Wednesday, June 11, 2025

ಸತ್ಯ | ನ್ಯಾಯ |ಧರ್ಮ

ಈದ್‌ ಸಡಗರದಲ್ಲಿ ನೆನಪಿಸಿಕೊಳ್ಳಬೇಕಾದ ಒಬ್ಬ ಔರಂಗಜೇಬ್

‘ಈತ ಮೊಘಲ್‌ ಚಕ್ರವರ್ತಿಯೂ ಅಲ್ಲ, ಪಾಕಿಸ್ತಾನ ವಾಯುಪಡೆಯ ಏರ್ ವೈಸ್ ಮಾರ್ಷಲ್ ಕೂಡ ಅಲ್ಲ. 2018ರಲ್ಲಿ ತನ್ನ ಕುಟುಂಬದೊಂದಿಗೆ ಈದ್‌ ಹಬ್ಬ ಆಚರಿಸಲೆಂದು ಹೊರಟಿದ್ದ ಓರಂಗಜೇಬ್‌ ಖಾನ್‌ ಅವರನ್ನು ಭಯೋತ್ಪಾದಕರು ಅಪಹರಿಸಿದ ರೋಚಕ ಕಥೆ ಇದು..’ ರಾಜೇಶ್ ಕಾಲಿಯಾ ಅವರ The WIRE ನಿಯತಕಾಲಿಕೆಯ ಬರಹದ ಅನುವಾದ,

2018ರಲ್ಲಿ ತನ್ನ ಕುಟುಂಬದೊಂದಿಗೆ ಈದ್‌ ಹಬ್ಬ ಆಚರಿಸಲೆಂದು ಹೊರಟಿದ್ದ ಓರಂಗಜೇಬ್‌ ಖಾನ್‌ ಅವರನ್ನು ಭಯೋತ್ಪಾದಕರು ಅಪಹರಿಸಿ ಚಿತ್ರಹಿಂಸೆ ನೀಡಿ, ಕೊಂದು ಹಾಕಿದ್ದರು. ರೈಫಲ್‌ ಮ್ಯಾನ್‌ ಆಗಿದ್ದ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಗಿತ್ತು.

ಔರಂಗಜೇಬ್‌ ಎಂದೇ ಗುರುತಿಸಲ್ಪಟ್ಟಿರುವ ಮೊಘಲ್‌ ಚಕರ್ವರ್ತಿ ಮುಹಿಯದ್ದೀನ್‌ ಮುಹಮ್ಮದ್‌ ಔರಂಗಜೇಬನ್ನು 1707ರಲ್ಲಿ ಮಹಾರಾಷ್ಟ್ರದ ಖುಲ್ದಾಬಾದ್‌ ಎಂಬಲ್ಲಿ ಸೂಫಿ ಸಂತ ಬುರ್ಹಾನುದ್ದೀನ್‌ ಗರೀಬ್‌ ಅವರ ದರ್ಗಾದ ಆವರಣದಲ್ಲಿ ದಫನ್‌ ಮಾಡಲಾಗಿತ್ತು. ಔರಂಗಜೇಬ್‌ ಮರಣ ಹೊಂದಿ 300 ವರ್ಷಗಳ ನಂತರ ಈಗ ಮತ್ತೆ ಆತನನ್ನು ಗೋರಿಯಿಂದ ಎಬ್ಬಿಸಲಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲೆಂದು ನಡೆಸಿದ ಈ ಪ್ರಯತ್ನಕ್ಕೆ ಮಾರ್ಚ್‌ 17ರಂದು ನಾಗಪುರದಲ್ಲಿ ನಡೆದ ಗಲಭೆಗಳು ಸಾಕ್ಷಿ ನುಡಿಯುತ್ತವೆ.

ತನ್ನ ಸಹೋದರನನ್ನು ಗಲ್ಲಿಗೇರಿಸಿ, ತಂದೆಯನ್ನು ಜೈಲುಪಾಲು ಮಾಡಿದ ಔರಂಗಜೇಬ್‌ ತನ್ನ ದಮನಕಾರಿ ನೀತಿಗಳಿಂದ ಕುಖ್ಯಾತನಾದವನು. ಈ ಆಧುನಿಕ ಕಾಲದಲ್ಲಿ ಕೂಡ ಆತನ ಪ್ರಸ್ತುತತೆ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುವುದಿವೆ. ಆ ಚರ್ಚೆಗಳಲ್ಲಿ ಆತನ ಹೆಸರನ್ನು ಎಳೆದು ತರುವುದು ಮಾತ್ರ ನಿರುದ್ಯೋಗ, ಹಣದುಬ್ಬರ ಮೊದಲಾದ ಸಮಸ್ಯೆಗಳನ್ನು ಮುಚ್ಚಿ ಹಾಕಲು. ಇಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುವುದರ ಬದಲು ಔರಂಗಜೇಬನ ಹೆಸರನ್ನು ಮುಂದಕ್ಕೆ ತಂದು ದೇಶದಲ್ಲಿ ದ್ವೇಷ ಮತ್ತು ಒಡಕನ್ನು ಮೂಡಿಸಲಾಗುತ್ತದೆ. ಅದಕ್ಕಾಗಿ ಕಪೋಲ ಕಲ್ಪಿತ ಕಥೆಗಳನ್ನು ಹರಿಬಿಡಲಾಗುತ್ತದೆ.

ಇಂತಹ ನಿರೂಪಣೆಗಳ ಮೂಲಕ ಐತಿಹಾಸಿಕ ಅತೃಪ್ತಿಗಳನ್ನು ಸಮಾಜದ ಸ್ಮೃತಿಯಲ್ಲಿ ಚಿತ್ರಿಸುವ ಮೂಲಕ ಧೃವೀಕರಣವನ್ನು ಶಾಶ್ವತಗೊಳಿಸಲು ಪ್ರಯತ್ನಿಸಲಾಗುತ್ತದೆ. ಮೊಘಲ್‌ ಯುಗದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು ಎಂಬುದು ಅಂತಹ ನಿರೂಪಣೆಗೆ ಉದಾಹರಣೆ.

ಇಂತಹ ದುಸ್ಸಾಹಸಗಳನ್ನು ಅತಿ ಸಮರ್ಥವಾಗಿ ನಿಭಾಯಿಸಲು ಸಾಮಾನ್ಯವಾಗಿ ಮೂರು ಸಂಗತಿಗಳನ್ನು ಬಳಸಿಕೊಳ್ಳಲಾಗುತ್ತದೆ. ಸಿನಿಮಾ, ಮಾಧ್ಯಮ ಮತ್ತು ಮೊಘಲರು. ಇವುಗಳ ಮೂಲಕ ಇತಿಹಾಸದಲ್ಲಿ ನಡೆದ ಘಟನೆಗಳಿಗೆ ಪ್ರತಿಕಾರದ ಭಾವನೆಯನ್ನು ಕೆರಳಿಸಲಾಗುತ್ತದೆ. ಐತಿಹಾಸಿಕ ಸ್ಮಾರಕಗಳನ್ನು ಹೊಡೆದುರುಳಿಸುವ ಕೆಲಸಗಳು ಇದರ ಮುಂದುವರಿಕೆಯಾಗಿ ನಡೆಯುತ್ತವೆ. ಇದರಿಂದ ಮತ್ತಷ್ಟು ಕೋಮು ಉದ್ವಿಗ್ನತೆ ಉಂಟಾಗುವುದಲ್ಲದೆ, ಬೇರೇನೂ ಲಾಭವಿಲ್ಲ.

ಕಬೀರ ದಾಸರು ಹೇಳಿದಂತೆ, “ಬೋಯೇ ಪೇಡ್ ಬಬೂಲ್ ಕಾ, ಆಮ್ ಕಹಾಂ ಸೆ ಹೋಯೇ (ಬಿತ್ತಿದ್ದನ್ನೇ ಕೊಯ್ಯಬೇಕು.)”  ಈ ಕಾಲಾತೀತ ಕವಿತೆಯು ನಮ್ಮ ಕ್ರಿಯೆಗಳು ಪರಿಣಾಮಗಳನ್ನೂ ಒಳಗೊಂಡಿರುತ್ತವೆ ಎಂಬುದನ್ನು ನೆನಪಿಸುತ್ತದೆ. ಹಾಗಾಗಿ ನಾವು ನೀಡಿದ್ದೇ ನಮಗೆ ಮರಳಿ ದೊರೆಯುವುದು ಎಂಬುದನ್ನು ಸಮಾಜ ಮರೆಯಬಾರದು.

ಭಾರತವು ವಿಶ್ವಗುರುವಾಗುವ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಬಯಸುವುದೇ ಆದರೆ, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಭಗತ್ ಸಿಂಗ್, ಬಿ.ಆರ್. ಅಂಬೇಡ್ಕರ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ಮಹಾನ್ ವ್ಯಕ್ತಿಗಳಿಂದ ಕಲಿಯುವುದು ಬಹಳ ಮುಖ್ಯ. ಸಮಕಾಲೀನ ಭಾರತದಲ್ಲಿ ದ್ವೇಷ ಹರಡುವ ಘಟನೆಗಳಲ್ಲಿ ಭಾಗಿಯಾಗದ ಸಹ ನಾಗರೀಕರಿಂದ ಕಲಿಯುವುದು, ಅವರ ಕೊಡುಗೆಗಳ ಬಗ್ಗೆ ಅರಿಯುವುದು ಮತ್ತು ಅದನ್ನು ಅಂಗೀಕರಿಸುವುದು ಬಹಳ ಅತ್ಯಗತ್ಯ.

ಅಶ್ಫಾಕುಲ್ಲಾ ಖಾನ್ ಮತ್ತು ಮಕ್ಬೂಲ್ ಶೆರ್ವಾನಿ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನಾವು ಯಾವ ಕಾರಣಕ್ಕೂ ಕಡೆಗಣಿಸಲಾಗುವುದಿಲ್ಲ. ಅವರು ದೇಶವನ್ನು ವಿದೇಶಿಯರಿಂದ ರಕ್ಷಿಸಲೆಂದು ಹೋರಾಡಿ ಪ್ರಾಣ ತ್ಯಾಗ ಮಾಡಿದವರು. “ನೌಶೇರಾ ಕಾ ಶೇರ್” ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್, ಕಂಪನಿ ಕ್ವಾರ್ಟರ್ ಮಾಸ್ಟರ್ ಹವೀಲ್ದಾರ್ ಅಬ್ದುಲ್ ಹಮೀದ್, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ನಾಯಕ್ ನಜೀರ್ ಅಹ್ಮದ್ ವಾನಿ, ಲೆಫ್ಟಿನೆಂಟ್ ಉಮರ್ ಫೈಯಾಜ್, ಲಿಡ್ಡರ್ ನದಿಯಲ್ಲಿ ಮುಳುಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸುವಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಾರ್ಗದರ್ಶಕ ರೌಫ್ ಅಹ್ಮದ್ ದಾರ್, ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಹುಮಾಯೂನ್ ಭಟ್ ಮತ್ತು ಇತ್ತೀಚೆಗೆ ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ಪ್ರವಾಸಿಗರನ್ನು ರಕ್ಷಿಸುವಾಗ ಕೊಲ್ಲಲ್ಪಟ್ಟ ಪೋನಿ ರೈಡ್ ಆಪರೇಟರ್ ಸೈಯದ್ ಆದಿಲ್ ಶಾ ಅವರ ಕೊಡುಗೆಗಳನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ನಮ್ಮ ರಾಷ್ಟ್ರದ ಸಮಗ್ರತೆಯನ್ನು ರಕ್ಷಿಸಿದ ಇನ್ನೂ ಅನೇಕರು ಈ ಪಟ್ಟಿಯಲ್ಲಿದ್ದಾರೆ.

ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ದ್ವೇಷ ಮತ್ತು ಕೋಮು ಧೃವೀಕರಣಕ್ಕೆ ಒಂದು ಉಪಕರಣವಾಗಿ ಬಳಸುತ್ತಿರುವುದನ್ನು ಕೊನೆಗಾಣಿಸಲು ನಾವು ಪ್ರಯತ್ನಪಡುತ್ತಿರುವಾಗಲೇ ಇನ್ನೊಬ್ಬ ಔರಂಗಜೇಬ್‌ ನಮ್ಮ ಮುಂದೆ ಧುತ್ತನೆ ಬಂದು ನಿಂತು ಬಿಟ್ಟ. ಆತ ಪಾಕಿಸ್ತಾನ ವಾಯು ಪಡೆಯ ಏರ್‌ ವೈಸ್‌ ಮಾರ್ಷಲ್‌ ಔರಂಗಜೇಬ್‌ ಅಹ್ಮದ್.‌ ಭಾರತ ನಡೆಸಿದ ಆಪರೇಷನ್‌ ಸಿಂಧೂರ್‌ಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಸೇನೆ ನಡೆಸಿದ ಆಪರೇಷನ್‌ ಬುನ್ಯಾನ್‌-ಉಮ್-ಮರ್ಸೂಸ್‌ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಆತ ಕಾಣಿಸಿಕೊಂಡಿದ್ದ.

ನಮ್ಮ ಮಾಧ್ಯಮಗಳು ಆತ ಪಾಕಿಸ್ತಾನದ ರಾಷ್ಟ್ರೀಯ ಕ್ರಷ್‌ ಆಗಿದ್ದಾನೋ ಅಥವಾ ರಾಷ್ಟ್ರಕ್ಕೆ ಕಪ್ಪು ಚುಕ್ಕೆಯೋ ಎಂದು ಚರ್ಚಿಸುವುದರಲ್ಲಿ ಬಹಳ ಬ್ಯುಸಿಯಾಗಿದ್ದವು. ಆತ ಗುರುತ್ವಾಕರ್ಷಣೆಯ ಕೇಂದ್ರವೆಂದು ಬಣ್ಣಿಸಿದ್ದನ್ನು ಅಪಹಾಸ್ಯ ಮಾಡಲಾಗುತ್ತಿತ್ತು. ಸೇನೆಯಲ್ಲಿ ಸಾಮಾನ್ಯವಾಗಿ ಒಂದು ಘಟನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಲು ಆ ಪದವನ್ನು ಬಳಸಲಾಗುತ್ತದೆ. ಉದಾಹರಣೆಗೆ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಅಲ್ಲಿನ ಸ್ಥಳೀಯರನ್ನು “Centre of Gravity” ಎಂದು ಕರೆಯಲಾಗುತ್ತದೆ.

ಈ PAF ಅಧಿಕಾರಿ ಪ್ರತಿಯೊಬ್ಬ ವೃತ್ತಿಪರ ವ್ಯಕ್ತಿಗೂ ಒಂದು ಪಾಠ ಕಲಿಸಿದ. ಅದು ಮಾಧ್ಯಮದ ಗೂಗ್ಲಿ ಎಸೆತಕ್ಕೆ ಬಲಿಯಾಗಬಾರದು ಎಂಬ ಪಾಠ. ಭಾರತದ ವಾಯುಪಡೆಯ ಸಾಮರ್ಥ್ಯದ ಬಗ್ಗೆ ಕೇಳಿದಾಗ ಆತ ನೀಡಿದ ಉತ್ತರ ಹೀಗಿತ್ತು. “ನಾವು (PAF) ಒಂದು ವೃತ್ತಿಪರ ವಾಯುಪಡೆ. ಹಾಗೆಯೇ ಅವರು (IAF) ಕೂಡ ಒಂದು ವೃತ್ತಿಪರ ವಾಯುಪಡೆ. ನಾವು ಪರಸ್ಪರರ ವೃತ್ತಿಪರತೆಯ ಬಗ್ಗೆ ಮಾತನಾಡುವುದಿಲ್ಲ ಎಂಬ ಅಲಿಖಿತ ನೀತಿಯೊಂದನ್ನು ಪಾಲಿಸುತ್ತಿದ್ದೇವೆ. ನನ್ನ (PAF) ಕೆಲಸ ನನ್ನ ದೇಶವನ್ನು ರಕ್ಷಿಸುವುದು. ಹಾಗೆಯೇ, ಆತನ (IAF) ಕೆಲಸ ಆತನ ದೇಶವನ್ನು ರಕ್ಷಿಸುವುದು, ಆತನ ಕರ್ತವ್ಯವನ್ನು ನಿರ್ವಹಿಸುವುದು.”

ಅದೇನೆ ಇರಲಿ, ಆ ಮೊಘಲ್ ಚಕ್ರವರ್ತಿಯಾಗಲಿ ಅಥವಾ AVM ಔರಂಗಜೇಬ್ ಆಗಲಿ ನಮಗೆ ಮಾದರಿಯಾಗಬಾರದು. ಅದರ ಬದಲಿಗೆ ನಮಗೆ ಮಾದರಿಯಾಗಲು ಇನ್ನೊಬ್ಬ ಔರಂಗಜೇಬ್‌ ಇದ್ದಾನೆ. ಅದು ರೈಫಲ್‌ ಮ್ಯಾನ್‌ ಔರಂಗಜೇಬ್‌ ಖಾನ್.‌ ಒಬ್ಬ ಧೈರ್ಯಶಾಲಿ, ದೇಶಪ್ರೇಮಿ ಭಾರತೀಯ ಸೈನಿಕ. ಆತನ ದೇಶಪ್ರೇಮ ಮತ್ತು ಕರ್ತವ್ಯದ ಮೇಲಿನ ಸಮರ್ಪಣಾ ಭಾವವನ್ನು ದೇಶ ಕಣ್ಣಾರೆ ಕಂಡಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾದ ಗಲಭೆ ಪೀಡಿತ ಪ್ರದೇಶದಲ್ಲಿ ನಡೆದ ಹಲವಾರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ರೈಫಲ್‌ಮ್ಯಾನ್ ಔರಂಗಜೇಬ್ ಅವಿಭಾಜ್ಯ ಅಂಗವಾಗಿದ್ದ. ದುರಂತವೆಂದರೆ, ತನ್ನ ಕುಟುಂಬದೊಂದಿಗೆ ಈದ್ ಆಚರಿಸಲೆಂದು ಹೊರಟಿದ್ದ ಆತನನ್ನು ಭಯೋತ್ಪಾದಕರು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಂದು ಹಾಕಿದರು. ಆತನ ಬಲಿದಾನವನ್ನು ಗುರುತಿಸಿ, ದೇಶವು ಮರಣೋತ್ತರ ಶೌರ್ಯ ಚಕ್ರವನ್ನು ನೀಡಿ ಗೌರವಿಸಿತು. ಅತಿ ಧೈರ್ಯವಂತನಾಗಿದ್ದ ಔರಂಗಜೇಬ್‌ ತಾನು ಸಾವಿನ ದವಡೆಯಲ್ಲಿರುವಾಗಲೂ ತನ್ನ ದೇಶದ ಮೇಲಿನ ಅಚಲ ಪ್ರೇಮವನ್ನು ಎತ್ತಿಹಿಡಿದಿದ್ದ. ಅದನ್ನು ಭಯೋತ್ಪಾದಕರು ಚಿತ್ರೀಕರಿಸಿದ್ದರು.

“ಅಮೃತ ಕಾಲಕ್ಕೆ” ಹೊರಳುತ್ತಿರುವ ನಾವು, ನಿಜವಾದ ಔರಂಗಜೇಬನನ್ನು ನೆನೆಯಬೇಕಾಗಿದೆ. ಅದು ಮೂರು ಶತಮಾನಗಳ ಹಿಂದೆ ಗೋರಿ ಸೇರಿದ ಔರಂಗಜೇಬ್‌ ಅಲ್ಲ. ಗುರುತ್ವಾಕರ್ಷಣೆಯ ಕೇಂದ್ರವನ್ನು ಕಂಡು ಹಿಡಿದ ಔರಂಗಜೇಬ್‌ ಕೂಡ ಅಲ್ಲ. ಅದು, ತನ್ನ ದೇಶ ಮತ್ತು ಅದರ ಜನರಿಗಾಗಿ 14 ಜೂನ್‌ 2018ರಂದು ತನ್ನ ಪ್ರಾಣವನ್ನೇ ತೆತ್ತ ಔರಂಗಜೇಬ್‌ ಖಾನ್.

ಈ ಔರಂಗಜೇಬನ ಪರಂಪರೆಯು ನಮ್ಮ ಮಾತೃಭೂಮಿಯ ಮೇಲಿನ ಪ್ರೀತಿಯ ಸಂಕೇತ. ಭವಿಷ್ಯದ ಪೀಳಿಗೆಗೆ ಒಂದು ಮಾದರಿ.

ಭಾರತೀಯ ಸೇನೆಯ ಮಾಜಿ ಕರ್ನಲ್ ಆಗಿರುವ ರಾಜೇಶ್ ಕಾಲಿಯಾ, ಭಾರತೀಯ ಸೇನೆಯ 3 ಮತ್ತು 4 ನೇ ದಳದಲ್ಲಿ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಿಯಾಚಿನ್, ಜಮ್ಮು ಮತ್ತು ಕಾಶ್ಮೀರ ಮತ್ತು ಶ್ರೀಲಂಕಾದಲ್ಲಿ (ಭಾರತೀಯ ಶಾಂತಿಪಾಲನಾ ಪಡೆಯ ಭಾಗವಾಗಿ) ಅವರು ಸೇವೆ ಸಲ್ಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page