Tuesday, December 2, 2025

ಸತ್ಯ | ನ್ಯಾಯ |ಧರ್ಮ

ದೇವನಹಳ್ಳಿ ರೈತರನ್ನು ವಂಚಿಸುವ, ಸೇಡು ತೀರಿಸಿಕೊಳ್ಳುವ ಮತ್ತೊಂದು ಕುತಂತ್ರವನ್ನು ಸರ್ಕಾರ ಮಾಡುತ್ತಿದೆಯೇ?

“ಭೂಸ್ವಾಧೀನದ ಕರಡಿನಲ್ಲಿ ಪ್ರಸ್ತಾಪವಾಗಿರುವ ಕ್ರಮಗಳು ಈ ಹಿಂದೆ ಕೈಗಾರಿಕಾ ಮಂತ್ರಿ ಎಂ. ಬಿ. ಪಾಟೀಲರು ಹೋರಾಟವನ್ನು ಮುರಿಯಲು ಹೂಡಿದ ಕುತಂತ್ರಗಳಲ್ಲಿ ಪ್ರಯೋಗಿಸಿದ ಅಸ್ತ್ರಗಳನ್ನೇ ಹೋಲುತ್ತಿವೆ” ಶಿವ ಸುಂದರ್ ಅವರ ಬರಹದಲ್ಲಿ

ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಮಣಿದು ಸಿದ್ದು ಸರ್ಕಾರ ಜೂನ್ ನಲ್ಲಿ ಭೂಸ್ವಾಧೀನ ರದ್ದು ಘೋಷಣೆ ಮಾಡಿದ್ದರೂ ಈವರೆಗೆ denotification ಆದೇಶ ಹೊರಡಿಸಿಲ್ಲ. ಬದಲಿಗೆ ಹಿಂಬಾಗಿಲ ಮೂಲಕ ರೈತರನ್ನು ಪುಸಲಾಯಿಸಿ ವಶ ಪಡಿಸಿಕೊಳ್ಳುವ ಕುತಂತ್ರ ಮುಂದುವರೆಸಿತ್ತು.

ಆದರೆ ದೇವನಹಳ್ಳಿಯ ಜಾಗೃತ ರೈತರು ಹೋರಾಟವನ್ನು ಮುಂದುವರೆಸಿದ್ದರಿಂದ ನ. 26 ರಂದು ಮುಖ್ಯಮಂತ್ರಿಗಳು ಡಿ. 4 ರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಅಧಿಕೃತ ಘೋಷಣೆ ಹೊರಡಿಸುವುದಾಗಿ ಹೋರಾಟಗಾರರಿಗೆ ಭರವಸೆ ಇತ್ತಿದ್ದರು.

ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ದೇವನಹಳ್ಳಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಒಂದು ಕರಡು ಪ್ರಸ್ತಾಪ ಹರಿದಾಡುತ್ತಿದೆ.

ಇದು ಅಧಿಕೃತವೋ, ನಿಜವೋ ಗೊತ್ತಿಲ್ಲ.

ಆದರೆ ಅದರಲ್ಲಿ ಪ್ರಸ್ತಾಪವಾಗಿರುವ ಕ್ರಮಗಳು ಈ ಹಿಂದೆ ಕೈಗಾರಿಕಾ ಮಂತ್ರಿ ಎಂ. ಬಿ. ಪಾಟೀಲರು ಹೋರಾಟವನ್ನು ಮುರಿಯಲು ಹೂಡಿದ ಕುತಂತ್ರಗಳಲ್ಲಿ ಪ್ರಯೋಗಿಸಿದ ಅಸ್ತ್ರಗಳನ್ನೇ ಹೋಲುತ್ತಿವೆ.

ಈ ಕಾರಣಕ್ಕಾಗಿ ಮತ್ತು ಮಾತು ಕೊಟ್ಟು ಐದು ತಿಂಗಳಾದರೂ ಡಿ ನೋಟಿಫ್ಯ್ ಮಾಡದೆ, ಸರ್ಕಾರವು ಭೂ ಸ್ವಾಧೀನಾ ಕ್ರಮಗಳನ್ನು ಕೈಗೊಂಡಿದ್ದರ ಅನುಭವದ ಹಿನ್ನೆಲೆಯಲ್ಲಿ ನೋಡಿದರೆ ಅದು ಸುಳ್ಳಾಗಿರಬಹುದೆಂದು ಖಚಿತವಾಗಿ ಹೇಳಲು ಹೋರಾಟಗಾರರಿಗೆ ವಿಶ್ವಾಸ ಮೂಡುತ್ತಿಲ್ಲ..

ಒಂದು ವೇಳೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕರಡು ಪ್ರಸ್ತಾಪ ಅಧಿಕೃತವೆ ಆಗಿದ್ದಲ್ಲಿ ಅದು ಬಿಜೆಪಿ ಕಾಲದ ಬಹಿರಂಗ ಕೃಷಿ ವಿರೋಧಿ ನೀತಿಗಳಷ್ಟೆ, ರೈತದ್ರೋಹಗಳಷ್ಟೆ ಅತ್ಯಂತ ನಯವಂಚಕ  ನೀತಿಯಾಗುತ್ತದೆ..

ಏಕೆಂದರೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ಕರಡು: 
1.ದೇವನಹಳ್ಳಿಯ ಹೋರಾಟ ನಿರತ ರೈತರನ್ನು ಭೂಮಿ ಕೊಡಲೊಪ್ಪದ ರೈತರು ಮತ್ತು ಸ್ವಇಚ್ಛೆಯಿಂದ ಭೂಮಿ ಕೊಡಬೇಕೆಂದಿರುವ ರೈತರು ಎಂದು ಕುತಂತ್ರದಿಂದ ವಿಭಜಿಸುತ್ತದೆ.

2.ಮತ್ತು ಸ್ವಲ್ಪ ಇಚ್ಛೆಯಿಂದ ಭೂಮಿ ಕೊಡಬಯಸುವ ರೈತರು ಮೂರು ತಿಂಗಳೊಳಗೆ ಕೊಡಬೇಕೆಂದು ಸಮಯ ಮಿತಿಯನ್ನು ವಿಧಿಸುತ್ತದೆ.

3.ಆ ನಂತರ ಇಡೀ 1778 ಎಕರೆ ಜಮೀನನ್ನು ಯಾವ ಕಾನೂನಿನಲ್ಲೂ ಇಲ್ಲದಿರುವ “ಶಾಶ್ವತ ಮತ್ತು ವಿಶೇಷ ಕೃಷಿ ವಲಯ ” ವಾಗಿ ಘೋಷಿಸುವುದಾಗಿ ಎಚ್ಚರಿಸುತ್ತದೆ. ಅಂದರೆ ಶಾಶ್ವತ ಕೃಷಿ ವಲಯವಾಗಿ ಘೋಷಿಸಿದ ನಂತರ ಇನ್ನೆಂದೂ, ಕಷ್ಟ ಕಾಲದಲ್ಲೂ ತಮ್ಮ ಜಮೀನುಗಳನ್ನು ಮಾರಿಕೊಳ್ಳಲು ಸಾಧ್ಯವೇ ಇಲ್ಲವೆಂಬ ಆತಂಕವನ್ನು ಹುಟ್ಟಿಸುತ್ತದೆ.

4.ಈ ಪ್ರಸ್ತಾಪ ನಿಜವೇ ಆಗಿದ್ದಲ್ಲಿ ಅದು ದೇವನಹಳ್ಳಿಯನ್ನು ರಣರಂಗ ಮಾಡುವ ಸರ್ಕಾರದ ವ್ಯವಸ್ಥಿತ ಚಿತಾವಣೆ ಯಾಗಿದೆ. ರೈತರಲ್ಲಿ ಒಳಜಗಳ ಹಚ್ಚಿ ಹೋರಾಟಗಾರರನ್ನು ಕ್ರಿಮಿನಲ್ ಮತ್ತು ಅಭಿವೃದ್ಧಿ ವಿರೋಧಿ ಎಂದು ಘೋಷಿಸಿ ಆ ಮೂಲಕ ಜಮೀನು ಕಬಳಿಸುವ ಹುನ್ನಾರ ಎದ್ದು ಕಾಣುತ್ತಿದೆ..

5.ಹಾಗೇ ನೋಡಿದರೆ ಯಾವ ಕಾನೂನಿನಲ್ಲೂ ಇಲ್ಲದ “ವಿಶೇಷ ಮತ್ತು ಶಾಶ್ವತ ಕೃಷಿ ವಲಯ” ಎಂಬ ಪರಿಕಲ್ಪನೆ ಹುಟ್ಟಿಸಿದ್ದೇ ಎಂ. ಬಿ. ಪಾಟೀಲರ ದಲ್ಲಾಳಿಗಳು.

6.ನಗರ ಮತ್ತು ಪಟ್ಟಣಭಿವೃದ್ಧಿ ಪ್ರಾಧಿಕಾರಗಳು ಕೆಲವು ಪ್ರದೇಶಗಳನ್ನು “ಹಸಿರು ವಲಯ” ಎಂದು ಘೋಷಿಸುತ್ತವೆ. ಮತ್ತು ಅದು ಪ್ರತಿ ಹತ್ತು ವರ್ಷಕ್ಕೊಮ್ಮೆ ಪರಿಶೀಲನೆಗೆ ಒಳಪಡುತ್ತದೆ.. ಅದೇ ರೀತಿ ದೇವನಹಳ್ಳಿ ಸೇರುವ ಅಂತಾರಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ದೇವನಹಳ್ಳಿ ಪ್ರದೇಶವನ್ನು ಈಗಾಗಲೇ ಹಸಿರು ವಲಯವೆಂದು ಘೋಷಿಸಿದೆ.

7.ನಗರ ಅಥವಾ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಯೋಜನೆ ಗಳಲ್ಲಿ ಹತ್ತು ವರ್ಷಗಳಿಗೊಮ್ಮೆ ಪರಿಶೀಲಿಸಲ್ಪಡುವ “ಹಸಿರು ವಲಯ” ಬಿಟ್ಟರೆ “ಶಾಶ್ವತ ಮತ್ತು ವಿಶೇಷ ” ಕೃಷಿ ವಲಯ ಎಂಬುದಿಲ್ಲ.

8..ಸಂಪೂರ್ಣ ರಫ್ತ್ತು ಕೃಷಿಗಾಗಿ SEZ ರೀತಿ Special Agricultural Zone ಗಳಿವೆ… ಅದೂ ಸರಿಯಲ್ಲ.. ಆದರೆ ಅದು ಬೇರೆ ವಿಷಯ..

9..ನಗರಾಭಿವೃದ್ಧಿ ಮತ್ತು ಕೈಗಾರಿಕಾಂಭಿವೃದ್ಧಿ ಯೋಜನೆಗಳ ಭಾಗವಾಗಿ ರೂಪಿಸಲ್ಪಡುವ ಯಾವ ಯೋಜನೆಗಳಲ್ಲೂ “ವಿಶೇಷ, ಶಾಶ್ವತ ” ಕೃಷಿ ವಲಯ ಅಂತಿಲ್ಲ… ಅದರ ಉದ್ದೇಶವೇ ರೈತರ ನಡುವೆ ವಿಬೇಧ, ಅನೈಕ್ಯಮತ್ಯಾ, ವೈಶಮ್ಯ ಹುಟ್ಟಿಸಿ ಹೋರಾಟವನ್ನು ಹತ್ತಿಕ್ಕುವುದು…

10.ಮೂರು ತಿಂಗಳ ಗಡುವು ಕಾನೂನಿನ ಭಾಗವಾಗಲೂ ಯಾವುದೇ ಕಾನೂನು ತರ್ಕವಿಲ್ಲ…

11.ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಸ್ತಾಪ ನಿಜವೇ ಆಗಿದ್ದಲ್ಲಿ ದೇವನಹಳ್ಳಿ ರೈತ ಹೋರಾಟದ ಮೂಲ ತಾತ್ವಿಕ ಭೂಮಿಕೆಯಾಗಿರುವ

“ನನ್ನ ಜಮೀನು, ನನ್ನ ನಿರ್ಧಾರ “ ಎಂಬುದನ್ನು ಸರ್ಕಾರ ಸಂಪೂರ್ಣ ವಾಗಿ ನಿರಾಕರಿಸಿ

ನಿಮ್ಮ ಭೂಮಿ, ನಮ್ಮ (ಸರ್ಕಾರ ಕಾರ್ಪೋರೆಟ್ )ನಿರ್ಧಾರ

ಎಂಬ ಕಾರ್ಪೋರೆಟ್ ಪರ, ರೈತ ವಿರೋಧಿ ನೀತಿಯನ್ನು ಮುಂದುವರೆಸಿದಂತಾಗುತ್ತದೆ..

9.ಇದು ನಿಜವೇ ಆದಲ್ಲಿ, ಸರ್ಕಾರದ ಕ್ಯಾಬಿನೆಟ್ ನಿರ್ಧಾರವೇ ಆಗಿಬಿಟ್ಟಲ್ಲಿ, ಕಾಂಗ್ರೆಸ್ಸ ಸರ್ಕಾರದ ಈ ಬಹಿರಂಗ ವಂಚನೆ ಮತ್ತು ದ್ರೋಹದ ವಿರುದ್ಧ ಬೃಹತ್ ಹೋರಾಟ ಕಟ್ಟಲೆ ಬೇಕಾಗುತ್ತದೆ..

ಒಳಮೀಸಲಾತಿ, ಅಲೆಮಾರಿ ಮೀಸಲಾತಿ, ಕಾಂತರಾಜ್ ವರದಿ ಇತ್ಯಾದಿ ಸಾಮಾಜಿಕ ನ್ಯಾಯದ ವಿಷಯಗಳಲ್ಲಿ ದಮನಿತರ ಪರವಾಗಿ ಖಚಿತ ನಿಲುವು ತೆಗೆದುಕೊಳ್ಳದ, ರೈತಾಪಿ ವಿಷಯಗಳಲ್ಲಿ ಕಾರ್ಪೋರೆಟ್ ಬಲಿಷ್ಠರಿಗೆ ಮಣಿಯದೇ ರೈತ ಪರ ನಿಲುವು ತೆಗೆದುಕೊಳ್ಳದ ಕಾಂಗ್ರೇಸ್ ಸರ್ಕಾರದ ಬಂಡವಾಳ ಶಾಹಿ, ಬ್ರಾಹ್ಮಣ ಶಾಹಿ, ಫ್ಯಾಶಿಸ್ಟ್  ನೀತಿಗಳ ವಿರುದ್ಧ ಬೃಹತ್ ಜನಾಂದೋಲನ ರೂಪಿಸದೆ ಬೇರೆ ಪರ್ಯಾಯವಿಲ್ಲವೆಂಬುದನ್ನು ಸಿದ್ದು ಸರ್ಕಾರ ಪದೇ ಪದೇ ಸಾಬೀತು ಮಾಡುತ್ತಿದೆ. ಜನರು ಎಡುವ ಕಡೆಯೆ ಮತ್ತೆ ಎಡವ ಬಾರದಷ್ಟೇ..

-ಶಿವಸುಂದರ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page