Tuesday, June 24, 2025

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 16: ಕರಾವಳಿಯಲ್ಲಿ ಕೋಮು ಸಾಮರಸ್ಯದ ಇತಿಹಾಸ

“ಬಪ್ಪನಾಡಿನ ದೇವಾಲಯವನ್ನು ಕಟ್ಟಿಸಿದಾತ ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಎಂಬುದು ಎಲ್ಲರಿಗೂ ಗೊತ್ತು. ಆತನನ್ನೇ ಈಗ ಚಡ್ಡಿಗಳು ಬಬ್ರುವಾಹನ ಮಾಡುತ್ತಿದ್ದಾರೆ.” ಚಿಂತಕರಾದ ನಿಖಿಲ್ ಕೋಲ್ಪೆಯವರ ಬರಹದಲ್ಲಿ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿ ಕೋಮುವಾದ ಹೆಡೆಯೆತ್ತಿ ನಿಂತಿದೆ. ಧರ್ಮದ ಆಧಾರದಲ್ಲಿ ಮತಕೇಳುವ ಪರಿಪಾಠ ಹಿಂದಿಗಿಂತಲೂ ಹೆಚ್ಚಾಗಿದೆ. ರಾಜಕೀಯ ಲಾಭಕ್ಕಾಗಿ ಧರ್ಮಗಳನ್ನು ವಿಭಜಿಸಿ ಪರಸ್ಪರ ಹೊಡೆದಾಡಿಸುವ ಪ್ರಯತ್ನಗಳೂ ನಿರಂತರ ನಡೆಯುತ್ತಿವೆ. ಕೋಮು ಆಧಾರದಲ್ಲಿ ಅವರು- ನಾವು ಎನ್ನುವ ಸ್ಥಿತಿಗೆ ಸಮಾಜ ಬಂದು ಮುಟ್ಟಿದೆ. ಆದರೆ, ಎರಡು ಮೂರು ದಶಕಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಕರಾವಳಿಗೆ ಕೋಮು ಸೌಹಾರ್ದದ ದೊಡ್ಡ ಇತಿಹಾಸವೇ ಇದೆ. ಹಲವು ಶತಮಾನಗಳಿಂದ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರು ಜೊತೆಜೊತೆಯಾಗಿ ಒಬ್ಬರಿಗೊಬ್ಬರು ಹೊಂದಿಕೊಂಡು ಬದುಕುತ್ತಿದ್ದಾರೆ.

ಇತಿಹಾಸಕಾರರು ಅಂಜುಮನ್ ಶಾಸನಗಳೆಂದು ಕರೆಯುವ ದಾಖಲೆಗಳು ಕರಾವಳಿಯಲ್ಲಿದ್ದ ಕೋಮು ಸಾಮರಸ್ಯವನ್ನು ಎತ್ತಿತೋರಿಸುತ್ತವೆ.1418ರ ಕೊಡಿಯಾಲ್ ಬೈಲ್ ಶಾಸನದ ಪ್ರಕಾರ ಇಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾನಿಕನಾಗಿದ್ದ ತಿಮ್ಮಣ್ಣ ಒಡೆಯ ನಾಲ್ಕು ಮಸೀದಿಗಳನ್ನು ಧ್ವಂಸ ಮಾಡಿದ್ದ. ಅಂಜುಮನ್ ದೂರು ನೀಡಿದಾಗ ದೊರೆ ಅವರಿಗೆ ದತ್ತಿ ನೀಡಿದ್ದಲ್ಲದೇ, ಯಾವುದೇ ಹಿಂದೂ ಆ ಜಾಗದಲ್ಲಿ ತೊಂದರೆ ಉಂಟು ಮಾಡಿದರೆ, ತನಗೆ ಮತ್ತು ದೇವರಿಗೆ ಉತ್ತರದಾಯಿ ಎಂದು ತಾಕೀತು ಮಾಡಿದ್ದ.

1551ರ ಒಂದು ಶಾಸನದ ಪ್ರಕಾರ, ಇಕ್ಬಾಲ್ ಖಾನ್ ಎಂಬಾತ ಬಾರಕೂರಿನಲ್ಲಿ ವಿಜಯನಗರ ಅರಸರ ಸ್ಥಾನಿಕ ಅಧಿಕಾರಿಯಾಗಿದ್ದಾಗ ಕೋಟೇಶ್ವರಲ್ಲಿ ಒಂದು ದೇವಾಲಯವನ್ನು ಕೆಲವರು ನಾಶಮಾಡಿ ಹಲವರನ್ನು ಕೊಂದಿದ್ದರು. ಆಗ ಇಕ್ಬಾಲ್ ಖಾನ್ ತಕ್ಷಣವೇ ದೇವಾಲಯವನ್ನು ಮರುನಿರ್ಮಿಸಿಕೊಟ್ಟಿದ್ದ.

1615ರ ಒಂದು ಶಾಸನದ ಪ್ರಕಾರ ಹಿಂದೂ ರಾಜನೊಬ್ಬ (ಹೆಸರು ಉಲ್ಲೇಖಿಸಿಲ್ಲ) ಪಶ್ಚಿಮಘಟ್ಟದ ಅಪರಿಚಿತ ಸ್ಥಳದಲ್ಲಿ ಮಸೀದಿ ಕಟ್ಟಿಸಿದ ಉಲ್ಲೇಖ ಇದೆ. ನಂತರ ಕೆಳದಿಯ ಅರಸ ವೆಂಕಟಪ್ಪ ನಾಯಕ 1627ರಲ್ಲಿ ಭುವನಗಿರಿ ಎಂಬಲ್ಲಿ ದರ್ಗಾ ಕಟ್ಟಿಸಿದ ಉಲ್ಲೇಖ ಶಾಸನವೊಂದರಲ್ಲಿದೆ. ವೆಂಕಟಪ್ಪ ನಾಯಕನ ನೆರವಿನಿಂದ ಮುಲ್ಲಾ ಹಾಜಿ ಎಂಬಾತ 1628ರಲ್ಲಿ ಹುಲಿಕಲ್ ಘಾಟಿಯಲ್ಲಿ ದರ್ಗಾ ಒಂದನ್ನು ಕಟ್ಟಿಸಿದ್ದ. ವೆಂಕಟಪ್ಪ ನಾಯಕನ ಮಗ ತಾವರೆಕೆರೆ ಮಸೀದಿಗೆ ಎಡಹಳ್ಳಿ ಎಂಬ ಗ್ರಾಮವನ್ನು ಉಂಬಳಿಯಾಗಿ ನೀಡಿದ ಉಲ್ಲೇಖ ಇದೆ.

ಕೆಳದಿಯ ರಾಣಿ ಚೆನ್ನಮ್ಮ ಮಂಗಳೂರು ಸಮೀಪದ ಗಂಜಿಮಠ ಮತ್ತು ಕಿನ್ನಿಕಂಬಳ ಗ್ರಾಮಗಳಲ್ಲಿ ಮುಸ್ಲಿಂ ಸಂತರಿಗೆ ನೆಲದಾನ ಮಾಡಿದ ಉಲ್ಲೇಖವಿದೆ.

ಅಜಿಲ ಅರಸರು ಬಂಟ್ವಾಳ ತಾಲೂಕಿನ ಅಜಿಲಮೊಗರು ದರ್ಗಾಕ್ಕೆ ನೆಲದಾನ ಮಾಡಿದ ಉಲ್ಲೇಖವಿದೆ. ನೇತ್ರಾವತಿ ನದಿಯ ದಡದಲ್ಲಿರುವ ಈ ದರ್ಗಾಕ್ಕೆ ಉರೂಸಿನ ಸಂದರ್ಭದಲ್ಲಿ ನದಿಯಾಚೆ ಇರುವ ಕಡೇಶ್ವಾಲ್ಯ ದೇವಾಲಯದಿಂದ ಅಕ್ಕಿ ಮೆರವಣಿಗೆಯಲ್ಲಿ ಬರುತ್ತದೆ. ಅಲ್ಲಿನ ಜಾತ್ರೆಯ ಸಂದರ್ಭ ದರ್ಗಾದಿಂದ ಎಣ್ಣೆ ಮೆರವಣಿಗೆಯಲ್ಲಿ ಹೋಗುತ್ತದೆ. ಇದರ ಹಿಂದೆ ಸಾಂಕೇತಿಕತೆ ಇದೆ. ಹಿಂದೂಗಳು ಹೆಚ್ಚಾಗಿ ರೈತರು. ಹಾಗಾಗಿ ಅಕ್ಕಿ ನೀಡುತ್ತಾರೆ. ಮುಸ್ಲಿಮರು ಹೆಚ್ಚಾಗಿ ವ್ಯಾಪಾರಿಗಳು ಅದಕ್ಕಾಗಿ ಎಣ್ಣೆ ನೀಡುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಅವಲಂಬಿಸಿದ್ದಾರೆ. ಈ ಸಹಕಾರವನ್ನೇ ಈ ಸಂಪ್ರದಾಯ ಬಿಂಬಿಸುತ್ತದೆ. ಇಂದು ಇಲ್ಲಿ ನದಿಯು ಅಣೆಕಟ್ಟಿನ ನೀರಿನಿಂದ ಮುಳುಗಿದೆ ಮತ್ತು ಇಲ್ಲೀಗ ಒಂದು ಸೇತುವೆಯೂ ಆಗುತ್ತಿದೆ. ಹಿಂದಿನ ಹೃದಯದ ಸೇತುವೆಯನ್ನು ಇದು ಮತ್ತೆ ಕಟ್ಟಬಹುದೇ? ಗೊತ್ತಿಲ್ಲ!

ಇಂತಹ ಪರಂಪರೆ ಇರುವ ತುಳುನಾಡಿನಲ್ಲಿ ಇಂದು ಕೋಮುದ್ವೇಷ ಹೆಚ್ಚಾಗಿದೆ.

ಕರಾವಳಿಗೆ 1342ರಷ್ಟು ಹಿಂದೆಯೇ ಭೇಟಿ ನೀಡಿದ್ದ ಪ್ರವಾಸಿ ಇಬ್ನ್ ಬತೂತ ಮಂಗಳೂರನ್ನು ಮಂಜರುನ್ ಎಂದು ಕರೆದಿದ್ದಾನೆ. ಇಲ್ಲಿ ಹಿಂದೂ- ಮುಸ್ಲಿಮರು ಅಣ್ಣತಮ್ಮಂದಿರಂತೆ ಬದುಕುತ್ತಿದ್ದಾರೆ ಎಂದು ಆತ ತನ್ನ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾನೆ. ಇಲ್ಲಿ 4000 ಮುಸ್ಲಿಮರು ವ್ಯಾಪಾರ ಮಾಡುತ್ತಿದ್ದು, ಕೆಲವರು ಉನ್ನತ ಮಟ್ಟದ ಅಧಿಕಾರಿಗಳಾಗಿಯೂ ಇದ್ದರು ಎಂದು ಆತ ಬರೆದಿದ್ದಾನೆ.

ವಿಜಯನಗರಕ್ಕೆ ಪರ್ಷಿಯಾದ ರಾಯಭಾರಿಯಾಗಿ 1448ರಲ್ಲಿ ಬಂದಿದ್ದ ಅಬ್ದುಲ್ ರಜಾಕ್ ಮಂಗಳೂರಿಗೆ ಬಂದು ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಾಲಯದ ದರ್ಶನ ಮಾಡಿದ ದಾಖಲೆಯಿದೆ.

ಇಲ್ಲಿ ಮುಸ್ಲಿಮರಿಗೆ ಉನ್ನತ ಸ್ಥಾನಮಾನ ಇರುವುದಾಗಿ 16ನೇ ಶತಮಾನದಲ್ಲಿ ಬಂದಿದ್ದ ಪೋರ್ಚುಗೀಸ್ ಯಾತ್ರಿ ದುಆರ್ತೆ ಬರ್ಬೋಸ ಬರೆದಿದ್ದಾನೆ.

ಮೂಸ ಬ್ಯಾಯಿ (ಬ್ಯಾರಿ) ಎಂಬಾತ ಕೆಳದಿ ರಾಜ್ಯದ ಸೇನಾಪತಿಗಳಲ್ಲಿ ಒಬ್ಬನಾಗಿದ್ದ ಎಂದು 1523ರಲ್ಲಿ ಇಲ್ಲಿಗೆ ಬಂದಿದ್ದ ಪೀಟರ್ ಡೇಲ್ವಿಲ್ಲೆ ಬರೆದಿದ್ದಾನೆ. ಉಳ್ಳಾಲ ರಾಣಿ ಅಬ್ಬಕ್ಕ, ಚೌಟ ಮತ್ತು ಬಂಗ ಅರಸರ ಸೇನೆಗಳಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರು ಇರುವುದನ್ನು ಕೂಡ ಆತ ಉಲ್ಲೇಖಿಸಿದ್ದಾನೆ.

ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಕರಾವಳಿಯ ಹಲವಾರು ದೇಗುಲಗಳಿಗೆ ತಸ್ದೀಕ್ ಅಥವಾ ಉಂಬಳಿ ನೀಡಿದ್ದಾರೆ. ಟಿಪ್ಪು ಮಂಗಳೂರಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಶರವು ಮಹಾಗಣಪತಿ ದೇವಾಲಯಕ್ಕೆ ಇಡೀ ಮೂಡುಶೆಡ್ಡೆ ಗ್ರಾಮವನ್ನು ಉಂಬಳಿ ನೀಡಿದ್ದ. ದಿನದ ಖರ್ಚಿಗೆ ಒಂದು ವರಹ (ನಾಲ್ಕು ರೂಪಾಯಿ- ಆ ಕಾಲಕ್ಕೆ ಇದು ದೊಡ್ಡ ಮೊತ್ತ) ತಸ್ದೀಕ್ ನೀಡಲಾಗುತ್ತಿತ್ತು. ಅದಲ್ಲದೇ ವರ್ಷಕ್ಕೆ ಏಳ್ನೂರ ತೊಂಭತ್ತಮೂರು ರೂಪಾಯಿ ಅರ್ವತ್ತೊಂಭತ್ತು ಪೈಸೆ ತಸ್ದೀಕ್ ನೀಡಲಾಗುತ್ತಿತ್ತು.

ಇದಕ್ಕಿಂತ ಕುತೂಹಲಕಾರಿ ವಿಷಯ ಎಂದರೆ, ಈಗಿನ ಧರ್ಮಸ್ಥಳದ ಮೂಲ ಹೆಸರು ಕುಡುಮ. ಅಲ್ಲಿನ ಆಡಳಿತಗಾರ ಮಂಜಯ್ಯ ಹೆಗ್ಗಡೆಯನ್ನು ಕೆಲವರು ಕೊಲೆ ಮಾಡಿದಾಗ, ತಕ್ಷಣ ಮಧ್ಯ ಪ್ರವೇಶಿಸಿದ ಟಿಪ್ಪು, ಆತನ ಮಗ ಕುಮಾರ ಹೆಗ್ಗಡೆಗೆ ಅಧಿಕಾರ ವರ್ಗಾಯಿಸಿದ್ದ!

ಬಪ್ಪನಾಡಿನ ದೇವಾಲಯವನ್ನು ಕಟ್ಟಿಸಿದಾತ ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಎಂಬುದು ಎಲ್ಲರಿಗೂ ಗೊತ್ತು. ಆತನನ್ನೇ ಈಗ ಚಡ್ಡಿಗಳು ಬಬ್ರುವಾಹನ ಮಾಡುತ್ತಿದ್ದಾರೆ.

ತುಳುನಾಡಿನ ಭೂತಾರಾಧನೆಯಲ್ಲೂ ಮುಸ್ಲಿಮರಿಗೆ ಪ್ರಮುಖ ಪಾತ್ರವಿದೆ. ಇಲ್ಲಿ ವೀರರು ಮತ್ತು ನಿಗೂಢವಾಗಿ ಕಾಣೆಯಾದವರು, ದುರಂತ ಮರಣವನ್ನಪ್ಪಿದವರು ಭೂತಗಳಾದದ್ದು ಎಲ್ಲರಿಗೂ ಗೊತ್ತಿದೆ. ಆದುದರಿಂದಲೇ ಈ ನೆಲದಲ್ಲಿ ಮುಸ್ಲಿಂ ಭೂತಗಳು, ಚೀನೀ ಭೂತಗಳೂ ಇವೆ. ಬಿಲ್ಲವ ವೀರರಾದ ಕೋಟಿ- ಚೆನ್ನಯರ ಕೆಲವು ಗರಡಿಗಳಲ್ಲಿ ಮುಸ್ಲಿಂ ಮಕ್ಕಳು ಎಂಬ ಮರದ ಪ್ರತಿಮೆಗಳು ಇವೆ.
ತುಳುವರು, ಅದರಲ್ಲೂ ಮೊಗವೀರರು ಮುಖ್ಯವಾಗಿ ಆರಾಧಿಸುವ ಬೊಬ್ಬರ್ಯ ಮೂಲದಲ್ಲಿ ಬಬ್ಬು ಬ್ಯಾರಿ ಅಥವಾ ಬಾವ ಬ್ಯಾರಿ! ಬೆಲಿಯ ಅಂದರೆ ದೊಡ್ಡ ಫಾತಿಮ ಮತ್ತು ಮುರವೆ ಬ್ಯಾರಿ ದಂಪತಿಗಳ ಮಗ.

ಅದಲ್ಲದೇ ಆಲಿ ಭೂತವೂ ಇದೆ. ಆತ ಮಂತ್ರವಾದಿಯಾಗಿದ್ದವನು. ಅತ್ತಾವರ ದೈವಂಗಳ್, ಜುಮಾದಿ, ಸಿರಿ ಮುಂತಾದ ಪಾಡ್ದನಗಳಲ್ಲಿ ಮುಸ್ಲಿಂ ಪಾತ್ರಗಳು ಬರುತ್ತವೆ.

ಭೂತಾರಾಧನೆಯಲ್ಲಿ ಮುಸ್ಲಿಮರಿಗೆ ಗೌರವದ ಮತ್ತು ಮಹತ್ವದ ಸ್ಥಾನವಿತ್ತು. ಉದ್ಯಾವರ ಮಾಡ, ಬಸರೂರು, ಬಾರಕೂರು ಮುಂತಾದ ಕಡೆಗಳಲ್ಲಿ ದೈವಾರಾಧನೆ ಆರಂಭವಾಗಬೇಕಾದರೆ, ಮುಸ್ಲಿಮರ ಹಾಜರಾತಿ ಇರಲೇಬೇಕಾಗಿತ್ತು. ಉದಾಹರಣೆಗೆ ಉದ್ಯಾವರ ಮಾಡದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರು ವೀಳ್ಯ ಕೊಡಬೇಕು.

ನನ್ನೂರಾದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಅರಸು ಮುಂಡತ್ತಾಯ ಮಾಡ ಸಹಿತ ಹಲವು ಕಡೆ ತಲೆತಲಾಂತರಗಳಿಂದ ಅಲಂಕಾರ ಮತ್ತು ಸುಡುಮದ್ದಿನ ಕೆಲಸ ಮುಸ್ಲಿಮರಿಗೇ! (ಉಡುಪಿ ಪರ್ಯಾಯದಲ್ಲೂ ಹೀಗಿತ್ತು).

ಕುಂದಾಪುರ ಕರಾವಳಿಯಲ್ಲಿ ಮೀನುಗಾರರು ಮೀನಿನ ಬರದ ಸಮಯದಲ್ಲಿ ನಡೆಸುವ ಸೀರಣಿ ಪೂಜೆ ಅಂದರೆ, ಪುಟ್ಟ ದೋಣಿಯಲ್ಲಿ ಪಂಚಕಜ್ಜಾಯವನ್ನು ತೇಲಿ ಬಿಡುವ ವಿಧಿಗಳನ್ನು ಮುಸ್ಲಿಂ ಮೌಲವಿಗಳು ನಡೆಸುತ್ತಿದ್ದರು.
ಅಜಿಲಮೊಗರು, ಮಂಗಳೂರಿನ ಸೈದಾನಿ ಬೀಬಿ ದರ್ಗಾ, ಕಾಜೂರು ಮುಂತಾದ ದರ್ಗಾಗಳಿಗೆ ಸಾವಿರಾರು ಮುಸ್ಲಿಮೇತರರು ಹರಕೆ ಹೊರುತ್ತಾರೆ. ಮಂಗಳೂರಿನ ಬೋಳಾರದಲ್ಲಿ ಇದ್ದ ನನ್ನ ಅಜ್ಜಿ ಗೌರಿ ವಾರಕ್ಕೊಮ್ಮೆ ನನ್ನನ್ನು ಅಲ್ಲಿಗೆ ಒಯ್ದು ಒಂದು ತುಂಡು ಮಲ್ಲಿಗೆ ಇಡುತ್ತಿದ್ದರು. ಕೆಲವರ್ಷಗಳ ಹಿಂದಿನ ತನಕ ಕಂದಾವರ ಬೈಲು ದರ್ಗಾದ ಆಡಳಿತ ಹಿಂದೂ ಕುಟುಂಬವೊಂದು ನೋಡಿಕೊಳ್ಳುತ್ತಿತ್ತು.

ಕಾರ್ಕಳದ ಅತ್ತೂರು ಚರ್ಚಿಗೆ ಸಾವಿರಾರು ಅನ್ಯ ಧರ್ಮೀಯರು ಹರಕೆ ಹೊರುತ್ತಾರೆ, ಜಾತ್ರೆಯಲ್ಲಿ ಭಾಗವಹಿಸುತ್ತಾರೆ.

ಹಿಂದೆ ಹಿಂದೂ, ಮುಸ್ಲಿಂ, ಕ್ರೈಸ್ತರು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು. ಈಗ ಅವೆಲ್ಲಾ ಕಡಿಮೆಯಾಗಿರುವುದು ಕಂಡುಬರುತ್ತದೆ. ಈ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೋಮುವಾದದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಪೊಲೀಸರು ಕೂಡಾ ಇಂತಹಾ ಹಿನ್ನೆಲೆಯನ್ನು ತಿಳಿದುಕೊಂಡು, ಅದರಂತೆಯೇ ಕಾರ್ಯಾಚರಿಸಿದರೆ, ಕೋಮುಶಕ್ತಿಗಳನ್ನು ನಿಯಂತ್ರಿಸಿ, ಸೌಹಾರ್ದ ಕಾಪಾಡಲು ಅನುಕೂಲವಾಗುವವುದು. ಇಲ್ಲಿ ಸರಕಾರ ತೆಗೆದುಕೊಳ್ಳುವ ದೃಢ ನಿರ್ಧಾರ ಬಹಳ ಮುಖ್ಯ.

(ಇಲ್ಲಿ ಬರೆದಿರುವ ಬೂತಗಳ ಮತ್ತು ಇತಿಹಾಸದ ವಿಷಯಗಳನ್ನು ನನ್ನ ಸ್ವಂತ ಅನುಭವ ಮತ್ತು ಇತ್ತೀಚೆಗೆ ದಿವಂಗತರಾದ ಮಾನ್ಯ ಅಮೃತ ಸೋಮೇಶ್ವರ ಗುರುಗಳು ಮತ್ತಿತರ ಗೌರವಾನ್ವಿತ ಹಿರಿಯರ ಬರಹಗಳ ಆಧಾರದಲ್ಲಿ ಬರೆದಿದ್ದೇನೆ. ಧರ್ಮದ ಮದವೇರಿದ ತಪ್ಪುದಾರಿಗೆ ಇಳಿದ ಬಂಧುಗಳು ಇದನ್ನು ಪ್ರಶ್ನಿಸಬೇಡಿ.)

Related Articles

ಇತ್ತೀಚಿನ ಸುದ್ದಿಗಳು

You cannot copy content of this page