ಬೆಂಗಳೂರು: ಪೌರಕಾರ್ಮಿಕರ ಕುರಿತು ಇತ್ತೀಚೆಗೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಖಾತೆ ಸಚಿವ ಕೃಷ್ಣ ಬೈರೇಗೌಡ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕೇಂದ್ರ ಕಾರ್ಮಿಕ ಮಂಡಳಿ (AICCTU) ಸದಸ್ಯರು ನಿನ್ನೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ಪೌರಕಾರ್ಮಿಕರ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರು ನೀಡಿರುವ ಹೇಳಿಕೆ ಅವಮಾನಕರವಾಗಿದೆ ಎಂದು ಆರೋಪಿಸಿದ AICCTU ಸದಸ್ಯರು, ಸಚಿವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ನಡೆಸುತ್ತಿದ್ದ AICCTU ಕಾರ್ಯಕರ್ತರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದರು. ನೀವು ವಾಸಿಸುವ ನಗರವನ್ನು ಕಾರ್ಮಿಕ ವರ್ಗ ನಿರ್ಮಿಸುತ್ತದೆ! ನಾವೂ ಸಮಾನ ನಾಗರಿಕರೇ ಎಂದು ಪ್ರತಿಭಟನಾಕಾರರು ಘೋಷಿಸಿದರು.
ಪೌರಕಾರ್ಮಿಕರ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರ ವರ್ತನೆಯನ್ನು AICCTU ಖಂಡಿಸಿದೆ. ಸಚಿವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಕಾರ್ಮಿಕರ ಶೋಷಣೆಯನ್ನು ಕೊನೆಗೊಳಿಸಬೇಕು, ಅವರ ಮೂಲಭೂತ ಹಕ್ಕುಗಳು ಹಾಗೂ ಸುರಕ್ಷತೆಯನ್ನು ಖಾತರಿಪಡಿಸಬೇಕು ಮತ್ತು ಕಾರ್ಮಿಕರ ಘನತೆಯನ್ನು ಕಾಪಾಡಬೇಕು ಎಂದು AICCTU ಆಗ್ರಹಿಸಿದೆ.ಸಚಿವ ಕೃಷ್ಣ ಭೈರೇಗೌಡ ಇತ್ತೀಚೆಗೆ ಪೌರಕಾರ್ಮಿಕರಲ್ಲಿ ಶೇ.30ರಷ್ಟು ಗೈರುಹಾಜರಾತಿ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಯಿತು. ಈ ವೇಳೆ, ಖಾಯಂ ಉದ್ಯೋಗಕ್ಕಾಗಿ ಒತ್ತಾಯಿಸುತ್ತಿರುವವರಿಗೆ ಸೇವೆಯನ್ನು ಖಾಯಂಗೊಳಿಸುವ ಹಕ್ಕು ಇದೆಯೇ ಎಂದು ಅವರು ಪ್ರಶ್ನಿಸಿದ್ದರು.ಬಿಬಿಎಂಪಿ ಪೌರಕಾರ್ಮಿಕರ ಸಂಘ ಹಾಗೂ ಅಖಿಲ ಭಾರತ ಕೇಂದ್ರ ಕಾರ್ಮಿಕ ಮಂಡಳಿ (AICCTU)ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಚಿವರ ಹೇಳಿಕೆಗಳನ್ನು ಖಂಡಿಸಿ, ಅವು ಮಾನವೀಯತೆಯೇ ಇಲ್ಲದ ಹಾಗೂ ದರ್ಪದ, ಊಳಿಗಮಾನ್ಯ ಮನೋಭಾವವನ್ನು ಪ್ರತಿಬಿಂಬಿಸುವ ಹೇಳಿಕೆಗಳಾಗಿವೆ ಎಂದು ಆರೋಪಿಸಿದರು.
ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಎಂ, ಪೌರಕಾರ್ಮಿಕರು ಸೂಕ್ತ ಸುರಕ್ಷತಾ ಸಾಧನಗಳಿಲ್ಲದೆ, ನಿಗದಿತ ಕೆಲಸದ ಅವಧಿ ಅಥವಾ ವಾರದ ರಜೆಯೂ ಇಲ್ಲದೆ ನಗರ ಪ್ರದೇಶಗಳ ವಿಷಕಾರಿ ತ್ಯಾಜ್ಯವನ್ನು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.ಕಾರ್ಮಿಕ ನಿಯಮಗಳ ಪ್ರಕಾರ 180 ದಿನಗಳ ಸೇವೆ ಪೂರ್ಣಗೊಳಿಸಿದ ಕಾರ್ಮಿಕರು ಖಾಯಂ ಹುದ್ದೆಗೆ ಅರ್ಹರಾಗುತ್ತಾರೆ. ಆದರೆ, ಅನೇಕ ಕಾರ್ಮಿಕರು 15ರಿಂದ 20 ವರ್ಷಗಳ ಕಾಲ ಅಸ್ಥಿರ ಗುತ್ತಿಗೆ ವ್ಯವಸ್ಥೆಯಡಿ ಕೆಲಸ ಮಾಡುತ್ತಲೇ ಇದ್ದಾರೆ ಎಂದು ಅವರು ಆರೋಪಿಸಿದರು.AICCTUನ ವಿನಯ್ ಶ್ರೀನಿವಾಸ್, ಬಡವರು ಹಾಗೂ ಕಾರ್ಮಿಕ ವರ್ಗದವರ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯವು ಪೌರಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳ ವಿಚಾರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದರು.
ಬಡವರು ಹಾಗೂ ಕಾರ್ಮಿಕ ವರ್ಗದವರ ಬಗ್ಗೆ ಈ ಸರ್ಕಾರಕ್ಕಿರುವ ನಿರ್ಲಕ್ಷ್ಯ ಎಲ್ಲ ಕ್ಷೇತ್ರಗಳಲ್ಲೂ ಸ್ಪಷ್ಟವಾಗಿದೆ. ಕಾನೂನನ್ನು ಬಹಿರಂಗವಾಗಿ ಉಲ್ಲಂಘಿಸಿ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗುತ್ತಿದೆ. ಇದೀಗ ಪೌರಕಾರ್ಮಿಕರ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಸಚಿವರು ಸಾರ್ವಜನಿಕವಾಗಿ ಅವರನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.ಪ್ರಸ್ತುತ ಖಾಸಗಿ ಗುತ್ತಿಗೆದಾರರ ಮೂಲಕ ನಡೆಯುತ್ತಿರುವ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಧ್ಯವರ್ತಿಗಳಿಗೆ ಪಾವತಿಸಲಾಗುತ್ತಿರುವ ಹಣವನ್ನು ಕಾರ್ಮಿಕರ ವೇತನ ಹಾಗೂ ಭವಿಷ್ಯ ನಿಧಿ (PF), ಉದ್ಯೋಗಿಗಳ ರಾಜ್ಯ ವಿಮೆ (ESI) ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳಿಗೆ ಬಳಸಬೇಕು ಎಂದು ಅವರು ಒತ್ತಾಯಿಸಿದರು.ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸ್ಥಳವನ್ನು ತೆರವುಗೊಳಿಸಲು ಪೊಲೀಸರು ಮುಂದಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಆದರೆ ಸಚಿವರು ಕ್ಷಮೆಯಾಚಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಘದ ನಾಯಕರು ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು
- ಪೌರಕಾರ್ಮಿಕರನ್ನು ಅವಮಾನಿಸಿದ್ದಕ್ಕಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಕೂಡಲೇ ಕ್ಷಮೆಯಾಚಿಸಬೇಕು.
- ಕಾರ್ಮಿಕ ಕಾನೂನುಗಳ ಅನ್ವಯ ದೀರ್ಘಕಾಲದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರ ಸೇವೆ ಖಾಯಂಗೊಳಿಸಬೇಕು.
- ಖಾಸಗಿ ಮಧ್ಯವರ್ತಿಗಳ ವ್ಯವಸ್ಥೆಯನ್ನು ತೆಗೆದುಹಾಕಿ, ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸಬೇಕು. PF ಮತ್ತು ESI ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳನ್ನು ಖಾತರಿಪಡಿಸಬೇಕು.
