Saturday, January 31, 2026

ಸತ್ಯ | ನ್ಯಾಯ |ಧರ್ಮ

ವಿಧಾನಸಭೆಯಲ್ಲಿ ಬಳ್ಳಾರಿ ಹಿಂಸಾಚಾರದ ಪ್ರತಿಧ್ವನಿ: ನಾಗೇಂದ್ರ – ಜನಾರ್ದನ ರೆಡ್ಡಿ ವಾಗ್ವಾದ

ಬಳ್ಳಾರಿಯಲ್ಲಿ ನಡೆದ ಗಲಾಟೆಯ ವಿಷಯ ಶುಕ್ರವಾರ ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿತು. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಆರೋಪಿಸಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ರೆಡ್ಡಿ ನೀಡಿದ ಹೇಳಿಕೆಗಳನ್ನು ಪ್ರಸ್ತಾಪಿಸಿದ ನಾಗೇಂದ್ರ, “ಬ್ಯಾನರ್‌ಗಳನ್ನು ಹಾಕುವುದು ತಪ್ಪು ಎಂದು ಮುಖ್ಯಮಂತ್ರಿಗಳು ಎಂದಿಗೂ ಹೇಳಿಲ್ಲ,” ಎಂದು ಸ್ಪಷ್ಟಪಡಿಸಿದರು.

ಭದ್ರತೆಗೆ ಸಂಬಂಧಿಸಿದಂತೆ ಮಾತನಾಡಿದ ನಾಗೇಂದ್ರ, “ಉಪಮುಖ್ಯಮಂತ್ರಿಗಳು ಝಡ್‌-ಕೆಟಗರಿ (Z-category) ಭದ್ರತೆಯನ್ನು ಕೇಂದ್ರ ಸರ್ಕಾರ ಮಾತ್ರ ನೀಡಲು ಸಾಧ್ಯ ಎಂದು ಹೇಳಿದ್ದಾರೆಯೇ ಹೊರತು, ಇರಾನ್ ಅಥವಾ ಅಮೆರಿಕದಲ್ಲಿ ರಕ್ಷಣೆ ಪಡೆಯಿರಿ ಅಥವಾ ರಕ್ಷಣೆಗಾಗಿ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿಕೊಳ್ಳಿ ಎಂದು ಹೇಳಿಲ್ಲ,” ಎಂದು ಸಮರ್ಥಿಸಿಕೊಂಡರು.

ಬಳ್ಳಾರಿಯು ಪ್ರತ್ಯೇಕ “ಗಣರಾಜ್ಯ”ದಂತಾಗಿದೆ (Republic) ಎಂಬ ರೆಡ್ಡಿ ಅವರ ಆರೋಪವನ್ನು ನಾಗೇಂದ್ರ ತಳ್ಳಿಹಾಕಿದರು. ಸುಳ್ಳನ್ನು ಸತ್ಯ ಮಾಡಲು ರೆಡ್ಡಿ ಅವರು ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ ಜನಾರ್ದನ ರೆಡ್ಡಿ, ಬಿಜೆಪಿ ನಾಯಕ ಶ್ರೀರಾಮುಲು ಪರ ಬ್ಯಾಟ್ ಬೀಸಿದರು. “ಬಿಜೆಪಿ ಅಧಿಕಾರಕ್ಕೆ ಬಂದಾಗ ಭರತ್ ರೆಡ್ಡಿಯನ್ನು ಬಂಧಿಸಿ ನ್ಯಾಯ ಒದಗಿಸುತ್ತೇವೆ ಎಂದು ಶ್ರೀರಾಮುಲು ಹೇಳಿದ್ದಾರೆಯೇ ಹೊರತು, ಬೆದರಿಕೆ ಹಾಕಿಲ್ಲ. ಗೋಲಿಬಾರ್ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟರೂ ಸರ್ಕಾರ ಕೇವಲ ಗನ್ ಮ್ಯಾನ್ ನನ್ನು ಬಂಧಿಸಿದೆ, ಶಾಸಕ ಭರತ್ ರೆಡ್ಡಿಯನ್ನು ಬಂಧಿಸಿಲ್ಲ,” ಎಂದು ರೆಡ್ಡಿ ತಿರುಗೇಟು ನೀಡಿದರು.

ಕೊನೆಯಲ್ಲಿ ನಾಗೇಂದ್ರ ಅವರಿಗೆ ಟಾಂಗ್ ನೀಡಿದ ಜನಾರ್ದನ ರೆಡ್ಡಿ, “ವಾಲ್ಮೀಕಿ ನಿಗಮದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ನೀವು ಎಷ್ಟೇ ಪ್ರಯತ್ನಿಸಿದರೂ, ಶ್ರೀರಾಮುಲು ಅವರಿಗಿಂತ ದೊಡ್ಡ ಎಸ್ಟಿ (ST) ನಾಯಕರಾಗಲು ಸಾಧ್ಯವಿಲ್ಲ,” ಎಂದು ವ್ಯಂಗ್ಯವಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page