Wednesday, June 19, 2024

ಸತ್ಯ | ನ್ಯಾಯ |ಧರ್ಮ

ಜೋಶಿಮಠ ರವಾನಿಸಿದ ಸಂದೇಶ

ಬುದ್ಧಿವಂತಿಕೆ ಮತ್ತು ತಂತ್ರಜ್ಞಾನ ಶಕ್ತಿಯ ಅಹಂಕಾರದಲ್ಲಿ ಮೆರೆಯುತ್ತಿರುವ ಮಾನವ, ನಿಸರ್ಗವನ್ನು ಮಣಿಸಲು ಹೋಗಿ ತನ್ನ ವಿನಾಶವನ್ನು ತಾನೇ ತಂದುಕೊಳ್ಳುತ್ತಿದ್ದಾನೆ. ಅದಕ್ಕೆ ಕೇರಳ, ಕೊಡಗು, ಜೋಶಿಮಠ ಎಲ್ಲವೂ ನಿದರ್ಶನಗಳು… ಜೋಶಿಮಠ ಕುಸಿತದ ಹಿನ್ನೆಲೆಯಲ್ಲಿ ಹೀಗೊಂದು ಪರಿಸರ ಚಿಂತನೆ ಶ್ರೀನಿ ಕಾಲಂ ನಲ್ಲಿ.

2020 ರ ಜೂನ್ ಮೊದಲ ವಾರ. ಇನ್ನೇನು  ಮಳೆಗಾಲ ಹಾಜರಿ ಹಾಕುವುದಕ್ಕೆ ಸಿದ್ಧವಾಗಿತ್ತು. ಸಂಪಾಜೆ, ಮಡಿಕೇರಿಯ ಮೂಲಕ ತಲಕಾವೇರಿಯತ್ತ ಹೋಗೋಣ ಎಂದೆ. ಸುಳ್ಯ ದಾಟಿ ಕಾರು ಅತ್ತ ಓಡತೊಡಗಿತು. 

ಅತ್ತ ಹೋಗೋಣ ಎನ್ನಲು ಕಾರಣವೂ ಇತ್ತು. ಇತ್ತೀಚಿನ ಕೆಲ ವರ್ಷಗಳ ಮಳೆಗಾಲದಲ್ಲಿ ಕೇರಳ, ಕೊಡಗು, ಸಕಲೇಶಪುರ ಹೀಗೆ ಅನೇಕ ಕಡೆಗಳಲ್ಲಿ, ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಭೂಕುಸಿತಗಳು ಸಂಭವಿಸಿದ್ದವು. ಬೆಟ್ಟಕ್ಕೆ ಬೆಟ್ಟವೇ ಜಾರಿ ಬಂದು ಅನೇಕ ಕಡೆ ನದಿಗಳು ತಮ್ಮ ಹರಿವಿನ ದಾರಿ ಬದಲಾಯಿಸಿ ಹೊಸ ಹಾದಿ ಹಿಡಿದಿದ್ದವು. ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದವು. ಮನೆಮಾರುಗಳ ನಾಶ, ಜೀವಹಾನಿ, ಸಾಲದೆಂಬಂತೆ, ಬದುಕಿ ಉಳಿದವರ ಬದುಕು ಬೀದಿಗೆ ಬಿದ್ದಿತ್ತು. ನಿರಾಶ್ರಿತರು ಸಂತ್ರಸ್ತರ ಕೇಂದ್ರಗಳಲ್ಲಿ ತಾತ್ಕಾಲಿಕ ಆಶ‍್ರಯ ಪಡೆದಿದ್ದರು. ಕೇರಳದಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಗಳನ್ನು ಬಳಸಿ ಯುದ್ಧದೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸಲಾಗಿತ್ತು. 

ದೇವರ ಕೊಲ್ಲಿ, ಜೋಡುಪಾಲ, ಮದೆನಾಡು ಮೂಲಕ ಸಂಪಾಜೆ ಘಾಟಿಯಲ್ಲಿ ಸಾಗುತ್ತಿದ್ದಂತೆ ಹಿಂದಿನ, ಅಂದರೆ 2019 ರ ಮಳೆಗಾಲದ ಭೂಕುಸಿತವು ಉಂಟುಮಾಡಿದ ಭಯಾನಕ ದೃಶ್ಯಗಳು ಕಾಣಿಸಲಾರಂಭಿಸಿದ್ದವು. ರಸ್ತೆಯ ಎಡಕ್ಕೆ ಬಹುದೂರದಲ್ಲಿ ಬೆಟ್ಟಗಳನ್ನು ಯಾರೋ ಕತ್ತರಿಸಿ ಇಳಿಸಿದಂತೆ ಕಾಣುತ್ತಿತ್ತು. ಅದು ಯಾರೋ ಕತ್ತರಿಸಿದ್ದಲ್ಲ. ಬೆಟ್ಟದ ಒಂದು ಮಗ್ಗುಲು ಜಾರಿ ಬಂದಾಗ ಕಾಣಿಸುತ್ತಿದ್ದ ಹೊಸ ರೂಪ. 

ರಸ್ತೆಯ ಎಡ ಅಂಚಿನ ಕೆಳಕ್ಕೆ ನದಿಯೊಂದು ಕಾಣಿಸುತ್ತಿತ್ತು. ಅಲ್ಲಿ ನದಿಯಿರಲಿಲ್ಲ, ಭೂಕುಸಿತದಿಂದ ನದಿಯ ಹರಿವಿಗೆ ತಡೆಯಾದಾಗ ಅದು ತನ್ನ ದಾರಿ ಬದಲಿಸಿ ಉಂಟಾದ ಹೊಸ ನದಿ ಇದು. “ನೋಡಿ, ಓ ಅಲ್ಲಿ ಒಬ್ಬರ ತೋಟ ಇತ್ತು, ಈಗ ಕುರುಹೂ ಇಲ್ಲದಂತೆ ಅದು ಮಾಯವಾಗಿ ಬಿಟ್ಟಿದೆ” ಎಂದು ಅಲ್ಲಿದ್ದವರೊಬ್ಬರು ಹೇಳಿದರು. 

ಕಾರು ಕೊಂಚ ಮುಂದಕ್ಕೆ ಚಲಿಸಿದಾಗ ಬಲಗಡೆಯಲ್ಲಿ ಬೆಟ್ಟ ಕುಸಿದು ರಸ್ತೆಗೆ ಬಿದ್ದುದು ಕಾಣಿಸಿತು. ಮಣ್ಣು ತೆಗೆಯುವ ಬೃಹತ್ ಯಂತ್ರಗಳ ಮೂಲಕ ಮಣ್ಣನ್ನು ಸರಿಸಿ ಎಡಕ್ಕೆ ಪ್ರಪಾತಕ್ಕೆ ಸುರಿದಿದ್ದಾರೆ. ಹೀಗೆ ಬೆಟ್ಟದಿಂದ ಜಾರಿದ ಮಣ್ಣನ್ನು ಸರಿಸಿ ಪ್ರಪಾತಕ್ಕೆ ಸುರಿದರೆ ಬೆಟ್ಟ ಮತ್ತೆ ಕುಸಿಯುವುದಿಲ್ಲವೇ? ಕಾಮನ್ ಸೆನ್ಸ್ ಇರುವ ಯಾರಿಗೂ ಇದಕ್ಕೆ ಉತ್ತರ ಗೊತ್ತಿದೆ. ಅಕ್ಕಿಯ ರಾಶಿಯ ತಳದ ಬದಿಯಿಂದ ಒಂದಿಷ್ಟು ಅಕ್ಕಿ ತೆಗೆದರೆ ಏನಾಗುತ್ತದೆ? ಮೇಲಿನಿಂದ ಮತ್ತೆ ಕುಸಿಯುತ್ತದೆ ಅಲ್ಲವೇ?

ಈ ಬೆಟ್ಟ ಕುಸಿತಗಳು ಯಾಕೆ ಸಂಭವಿಸುತ್ತಿವೆ, ಇದರಲ್ಲಿ ಮಾನವನ ಅಹಂಕಾರದ ಮತ್ತು ಅತಿರೇಕದ ಪಾಲು ಎಷ್ಟು ಎಂದು ಯೋಚಿಸುತ್ತ ಕುಳಿತಿದ್ದಾಗಲೇ ಕಾರು ಭಾಗಮಂಡಲ ದಾಟಿ ತಲಕಾವೇರಿ ತಲಪಿತು. ಇನ್ನೇನು ತಲಕಾವೇರಿ ದೇಗುಲ ತಲಪಬೇಕು ಎನ್ನುವಾಗ ಎಡಕ್ಕೆ ಬ್ರಹ್ಮಗಿರಿ ಬೆಟ್ಟ ಕುಸಿದಿರುವುದು ಕಂಡಿತು. ಬರೋಬ್ಬರಿ ಐದು ಎಕರೆಯಷ್ಟು ಪ್ರದೇಶ ಸಂಪೂರ್ಣವಾಗಿ ಕುಸಿದಿದ್ದು, ಸುಮಾರು ಎರಡು ಕಿಮೀ ದೂರಕ್ಕೆ ಬೆಟ್ಟ ಜಾರಿ ಹೋಗಿತ್ತು. 

ಅಲ್ಲೊಂದು ಮಣ್ಣಿನ ಪಂಚಾಂಗ ಕಾಣಿಸುತ್ತಿತ್ತು. “ಅದೇ ನೋಡಿ ತಲಕಾವೇರಿ ದೇವಸ್ಥಾನದ ಅರ್ಚಕರ ಮನೆ. ಬೆಟ್ಟ ಕುಸಿದಾಗ ಅವರ ಮನೆ ಪೂರ್ತಿ ಮಣ್ಣಿನಡಿ ಸೇರಿತು. ಎನ್ ಡಿ ಆರ್ ಎಫ್ ನವರು ಹತ್ತು ದಿನಗಳ ಕಾಲ ಶೋಧ ಮಾಡಿದ ಮೇಲೆ ಭಟ್ಟರು ಮತ್ತೊಬ್ಬರ ಶವ ಸಿಕ್ಕಿತು. ಅವರ ಹೆಂಡತಿ ಮತ್ತು ಇನ್ನೊಬ್ಬ ವ್ಯಕ್ತಿಯ ಶವ ಸಿಗಲಿಲ್ಲ” ಎಂದ ಡ್ರೈವರ್. ನೆಲಸಮವಾದ ಮನೆಯ ಬಳಿ ಕಾರೊಂದರ  ಅವಶೇಷ ಕೂಡಾ ಕಾಣಿಸಿತು. 

ಬ್ರಹ್ಮಗಿರಿ ಬೆಟ್ಟ ಕುಸಿದಾಗ ತಲಕಾವೇರಿಗೆ ಸಂಪರ್ಕ ಕಡಿತಗೊಂಡಿದ್ದ ಬಗ್ಗೆ ಪತ್ರಿಕಾ ವರದಿ ಓದಿದ್ದೆ.  ಭಾರೀ ಯಂತ್ರಗಳ ಮೂಲಕ ಮಣ್ಣನ್ನು ಸರಿಸಿ ಹೊಸದಾಗಿ ರಸ್ತೆ ಮಾಡಿದ್ದು ಕಾಣಿಸಿತು. ನನ್ನ ಉದ್ದೇಶ ದೇಗುಲ ದರ್ಶನವಲ್ಲವಾದ್ದರಿಂದ ಅಲ್ಲಿಂದ ಸುಳ್ಯಕ್ಕೆ ಮರಳಿದೆವು.

ಕುಸಿಯುತ್ತಿರುವ ಜೋಶಿಮಠ

ಜೋಶಿಮಠವು ಬದರಿನಾಥ, ಭಾರತದ ಕೊನೇಹಳ್ಳಿ ಮಾನಾ, ಹೂವಿನಕಣಿವೆ, ಗುರುದ್ವಾರ  ಹೇಮಕುಂಡ ಸಾಹೇಬ್ ಮೊದಲಾದ ಪ್ರಸಿದ್ಧ ತಾಣಗಳಿಗೆ ಹೋಗುವಾಗ ಸಿಗುವ ಹಿಮಾಲಯದ  ಊರು. 

ಹಿಮ ಪ್ರವಾಸಿಗರ ಪ್ರವೇಶದ್ವಾರ ಎನಿಸಿಕೊಂಡಿರುವ ಉತ್ತರಾಖಂಡದ ಈ ಊರು ಈಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣ, ಅಲ್ಲಿ ಭೂಕುಸಿತದ ಪರಿಣಾಮ ಇಡೀ ಪಟ್ಟಣವೇ ಅಸ್ತಿತ್ವದ ಅಪಾಯ ಎದುರಿಸುತ್ತಿರುವುದು. ಊರ ಕೆಳಗಿನ ನೆಲ ಕುಸಿಯುತ್ತಿದೆ. ಮನೆಗಳು ಸೀಳೊಡೆಯುತ್ತಿವೆ. ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ದೊಡ್ಡ ದೊಡ್ಡ ಹೋಟೆಲುಗಳನ್ನು ಕೆಡವಲಾಗುತ್ತಿದೆ.  

ಸಮುದ್ರ ಮಟ್ಟದಿಂದ 6,150 ಅಡಿ ಎತ್ತರದಲ್ಲಿರುವ ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂಟೀಮೀಟರ್ ನಷ್ಟು ಕುಸಿದಿರುವುದನ್ನು ಇಸ್ರೋ ಉಪಗ್ರಹ ದೃಢಪಡಿಸಿದೆ. ಪ್ರತೀ ವರ್ಷವೂ ಪ್ರಕೃತಿಯ ವಿಕೋಪಕ್ಕೆ ತುತ್ತಾಗುತ್ತಲೇ ಇರುವ ಕಡಿದಾದ ಬೆಟ್ಟ ಗುಡ್ಡಗಳಿಂದ ಆವೃತವಾದ ಜೋಶಿಮಠದಲ್ಲಿ ಈ  ಬಾರಿಯ ಕುಸಿತ ಹಿಂದೆಂದೂ ಕಂಡಿರದಂಥದ್ದು. ಜನವರಿ 2, 2023 ರಂದು ಸಂಭವಿಸಿದ ಭೂಕುಸಿತದಿಂದ ಬಹುಮುಖ್ಯವಾಗಿ ಪಟ್ಟಣದ ಜನವಸತಿ ಪ್ರದೇಶದಲ್ಲಿ ಕುಸಿಯುವಿಕೆಯ ವೇಗ ತೀವ್ರಗೊಂಡಿದೆ. 

ಹಿಮಾಲಯ ಪರ್ವತಶ‍್ರೇಣಿಯ ಈ ಪಟ್ಟಣದಲ್ಲಿ 2022 ಎಪ್ರಿಲ್ ಮತ್ತು ನವೆಂಬರ್ ನಡುವಿನ ಅವಧಿಯಲ್ಲಿ 8.9 ಸೆಂಟೀ ಮೀಟರ್ ಕುಸಿದಿರುವುದು ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರದ ಪ್ರಾಥಮಿಕ ಅಧ್ಯಯನದಲ್ಲಿ ಕಂಡು ಬಂದಿತ್ತು. ಆದರೆ, 2022 ರ ಡಿಸೆಂಬರ್ 27 ರಿಂದ 2023 ರ ಜನವರಿ ನಡುವೆ ಭೂ ಕುಸಿತದ ವೇಗ ತೀವ್ರಗೊಂಡಿದೆ. 169 ಕುಟುಂಬಗಳ 589 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. 20 ಸಾವಿರ ನಿವಾಸಿಗಳು ಭಯದಿಂದ ಸಮಯ ಕಳೆಯುತ್ತಿದ್ದಾರೆ.

ಅತಿಯಾದ ಯಂತ್ರಗಳ ಬಳಕೆ 

ಈ ಭೂಕುಸಿತಗಳು ಈಗ ಮಾತ್ರ ನಡೆಯುತ್ತಿರುವುದೇ? ಸಂಪಾಜೆ ಘಾಟಿಯಲ್ಲಿ ಭೂಕುಸಿತವು ಶತಮಾನ ಹಿಂದೆಯೂ ನಡೆಯುತ್ತಿದ್ದ ಬಗ್ಗೆ ಶಿವರಾಮ ಕಾರಂತರು ಒಂದೆಡೆ ದಾಖಲಿಸಿದ್ದಾರೆ ಎಂದು ಓದಿದ್ದೆ. ಭೂ ಕುಸಿತಗಳಿಗೆ ಮಳೆ, ಪ್ರವಾಹ, ಭೂಕಂಪ ಇತ್ಯಾದಿಗಳಿಂದ ಉಂಟಾದ ನೈಸರ್ಗಿಕ ಕಾರಣಗಳೂ ಇರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪದ ಆವರ್ತನೆ ಮತ್ತು ಪ್ರಮಾಣ ಹೆಚ್ಚಿರುವುದರ ಹಿಂದೆ ಮಾನವ ಹಸ್ತಕ್ಷೇಪ ಇರುವುದನ್ನು ಅರ್ಥಮಾಡಿಕೊಳ್ಳಲು ವಿಶೇಷ ಬುದ್ಧಿಮತ್ತೆಯ ಅಗತ್ಯವಿಲ್ಲ.

ಹಿಂದೆ ಈಗಿನಂತಹ ತಂತ್ರಜ್ಞಾನ ಸವಲತ್ತುಗಳು ನಮ್ಮಲ್ಲಿರಲಿಲ್ಲ. ಹಾಗಾಗಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವುದು ಅನಿವಾರ್ಯವಾಗಿತ್ತು. ಬಾವಿಯಿಂದ ನೀರೆತ್ತಲು ಇದ್ದುದು ಕೊಡ, ಬಾಲ್ದಿ ಮತ್ತು ಏತ ವ್ಯವಸ್ಥೆಗಳು ಮಾತ್ರ. ಒಂದು ಕೊಡ ನೀರು ಮೇಲೆತ್ತುವಾಗ ಅಷ್ಟೇ ನೀರು ಒಸರಿನ ಮೂಲಕ ಬಾವಿಯನ್ನು ತುಂಬಿ ನೀರಿನ ಮಟ್ಟವನ್ನು ಕಾಯ್ದುಕೊಂಡಿರುತ್ತಿತ್ತು. ಬಾವಿ ಎಂದೂ ಬರಿದಾಗುತ್ತಿರಲಿಲ್ಲ.

ಆಮೇಲೆ ಪಂಪ್ ಸೆಟ್ ಗಳು ಬಂದವು. ಮೊದಲಿಗೆ ಸೀಮೆ ಎಣ್ಣೆ, ಬಳಿಕ ಡೀಸೆಲ್, ಆನಂತರ ವಿದ್ಯುತ್ ನಿಂದ ಕೆಲಸ ಮಾಡುವ ಪಂಪ್ ಸೆಟ್ ಗಳು ಬಂದವು. ಕೆಲವೇ ಕ್ಷಣಗಳಲ್ಲಿ ಬಾವಿಯನ್ನು ಬರಿದು ಮಾಡುವಷ್ಟು ಸಾಮರ್ಥ್ಯದವು. ಗಿಡಗಳಿಗೆ ಅಗತ್ಯವಿರುವುದಕ್ಕಿಂತ ಬಹುಪಟ್ಟು ನೀರನ್ನು ಎತ್ತಿಹಾಕಿದವು. ಬಹುಪಾಲು ನೀರು ಆವಿಯಾಗುವ ಮೂಲಕ ವ್ಯರ್ಥವಾಯಿತು. ಬಾವಿಯೂ ಬರಿದಾಯಿತು. ಬೋರ್ ವೆಲ್ ಗಳನ್ನು ಕೊರೆಯುವ ಮೂಲಕ ಭೂಗರ್ಭದ ನೀರನ್ನೂ ಬರಿದು ಗೊಳಿಸಲಾಯಿತು. ಕುಡಿಯುವ ನೀರಿನ ಸಮಸ್ಯೆ ಎಂದರೆ ಏನೆಂದೇ ಅರಿಯದ ಅತ್ಯಂತ ಗ್ರಾಮೀಣ ಪ್ರದೇಶಗಳಲ್ಲಿಯೂ ಕುಡಿವ ನೀರಿಗೆ ಹಾಹಾಕಾರ ಆರಂಭವಾಯಿತು.

ಈ ರೀತಿಯ ತಂತ್ರಜ್ಞಾನಗಳು ಎಲ್ಲ ವಲಯದಲ್ಲಿಯೂ ಕಾಣಿಸಿಕೊಂಡವು. ಮರ ಕತ್ತರಿಸಲೂ ಅತ್ಯಾಧುನಿಕ ಯಂತ್ರಗಳು ಬಂದವು. ದೊಡ್ಡ ದೊಡ್ಡ ಮರಗಳನ್ನು ಕತ್ತರಿಸಿ ನೆಲಕ್ಕುರುಳಿಸಲು ಗಂಟೆಗಳು ಸಾಕು. ಬೃಹತ್ ಅರಣ್ಯ ನಾಶಕ್ಕೆ ದಿನಗಳು ಸಾಕು. ಕಣಿ ತೋಡಲು, ಗುಡ್ಡ ಆಗೆಯಲು ಹಿಂದೆ ಮಾನವ ಶ್ರಮ ಅವಲಂಬಿಸಬೇಕಿತ್ತು. ಅದರ ಮಿತಿಯ ಕಾರಣ ಪ್ರಕೃತಿ ವಿನಾಶವೂ ಒಂದು ಮಿತಿಯಲ್ಲಿತ್ತು. ಈಗ ಬೃಹತ್ ಗಾತ್ರದ ಯಂತ್ರಗಳು ಬಂದಿವೆ. ಬೆಟ್ಟಗಳನ್ನು ನೆಲಸಮಗೊಳಿಸುವುದು ಗಂಟೆಗಳ ಕೆಲಸ.

ಜೆಸಿಬಿ ಎಂದು ಜನಜನಿತವಾಗಿರುವ ಬೃಹತ್ ಯಂತ್ರಗಳು ಈಗ ಎಲ್ಲೆಲ್ಲೂ ಲಭ್ಯ. ಅವನ್ನು ಬಳಸಿ ಎಲ್ಲೆಂದರಲ್ಲಿ ಅಗೆಯುವುದು ಸುಲಭದ ಕೆಲಸ. ರಸ್ತೆ ಆಗಬೇಕೇ? ಬೆಟ್ಟವನ್ನು ಸೀಳಿ ಕತ್ತರಿಸಿ ಅವು ರಸ್ತೆ ಮಾಡಿಕೊಡಬಲ್ಲವು. ಕೇರಳ, ಕೊಡಗು, ಮತ್ತು ಮಲೆನಾಡಿನ ಅನೇಕ ಭಾಗಗಳಲ್ಲಿ ಗುಡ್ಡಕುಸಿತಕ್ಕೆ ಕಾರಣ ವಿಪರೀತ ಅರಣ್ಯನಾಶ, ನಾನಾ ಅಭಿವೃದ್ಧಿ ಕೆಲಸಗಳ ನೆಪದಲ್ಲಿ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಿರುವುದು, ಬೆಟ್ಟದ ತುದಿಯಲ್ಲಿ ರೆಸಾರ್ಟ್ ಗಳನ್ನು ನಿರ್ಮಿಸಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹಿಸಿರುವುದು ಎಂದು ಅನುಭವಿ ತಜ್ಞರು ಹೇಳುತ್ತಿದ್ದಾರೆ. 

ಜೋಶಿಮಠ ದುರಂತದ ಕಾರಣ

ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬರುವ ಜೋಶಿಮಠ ಪ್ರದೇಶದ ಪರಿಸರವೇ ಸೂಕ್ಷ್ಮವಾದುದು. ಅದು ಮೂಲತಃ ಭೂಕಂಪನದ ಪ್ರದೇಶ. ಒಳಗೆ ಟೊಳ್ಳಾಗಿರುವ ಹಿಮಾಲಯದ ರಚನೆಯೊಳಗೇ ಶೈಥಿಲ್ಯವಿದೆ.  ಅಲ್ಲಿ ಇಂತಹ ಅವಘಡ ಸಂಭವಿಸುತ್ತಿರುವುದು ಇದೇ ಮೊದಲು ಅಲ್ಲ. 1975 ರಲ್ಲಿ ಅಲ್ಲಿನ ಕೆಲವು ಮನೆಗಳಲ್ಲಿ ಸಣ್ಣ ಬಿರುಕುಗಳು ಕಾಣಿಸಿ ಕೊಂಡಿದ್ದವು. ಅಲ್ಲಿ ನಿರ್ಮಾಣ ಚಟುವಟಿಕೆ ನಡೆಸ ಕೂಡದು ಎಂದು ಎಂ ಸಿ ಮಿಶ‍್ರಾ ಸಮಿತಿ 1976 ರಲ್ಲೇ ಶಿಫಾರಸು ಮಾಡಿತ್ತು. ಆಗ ಅಲ್ಲಿ 200 -300 ಮನೆಗಳು ಇದ್ದವು. ಈಗ ಮನೆಗಳ ಸಂಖ್ಯೆ 4 ಸಾವಿರ ದಾಟಿದೆ. ನಾಯಿಕೊಡೆಗಳಂತೆ ಹೊಟೇಲ್ ಹೋಮ್ ಸ್ಟೇಗಳು ತಲೆ ಎತ್ತಿವೆ. ಅತಿ ಭಾರದ ಮತ್ತು ಪ್ರದೇಶಕ್ಕೆ ಸೂಕ್ತವಲ್ಲದ ಕಾಂಕ್ರೀಟ್ ಕಟ್ಟಡಗಳು ವ್ಯಾಪಕವಾಗಿವೆ. 

ಈಗ ಅಲ್ಲಿ ಉಂಟಾಗಿರುವ ಆತಂಕಕಾರಿ ಪರಿಸ್ಥಿತಿಗೆ ಅವೈಜ್ಞಾನಿಕ ನಿರ್ಮಾಣ ಚಟುವಟಿಕೆಗಳು, ಅತಿಯಾದ ಜನಸಂಖ್ಯೆ, ನೀರಿನ ಸಹಜ ಹರಿವಿಗೆ ತಡೆ ಮತ್ತು ಜಲವಿದ್ಯುತ್ ಚಟುವಟಿಕೆಗಳು ಕಾರಣ ಎನ್ನುತ್ತಾರೆ ಪರಿಣತರು. ಹಿರಿಯ ಪರಿಸರವಾದಿ ರವಿ ಚೋಪ್ರಾ ಪ್ರಕಾರ ಎನ್ ಟಿ ಪಿ ಸಿ (ನೇಶನಲ್ ಥರ್ಮಲ್ ಪವರ್ ಕಾರ್ಪೋರೇಷನ್) ತೋಡುತ್ತಿರುವ ಸುರಂಗ ಇದಕ್ಕೆ ಕಾರಣ. ಉತ್ತರಾಖಂಡದ ಹೆಲಾಂಗ್ ನಿಂದ ತಪೋವನದ ವರೆಗೆ 12.1 ಕಿಲೋಮೀಟರ್ ಸುರಂಗ ತೋಡುವುದಕ್ಕೆ ಟನಲ್ ಬೋರಿಂಗ್ ಮಶೀನ್ ಬಳಸಲಾಗುತ್ತಿದ್ದು ಇದರಿಂದ ಮತ್ತು ಈ ಯೋಜನೆಗಾಗಿ ಅಲ್ಲಿ ಸ್ಫೋಟ ಕಾರ್ಯ ನಡೆಸುವುದರಿಂದ ಪ್ರದೇಶದಲ್ಲಿ ಬಿರುಕುಗಳು ಉಂಟಾಗಿವೆ.

ಸಾಲದೆಂಬಂತೆ ರಸ್ತೆಗೆ ಮಾಡುವ ಅಗೆತ ಬಗೆತಗಳಿಂದಾದ ಬಿರುಕುಗಳಿಂದ ಭೂಮಿಯ ಹೊಟ್ಟೆಯೊಳಗೆ ಸೇರಿದ ನೀರು, ಊರಿನ ಸಮೇತ ಪರ್ವತವನ್ನೇ ಕುಸಿತಕ್ಕೆ ಈಡುಮಾಡಿದೆ.  

ಅಭಿವೃದ್ಧಿ ಅಭಿವೃದ್ಧಿ !!

ಈಗ ಎಲ್ಲೆಲ್ಲೂ ಯಾವಾಗಲೂ ಕೇಳಿಬರುವ ಒಂದು ಮಾತು ಎಂದರೆ ‘ಅಭಿವೃದ್ಧಿ’. ಹರಿವ ನದಿಗೆ ಅಡ್ಡಗಟ್ಟಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಪರ್ವತಗಳನ್ನು ಬಗೆದು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಿಸಲಾಗದ ಪರ್ವತ ಎದುರಾದರೆ ಅದರೊಳಗೆ ತೂರಿ ಕಿಲೋಮೀಟರ್ ಗಳ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಬಂಡೆಗಳು ಎದುರಾದರೆ ಡೈನಮೈಟುಗಳನ್ನು ಸಿಡಿಸಿ ಒಡೆಯಲಾಗುತ್ತದೆ. ಒಂದೆರಡು ಲೇನ್ ಗಳು ಸಾಲವು ಹತ್ತಾರು ಲೇನ್ ಗಳ ರಸ್ತೆ ಬೇಕು. ನಿಧಾನ ಚಲಿಸಿದರೆ ಆಗದು, ಹಾಗಾಗಿ ಎಕ್ಸ್ ಪ್ರೆಸ್ ಹೈವೇ ಗಳು ಬೇಕು. ಬುಲೆಟ್ ಟ್ರೇನ್ ಗಳು ಬೇಕು. ಸ್ಮಾರ್ಟ್ ಸಿಟಿಗಳ ಹೆಸರಿನಲ್ಲಿ ನಗರಗಳನ್ನು ಬಾಂಬ್ ಬಿದ್ದು ದ್ವಂಸಗೊಂಡ ಯುದ್ಧಭೂಮಿಯಂತೆ ಮಾಡಲಾಗಿದೆ. ಮತ್ತು ಇದನ್ನು ನಾವು ಅಭಿವೃದ್ಧಿ ಎಂದುಕೊಂಡಿದ್ದೇವೆ ! ಈ ಅಭಿವೃದ್ಧಿಯ ಹೆಸರಿನ ದುರಾಸೆಗೆ ಮಿತಿಯೆಲ್ಲಿ?

ಈ ಹೊತ್ತು ‘ಭೂಮಿಯು ಎಲ್ಲರ ಅಗತ್ಯವನ್ನು ಪೂರೈಸುತ್ತದೆ. ಆದರೆ ದುರಾಸೆಯನ್ನಲ್ಲ’  ಎಂಬ ಮಹಾತ್ಮಾ ಗಾಂಧಿಯವರ ಮಾತು ನಮಗೆ ಮತ್ತೆ ಮತ್ತೆ ನೆನಪಾಗುತ್ತಿರಬೇಕು. ಅಗತ್ಯ ಮತ್ತು ದುರಾಸೆಯ ನಡುವಣ ವ್ಯತ್ಯಾಸದ ಅರಿವು ಸದಾ ನಮ್ಮಲ್ಲಿರಬೇಕು. ಅಭಿವೃದ್ಧಿ ಯಾರಿಗೆ ತಾನೇ ಬೇಡ? ಆದರೆ ಆ ಅಭಿವೃದ್ಧಿಯ ಪರಿಕಲ್ಪನೆ ಹೇಗಿರಬೇಕು? ಆ ಅಭಿವೃದ್ಧಿಯು ‘ಅಗತ್ಯ’ದ ತತ್ತ್ವವನ್ನು ಆಧರಿಸಿರಬೇಕೇ ಹೊರತು ‘ದುರಾಸೆ’ಯ ತತ್ತ್ವವನ್ನಲ್ಲವಲ್ಲ? “ನೀನು ಈ ಭೂಮಿಯ ಮೇಲಿನ ಜೀವಿಗಳಲ್ಲಿ ಅತ್ಯಂತ ಬುದ್ಧಿವಂತನಿರಬಹುದು, ಆದರೆ ನನ್ನ ಶಕ್ತಿ ಸಾಮರ್ಥ್ಯದ ಮುಂದೆ ನೀನು ಏನೂ ಅಲ್ಲ, ನನ್ನ ಸಹಜ  ಲಯವನ್ನು ಅರಿತು ಅದನ್ನು ಹೆಚ್ಚು ಭಂಗಗೊಳಿಸದೆ ಬಾಳುವ ಕಲೆಯನ್ನು ಕರಗತ ಮಾಡಿಕೋ, ಇಲ್ಲವಾದರೆ ನಿನ್ನನ್ನು ನಿರ್ನಾಮ ಮಾಡಲು ನನಗೆ ಕ್ಷಣಗಳು ಸಾಕು” ಎಂದು ಪ್ರಕೃತಿಯು ಎಚ್ಚರಿಸುತ್ತಲೇ ಇದೆ. ಆದರೆ ಬುದ್ಧಿವಂತಿಕೆ ಮತ್ತು ತಂತ್ರಜ್ಞಾನ ಶಕ್ತಿಯ ಅಹಂಕಾರದಲ್ಲಿ ಮೆರೆಯುತ್ತಿರುವ ಮಾನವ, ನಿಸರ್ಗವನ್ನು ಮಣಿಸಲು ಹೋಗಿ ತನ್ನ ವಿನಾಶವನ್ನು ತಾನೇ ತಂದುಕೊಳ್ಳುತ್ತಿದ್ದಾನೆ. ಅದಕ್ಕೆ ಕೇರಳ, ಕೊಡಗು, ಜೋಶಿಮಠ ಎಲ್ಲವೂ ನಿದರ್ಶನಗಳು.

ಶ್ರೀನಿವಾಸ ಕಾರ್ಕಳ 

ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿ ಕೊಂಡವರು.

Related Articles

ಇತ್ತೀಚಿನ ಸುದ್ದಿಗಳು