Tuesday, March 3, 2026

ಸತ್ಯ | ನ್ಯಾಯ |ಧರ್ಮ

ನೌಕರರಿಗೆ ತೀವ್ರ ನಿರಾಶೆ: ಇಪಿಎಫ್ ಬಡ್ಡಿ ದರ ಯಥಾಸ್ಥಿತಿ

ದೆಹಲಿ: ದೇಶಾದ್ಯಂತ ಇರುವ ಸುಮಾರು 7 ಕೋಟಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಚಂದಾದಾರರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ.

ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತಮ್ಮ ನಿವೃತ್ತಿ ಉಳಿತಾಯದ ಮೇಲಿನ ಬಡ್ಡಿ ದರ ಹೆಚ್ಚಾಗಬಹುದು ಎಂದು ಕಳೆದ ಮೂರು ವರ್ಷಗಳಿಂದ ಆಶಿಸುತ್ತಿದ್ದ ಉದ್ಯೋಗಿಗಳಿಗೆ ಮತ್ತೊಮ್ಮೆ ನಿರಾಶೆಯಾಗಿದೆ. ಸೋಮವಾರ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರ ನೇತೃತ್ವದಲ್ಲಿ ನಡೆದ 239ನೇ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಸಭೆಯಲ್ಲಿ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷ 2025-26ಕ್ಕೆ ಅನ್ವಯವಾಗುವಂತೆ ಕಳೆದ ವರ್ಷದ ಶೇ. 8.25ರಷ್ಟು ಬಡ್ಡಿ ದರವನ್ನೇ ಘೋಷಿಸಲಾಗಿದೆ. 2022-23ರಲ್ಲಿ ಬಡ್ಡಿ ದರವು ಶೇ. 8.15ರಷ್ಟಿದ್ದು, 2023-24ರಲ್ಲಿ ಅದನ್ನು ಶೇ. 8.25ಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು. ಅಂದಿನಿಂದ ಸತತ ಮೂರನೇ ವರ್ಷವೂ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಗಮನಾರ್ಹ. ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 2013-14ರಲ್ಲಿ ಶೇ. 8.75ರಷ್ಟಿದ್ದ ಇಪಿಎಫ್ ದರವನ್ನು ಹಂತಹಂತವಾಗಿ ಕಡಿತಗೊಳಿಸುತ್ತಾ ಬಂದು, 2021-22ರಲ್ಲಿ ಅತ್ಯಂತ ಕನಿಷ್ಠ ಮಟ್ಟವಾದ ಶೇ. 8.10ಕ್ಕೆ ಇಳಿಸಲಾಗಿತ್ತು. ಆನಂತರ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಪ ಏರಿಕೆ ಮಾಡಲಾಗಿತ್ತು.

ಮತ್ತೊಂದೆಡೆ, ಸ್ಥಗಿತಗೊಂಡಿರುವ ಖಾತೆಗಳಲ್ಲಿರುವ ಕ್ಲೈಮ್ ಮಾಡದ ಠೇವಣಿಗಳಿಗೆ (Unclaimed Deposits) ಸಂಬಂಧಿಸಿದಂತೆ ಸಿಬಿಟಿ ಮಹತ್ವದ ನಿರ್ಧಾರ ಕೈಗೊಂಡಿದೆ. ಮೊದಲ ಹಂತದಲ್ಲಿ 1,000 ರೂಪಾಯಿಗಿಂತ ಕಡಿಮೆ ಹಣವಿರುವ 1.33 ಲಕ್ಷ ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿರುವ ಒಟ್ಟು 5.68 ಕೋಟಿ ರೂಪಾಯಿ ಮೊತ್ತವನ್ನು ಸೆಟಲ್ ಮಾಡಲು ಮಂಡಳಿ ನಿರ್ಧರಿಸಿದೆ. ಪ್ರಮುಖವಾಗಿ ಬಡ್ಡಿ ದರ ಹೆಚ್ಚಳವಾಗದ ಬಗ್ಗೆ ಕಾರ್ಮಿಕ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸುತ್ತಿವೆ.

ಮಾರುಕಟ್ಟೆಯ ಅನಿಶ್ಚಿತತೆಯನ್ನು ನೆಪವಾಗಿಟ್ಟುಕೊಂಡು ಸರ್ಕಾರವು ಕೋಟ್ಯಂತರ ಮಧ್ಯಮ ವರ್ಗದ ಉದ್ಯೋಗಿಗಳ ಆಶಯಗಳ ಮೇಲೆ ತಣ್ಣೀರು ಸುರಿಸಿದೆ ಎಂದು ಅವರು ಟೀಕಿಸುತ್ತಿದ್ದಾರೆ. ಈ ಪ್ರಸ್ತಾವನೆಯನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳುಹಿಸಿದ ನಂತರ, ಸರ್ಕಾರವು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ತಕ್ಷಣ ಚಂದಾದಾರರ ಖಾತೆಗಳಿಗೆ ಬಡ್ಡಿ ಜಮೆಯಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page