರ್ಷಗಳ ಹಳೆಯ ಬಾಂಬ್ ದಾಳಿ, ಸಿಲಿಂಡರ್ ಸ್ಪೋಟ ಸೇರಿದಂತೆ, ಯೂಟ್ಯೂಬ್ ನಲ್ಲಿ ಬರುವ ವಿಡಿಯೋ ಗೇಮ್ ವಿಡಿಯೋಗಳೂ ಈಗ ಸುಳ್ಳು ಸುದ್ದಿಗಳ ದೊಡ್ಡ ಸರಕಾಗಿ ಮಾರ್ಪಟ್ಟಿದೆ.

ಈವರೆಗೆ ಜಾಲತಾಣಗಳಷ್ಟೇ ಸುಳ್ಳು ಸುದ್ದಿಯ ಕೇಂದ್ರಬಿಂದುವಾಗಿದ್ದು ಈಗ ಮುಖ್ಯವಾಹಿನಿ ಮಾಧ್ಯಮಗಳೂ ಪೈಪೋಟಿಗೆ ಬಿದ್ದಂತೆ ಸುಳ್ಳು ಸುದ್ದಿ, ಸುಳ್ಳು ವಿಡಿಯೋ ಹಂಚಲು ಹೊರಟಿವೆ.

ಪಾಕಿಸ್ಥಾನದ ಕರಾಚಿಯ ಬಂದರನ್ನು ಭಾರತೀಯ ನೌಕಾದಳ ದಾಳಿಯ ಮೂಲಕ ಧ್ವಂಸಗೊಳಿಸಿದೆ ಎಂದು ಹೇಳಿ ಜಾಲತಾಣಗಳ ಸುಳ್ಳನ್ನೂ ಮೀರಿಸುವಂತೆ ರಾಜ್ಯದ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳು ಸುದ್ದಿ ಮಾಡಿದ್ದವು. ವಾಸ್ತವದಲ್ಲಿ ಇದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿರುವ ಫಿಲಿಡೆಲ್ಫಿಯಾ ದಲ್ಲಿ ವಿಮಾನ ಪತನಗೊಂಡಿದ್ದ ವಿಡಿಯೋಗಳು ಎಂದು ಗೊತ್ತಾಗಿದೆ.

ಜಮೀನಿನಲ್ಲಿ ಬೆಂಕಿ ಹೊತ್ತಿಕೊಂಡ ಹಳೆಯ ವಿಡಿಯೋ ಒಂದನ್ನು ಎತ್ತಿಕೊಂಡು ಪಂಜಾಬಿನ ಜಲಂಧರ್‌ನಲ್ಲಿ ಪಾಕಿಸ್ತಾನ ನಡೆಸಿದ ಡ್ರೋನ್‌ ದಾಳಿ ಎಂಬ ಸುದ್ದಿಯೂ ಸೋಷಿಯಲ್ ಮೀಡಿಯಾ ಮತ್ತು ಹಲವು ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿತ್ತು. ಪಿಟಿಐ ಸಂಸ್ಥೆ ನಡೆಸಿದ ಫ್ಯಾಕ್ಟ್ ಚೆಕ್ ವರದಿಯಲ್ಲಿ ಇದೊಂದು ಸುಳ್ಳು ಸುದ್ದಿ ಎಂದು ಬಯಲಾಗಿದೆ.

ಜಮ್ಮುವಿನ ರಜೌರಿ ಯಲ್ಲಿ ಆತ್ಮಾಹುತಿ ದಾಳಿ ನಡೆದಿದೆ ಎಂದೂ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಗಳು ಹರಿದಾಡಿತ್ತು. ಭಾರತೀಯ ಸೇನೆ ಹಾಗೂ ಪಿಐಬಿ ಈ ಬಗ್ಗೆ ಕೊಟ್ಟ ಸ್ಪಷ್ಟನೆ ಯಿಂದ ಇದೊಂದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ.

ಇನ್ನು 2-3 ದಿನಗಳು ದೇಶಾ ದ್ಯಂತ ಎಟಿಎಂಗಳು ಕಾರ್ಯ ನಿರ್ವಹಿಸುವು ದಿಲ್ಲ ಎಂದೂ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಆದರೆ, ಇದು ಸುಳ್ಳು. ಎಟಿಎಂ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಅಲ್ಲದೇ ಎಟಿಎಂಗಳಲ್ಲಿ ಸಾಕಷ್ಟು ನಗದೂ ಇವೆ ಎಂದು ಸರ್ಕಾರದ ಜೊತೆಗೆ ವಿವಿಧ ಬ್ಯಾಂಕುಗಳೂ ಸ್ಪಷ್ಟನೆ ನೀಡಿವೆ. ಹಲವು ವದಂತಿಗಳ ಬಗ್ಗೆ ಸರ್ಕಾರವು ಸ್ಪಷ್ಟನೆ ನೀಡಿದೆ. ಅಲ್ಲದೇ ಇಂತಹ ಹಳೆಯ ವಿಡಿಯೋಗಳನ್ನು, ಸುಳ್ಳುಸುದ್ದಿಗಳನ್ನು ಹರಡದಂತೆ ಎಚ್ಚರಿಕೆ ಯಿಂದರಲೂ, ಜವಾಬ್ದಾರಿಯಿಂದ ವರ್ತಿಸಲೂ ಸರ್ಕಾರ ತಿಳಿಸಿದೆ.

ಎಲ್ಲಕ್ಕಿಂತ ಮೇಲಾಗಿ ಒಂದು ದೇಶದಲ್ಲಿ ಯುದ್ಧ ಘೋಷಣೆ ಆಗಿದೆ ಎಂದು ಮೊಟ್ಟ ಮೊದಲು ತಿಳಿಸುವುದು ಆ ದೇಶದ ರಾಷ್ಟ್ರಪತಿ. ಆದರೆ ಜಾಲತಾಣಗಳು ಈಗಾಗಲೇ ಭಾರತ ಪಾಕಿಸ್ತಾನ ಯುದ್ಧ ಘೋಷಣೆಯನ್ನೇ ಮಾಡಿಬಿಟ್ಟಿವೆ. ರಾತ್ರೋರಾತ್ರಿ ʼindiapakistanwar’ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಬರೋಬ್ಬರಿ ಆರು ಲಕ್ಷ ಟ್ವೀಟ್‌ಗಳು ದಾಖಲೆಯಾಗಿದ್ದವು. ಇನ್ನು ಸುದ್ದಿ ವಾಹಿನಿಗಳಲ್ಲಿ ರಾತ್ರಿ ಎಂಟು ಗಂಟೆಗೆ ರಾಜಸ್ಥಾನ್‌ ಬಳಿ ಪಾಕ್‌ ಹಾಗೂ ಭಾರತದ ನಡುವೆ ಡ್ರೋನ್‌ ಜಟಾಪಟಿ ಎಂದು ಶುರುವಾದ ಅವರೇ ಹೇಳಿಕೊಳ್ಳುವ ʼಯುದ್ಧದ ಬ್ರೇಕಿಂಗ್‌ ನ್ಯೂಸ್‌ʼ ತಡರಾತ್ರಿಯಾದರೂ ನಿಲ್ಲಲಿಲ್ಲ.

ಪಾಕ್‌ ಪೈಲಟ್‌ ಜೀವಂತವಾಗಿ ಸೇನೆ ವಶಕ್ಕೆ ಹೀಗೆ ಬಾಯಿಗೆ ಬಂದ ಸುಳ್ಳುಗಳನ್ನು ಬ್ರೇಕಿಂಗ್‌ ನ್ಯೂಸ್‌ ಮಾಡಿಬಿಟ್ಟಿದ್ದರು. ಇದರ ಜೊತೆಗೆ ಪಾಕ್‌ ಪ್ರಧಾನಿ ಮನೆ ಬಳಿ ದಾಳಿ, ದಾಳಿಯ ಭೀಕರತೆಗೆ ದಾವೂದ್ ಇಬ್ರಾಹಿಂ ಕಾಲ್ಕಿತ್ತದ್ದು, ಲಾಹೋರ್‌ ನಗರದ ಮೇಲೆ ದಾಳಿ ಕಟ್ಟಡಗಳು ಧ್ವಂಸದಂತಹ ಸುಳ್ಳು ಸುದ್ದಿಗಳನ್ನು ಈಗಲೂ ಮಾಧ್ಯಮಗಳು ಜನರ ಮನಸ್ಸಿನಲ್ಲಿ ಸತ್ಯ ಎಂಬಂತೆ ಅಚ್ಚೊತ್ತಿಸಿವೆ.

ಒಟ್ಟಿನಲ್ಲಿ ಈ ಉದ್ವಿಗ್ನ ಸ್ಥಿತಿ ತಣ್ಣಗಾಗುವ ಮೊದಲು ಮಾಧ್ಯಮಗಳು ಮತ್ತು ಜಾಲತಾಣಗಳು ಎರಡೂ ದೇಶಗಳ ಮೇಲೆ ಅಣುಬಾಂಬ್ ಹಾಕಿದರೂ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಯುದ್ಧದ ಬಗ್ಗೆ ವರದಿ ಪ್ರಸಾರ ಮಾಡದಂತೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಸ್ಪಷ್ಟ ಸಂದೇಶ ನೀಡಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಈ ಮಾಧ್ಯಮಗಳು ನೀಡಿಲ್ಲ.

ವದಂತಿಗಳು ಹರಡದಿರಲು ನೀವೇನು ಮಾಡಬೇಕು?
ಎಲ್ಲ ಸುದ್ದಿ ಮೂಲಗಳನ್ನೂ ನಂಬದೇ, ಸರ್ಕಾರದ ಮಾಹಿತಿ ಪ್ರಸಾರ ಮಾಡುವ ಮಾಧ್ಯಮಗಳನ್ನಷ್ಟೇ ಅವಲಂಬಿಸುವುದು
-ಯಾವುದೇ ಸುದ್ದಿ ಬಂದಾಗಲೂ ಅದನ್ನು ಪರಿಶೀಲಿಸದೇ ಏಕಾಏಕಿ ಅದನ್ನು ಇನ್ನೊಂದೆಡೆ ಹಂಚಿಕೊಳ್ಳದಿರುವುದು
-ದಾಳಿ, ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಸುದ್ದಿಗಳನ್ನು ಸರ್ಕಾರ ತಿಳಿಸುವ ಮುನ್ನವೇ ಹಂಚಿಕೊಳ್ಳದಿರುವುದು
-ಸರ್ಕಾರಿ ಮೂಲದ ಮಾಹಿತಿಗಳನ್ನಷ್ಟೇ ನಂಬುವುದು ಹಾಗೂ ಆ ಸುದ್ದಿಗಳನ್ನಷ್ಟೇ ಹಂಚಿಕೊಳ್ಳುವುದು

Related Articles

ಇತ್ತೀಚಿನ ಸುದ್ದಿಗಳು

You cannot copy content of this page