ಟಿಎಂಸಿ ಚೇರ್‌ಪರ್ಸನ್ ಸ್ಥಾನದಿಂದ ಮಮತಾ ಬ್ಯಾನರ್ಜಿ ಔಟ್: ಅರೂಪ್ ರಾಯ್ ಹೊಸ ಅಧ್ಯಕ್ಷ, ಅಭಿಷೇಕ್ ಬ್ಯಾನರ್ಜಿ ಅಮಾನತು!

ಕೋಲ್ಕತಾ: ತೃಣಮೂಲ ಕಾಂಗ್ರೆಸ್ (TMC) ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಂಡಾಯ ಶಾಸಕರಿಂದ ಮತ್ತೊಂದು ಭಾರಿ ಹಿನ್ನಡೆ ಎದುರಾಗಿದೆ. ಮಮತಾ ಬ್ಯಾನರ್ಜಿ ಅವರ ನಾಯಕತ್ವವನ್ನೇ ಪ್ರಶ್ನಿಸಿ ಸವಾಲು ಹಾಕಿರುವ ಬಂಡಾಯ ಬಣವು, ಪಕ್ಷದ ಚೇರ್‌ಪರ್ಸನ್ ಸ್ಥಾನದಿಂದ ಮಮತಾ ಅವರನ್ನು ಕೆಳಗಿಳಿಸಿ ಆ ಜಾಗಕ್ಕೆ ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಸೋಮವಾರ ನೇಮಕ ಮಾಡಿದೆ.

ಬಂಡಾಯ ನಾಯಕರ ಪರವಾಗಿ ನಾಯಕತ್ವ ವಹಿಸಿಕೊಂಡಿರುವ ರಿತಬ್ರತ ಬ್ಯಾನರ್ಜಿ ಈ ಹೊಸ ನೇಮಕಾತಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ತಮ್ಮದೇ ನಿಜವಾದ ತೃಣಮೂಲ ಕಾಂಗ್ರೆಸ್ ಎಂದು ಕರೆದುಕೊಳ್ಳುತ್ತಿರುವ ಈ ಬಂಡಾಯ ಬಣವು, ಪ್ರಸ್ತುತ ಪಕ್ಷಕ್ಕೆ ಸಮಾನಾಂತರವಾದ ಸಾಂಸ್ಥಿಕ ರಚನೆಯನ್ನು ಹುಟ್ಟುಹಾಕಿದ್ದು, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಳಿಸಿರುವುದಾಗಿ ಪ್ರಕಟಿಸಿದೆ.

ಇಲ್ಲಿಯವರೆಗೆ ಕೇವಲ ವಿಧಾನಸಭೆ ಮತ್ತು ಸಂಸದೀಯ ವಿಭಾಗಗಳಿಗಷ್ಟೇ ಸೀಮಿತವಾಗಿದ್ದ ಈ ಆಂತರಿಕ ದಂಗೆಯು ಈಗ ಪಕ್ಷದ ಮೂಲ ಸಾಂಸ್ಥಿಕ ರಚನೆಯೊಳಗೂ ಪೂರ್ಣ ಪ್ರಮಾಣದಲ್ಲಿ ನುಗ್ಗಿದೆ. ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ ಹಾಗೂ ಬಂಡಾಯ ಶಾಸಕರು ಪಕ್ಷದ ಕೌನ್ಸಿಲರ್‌ಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಅರೂಪ್ ರಾಯ್ ಅವರನ್ನು ಪಕ್ಷದ ನೂತನ ಚೇರ್‌ಪರ್ಸನ್ ಆಗಿ ನೇಮಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಈ ಮಹತ್ವದ ಸಭೆಯಲ್ಲಿ ಸ್ವತಃ ಅರೂಪ್ ರಾಯ್ ಕೂಡ ಭಾಗವಹಿಸಿದ್ದರು.

ಪಕ್ಷದಲ್ಲಿ ತಲೆದೋರಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ಬಗೆಹರಿಸುವ ಸಲುವಾಗಿಯೇ ಈ ತುರ್ತು ಸಭೆಯನ್ನು ಆಯೋಜಿಸಲಾಗಿತ್ತು ಎಂದು ಬಂಡಾಯ ಬಣ ಸ್ಪಷ್ಟಪಡಿಸಿದೆ. ಪಕ್ಷದ ನಿಯಮಾವಳಿಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಮರುರಚಿಸಬೇಕಾಗುತ್ತದೆ, ಆದರೆ 2022ರ ಫೆಬ್ರವರಿಯಲ್ಲಿ ರಚನೆಯಾಗಿದ್ದ ಹಿಂದಿನ ಸಮಿತಿಯು ಯಾವುದೇ ಪುನರ್ರಚನೆ ಇಲ್ಲದೆಯೇ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದೆ ಎಂದು ರಿತಬ್ರತ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು