Friday, June 14, 2024

ಸತ್ಯ | ನ್ಯಾಯ |ಧರ್ಮ

“ವೇದ ಗಣಿತದ ಪ್ರಸ್ತಾಪವೇ ನಮಗೆ ಬಂದಿಲ್ಲ” : ಗ್ರಾಮೀಣಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ

ರಾಜ್ಯಾದ್ಯಂತ ಈಗಾಗಲೇ ಹೆಚ್ಚು ಚರ್ಚಿತವಾಗುತ್ತಿರುವ SC/ST ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗುವಂತೆ ಬೋಧನೆಗೆ ಆದೇಶ ಮಾಡಿರುವ ‘ವೇದ ಗಣಿತ’ ಪ್ರಸ್ತಾಪದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ದಿನ ವೇದಗಣಿತ ಬೋಧನೆಯೆಂಬ ಬೋಗಸ್ ಹಾಗು ಮೋಸದ ಯೋಜನೆಯನ್ನು ಕೂಡಲೇ ತಡೆಹಿಡಿಯಬೇಕು ಆ ಹಣವನ್ನು ಸಂವಿಧಾನ ಜಾಗೃತಿಗೆ ಬಳಸಬೇಕು ಮತ್ತು ಈ ಸುತ್ತೋಲೆ ಹೊರಡಿಸಿದವರ ಮೇಲೆ ಕಾನೂನು ಕ್ರಮವಾಗಬೇಕೆಂದು SC/ST ಯುವ ಹೋರಾಟಗಾರರ ತಂಡ, ವಕೀಲರ ತಂಡ ಒಂದೆಡೆ ಕೂತು ಚರ್ಚಿಸಿತ್ತು. ನಂತರ ವಿಧಾನ ಸೌಧ, ವಿಕಾಸ ಸೌಧ ಮತ್ತು ಬಹುಮಹಡಿಗಳ ಕಟ್ಟಡಕ್ಕೆ ರಾಜ್ಯದ ವಿವಿಧ ದಲಿತಪರ ವಿಚಾರವಾದಿ SC/ST ಯುವ ಹೋರಾಟಗಾರರು ಹಾಗು ವಕೀಲರ ತಂಡ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ, ಸಮಾಜಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಹಾಗು ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಕಾನೂನಾತ್ಮಕವಾಗಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ “ವೇದಗಣಿತ” ಬೋಧನೆ ಪ್ರಸ್ತಾಪವೇ ನಮ್ಮ ಮುಂದಿಲ್ಲ. ಇಲಾಖೆಗಳ ಗಮನಕ್ಕೆ ಬಾರದೆ ಈ ಅತಾಚುರ್ಯ ನಡೆದಿರಬಹುದು. ತಪ್ಪಾಗಿದೆ. ಆದಷ್ಟು ಬೇಗ ತಿದ್ದೋಲೆಯನ್ನು ಕಳಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮವನ್ನೂ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಈ ಒಂದು ನಿಯೋಗಕ್ಕೆ ಪ್ರತಿಕ್ರಯಿಸಿದ್ದಾರೆ. ಈ ಬಗ್ಗೆ ಚಿಂತಕರು, ಹೋರಾಟಗಾರರಾದ ಹ.ರಾ.ಮಹೇಶ್ ಅವರು “ಪೀಪಲ್ ಮೀಡಿಯಾ” ದೊಂದಿಗೆ ಅಧಿಕಾರಿಗಳ ಭೇಟಿಯ ವಿಚಾರ ಹಂಚಿಕೊಂಡರು.

https://m.facebook.com/story.php?story_fbid=433166172245867&id=100006441939974

ವಿಶೇಷವಾಗಿ SC/ST ಸಮುದಾಯದ ವಿದ್ಯಾರ್ಥಿಗಳಿಗಷ್ಟೆ ಮೀಸಲಾಗಿರುವ SCSP/TSP ಹಣದಲ್ಲಿ 60 ಕೋಟಿ 68 ಲಕ್ಷವನ್ನು “ಅಡ್ವಾನ್ಸ್ ಮೆಂಟ್ ಆಫ್ ವೇದಿಕ್ ಮಾರನೆ ಟಿಕ್ಸ್” ಎಂಬ ವಿಷಯದ ಬೋಧನೆಗಾಗಿ ಖಾಸಗೀ ಸಂಸ್ಥೆಗೆ ನೀಡಬೇಕೆಂಬ ಪ್ರಸ್ತಾವನೆ ಸರ್ಕಾರದ ಕಡೆಯಿಂದ ಸುತ್ತೋಲೆ ಹೊರಟಿದೆ. ಆ ಹಣದಲ್ಲಿ ಖಾಸಗಿ ಸಂಸ್ಥೆಯು ಸರ್ಕಾರಿ ಶಾಲೆಯ ಆಯ್ದ 25 SC/ST ಮಕ್ಕಳಿಗೆ ವೇದಗಣಿತವನ್ನು ಹೇಳಿಕೊಡಲಿದೆ. ಒಟ್ಟು 60,068 ಗ್ರಾಮಪಂಚಾಯತಿಗಳಿಂದ SCSP/TSP ಹಣದಲ್ಲಿ ಸಂಸ್ಥೆಗೆ ತಲಾ ಒಂದು ಲಕ್ಷದಂತೆ ಒಟ್ಟು 60ಕೋಟಿ 68ಲಕ್ಷ ಹಣವನ್ನು ನೀಡುವಂತೆ ಸರ್ಕಾರದಿಂದ ಆದೇಶವನ್ನೇ ಹೊರಡಿಸಲಾಗಿತ್ತು.

“ಮಕ್ಕಳ ಬೌದ್ಧಿಕ ವಿಕಸನಕ್ಕೆ ತೀವ್ರತರವಾದ ತೊಡಕುಂಟು ಮಾಡಬಹುದಾದ ಈ “ವೇದ ಗಣಿತ” ಯಾವುದೇ ರೀತಿಯಲ್ಲಿ ವಿಧ್ಯಾರ್ಥಿಗಳಿಗೆ ಸಹಕಾರಿ ಆಗದು. ಬೆಳೆಯುತ್ತಾ ಹೋದಂತೆ ಮಕ್ಕಳ ಬೌದ್ಧಿಕ ವಿಕಸನ ವೃದ್ಧಿ ಆಗಬೇಕಾದ ಈ ಹಂತದಲ್ಲಿ ದಲಿತ ವಿದ್ಯಾರ್ಥಿಗಳನ್ನು ಮತ್ತೆ ಶಿಲಾಯುಗದತ್ತ ನೂಕುವ ಹುನ್ನಾರ ಈ ಯೋಜನೆಯ ಉದ್ದೇಶವಾಗಿದೆ. ಸ್ಪಷ್ಟವಾಗಿ ಇದೊಂದು ರಾಜ್ಯ ಸರ್ಕಾರದ ದೊಡ್ಡ ಹಗರಣವೇ ಸರಿ” ಎಂದು ಹೋರಾಟಗಾರ ತಂಡ ಅಭಿಪ್ರಾಯ ಪಟ್ಟಿದೆ.

ಸರ್ಕಾರದ ಅಧಿಕಾರಿಗಳೇನೋ ಈ ಪ್ರಸ್ತಾವನೆ ನಮ್ಮ ಮುಂದೆ ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಈಗಾಗಲೇ ಒಂದಷ್ಟು ತಂಡಗಳು ಗ್ರಾಮ ಪಂಚಾಯಿತಿಗಳ ಕಡೆಯಿಂದ ಹಣ ವಸೂಲಿಗೆ ಇಳಿದ ಬಗ್ಗೆಯೂ “ಪೀಪಲ್ ಮೀಡಿಯಾ”ಗೆ ಮಾಹಿತಿ ಲಭ್ಯವಾಗಿದೆ. ಒಂದೊಂದು ಗ್ರಾಮ ಪಂಚಾಯಿತಿಗಳಿಂದ ತಲಾ ಒಂದೊಂದು ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಬೇಕಿದ್ದು ಸಧ್ಯಕ್ಕೆ ಎಷ್ಟು ಸಾಧ್ಯವೋ ಅಷ್ಟು ಹಣ ವಸೂಲಿ ಮಾಡುವಂತೆ ಅನಾಮಧೇಯ ವ್ಯಕ್ತಿಗಳು ಸರ್ಕಾರದ ಪ್ರತಿನಿಧಿಗಳಂತೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ ಬಗ್ಗೆ ಹೋರಾಟಗಾರರು ಮಾಹಿತಿ ತಿಳಿಸಿದ್ದಾರೆ.

ಸರ್ಕಾರದ ಆದೇಶವೇ ಬಾರದೆ, ಈ ರೀತಿ ಹಣ ವಸೂಲಿಗೆ ಇಳಿದಿರುವುದರ ಬಗ್ಗೆ ಸಾಕ್ಷಿ ಸಮೇತ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಕಸ್ಮಾತ್ ಹಣ ವಸೂಲಿಯ ಮಾಹಿತಿ ನಿಜವೇ ಆಗಿದ್ದರೆ SC/ST ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲು ಮಾಡಲಿದ್ದೇವೆ. ಇದನ್ನು ಇಲ್ಲಿಗೇ ಬಿಡುವ ಮಾತೇ ಇಲ್ಲ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದೇ ಹೋದರೆ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ಕೊಡಲಾಗುವುದು ಎಂದೂ ಚಿಂತಕರಾದ ಹ.ರಾ.ಮಹೇಶ್ ತಿಳಿಸಿದ್ದಾರೆ.

ಸಧ್ಯ ಈ ಆದೇಶದ ಬಗ್ಗೆ SC/ST ಸಮುದಾಯದ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು. MLA, MLC, MP ಗಳು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಈ ಯೋಜನೆ ದುರುದ್ದೇಶದ ಬಗ್ಗೆ ಅರಿವು ಮೂಡಿಸಿ ವ್ಯವಸ್ಥಿತವಾದ ಹೋರಾಟ ರೂಪಿಸುವ ಬಗ್ಗೆಯೂ ಚಿಂತನೆ ಮಾಡಲಾಗುತ್ತಿದೆ ಎಂದು ಹೋರಾಟಗಾರರು ಅಭಿಪ್ರಾಯ ಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು