Friday, June 14, 2024

ಸತ್ಯ | ನ್ಯಾಯ |ಧರ್ಮ

ಇಂದಿರಾನಗರ ಬಿಡಿಎ ಸಂಕೀರ್ಣ ಖಾಸಗಿ ಗುಂಪಿಗೆ ಹಸ್ತಾಂತರ: ಎಎಪಿ ಪ್ರತಿಭಟನೆ

ಬೆಂಗಳೂರು: ಆಮ್ ಆದ್ಮಿ ಪಕ್ಷದ (ಎಎಪಿ) ಸದಸ್ಯರು ಇಂದಿರಾನಗರದ ಬಿಡಿಎ ಸಂಕೀರ್ಣವನ್ನು ಶಾಪಿಂಗ್ ಮಾಲ್ ಆಗಿ ಪರಿವರ್ತಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿರ್ಧಾರವನ್ನು ವಿರೋಧಿಸಿ ಶನಿವಾರದಂದು ಬಿಡಿಎ ಸಂಕೀರ್ಣದ ಹೊರಗೆ ಜಮಾಯಿಸಿ ಪ್ರತಿಭಟಿಸಿದರು.

ನಗರದಲ್ಲಿರುವ ಏಳು ಬಿಡಿಎ ಕಾಂಪ್ಲೆಕ್ಸ್ ಗಳನ್ನು ಶಾಪಿಂಗ್ ಮಾಲ್ ಗಳನ್ನಾಗಿ ಪರಿವರ್ತಿಸಲು ಬಿಡಿಎ ನಿರ್ಧರಿಸಿದೆ ಎಂದು ಮೇ 6ರಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇವುಗಳಲ್ಲಿ ಆರನ್ನು M-FAR ಡೆವಲಪರ್‌ ಎನ್ನುವ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ, ಆದರೆ ಇಂದಿರಾನಗರದಲ್ಲಿರುವ ಒಂದನ್ನು ಮಾವೆರಿಕ್ ಹೋಲ್ಡಿಂಗ್ಸ್ ಮತ್ತು ಎಂಬಸಿ ಗ್ರೂಪ್ ಜಂಟಿಯಾಗಿ ಮರುಅಭಿವೃದ್ಧಿ ಮಾಡಲಿದೆ. ಈ ಸಂಕೀರ್ಣಗಳ ಮರು-ಅಭಿವೃದ್ಧಿಯ ನಂತರ ಪ್ರತಿ ವರ್ಷ ಸುಮಾರು 40 ಕೋಟಿ ಆದಾಯವನ್ನು ಬಿಡಿಎ ನಿರೀಕ್ಷಿಸುತ್ತಿದೆ.

ಇಂದಿರಾನಗರ ಬಿಡಿಎ ಸಂಕೀರ್ಣವು ಕ್ಲಿನಿಕ್, ಆಪ್ಟಿಕಲ್ ಸ್ಟೋರ್ ಮತ್ತು ಕೆಲವು ಡ್ರೈವಿಂಗ್ ಶಾಲೆಗಳನ್ನು ಒಳಗೊಂಡಂತೆ ಹಲವಾರು ಉದ್ಯಮಗಳಿಗೆ ಕಚೇರಿ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿತ್ತು. ಸ್ಥಳೀಯ ಎಎಪಿ ಬಿಡಿಎಯ ಈ ನಿರ್ಧಾರವನ್ನು ಖಂಡಿಸಿದೆ, ಇದನ್ನು “ಭೂ ಮಾಫಿಯಾದಿಂದ ಭೂ ಕಬಳಿಕೆ” ಎಂದು ಕರೆದಿದೆ.

ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಈ ನಿರ್ಧಾರವನ್ನು ಖಂಡಿಸಿ “ಇದೊಂದು ತರ್ಕಬದ್ಧವಲ್ಲದ ನಿರ್ಧಾರ ಎಂದು ಹೇಳಿದ್ದಾರೆ”

“ಹಣ ಮಾಡುವವರಿಗೆ ಈ ಭೂಮಿಯನ್ನು ನೀಡುವ ಬದಲು, ಸರ್ಕಾರವು ಇಲ್ಲಿ ಸಾರ್ವಜನಿಕ ಗ್ರಂಥಾಲಯ ಅಥವಾ ಆಟದ ಮೈದಾನವನ್ನು ನಿರ್ಮಿಸಲು ಅಥವಾ ಮಿನಿ-ಅರಣ್ಯವನ್ನು ನೆಡಲು ಅನುಮತಿ ನೀಡಬೇಕು. ಇದು ಸ್ಥಳೀಯ ನಿವಾಸಿಗಳಿಗೆ ನಿಜವಾಗಿ ಪ್ರಯೋಜನವನ್ನು ನೀಡುತ್ತದೆ.” ಅವರು ಹೇಳಿದರು.

ಇದು ಹಳೆಯ ಮದ್ರಾಸ್ ರಸ್ತೆಯಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಟ್ರಾಫಿಕ್ ತೊಂದರೆಗಳನ್ನುಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶದ ದೀರ್ಘಕಾಲದ ನಿವಾಸಿಗಳಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಅವರು ಹೇಳಿದರು.

ಪಕ್ಷದ ಕಾರ್ಯಕರ್ತರು ಬ್ಯಾನರ್ ಹಿಡಿದು ಇಂಧನ ಸಚಿವ ಕೆ ಜೆ ಜಾರ್ಜ್, ಶಾಂತಿನಗರ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆರ್.ಟಿ.ನಗರ, ಕೋರಮಂಗಲ ಸೇರಿದಂತೆ ಎಲ್ಲ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಗುತ್ತಿಗೆಗೆ ನೀಡಲಾಗುತ್ತಿದ್ದು, ಅವುಗಳ ಸಂರಕ್ಷಣೆಗಾಗಿ ಹೋರಾಟ ನಡೆಸಲು ತಾವು ಸಿದ್ಧತೆ ನಡೆಸಿಕೊಳ್ಳುತ್ತಿರುವುದಾಗಿ ಅವರು ಘೋಷಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು