ಮುಂಬೈ – ಪುಣೆ ಸುರಂಗ ದಾರಿ ಕುಸಿತಕ್ಕೆ ದೇವರ ಆಟ ಕಾರಣ, ನಿರ್ಮಾಣ ಸಂಸ್ಥೆಯನ್ನು ದೂರಲಾಗದು: ಮಹಾರಾಷ್ಟ್ರ ರಸ್ತೆ ಅಭಿವೃದ್ಧಿ ನಿಗಮ

ಮುಂಬೈ ಮತ್ತು ಪುಣೆ ಸುತ್ತಮುತ್ತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭೀಕರ ಜಿಟಿಜಿಟಿ ಹಾಗೂ ಧೋ ಎಂದು ಸುರಿಯುತ್ತಿರುವ ಮಹಾಮಳೆಗೆ ಕೇವಲ ಎರಡು ತಿಂಗಳ ಹಿಂದೆಯಷ್ಟೇ ಸಾರ್ವಜನಿಕ ಮುಕ್ತಗೊಳಿಸಲಾಗಿದ್ದ ‘ಮುಂಬೈ-ಪುಣೆ ಮಿಸ್ಸಿಂಗ್ ಲಿಂಕ್’ ಎಕ್ಸ್‌ಪ್ರೆಸ್‌ವೇನಲ್ಲಿ ಭಾರಿ ಭೂಕುಸಿತ ಸಂಭವಿಸಿದೆ.

ಸೋಮವಾರ ಮುಂಜಾನೆ 3:30ರ ಸುಮಾರಿಗೆ ಸಂಭವಿಸಿದ ಈ ದುರಂತದಿಂದಾಗಿ ರಸ್ತೆಯ ಮೇಲೆ ಬೃಹತ್ ಬಂಡೆಗಳು ಉರುಳಿ ಬಿದ್ದಿದ್ದು, ಎರಡು ಪ್ರಮುಖ ನಗರಗಳ ನಡುವಿನ ನೇರ ಸಂಪರ್ಕ ಸಂಪೂರ್ಣ ಕಡಿತಗೊಂಡು ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ರಸ್ತೆ ಅಭಿವೃದ್ಧಿ ನಿಗಮವು (MSRDC) ಈ ದುರಂತವನ್ನು ದೇವರ ಆಟ ಎಂದು ಬಣ್ಣಿಸಿದೆ.

ಈ ಯೋಜನೆಯ ನಿರ್ಮಾಣ ತಂಡವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ನಿಗಮದ ಹಿರಿಯ ಅಧಿಕಾರಿಯೊಬ್ಬರು, ಇದರಲ್ಲಿ ಗುತ್ತಿಗೆದಾರರ ಯಾವುದೇ ತಪ್ಪಿಲ್ಲ ಮತ್ತು ಇದು ಸಂಪೂರ್ಣವಾಗಿ ಪ್ರಕೃತಿಯ ಆಟವಾಗಿದೆ ಎಂದು ಹೇಳಿದ್ದಾರೆ. ಭೂಕುಸಿತ ತಡೆಗಟ್ಟುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ವಿನ್ಯಾಸಗಳನ್ನು ಅಳವಡಿಸಲಾಗಿದ್ದರೂ, ಇಂತಹ ಅತಿವೃಷ್ಟಿಯ ಸಂದರ್ಭದಲ್ಲಿ ಅವುಗಳಿಗೆ ಮಿತಿಗಳಿರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

ಐಐಟಿ-ಬಾಂಬೆ (IIT-Bombay) ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟ ಕಬ್ಬಿಣದ ತಂತಿ ಜಾಲರಿಗಳನ್ನು (rock bolting) ಸುರಂಗದ ಮೇಲಿನ ಬೆಟ್ಟದ ಇಳಿಜಾರಿನಲ್ಲಿ 15 ಮೀಟರ್ ಎತ್ತರದವರೆಗೆ ಅಳವಡಿಸಲಾಗಿದ್ದು, ಅದು ಈಗಲೂ ಸುರಕ್ಷಿತವಾಗಿದೆ. ಆದರೆ ಪ್ರಸ್ತುತ ಉರುಳಿ ಬಿದ್ದಿರುವ ಬೃಹತ್ ಬಂಡೆಗಳು ಸುಮಾರು 150 ಮೀಟರ್ ಎತ್ತರದಿಂದ ಕುಸಿದು ಬಿದ್ದಿರುವುದರಿಂದ, ಇಂತಹ ಭೀಕರ ಮಳೆಯ ಸಮಯದಲ್ಲಿ ದುರಂತ ತಡೆಯುವುದು ಅಸಾಧ್ಯವಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮಳೆ ಕಡಿಮೆಯಾದ ನಂತರ ಬೆಟ್ಟದ ಇಳಿಜಾರಿನ ಇನ್ನೂ ಹೆಚ್ಚಿನ ಎತ್ತರಕ್ಕೆ ಈ ಕಬ್ಬಿಣದ ಜಾಲರಿಯನ್ನು ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ನಿಗಮ ತಿಳಿಸಿದೆ. ಆದರೆ ಇದು ಅತ್ಯಂತ ವೆಚ್ಚದಾಯಕ ಪ್ರಕ್ರಿಯೆಯಾಗಿದ್ದು, ಅರಣ್ಯ ಇಲಾಖೆಯ ಭೂಮಿಯನ್ನು ಬಳಸಿಕೊಳ್ಳಬೇಕಾಗಿರುವುದರಿಂದ ಸರ್ಕಾರದ ಅನುಮತಿ ಅಗತ್ಯವಿದೆ ಎಂದು ಹೇಳಲಾಗಿದೆ.

ಪುಣೆಯಿಂದ ಮುಂಬೈಗೆ ಬರುವ ಮಾರ್ಗದ ಮೊದಲ ಸುರಂಗದ ನಿರ್ಗಮನ ದ್ವಾರದ ಬಳಿ ಈ ಭೂಕುಸಿತ ಸಂಭವಿಸಿದ್ದು, ಕಲ್ಲುಗಳು ಬಿದ್ದ ರಭಸಕ್ಕೆ ತಡೆಗೋಡೆ ಸಂಪೂರ್ಣ ಜಖಂಗೊಂಡಿದೆ. ಇತ್ತೀಚೆಗಷ್ಟೇ ಈ ನೂತನ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದಕ್ಕೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು. ಆದರೆ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಇದು ಸಣ್ಣ ಘಟನೆ ಎಂದು ತಳ್ಳಿಹಾಕಿದ್ದರು. ಇದರ ಬೆನ್ನಲ್ಲೇ ಈಗ ಈ ದೊಡ್ಡ ದುರಂತ ಸಂಭವಿಸಿದೆ.

ರಸ್ತೆಯ ಬದಿಯಲ್ಲಿ ಅಳವಡಿಸಲಾಗಿದ್ದ ಸುರಕ್ಷತಾ ತಡೆಗೋಡೆಗಳು ಬಂಡೆಗಳು ಉರುಳಿ ಬರುವ ರಭಸವನ್ನು ಗಣನೀಯವಾಗಿ ತಗ್ಗಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ ಎಂದು ಎಂಎಸ್‌ಆರ್‌ಡಿಸಿ ಹೇಳಿದೆ. ಒಂದು ವೇಳೆ ಈ ಸುರಕ್ಷತಾ ಕವಚಗಳು ಇಲ್ಲದಿದ್ದರೆ ಬಂಡೆಗಳು ನೇರವಾಗಿ ಕೆಳಗಿದ್ದ ವಾಹನಗಳ ಮೇಲೆ ಬಿದ್ದು ಭೀಕರ ಪ್ರಾಣಹಾನಿ ಸಂಭವಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಗಾರು ಹಂಗಾಮು ಮುಗಿದ ನಂತರ ಈ ಭಾಗದ ಮಣ್ಣು ಮತ್ತು ಬಂಡೆಗಳ ಸ್ಥಿತಿಗತಿಯ ಬಗ್ಗೆ ಹೊಸದಾಗಿ ಭೂವೈಜ್ಞಾನಿಕ ಸಮೀಕ್ಷೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಸದ್ಯ ಮುಂಜಾನೆ ಸಂಭವಿಸಿದ ಈ ಭೂಕುಸಿತದ ಹಿನ್ನೆಲೆಯಲ್ಲಿ 13.3 ಕಿಲೋಮೀಟರ್ ಉದ್ದದ ‘ಮಿಸ್ಸಿಂಗ್ ಲಿಂಕ್’ ಯೋಜನೆಯ ಪುಣೆಯಿಂದ ಮುಂಬೈಗೆ ಬರುವ ಸಂಪೂರ್ಣ ಮಾರ್ಗವನ್ನು ಬಂದ್ ಮಾಡಲಾಗಿದೆ. ಆದರೆ ಮುಂಬೈನಿಂದ ಪುಣೆಗೆ ಹೋಗುವ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಮುಂಬೈ ಕಡೆಗೆ ಸಾಗುವ ವಾಹನಗಳನ್ನು ಹಳೆಯ ಮುಂಬೈ-ಪುಣೆ ಹೆದ್ದಾರಿಗೆ (NH-48) ಬದಲಾಯಿಸಿ ಕಳುಹಿಸಲಾಗುತ್ತಿದೆ. ರಸ್ತೆಗೆ ಬಿದ್ದಿರುವ ಬೃಹತ್ ಬಂಡೆಗಳು ಮತ್ತು ಮಣ್ಣಿನ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಸಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು