Monday, June 23, 2025

ಸತ್ಯ | ನ್ಯಾಯ |ಧರ್ಮ

ಹೌಸಿಂಗ್‌ ಬೋರ್ಡ್‌ ʼಮನಿ ಕೊಟ್ಟರೆ ಮನೆ’ ಎಂದು ತನ್ನ ಸ್ಲೋಗನ್‌ ಬದಲಾಯಿಸಿಕೊಳ್ಳಲಿ: ಆರ್‌ ಅಶೋಕ

ಬೆಂಗಳೂರು: “ಬಡವರಿಗೆ ಆಹಾರ ಕೊಡಿ ಎಂದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಮನೆಗಳಿಗೆ ಕೈ ಹಾಕುತ್ತಿದೆ” ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಿಮರ್ಶೆ ನಡೆಸಿದ್ದಾರೆ. ʼಮನಿ ಕೊಟ್ಟರೆ ಮನೆ’ ಎಂಬುದು ಇಂದು ಹೌಸಿಂಗ್ ಬೋರ್ಡ್‌ನ ಹೊಸ ಸೂತ್ರವಾಗಿದ್ದು, ಇದಕ್ಕೆ ಪಕ್ಷದ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರ ಆರೋಪಗಳೇ ಸಾಕ್ಷಿಯಾಗಿವೆ ಎಂದು ಆರೋಪಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದ್ದು, ಮಾತು ಮತ್ತು ಕ್ರಿಯೆಯಲ್ಲಿ ಸಮನ್ವಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಬಕಾರಿ ಇಲಾಖೆ ಮತ್ತು ವಾಲ್ಮೀಕಿ ನಿಗಮದ ನಂತರ ಈಗ ವಸತಿ ಇಲಾಖೆಯಲ್ಲೂ ಭ್ರಷ್ಟಾಚಾರ ತಲೆದೋರಿದ್ದು, ಮನೆ ನೀಡಲು ಹಣ ಕೇಳುತ್ತಿರುವ ಸುದ್ದಿಗಳು ಚರ್ಚೆಯಾಗುತ್ತಿವೆ ಎಂದು ತಿಳಿಸಿದರು.

ರಾಜೀವ್ ಗಾಂಧಿ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ಎಲ್ಲಾ ವಸತಿ ಯೋಜನೆಗಳಲ್ಲಿ ಆಯೋಗದ ಮೂಲಕ ಹಣ ಲೂಟಿ ನಡೆಯುತ್ತಿದ್ದು, ಇದುವರೆಗೆ 2,137.44 ಕೋಟಿ ರೂಪಾಯಿ ಕಮಿಷನ್‌ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಧಮ್ ಮತ್ತು ತಾಕತ್ ಇದ್ದರೆ, ಬಿ.ಆರ್. ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.

ಈ ಸರ್ಕಾರ ತನ್ನ ಮಾತಿಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪುಹಣ ಸಲ್ಲಿಸಲು ರಾಜ್ಯ ಸರ್ಕಾರ ಲೂಟಿಯಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು, ವಸತಿ ಹಂಚಿಕೆಯಲ್ಲಿ ನಡೆಯುತ್ತಿರುವ ಹಗರಣ ಇದರ ಒಂದು ಭಾಗವಷ್ಟೇ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page