Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ದೊಡ್ಡ ಮೊತ್ತದ ಅವ್ಯವಹಾರ ; ಗಮನಕ್ಕೆ ತಂದರೂ ಕ್ರಮವಿಲ್ಲ

ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ 6 ವರ್ಷಗಳ ಒಳಗಿನ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರದ ಕೊರತೆಯ ಬಗ್ಗೆ ಹಿಂದಿನಿಂದಲೂ ಅನೇಕ ಮಾಧ್ಯಮಗಳು ಮೇಲಿಂದ ಮೇಲೆ ವರದಿ ಮಾಡುತ್ತಿರುವುದು ಗೊತ್ತೇ ಇದೆ. ಇದರ ನಡುವೆಯೇ ಬಾಣಂತಿಯರಿಗೆ ಹಾಗೂ ಅಪೌಷ್ಠಿಕ ಮಕ್ಕಳಿಗಾಗಿ ಸರ್ಕಾರ ಮೀಸಲಿರಿಸಿದ ಹಣದಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವುದು ಈಗ ಬೆಳಕಿಗೆ ಬಂದಿದೆ.

ದಿ ಫೈಲ್ ಕನ್ನಡ ವೆಬ್ ಪೋರ್ಟಲ್ ನಡೆಸಿದ ತನಿಖಾ ವರದಿಯಲ್ಲಿ ದೊಡ್ಡ ಮೊತ್ತದ ಅವ್ಯವಹಾರ ನಡೆದಿರುವುದು ಕಂಡುಬಂದಿದೆ. ಮೂರು ವರ್ಷದ ಮಕ್ಕಳು, ಗರ್ಭಿಣಿ, ಬಾಣಂತಿಯರು ಮತ್ತು ತೀವ್ರ ಅಪೌಷ್ಠಿಕ ಮಕ್ಕಳಿಗೆ ಶೇಂಗಾ, ತೊಗರಿಬೇಳೆ, ಹೆಸರುಕಾಳು, ಹೆಸರು ಬೇಳೆ, ಉಪ್ಪು, ಬೆಲ್ಲ ಸೇರಿದಂತೆ ಇನ್ನಿತರೆ ಪೂರಕ ಪೌಷ್ಠಿಕ ಆಹಾರ ಖರೀದಿಸಲಾಗಿದೆ ಎಂದು ನಕಲಿ ಬಿಲ್ ತಯಾರಿಸಿ ಅಂದಾಜು 2 ಕೋಟಿ ರೂ. ಅಧಿಕ ಮೊತ್ತದ ಅಕ್ರಮ ನಡೆಸಿರುವುದು ಸಾಕ್ಷಾಧಾರಿತವಾಗಿ ವರದಿಯಾಗಿದೆ.

ವಿಶೇಷವಾಗಿ ಈ ಅಕ್ರಮ ನಡೆದಿರುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲೇ ನಡೆದಿದ್ದು, ಅಕ್ರಮ ನಡೆದ ಬಗ್ಗೆ ಇಲಾಖೆಯ ಉಪ ನಿರ್ದೇಶಕರು ಸರ್ಕಾರದ ಕಾರ್ಯದರ್ಶಿಗೆ 2023ರ ಡಿಸೆಂಬರ್ 20ರಂದು ದೂರು ಸಲ್ಲಿಸಿದ್ದಾರೆ. ದುರಾದೃಷ್ಟ ಎಂದರೆ ಇಲಾಖೆಯ ಉಪ ನಿರ್ದೇಶಕರು ಈ ಪತ್ರ ಬರೆದು ಮೂರ್ನಾಲ್ಕು ದಿನಗಳಾದರೂ ಸಚಿವರಾಗಲಿ, ಸರ್ಕಾರದ ಕಾರ್ಯದರ್ಶಿಗಳಾಗಲಿ ಕ್ರಮ ತಗೆದುಕೊಳ್ಳುವುದು ಇರಲಿ, ಪತ್ರಕ್ಕೆ ಪ್ರತಿಕ್ರಿಯೆ ಕೂಡಾ ನೀಡಿಲ್ಲ ಎಂಬುದು ತಿಳಿದು ಬಂದಿದೆ.

ಕೇಂದ್ರ ಹಾಗೂ ರಾಜ್ಯದ ಪಾಲಿನ ಒಟ್ಟು 56 ಕೋಟಿ ರೂಪಾಯಿ ಬೆಳಗಾವಿ ಜಿಲ್ಲೆಯ 14 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ 9 ಮಹಿಳಾ ಪೂರಕ ಪೌಷ್ಟಿಕ ಆಹಾರ ಘಟಕಗಳ ಮೂಲಕ ಅಕ್ರಮವಾಗಿ ಬಿಲ್ ತಯಾರಿಸಲಾಗಿತ್ತು ಎಂದು ಇಲಾಖೆಯ ಉಪ ನಿರ್ದೇಶಕರು ಬರೆದ ಪತ್ರದಲ್ಲಿ ತಿಳಿದು ಬಂದಿದೆ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳಗಾವಿ ತಾಲೂಕಿನ ಉಪನಿರ್ದೇಶಕ ಆರ್ ನಾಗರಾಜ್ ಮತ್ತಿತರರು ಅಧಿಕಾರ ದುರ್ಬಳಕೆ ಮಾಡಿಕೊಂಡು ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಅಕ್ರಮವಾಗಿ ಹಾಗೂ ಕಾನೂನುಬಾಹಿರವಾಗಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿರುವ ಪ್ರಕರಣದ ಕುರಿತು ತನಿಖೆ ನಡೆಸಬೇಕು. ಬೆಳಗಾವಿ ಗ್ರಾಮೀಣ, ರಾಮದುರ್ಗ, ಬೈಲಹೊಂಗಲ ಮತ್ತು ಸವದತ್ತಿಯಲ್ಲಿನ ಎಂಎಸ್‌ಪಿಎಸಿಗಳಿಗೆ ಅನಿರೀಕ್ಷಿತ ಭೇಟಿ, ತಪಾಸಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಲಿ ಉಪನಿರ್ದೇಶಕರು ಸರ್ಕಾರಕ್ಕೆ 2 ಕೋಟಿ ರು. ವಂಚನೆ ಮಾಡಿರುವ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ’ ಎಂದು ದೂರು ಪತ್ರದಿಂದ ತಿಳಿದು ಬಂದಿದೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಲ್ಲಾಗಲೀ ಸ್ಟಾಕ್ ತೆಗೆದುಕೊಳ್ಳದೇ ಸರ್ಕಾರಕ್ಕೆ ಮೋಸ ಮಾಡಿ ವಂಚಿಸಿ ಸುಮಾರ 2 ಕೋಟಿ ರು. ಅಕ್ರಮ ಬಿಲ್ ತಯಾರಿಸಿ 6 ತಿಂಗಳಿನಿಂದ 3 ವರ್ಷದ ಮಕ್ಕಳು, 3-6 ವರ್ಷದ ಮಕ್ಕಳು, ಗರ್ಭಿಣಿ, ಬಾಣಂತಿಯರು ಮತ್ತು ತೀವ್ರ ಅಪೌಷ್ಠಿಕ ಮಕ್ಕಳ ಹೊಟ್ಟೆ ಮೇಲೆ ಹೊಡೆದು ಪೂರಕ ಪೌಷ್ಠಿಕ ಆಹಾರವನ್ನು ನೀಡದೇ ಸುಳ್ಳು ಬಿಲ್ ತಯಾರಿಸಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬೆಳಗಾವಿ ಗ್ರಾಮೀಣ ಮತ್ತು ನಗರ ತಾಲೂಕು, ರಾಮದುರ್ಗ, ಬೈಲಹೊಂಗಲ, ಸವದತ್ತಿ ತಾಲೂಕಿನ ಎಂಎಸ್‌ಪಿಸಿಗಳಲ್ಲಿ ಸದಸ್ಯರು, ಉಪ ನಿರ್ದೇಶಕರು ಸುಳ್ಳು ಬಿಲ್ ಸೃಷ್ಟಿಸಲಾಗಿದೆ. ಎಂಎಸ್‌ಪಿಸಿ ಸದಸ್ಯರನ್ನು ಬೆದರಿಸಿ ಒತ್ತಾಯಪೂರ್ವಕವಾಗಿ ಸ್ಟಾಕ್ ಇಶೂ ಪ್ರಮಾಣ ಪತ್ರಗಳಿಗೆ ಸಹಿ ಪಡೆದಿದ್ದಾರೆ. ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ದೃಢೀಕರಿಸಿಕೊಂಡು ಬಿಲ್ ತಯಾರಿಸಲಾಗಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಚೇರಿಯಿಂದ ಮೇಲು ಸಹಿ ಪಡೆಯಲಾಗಿದೆ’ ಎಂದು ಉಪ ನಿರ್ದೇಶಕರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ದಿ ಫೈಲ್ ಮಾಡಿರುವ ವರದಿಯಲ್ಲಿ ಹೊರಬಂದ ಅವ್ಯವಹಾರದ ಪ್ರಕರಣದಲ್ಲಿ ಇಲಾಖೆಯ ಅನೇಕ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬಂದಿದೆ. ಆದರೆ ಈ ವರೆಗೆ ಪತ್ರಕ್ಕೆ ಸಂಬಂಧಪಟ್ಟ ಸಚಿವಾಲಯದ ಕಡೆಯಿಂದ ಹಾಗೂ ಸರ್ಕಾರದ ಕಾರ್ಯದರ್ಶಿಗಳ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಸಹಭಾಗಿತ್ವ ಇರಬಹುದೇ ಎಂಬ ಅನುಮಾನ ಹುಟ್ಟಿಸುವಂತಿದೆ. ವಿಶೇಷವಾಗಿ ಈ ಪ್ರಕರಣ ಈಗ 6 ತಿಂಗಳ ಈಚೆಗೆ ನಡೆದಿರುವ ಹಿನ್ನೆಲೆಯಲ್ಲಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟರ ಮಟ್ಟಿಗೆ ಈ ಬಗ್ಗೆ ಮುತುವರ್ಜಿ ವಹಿಸುವರು ಎಂಬ ಚರ್ಚೆ ಶುರುವಾಗಿದೆ.

Related Articles

ಇತ್ತೀಚಿನ ಸುದ್ದಿಗಳು