Monday, June 30, 2025

ಸತ್ಯ | ನ್ಯಾಯ |ಧರ್ಮ

ಪುತ್ತೂರು ಕಾಲೇಜು ಯುವತಿ ಅತ್ಯಾ*ರ ಪ್ರಕರಣ ; ಬಿಜೆಪಿ ಮುಖಂಡನ ಮಗನ ಹುಡುಕಾಟಕ್ಕೆ ಬಲೆ ಬೀಸಿದ ಪೊಲೀಸರು

ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಯುವತಿ ಗರ್ಭಿಣಿ ಆಗುತ್ತಿದ್ದಂತೆಯೇ ಉಲ್ಟಾ ಹೊಡೆದ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಗರ್ಭಿಣಿ ಯುವತಿ ಈಗ ಮಗುವಿಗೆ ಜನ್ಮ ನೀಡಿದ್ದಾರೆ. ಯುವತಿ ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ ಆರೋಪಿ ಕೃಷ್ಣ ಜೆ ರಾವ್ ತಲೆ ಮರೆಸಿಕೊಂಡಿದ್ದಾನೆ. ಪ್ರಕರಣ ಗಂಭೀರತೆ ಪಡೆದುಕೊಳ್ಳುತ್ತಿದ್ದಂತೆಯೇ ಪುತ್ತೂರು ಪೊಲೀಸರು ಆರೋಪಿ ಕೃಷ್ಣ ಜೆ ರಾವ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆರೋಪಿ ಕೃಷ್ಣ ಜೆ ರಾವ್ ಮತ್ತು ದೂರುದಾರ ಯುವತಿ ಪ್ರೌಢಶಾಲೆಯಿಂದಲೂ ಸಹಪಾಠಿಗಳಾಗಿದ್ದರು. ಶಾಲಾ ದಿನಗಳ ನಂತರವೂ ಇಬ್ಬರ ನಡುವೆ ಸ್ನೇಹ ಸಂಬಂಧ ಮುಂದುವರಿದಿತ್ತು. ಪ್ರಸ್ತುತ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಬಿ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ, 2024ರ ಅಕ್ಟೋಬರ್ 11 ರಂದು ಕೃಷ್ಣ ತನ್ನ ಮನೆಗೆ ಯಾರೂ ಇಲ್ಲದ ಸಮಯದಲ್ಲಿ ಕರೆದು ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಈ ನಡುವೆ ಹಲವು ಬಾರಿ ಮದುವೆ ಪ್ರಸ್ತಾಪ ಮಾಡಿದರೂ ಕೃಷ್ಣ ರಾವ್ ನಿರ್ಲಕ್ಷಿಸುತ್ತಾ ಬಂದಿದ್ದಾನೆ. ಆತ ನಂಬಿಸಿ ಮೋಸ ಮಾಡುತ್ತಿದ್ದಾನೆ ಎಂದು ಅರಿವಿಗೆ ಬರುತ್ತಿದ್ದಂತೆ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಿಸಿದ್ದಾರೆ.

ನಾಪತ್ತೆಯಾದ ಆರೋಪಿ ಕೃಷ್ಣನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ನಡುವೆ ಪ್ರಕರಣದ ರಹಸ್ಯ ಬಯಲಿಗೆಳೆಯಲು ಪೊಲೀಸರು, ಯುವತಿ ಜನ್ಮಕೊಟ್ಟ ಮಗುವಿನ ಡಿಎನ್​ ಎ ಪರೀಕ್ಷೆಯ ಮೊರೆ ಹೋಗಿದ್ದಾರೆ. ಈ ಪರೀಕ್ಷೆಯಿಂದ ಯುವತಿ ಗರ್ಭಿಣಿಯಾಗಲು ನಿಜವಾಗಿಯೂ ಶ್ರೀಕೃಷ್ಣನೇ ಕಾರಣನೇ ಎಂಬುದರಿಂದ ಪ್ರಕರಣದ ತನಿಖೆಗೆ ಮತ್ತಷ್ಟು ಸಾಕ್ಷ್ಯ ಸಿಗಲಿದೆ. ಹಾಗೂ ಯುವತಿಗೆ ಮದುವೆ ಆಸೆ ತೋರಿಸಿ ಲೈಂಗಿಕವಾಗಿ ಬಳಿಸಿಕೊಂಡಿದ್ದನೇ ಎನ್ನುವುದು ಸ್ಪಷ್ಟವಾಗಿ ತಿಳಿಯಲಿದೆ.

ಆರೋಪಿ ಕೃಷ್ಣ ಜೆ ರಾವ್ ಪುತ್ತೂರಿನ ಪ್ರಭಾವಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರನಾಗಿದ್ದು, ಯಾವುದೇ ಸಂದರ್ಭದಲ್ಲೂ ರಾಜಕೀಯ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಸಂತ್ರಸ್ತ ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಈಗಾಗಲೇ ನಡೆದ ದೈಹಿಕ ಸಂಪರ್ಕಗಳ ಬಗ್ಗೆ ಉಲ್ಲೇಖಿಸಿದ್ದಾರೆ.

2024 ರ ಅಕ್ಟೋಬರ್ ಸೇರಿದಂತೆ 2025ರ ಜನವರಿಯಲ್ಲಿ, ಆತ ಮತ್ತೆ ನನ್ನನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ನಾನು ಗರ್ಭಿಣಿ ಎಂದು ಅರಿತುಕೊಂಡು ಕೃಷ್ಣ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. ಪುತ್ತೂರಿನ ನಿವಾಸಿಯಾಗಿರುವ ವಿದ್ಯಾರ್ಥಿನಿ, ತಾನು ಮತ್ತು ಕೃಷ್ಣ ಹಲವಾರು ವರ್ಷಗಳಿಂದ ಸಂಬಂಧದಲ್ಲಿದ್ದೆವು. ಕೃಷ್ಣ ತನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು, ಆತನ ಮನೆಯಲ್ಲಿ ಅನೇಕ ಬಾರಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ.

ಗರ್ಭಿಣಿಯಾಗಿರುವುದು ಖಾತ್ರಿಯಾಗುತ್ತಿದ್ದಂತೆಯೇ ಯುವತಿ ತನ್ನ ಹೆತ್ತವರಿಗೆ ತಿಳಿಸಿದಳು. ನಂತರ ಅವರು ಕೃಷ್ಣನ ಕುಟುಂಬವನ್ನು ಸಂಪರ್ಕಿಸಿದರು. ಆರಂಭದಲ್ಲಿ ಕುಟುಂಬದವರು ಮದುವೆಗೆ ಒಪ್ಪಿಕೊಂಡರೂ, ಕೃಷ್ಣ ಅಂತಿಮವಾಗಿ ನಿರಾಕರಿಸಿದ್ದಾನೆ. ಆ ನಂತರ ದೂರು ದಾಖಲಾಗಿ, ಈಗ ಪೊಲೀಸರು ಆರೋಪಿ ಕೃಷ್ಣ ಪತ್ತೆ ಮಾಡಲು ಮುಂದಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page