Friday, June 20, 2025

ಸತ್ಯ | ನ್ಯಾಯ |ಧರ್ಮ

ಮಹಿಳೆ-ಮಕ್ಕಳ ವಿರುದ್ಧ ದೌರ್ಜನ್ಯ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಬೆಂಗಳೂರು: ಒಂದೆಡೆ ಅತ್ಯಾಚಾರಿ ಆರೋಪಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ, ಮತ್ತೊಂದೆಡೆ ಲೈಂಗಿಕ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವುದೇ ತಡವಾಗುತ್ತಿದೆ ಎಂದು ರಾಜ್ಯದ ಹಲವು ಜನಪರ ಸಂಘಟನೆಯವರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ದಲಿತ ಹೋರಾಟಗಾರರಾದ ಮಾವಳ್ಳಿ ಶಂಕರ್‌ “ಬಡಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮಠಕ್ಕೆ ಸೇರಿರುತ್ತಾರೆ. ಮುರುಘಾ ಸ್ವಾಮೀಜಿಯ ಲೈಂಗಿಕ ತೃಷೆಗಾಗಿ ಪ್ರೌಡಶಾಲೆ ವಿದ್ಯಾರ್ಥಿನಿಯರನ್ನು ಬಳಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.” ಎಂದು ಹೇಳಿದರು.

ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ಫೋಕ್ಸೋ ಮತ್ತು ‌ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿಯಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಕಠಿಣ ಕಾನೂನಿನ ವಿಚಾರಣೆಗೆ ಒಳಪಡಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಜೀವಾವಧಿ ‌ಶಿಕ್ಷೆಗೆ ಗುರಿಯಾಗಿದ್ದ 11  ಜನ ಆರೋಪಿಗಳನ್ನು ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರ್ಯ ‌ದಿನದಂದು ಬಿಡುಗಡೆ ಮಾಡಲಾಗಿತ್ತು. ಅವರನ್ನು ತಕ್ಷಣವೇ ಅಮರಣಾಂತ ಕಠಿಣ ಸಜೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಲ್ಲದೆ, ಅದೇ ದಿನ ಮಹಿಳೆಯರ ಘನತೆಯ ರಕ್ಷಣೆ ಕುರಿತು ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಯಾವ ವಿಷಯವು ಗಮನಕ್ಕೆ ಬಂದಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಲೇಖಕಿ ಡಾ. ವಿಜಯಮ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ, ಹೋರಾಟಗಾರ್ತಿ ಕೃಪಾ ಆಳ್ವ, ಲೇಖಕಿ ಕೆ.ಷರೀಫಾ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ ಅಧ್ಯಕ್ಷ ಆರ್‌. ಮೋಹನ್ ರಾಜ್, ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ, ಹೋರಾಟಗಾರರಾದ ಪ್ರಫುಲ್ಲಾ ಮಧುಕರ್, ಪುಷ್ಪಾ ಅಮರನಾಥ್, ಕವಿಯತ್ರಿ ವಸುಂಧರ ಭೂಪತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡೆ ಗೌರಮ್ಮ, ಎಸ್‌ಎಫ್‌ಐ ರಾಜ್ಯ ಸಹ ಕಾರ್ಯದರ್ಶಿ ಭೀಮನಗೌಡ, ಎಸ್‌ಎಫ್‌ಐ ಮುಖಂಡ ಶಿವಕುಮಾರ್ ಸೇರಿದಂತೆ ಜನಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page