Monday, June 17, 2024

ಸತ್ಯ | ನ್ಯಾಯ |ಧರ್ಮ

15 ಲಕ್ಷ ರೂ ಸುಲಿಗೆ: ಇಬ್ಬರು ಅಪಹರಣಕಾರರ ಬಂಧನ

ಬೆಂಗಳೂರು: ಸಾಫ್ಟ್‌ವೇರ್‌ ಕಂಪನಿ ವ್ಯವಸ್ಥಾಕರ 14 ನೇ ವರ್ಷದ ಪುತ್ರನನ್ನು ಅಪಹರಿಸಿ 15 ಲಕ್ಷ ರೂ, ಸುಲಿಗೆ ಮಾಡಿದ್ದ ಇಬ್ಬರು ಅಪಹರಣಕಾರರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿ ಬಂಡೆಯ ಸುನಿಲ್‌ಕುಮಾರ್‌ (23) ಹಾಗೂ ಮಂಡಿಕಲ್‌ನ ವೈ.ವಿ.ನಾಗೇಶ್‌ ಎಂದು ತಿಳಿದು ಬಂದಿದೆ.

ನಾಗೇಶ್‌
ಸುನೀಲ್‌

ಪೊಲೀಸ್‌ ಮೂಲಗಳ ಪ್ರಕಾರ, ಅಪಹರಣಕಾರರು ಎಂ.ಡಿ. ಪುತ್ರನನ್ನು ಸಿನಿಮಾ ಶೈಲಿಯಲ್ಲಿ ಅಪಹರಿಸಿರುವುದಾಗಿ ತಿಳಿದು ಬಂದಿದ್ದು, ಡಿಸೆಪ್ಟೆಂಬರ್‌ 2 ರಂದು ಮಾನ್ಯತಾ ಟೆಕ್‌ಪಾರ್ಕ್‌ನ ಮಾನ್ಯತಾ ರೆಸಿಡೆನ್ಸಿಯಲ್ಲಿ ನೆಲೆಸಿದ್ದ ಎಂ.ಡಿ. ಮನೆಯವರನ್ನು ಭಯಬೀತಗೊಳಿಸಿ ಎಂ.ಡಿ. ಅವರ ಎದುರು ನಿಲುಗಡೆ ಮಾಡಿದ್ದ ಕಾರಿನ ಕೀಯನ್ನೇ ತೆಗೆದುಕೊಂಡು, ಆ ಕಾರಿನಲ್ಲೇ ಬಾಲಕರನ್ನು ಅಪಹರಿಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಪಹರಣಕಾರರು ದಾಬಸ್‌ಪೇಟೆಯಿಂದ ಕರೆ ಮಾಡಿ, 15 ಲಕ್ಷ ಬೇಡಿಕೆಯಿಟ್ಟಿದ್ದು, ಹಣಕೊಡದಿದ್ದರೆ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಅಪಹರಣಕಾರರು ತಾವುಗಳು ಇರುವ ಸ್ಥಳಕ್ಕೆ ಕರೆಸಿಕೊಂಡು 15 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ತದನಂತರ ಬಾಲಕನ್ನು ಹಸ್ತಾಂತರಿಸಿ ಕಣ್ಮರೆಯಾಗಿದ್ದರು.

ಈ ಹಿನ್ನಲೆ ಆರೋಪಿಗಳ ಪತ್ತೆಹಚ್ಚಲು ಈಶಾನ್ಯ ವಿಭಾಗದ ಡಿಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನಂತರ ಕಾರ್ಯಚರಣೆ ನಡೆಸಿದ ತಂಡವು ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್‌ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದೆ. ಅಷ್ಟರಲ್ಲೇ ಅಪಹರಣಕಾರು ಕೆಟಿಎಂ ಬೈಕ್‌, ಕೆನಾನ್‌ ಕ್ಯಾಮರ, ಪ್ಯಾಷನ್‌ ಪ್ರೊ ಬೈಕ್‌ ಖರೀದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಂತರ ಬಂಧಿತರಿಂದ ಬೈಕ್‌, ಕ್ಯಾಮರ ಸೇರಿದಂತೆ 9 ಲಕ್ಷ ರೂ ನಗದು ಹಣ ಹಾಗೂ ಬಾಲಕನ ಅಪಹರಣಕ್ಕೆ ಬಳಸಿದ್ದ ಕ್ರೆಟಾ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು