Thursday, June 19, 2025

ಸತ್ಯ | ನ್ಯಾಯ |ಧರ್ಮ

ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡಿದರೆ ನೋಟಿಸ್ ಜಾರಿ : ಡಿಸಿಎಂ ಡಿ.ಕೆ.ಶಿವಕುಮಾರ್

ಪಕ್ಷದ ಆಂತರಿಕ ವಿಚಾರದ ಬಗ್ಗೆ ಎಲ್ಲಾ ಕಡೆಗೂ ಮಾತನಾಡಿದರೆ ಮುಲಾಜಿಲ್ಲದೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷದ ಶಾಸಕರಿಗೆ ಖಡಕ್ ಎಚ್ಚರಿಕೆ ರವಾನೆ ಮಾಡಿದ್ದಾರೆ.

ಮಂಡ್ಯದ ಶಾಸಕ ರವಿ ಗಾಣಿಗ ಅವರ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ವಿಷಯದ ಬಗ್ಗೆ ವಿಚಾರ ಪ್ರಸ್ತಾಪಿಸಿದ ನಂತರ ಡಿ.ಕೆ.ಶಿವಕುಮಾರ್ ಈ ರೀತಿಯಾಗಿ ಎಚ್ಚರಿಕೆ ನೀಡಿದ್ದಾರೆ. ಶಾಸಕರಿಗೆ ಆಫರ್ ವಿಚಾರ ಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ. ಬಹಳ ಪ್ರಯತ್ನ ಮಾಡ್ತಾ ಇದ್ದಾರೆ ಅಂತ ಅವರು ತಿಳಿಸಿದರು .

ಇನ್ನೂ ಕೈಮುಗಿದು ಕೇಳಿಕೊಳ್ಳುತ್ತೇನೆ ಪಕ್ಷದ ಆಂತರಿಕ ವಿಚಾರ, ಅಧಿಕಾರ ವಿಚಾರ ಯಾವುದೇ ಹೇಳಿಕೆಗಳನ್ನು ಕೊಡಬಾರದು. ಯಾವುದೇ ಹೇಳಿಕೆ ನೀಡಬೇಡಿ. ಪದೇ ಪದೇ ಈ ರೀತಿಯ ಹೇಳಿಕೆಗಳನ್ನು ಕೊಟ್ಟಲ್ಲಿ ನೋಟಿಸ್ ನೀಡಲಾಗುವುದು ಅಂಥ ಅವರು ತಮ್ಮ ಪಾರ್ಟಿ ಶಾಸಕರಿಗೆ ಎಚ್ಚರಿಸಿದರು.

ಶನಿವಾರ ಮುಂಜಾನೆ ಹೈದರಾಬಾದ್ ಪ್ರವಾಸಕ್ಕೆ ಹೊರಟಿದ್ದಾಗ ತಮ್ಮ ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈಗಾಗಲೇ ಇಂತಹ ವಿಚಾರದ ಬಗ್ಗೆ ಅನಗತ್ಯ ಮಾತುಗಳ ಬಗ್ಗೆ ಪಕ್ಷದ ವೇದಿಕೆಯಲ್ಲೇ ಎಚ್ಚರಿಕೆ ನೀಡಲಾಗಿದೆ. ಇದು ಮುಂದುವರಿದು ಮತ್ತೆ ಹೇಳಿಕೆ ಬರುತ್ತಿವೆ. ಮತ್ತೊಮ್ಮೆ ಬಹಿರಂಗವಾಗಿ ಎಚ್ಚರಿಕೆ ನೀಡುತ್ತಿದ್ದೇವೆ. ಇದನ್ನು ಮೀರಿಯೂ ಇದು ಮುಂದುವರಿದರೆ ಪಕ್ಷದ ಕಡೆಯಿಂದ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಛರಿಸಿದರು.

ಇತ್ತೀಚೆಗೆ ತಮ್ಮನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಮನಗರ ಜಿಲ್ಲೆಗೆ ಯಾರ ಕೊಡುಗೆ ಎಷ್ಟು ಎಂಬ ಚರ್ಚೆ ನಡೆಯಲಿ, ಅದು ದಾಖಲೆ ಮೂಲಕ ಆಗಲಿ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.

ನಾನು ಏನು ಮಾಡಿದ್ದೇನೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಅಧಿವೇಶನದಲ್ಲಿ ದಾಖಲೆ ಸಮೇತ ಚರ್ಚೆ ಮಾಡೋಣ, ಅವರ ಸವಾಲು ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ. ಯಾರು ಏನೇನು ಮಾಡಿದ್ದಾರೆ ಎಂದು ಎಲ್ಲವನ್ನೂ ಅಧಿವೇಶನದಲ್ಲಿ ಬಿಚ್ಚಿಡೋಣ. ಅವರ ಬಳಿ ಇರುವ ಸರಕುಗಳನ್ನು ತಂದು ಅವರು ಮಾತನಾಡಲಿ. ನನ್ನ ಬಳಿ ಇರುವ ದಾಖಲೆಗಳನ್ನು ಮುಂದಿಟ್ಟು ನಾನು ಮಾತನಾಡುತ್ತೇನೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page