Saturday, May 31, 2025

ಸತ್ಯ | ನ್ಯಾಯ |ಧರ್ಮ

ಸಾವು, ಕೊಲೆಗಳಲ್ಲಿ ಯಾರೆ ರಾಜಕೀಯ ಮಾಡಿದ್ರು ಅಕ್ಷಮೆ ಅಪರಾಧಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರೀತಂಗೌಡ ತಿರುಗೇಟು


ಹಾಸನ : ಕೋಮು ಭಾವನೆಯನ್ನು ಹೊತ್ತು ರಾಜ್ಯದಲ್ಲಿ ಅಶಾಂತಿ ಮೂಡಿಸುವುದು, ಸಾವಿನಲ್ಲಿ, ಕೊಲೆಗಳಲ್ಲಿ ರಾಜಕೀಯ ಮಾಡೋದು ಯಾರೇ ಮಾಡಿದ್ರು ಆಕ್ಷಮೆ ಅಪರಾಧವಾಗಿದ್ದು, ರಾಜ್ಯ ಸರಕಾರವು ಓಲೈಕ ರಾಜಕಾರಣ ಬಿಡಬೇಕು. ಇನ್ನು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿಕೆ ಕೊಡುವುದರ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ತಿರುಗೇಟು ನೀಡಿದರು. ನಗರದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಂಗಳೂರಲ್ಲಿ ಅಥವಾ ಬೇರೆ ಎಲ್ಲೇ ಆಗಲೀ ಕೋಮುದ್ವೇಷ ಬಿತ್ತಿ ಅಶಾಂತಿ ನಿರ್ಮಾಣ ಮಾಡುವುದು ಅಕ್ಷಮ್ಯ ಅಪರಾಧ, ಇದು ಯಾರಿಗೂ ಶೋಭೆ ತರುವುದಿಲ್ಲ. ಈ ರೀತಿಯ ಆಡಳಿತದಿಂದ ಯಾರೇ ಬಲಿಯಾದರೂ ಅಮೂಲ್ಯ ಜೀವಕ್ಕೆ ಬೆಲೆ ಕಟ್ಟಲು ಆಗಲ್ಲ. ಹೀಗಾಗಿ ಆಡಳಿತ ನಡೆಸುವ ಸರ್ಕಾರ ಗಂಭೀರವಾಗಿ ನಡೆದುಕೊಳ್ಳಬೇಕು.

ಕಾನೂನು ಸುವ್ಯವಸ್ಥೆ ಹತೋಟಿಗೆ ತರಬೇಕು ಎಂದರೆ ಎಲ್ಲರೂ ಜವಾಬ್ದಾರಿಯಿಂದ ಮಾತನಾಡಬೇಕು ಎಂ ಕರಾವಳಿ ಭಾಗದಲ್ಲಿ ಕೋಮುದ್ವೇಷ ಹೆಚ್ಚಾಗಲು ಬಿಜೆಪಿ ಕಾರಣ ಎಂಬ ಸಚಿವ ದಿನೇಶ್ ಗುಂಡೂರಾವ್ ಅವರ ಆರೋಪಕ್ಕೆ, ಸಾವಿನ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಕುಟುಕಿದರು. ಕಾನೂನನ್ನು ಬಿಗಿ ಪಡಿಸಿ ಯಾರು ತಪ್ಪು ಮಾಡುತ್ತಾರೋ ಅವರನ್ನು ಕಠಿಣವಾಗಿ ದಂಡಿಸಬೇಕು. ಓಲೈಕೆ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ಧರ್ಮದವರ ಪ್ರಾಣಕ್ಕೂ ಬೆಲೆ ಇದೆ ಎಂಬುದನ್ನು ಮನಗಾಣಬೇಕು ಎಂದರು. ಕಾನೂನು ಮೀರಿದರೆ ಹೀಗೆ: ಹುಬ್ಬಳ್ಳಿ ಗಲಭೆ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದಿದ್ದನ್ನು ರದ್ದು ಮಾಡಿರುವ ಹೈಕೋರ್ಟ್ ಆದೇಶ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ನಡೆಸುವವರು ನಾವೇ ಸಾರ್ವಭೌಮರು ಅಂದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿನಲ್ಲಿ ಅವಕಾಶ ಇಲ್ಲದೇ ಇರುವುದನ್ನು ಮಾಡಿದರೆ ಏನಾಗಲಿದೆ ಎಂಬುದಕ್ಕೆ ಹೈ ತೀರ್ಪು ಉದಾಹರಣೆ. ಈ ರೀತಿಯ ತೀರ್ಮಾನ ಕೈಗೊಳ್ಳುವ ಮುನ್ನ 10 ಬಾರಿ ಯೋಚಿಸಬೇಕು ಎಂದರು. ಸರ್ಕಾರದ ಇದೇ ರೀತಿಯ ಯಡವಟ್ಟುಗಳಿಂದ ಮಂಗಳೂರಿನಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಆಗುತ್ತಿದೆ ಎಂದು ಉದಾಹರಿಸಿದರು. ಕೋಮುದಳ್ಳುರಿ ಬಿತ್ತುವ, ಅಶಾಂತಿ ಸೃಷ್ಟಿಸಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ಮೇಲಿನ ಕೇಸ್ ವಾಪಸ್ ಪಡೆಯುವುದು ಸರಿಯಲ್ಲ ಎಂದು ಹೇಳಿದರು.
ಬಿಜೆಪಿಯಿಂದ ಮಾಜಿ ಸಚಿವರು, ಹಾಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಉಚ್ಚಾಟನೆ ಹಿಂದೆಯೇ ಆಗಬೇಕಿತ್ತು. ಇದು ಕಾರ್ಯಕರ್ತರ ಆಶಯವೂ ಆಗಿತ್ತು. ಅವರ ನಡವಳಿಕೆ ಅದನ್ನು ತೋರಿಸಿಕೊಡುತ್ತಿತ್ತು. ಅಂತಿಮವಾಗಿ ಪಕ್ಷ ತೀರ್ಮಾನ ಕೈಗೊಂಡಿದೆ. ಯಾರೇ ಆಗಲಿ, ಪಕ್ಷದ ವಿರೋಧಿ ಚಟುವಟಿಕೆ ನಡೆಸಿದರೆ ಇದೇ ಶಿಕ್ಷೆಯಾಗುತ್ತದೆ ಎಂಬುದನ್ನು ಕೇಂದ್ರ ನಾಯಕರು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.


ಹಾಸನ ಜಿಲ್ಲೆಯಲ್ಲಿ ಮುಂದಿನ ಜಿಪಂ-ತಾಪಂ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ ಮುಂದುವರಿಕೆ ಕುರಿತ ಪ್ರಶ್ನೆಗೆ ಇದನ್ನು ರಾಜ್ಯಮಟ್ಟದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಉತ್ತರಿಸಿದರು. ಇದೇ ವೇಳೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದಾರೆ. ಎಲ್ಲ ಪಕ್ಷಗಳ ನಾಯಕರು ಹೀಗೆ ಹೇಳೋದು ಸಹಜ, ನಾವೂ ಹೇಳುತ್ತೇವೆ, ಜನತಾದಳದವರೂ ಹೇಳುತ್ತಾರೆ, ಆದರೆ ಚುನಾವಣೆ ಸಂದರ್ಭದಲ್ಲಿ ಜನರ ವಿಶ್ವಾಸ ಯಾರಿಗೆ ಇರುತ್ತೋ ಅವರು ಗೆಲ್ಲುತ್ತಾರೆ ಎಂದರು. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಏಳೂ ಸ್ಥಾನ ಗೆಲ್ಲಲಿದೆ. ಹಾಗೆಯೇ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಪ್ರೀತಂ ವಿಶ್ವಾಸ ವ್ಯಕ್ತಪಡಿಸಿದರು. 136 ಸ್ಥಾನ ಗೆದ್ದಾಗಲೇ ಹಾಸನದಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದು ಸ್ಥಾನ ಮಾತ್ರ. ಇನ್ನ ಮುಂದಿನ ದಿನಗಳಲ್ಲಿ 36 ಗೆಲ್ಲೋ ಸಂದರ್ಭದಲ್ಲಿ ಎಷ್ಟು ಗೆಲ್ಲಬಹುದು ನೀವೇ ಯೋಚಿಸಿ ಎಂದು ವ್ಯಂಗ್ಯವಾಗಿ ಮಾತನಾಡಿದರು. ಇದೆ ವೇಳೆ ಬಿಜೆಪಿ ಮುಖಂಡರಾದ ಪ್ರಸನ್ನಕುಮಾರ್, ಹರ್ಷಿತ್, ಯೋಗೇಶ್, ಮಂಜು, ಬಿ.ಹೆಚ್. ನಾರಾಯಣಗೌಡ, ಪ್ರೀತಿವರ್ಧನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page