Monday, February 9, 2026

ಸತ್ಯ | ನ್ಯಾಯ |ಧರ್ಮ

ಕಮ್ಯೂನಿಸಂನಿಂದ ಮುಕ್ತಿ ಪಡೆಯಬೇಕು; ಆ ಸಿದ್ಧಾಂತವಿರುವಲ್ಲಿ ಅಭಿವೃದ್ಧಿ ಶೂನ್ಯ: ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಮ್ಯೂನಿಸ್ಟ್ ಸಿದ್ಧಾಂತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದನ್ನು ವಿನಾಶಕಾರಿ ಸಿದ್ಧಾಂತ ಎಂದು ಕರೆದಿದ್ದಾರೆ. ಕಮ್ಯೂನಿಸಂ ಅಸ್ತಿತ್ವದಲ್ಲಿರುವ ಕಡೆಗಳಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿಲ್ಲ, ಆದ್ದರಿಂದ ಜನರು ಈ ಭಾವಜಾಲದಿಂದ ಆದಷ್ಟು ಬೇಗ ಹೊರಬರಬೇಕು ಎಂದು ಅವರು ಆಶಿಸಿದ್ದಾರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಎಡಪಂಥೀಯ ಉಗ್ರಗಾಮಿತ್ವದ ಕುರಿತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ಈ ಸಿದ್ಧಾಂತಕ್ಕೆ ಉಳಿಗಾಲವಿಲ್ಲ ಎಂದು ತಿಳಿಸಿದರು. ಈಗಾಗಲೇ ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಕಮ್ಯೂನಿಸ್ಟ್ ಆಡಳಿತ ಅಂತ್ಯಗೊಂಡಿದ್ದು, ಕೇರಳದಲ್ಲಿ ಅವರ ಸರ್ಕಾರ ಕೊನೆಯುಸಿರು ಎಳೆಯುತ್ತಿದೆ ಎಂದು ಅವರು ಲೇವಡಿ ಮಾಡಿದರು.

ಎಡಪಂಥೀಯ ಉಗ್ರಗಾಮಿತ್ವವನ್ನು ಕೇವಲ ಕಾನೂನು ಸುವ್ಯವಸ್ಥೆಯ ಸಮಸ್ಯೆ ಅಥವಾ ಅಭಿವೃದ್ಧಿಯ ಕೊರತೆಯೆಂದು ನೋಡಬಾರದು, ಬದಲಿಗೆ ಇದೊಂದು ಸಿದ್ಧಾಂತದ ಸವಾಲಾಗಿದೆ ಎಂದು ಅಮಿತ್ ಶಾ ವಿವರಿಸಿದ್ದಾರೆ. ನಕ್ಸಲಿಸಂ ಹೆಚ್ಚಾಗುವ ಮೊದಲು ಬಸ್ತರ್ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯು ಯುಪಿ ಮತ್ತು ಬಿಹಾರಕ್ಕಿಂತ ಉತ್ತಮವಾಗಿತ್ತು ಎಂದು ನೆನಪಿಸಿದ ಅವರು, ಮುಂದಿನ ಹತ್ತು ವರ್ಷಗಳಲ್ಲಿ ಬಸ್ತರ್ ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಒಂದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶದಲ್ಲಿ ಮಾವೋವಾದಿ ಪ್ರಭಾವಿತ ಪ್ರದೇಶಗಳು ಈಗಾಗಲೇ ಶೇ. 90 ರಷ್ಟು ಕಡಿಮೆಯಾಗಿದ್ದು, ಮುಂಬರುವ ಮಾರ್ಚ್ ಅಂತ್ಯದ ವೇಳೆಗೆ ದೇಶದಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅವರು ಘೋಷಿಸಿದರು.

ಛತ್ತೀಸ್‌ಗಢದಲ್ಲಿ ನೂರಾರು ನಕ್ಸಲೈಟ್‌ಗಳನ್ನು ಹತ್ಯೆ ಮಾಡಲಾಗಿದ್ದು, ಸಾವಿರಾರು ಮಂದಿ ಈಗಾಗಲೇ ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದ ಗೃಹ ಸಚಿವರು, ಮಾವೋವಾದಿಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಜನಜೀವನದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು. ಶರಣಾದವರನ್ನು ಸರ್ಕಾರವು “ರೆಡ್ ಕಾರ್ಪೆಟ್” ಮೂಲಕ ಗೌರವಯುತವಾಗಿ ಸ್ವಾಗತಿಸುತ್ತದೆ ಎಂದು ತಿಳಿಸಿದ ಅವರು, ಸರ್ಕಾರವು ಒಂದೇ ಒಂದು ಗುಂಡನ್ನು ಹಾರಿಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.


Related Articles

ಇತ್ತೀಚಿನ ಸುದ್ದಿಗಳು

You cannot copy content of this page