ಕರ್ನಾಟಕದಿಂದ ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಸೇರಿ ನಾಲ್ವರು ಅವಿರೋಧ ಆಯ್ಕೆ: ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕಾರ!

ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕರ್ನಾಟಕದ ನಾಲ್ವರು ರಾಜ್ಯಸಭಾ ಅಭ್ಯರ್ಥಿಗಳು ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಖರ್ಗೆ ಅವರೊಂದಿಗೆ ಕಾಂಗ್ರೆಸ್‌ನ ಪವನ್ ಖೇರಾ ಮತ್ತು ಮನ್ಸೂರ್ ಅಲಿ ಖಾನ್ ಹಾಗೂ ಬಿಜೆಪಿಯ ಎಂ. ನಾಗರಾಜ ಅವರು ಅವಿರೋಧವಾಗಿ ರಾಜ್ಯಸಭೆಗೆ ಪ್ರವೇಶ ಪಡೆದಿದ್ದಾರೆ.

ಪ್ರಸಕ್ತ ತಿಂಗಳ ಕೊನೆಯಲ್ಲಿ ತೆರವಾಗಲಿರುವ ನಾಲ್ಕು ರಾಜ್ಯಸಭಾ ಸ್ಥಾನಗಳನ್ನು ಭರ್ತಿ ಮಾಡಲು ಈ ಮುಂಚೆ ಚುನಾವಣೆಯನ್ನು ಘೋಷಿಸಲಾಗಿತ್ತು. ಹಾಲಿ ಸಂಸದರಾದ ಈರಣ್ಣ ಕಡಾಡಿ, ನಾರಾಯಣ ಕೋರಗಪ್ಪ (ಬಿಜೆಪಿ), ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್‌ನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಅಧಿಕಾರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸ್ಥಾನಗಳಿಗೆ ಪ್ರಕ್ರಿಯೆ ನಡೆದಿತ್ತು.

ಈ ನಾಲ್ಕು ಸ್ಥಾನಗಳಿಗಾಗಿ ಒಟ್ಟು ಐದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರ ಪರಿಶೀಲನೆಯ (Scrutiny) ಸಮಯದಲ್ಲಿ ಭೋಜಣ್ಣ ಸೋಮಯ್ಯ ಎಂಬ ಪಕ್ಷೇತರ ಅಭ್ಯರ್ಥಿಯ ನಾಮಪತ್ರವು ತಿರಸ್ಕೃತಗೊಂಡಿತು. ಕಣದಲ್ಲಿ ಕೇವಲ ನಾಲ್ವರು ಅಭ್ಯರ್ಥಿಗಳು ಮಾತ್ರ ಉಳಿದಿದ್ದರಿಂದ, ಚುನಾವಣಾ ಅಧಿಕಾರಿಯು ಇವರನ್ನು “ಅವಿರೋಧವಾಗಿ ಆಯ್ಕೆಯಾಗಿದ್ದಾರೆ” ಎಂದು ಅಧಿಕೃತವಾಗಿ ಘೋಷಿಸಿದರು.

ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಮ್ಮ ನಾಯಕರು ಸಂಸತ್ತಿನಲ್ಲಿ ಕರ್ನಾಟಕದ ಹಿತಾಸಕ್ತಿಗಳನ್ನು ಬಲವಾಗಿ ರಕ್ಷಿಸಲಿದ್ದಾರೆ ಹಾಗೂ ರಾಜ್ಯದ ನಿರಂತರ ಪ್ರಗತಿ ಮತ್ತು ಅಭಿವೃದ್ಧಿಗಾಗಿ ನಮ್ಮ ಜನರ ಆಶೋತ್ತರಗಳನ್ನು ದೆಹಲಿಯಲ್ಲಿ ಸಮರ್ಥವಾಗಿ ಧ್ವನಿಸಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ,” ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು