Monday, June 2, 2025

ಸತ್ಯ | ನ್ಯಾಯ |ಧರ್ಮ

ಇಂದಿನಿಂದ ರಾಜ್ಯಾದ್ಯಂತ “ಗೃಹ ಆರೋಗ್ಯ” ಯೋಜನೆ ವಿಸ್ತರಣೆ

ರಾಜ್ಯದಲ್ಲಿ ‘ಗೃಹ ಆರೋಗ್ಯ’ ಯೋಜನೆ ಸೋಮವಾರದಿಂದ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರತೀ ಮನೆ ಮನೆಗೂ ಭೇಟಿ ನೀಡುವ ಮೂಲಕ 30 ವರ್ಷ ಮೇಲ್ಪಟ್ಟವರ ಸಾಂಕ್ರಾಮಿಕ ಅಲ್ಲದ ರೋಗಗಳ ತಪಾಸಣೆ ನಡೆಸುವುದು, ಔಷಧ ವಿತರಣೆ, ಅಗತ್ಯ ಚಿಕಿತ್ಸೆಗೆ ಸಹಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸೋಮವಾರ ವಿಕಾಸಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಜನೆ ಕುರಿತು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸುವ ಜೊತೆಗೆ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಅಧಿಕೃತ ಘೋಷಣೆ ಮಾಡಲಿದ್ದಾರೆ.

ಈ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆ ತಂದು ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಸಹಾಯದಿಂದ ಮನೆ ಬಾಗಿಲಿಗೆ ತೆರಳಿ ತಪಾಸಣೆ ನಡೆಸುತ್ತಾರೆ. ಕಾಯಿಲೆಯನ್ನು ಮೊದಲೇ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಈ ಕಾರ್ಯಕ್ರಮ ಆರಂಭದ ಹಿಂದಿನ ಉದ್ದೇಶವಾಗಿದೆ.

ಸುಮಾರು 100 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ವಿಸ್ತರಿಸುತ್ತಿದ್ದು, ಪ್ರತಿ ಸಿಬ್ಬಂದಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ಪ್ರತಿದಿನ ಸುಮಾರು 15 ಮನೆಗಳನ್ನು ಪರಿಶೀಲಿಸುವ ಗುರಿ ಹೊಂದಿದೆ. ಭೇಟಿ ಸಮಯದಲ್ಲಿ ಮೌಖಿಕ, ಗರ್ಭಕಂಠದ ಮತ್ತು ಸ್ತನ ಕ್ಯಾನ್ಸರ್‌ಗಳ ಮೌಲ್ಯಮಾಪನಗಳನ್ನು ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೃಹ ಆರೋಗ್ಯ ಯೋಜನೆಯಡಿಯಲ್ಲಿ 14 ರೋಗಗಳ ತಪಾಸಣೆಗೆ ಆರೋಗ್ಯ ಇಲಾಖೆ ಮುಂದಾಗಲಿದೆ. ರಾಜ್ಯದ ಜನಸಂಖ್ಯೆಯ ಶೇ.26.9ಕ್ಕೂ ಅಧಿಕ ಮಂದಿ ರಕ್ತದ ಒತ್ತಡ, ಶೇ.15.6 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರು ರಕ್ತದೊತ್ತಡ ಮತ್ತು ಮಧುಮೇಹವನ್ನು ನಿರ್ಲಕ್ಷಿಸುತ್ತಿದ್ದು, ಖಾಯಿಲೆ ತಪಾಸಣೆ ಜೊತೆಗೆ ಅವುಗಳ ಬಗ್ಗೆ ಅರಿವು ಮೂಡಿಸುವುದೂ ಈ ಯೋಜನೆಯ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page